Wednesday 2 February 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 72-80

 

ಇತ್ಯುಕ್ತೋ ನಾರದಃ ಪ್ರಾಹ ರಾಜಸೂಯಕೃತೋನ್ನತಿಮ್ ।

ಹರಿಶ್ಚನ್ದ್ರಸ್ಯ ತಾಂ ದೃಷ್ಟ್ವಾ ಪಿತಾ ಯಮಸಭಾತಳೇ ।

ಸ್ಥಿತಸ್ತ್ವಾಮವದತ್ ಪಾಣ್ಡೂ ರಾಮದ್ವಯಸುದೈವತೇ    ॥೨೧.೭೨॥

ಧರ್ಮರಾಜನ ಪ್ರಶ್ನೆಗೆ ನಾರದರಿಂದ ಬಂದ ಉತ್ತರ,

ರಾಜಸೂಯದಿಂದ ಹರಿಶ್ಚಂದ್ರಗೆ ಉನ್ನತಿಯ ಎತ್ತರ.

ಹರಿಶ್ಚಂದ್ರಗೆ ಇಂದ್ರಲೋಕ ಲಭ್ಯವಾಗಿಸಿದ್ದು ರಾಜಸೂಯಯಾಗ,

ಪಾಂಡುರಾಜ ಅದ ಮಾಡಿಲ್ಲವಾದ್ದರಿಂದ ಇಲ್ಲ ಇಂದ್ರಲೋಕದ ಯೋಗ.

ಈ ಸಂದೇಹ ನಿನಗೊಂದಲ್ಲ, ನಿನ್ನ ಅಪ್ಪ ಪಾಂಡುವಿಗೂ ಬಂದ ಸಲುವಾಗಿ,

ರಾಮ ಪರಶುರಾಮರು ಆರಾಧ್ಯರಾದ ಯಮಸಭೆಯಿಂದ ಸಂದೇಶ ನಿನಗಾಗಿ.

 

ಕರೋತು ರಾಜಸೂಯಂ ಮೇ ಪುತ್ರೋsಜೇಯಾನುಜಾರ್ಚ್ಚಿತಃ ।

ಪಾಲಿತೋ ವಾಸುದೇವೇನ ಕಿಂ ತಸ್ಯಾಸಾದ್ಧ್ಯಮತ್ರ ಹಿ              ॥೨೧.೭೩॥

 

ನನ್ನ ಮಗ ಧರ್ಮರಾಜನಿಗುಂಟು ಅಜೇಯ ತಮ್ಮಂದಿರ ಬಲ,

ಅವರಿಂದ ಕೂಡಿಕೊಂಡು ಮಾಡಿದರಾಗುವುದು ರಾಜಸೂಯ ಸಫಲ.

ಶ್ರೀಕೃಷ್ಣರಕ್ಷಿತನಾಗಿರುವ ಅವನಿಗೆ ಇದ್ಯಾವುದೂ ಅಸಾಧ್ಯದ ಮಾತಲ್ಲ.

 

ಏತಚ್ಛ್ರುತ್ವಾ ಧರ್ಮ್ಮಸುತೋ ಭ್ರಾತೃಭಿಃ ಸಹಿತೋ ವಶೀ ।

ಅವಾಪ್ತಿಂ ರಾಜಸೂಯಸ್ಯ ಮನ್ತ್ರಯಾಮಾಸ ಧರ್ಮ್ಮವಿತ್        ॥೨೧.೭೪॥

ನಾರದ ಮುನಿಗಳ ಮಾತನ್ನು ಕೇಳಿಸಿಕೊಂಡ ಧರ್ಮರಾಜ ತಾನು,

ತಮ್ಮಂದಿರೊಡನೆ ರಾಜಸೂಯದ ಮಂತ್ರಾಲೋಚನೆ ಮಾಡಿದನು.

 

ಸುಕಾರ್ಯ್ಯಮೇತದಿತ್ಯಲಂ ನಿಶಮ್ಯ ಸೋದರೋದಿತಮ್ ।

ಅಯಾತಯತ್ ಸ್ವಸಾರಥಿಂ ಸ ಕೇಶವಾಯ ಭೂಪತಿಃ               ॥೨೧.೭೫॥

ಇದು ಮಾಡಲೇಬೇಕಾದ ಒಳ್ಳೇ ಕಾರ್ಯವೆಂಬುದು ತಮ್ಮಂದಿರ ಅಭಿಪ್ರಾಯ,

ಸಮಾಲೋಚನೆ ಬಳಿಕ ಕೃಷ್ಣನೆಡೆ ತನ್ನ ಸಾರಥಿಯ ಕಳಿಸಿದ ಧರ್ಮರಾಯ.

 

ತದೈವ ಕೇಶವಸ್ಯ ಯಾಃ ಸ್ತ್ರಿಯಸ್ತದೀಯತಾತಕೈಃ ।

ಸಹೋದರೈಶ್ಚ ಯಾಪಿತಃ ಸುದೂತ ಆಪ ಮಾಧವಮ್             ॥೨೧.೭೬॥

ಅದೇ ಸಮಯದಲ್ಲಿ ಕೃಷ್ಣನ ಹದಿನಾರುಸಾವಿರದ ನೂರು ಪತ್ನಿಯರ ಅಪ್ಪಂದಿರಿಂದ,

ಅವರೆಲ್ಲರ ಅಣ್ಣ ತಮ್ಮಂದಿರಿಂದಲೂ ಕಳಿಸಲ್ಪಟ್ಟ ಬೇರೊಬ್ಬ ದೂತನೂ ಬಂದ.

 

ಪ್ರಣಮ್ಯ ಕೇಶವಂ ವಚಃ ಸ ಆಹ ಮಾಗಧೇನ ತೇ ।

ವಿವಾಹಬಾನ್ಧವಾ ರಣೇ ವಿಜಿತ್ಯ ರೋಧಿತಾ ಗಿರೌ          ॥೨೧.೭೭॥

ಆ ದೂತ ಕೇಶವನಿಗೆ ನಮಸ್ಕಾರ ಮಾಡಿ ಹೀಗೆ ಹೇಳಿದ ,

ನಿನ್ನ ವಿವಾಹಬಂಧುಗಳೆಲ್ಲಾ ಸೋತಿದ್ದಾರೆ ಜರಾಸಂಧನಿಂದ.

ಜರಾಸಂಧನೊಡನೆ ಆದ ಯುದ್ಧದಲ್ಲಿ ಅವರು ಸೋತಿದ್ದಾರೆ,

ಹಾಗೆ ಸೋತವರು ಪರ್ವತದ ತಪ್ಪಲಿನಲ್ಲಿ ಬಂಧಿತರಾಗಿದ್ದಾರೆ.

 

ನೃಪಾಯುತದ್ವಯೇನ ಸೋsಷ್ಟವಿಂಶಕೈಃ ಶತೈರಪಿ ।

ಯಿಯಕ್ಷುರುಗ್ರರೂಪಿಣಂ ತ್ರಿಲೋಚನಂ ತ್ವಯಿ ಸ್ಥಿತೇ                 ॥೨೧.೭೮॥

 

ಕೃಷ್ಣಾ, ನೀನಿದ್ದಾಗಲೇ ಇಪ್ಪತ್ತೆರಡು ಸಾವಿರದ ಎಂಟುನೂರು ಅರಸರ ಬಲಿಯಾಗುತ್ತಿದೆ,

ಉಗ್ರರೂಪಿಯಾದ ರುದ್ರನಿಗೋಸ್ಕರ ಯಾಗ ನೆರವೇರಿಸುವ ಸಂಕಲ್ಪವೂ ಮಾಡಿಯಾಗಿದೆ.

 

ವಿಮೋಚಯಸ್ವ ತಾನ್ ಪ್ರಭೋ ನಿಹತ್ಯ ಮಾಗಧೇಶ್ವರಮ್ ।

ಅವೈದಿಕಂ ಮಖಂ ಚ ತಂ ವಿಲುಮ್ಪ ಧರ್ಮ್ಮಗುಪ್ತಯೇ   ॥೨೧.೭೯॥

ಪ್ರಭುವೇ, ಜರಾಸಂಧನ ವಧಿಸಿ ರಾಜರುಗಳನ್ನು ಮಾಡು ಬಿಡುಗಡೆ,

ಧರ್ಮರಕ್ಷಣೆಗಾಗಿ ಅವನು ಮಾಡುತ್ತಿರುವ ಅವೈದಿಕ ಯಜ್ಞವ ತಡೆ.

 

ಇತೀರಿತೋsಥ ಸಾರಥಿಂ ನಿಶಾಮ್ಯ ಧರ್ಮ್ಮಜಸ್ಯ ಚ ।

ನಿಶಮ್ಯ ತದ್ವಚಸ್ತದಾ ಜಗಾಮ ಪಾಣ್ಡವಾಲಯಮ್        ॥೨೧.೮೦॥

ಈ ರೀತಿಯಾಗಿತ್ತು ರಾಜರ ಕಡೆಯಿಂದ ಬಂದ ಸಾರಥಿಯ ಸಂದೇಶದ ಪೂರ್ಣ ಪಾಠ,

ಧರ್ಮಜನ ಕಡೆಯಿಂದ ಬಂದ ಸಾರಥಿಯ ಮಾತು ಕೇಳಿದ ಕೃಷ್ಣ ಇಂದ್ರಪ್ರಸ್ಥಕ್ಕೆ ಹೊರಟ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula