ಸಾರ ಸಂಗಮ by “ತ್ರಿವೇಣಿ ತನಯ”
ಎಲ್ಲರ ಹಿತ -ದೇವರು ಪ್ರೀತ
ಏನೇ ಮಾಡು-ಏನೇ ಕೊಡು,
ಭಗವತ್ಪೂಜೆಯೆಂದು ಮಾಡು,
ಅದರ ಖುಷಿಯೇ ಬೇರೆ ನೋಡು,
ಎಲ್ಲದರಲಿ ಎಲ್ಲರ "ಹಿತ"ವ ಬೇಡು,
ಮಾಡುವುದು ನೀನಲ್ಲ ಮಾಡಿಸುವುದವನು,
ಮಾಡುತ ಕೃಷ್ಣಾರ್ಪಣವೆನ್ನು ಹೋಗುವುದೇನು?
ಕಾಲ
ಚಳಿಗಾಲ ಮಳೆಗಾಲ ಬೇಸಿಗೆ ಕಾಲ,
ದಿನ ವಾರ ಮಾಸ ವರ್ಷಬದಲು ಕಾಲ,
ಇಷ್ಟವಾದ್ರೆ ಒಳ್ಳೇ ಕಾಲ ಆಗದಿರೆ ಕಷ್ಟಕಾಲ,
ಕೆಲವೊಮ್ಮೆ ಸಕಾಲ ಮತ್ತೆ ಪ್ರದೋಷ ಕಾಲ,
ಭೂತ ವರ್ತಮಾನ ಭವಿಷ್ಯತ್ ಕಾಲ,
ಅರಿತು ಬಳಸಿಕೊಂಡರೆ ಎಲ್ಲ ಪರ್ವಕಾಲ.
ಪುಣ್ಯಕೋಟಿ
ಪರಮ ಪವಿತ್ರ ಪುಣ್ಯಕೋಟಿ ಗೋವು,
ಕಳೆವುದು ಹತ್ತಾರು ಪಾಪ --ನೋವು,
ಮರೆಯದೇ ಚೆನ್ನಾಗಿ ಕಾಪಾಡು ಅದನು,
ಎಲ್ಲರನೂ ಸಲಹುತಿಹ ಕಾಮಧೇನು.
ಆತ್ಮ ಸಂಬಂಧ
ಬಂಧು ಅಲ್ಲ ಬಳಗ ಅಲ್ಲ ಏನೀ ಬಾಂಧವ್ಯ?
ಸಂಬಂಧಗಳ ಬೆಸೆಯುತಿದೆ ಚುಟುಕು ಕಾವ್ಯ,
ಸ್ನೇಹ ವಿಶ್ವಾಸ ಬೆಳೆಯಲು ಬೇಕಿಲ್ಲ ರಕ್ತ ಸಂಬಂಧ,
ಇರಬೇಕು ಸಮಾನಮನಸ್ಕರ ಆತ್ಮ ಸಂಬಂಧ.
ಪ್ರಕೃತಿ -ವಿಕೃತಿ
ಬೇಡದೇ ಸೂರ್ಯ ಬೆಳಕು ಶಾಖ ನೀಡುವ,
ಕೇಳದೇ ವಾಯು ನಿತ್ಯ ತಾನು ಬೀಸುವ,
ಪರರಿಗಾಗೇ ಹರಿಯುವ ಸಿಹಿ ನೀರು,
ನಮ್ಮಹೊಟ್ಟೆಗೆಂದೇ ಬೆಳೆವ ತೆನೆ ಪೈರು,
ಇವರ್ಯಾರೂ ಎಂದೂ ಕೇಳಿಲ್ಲ ಸುಂಕ,
ಸ್ಮರಿಸಿ ವಂದಿಸಲೂ ನಮಗೇನೋ ಬಿಂಕ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula