Tuesday 4 February 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15:46 - 50

ತದಾ ಕರ್ಣ್ಣೋsಥೈಕಲವ್ಯಶ್ಚ ದಿವ್ಯಾನ್ಯಸ್ತ್ರಾಣ್ಯಾಪ್ತುಂ ದ್ರೋಣಸಮೀಪಮೀಯತುಃ ।
ಸೂತೋ ನಿಷಾದ ಇತಿ ನೈತಯೋರದಾದಸ್ತ್ರಾಣಿ ವಿಪ್ರಃ ಸ ತು ರಾಮಶಿಷ್ಯಃ ॥೧೫.೪೬॥
ಆಗ ಕರ್ಣ ಹಾಗೂ ಏಕಲವ್ಯ ಪಡೆಯಲು ದಿವ್ಯಾಸ್ತ್ರ,
ಸಾರಿಬಂದರಿಬ್ಬರು ದ್ರೋಣಾಚಾರ್ಯರ ಹತ್ತಿರ.
ದ್ರೋಣಾಚಾರ್ಯರು ಪರಶುರಾಮರ ಶಿಷ್ಯರಾಗಿದ್ದ ಕಾರಣ,
ಒಬ್ಬ ಸೂತ ಇನ್ನೊಬ್ಬ ಬೇಡನೆಂದು ಮಾಡಿದರು  ನಿರಾಕರಣ.

ಕರ್ಣ್ಣೋsನವಾಪ್ಯ ನಿಜಮೀಪ್ಸಿತಮುಚ್ಚಮಾನೋ ಯಸ್ಮಾದವಾಪ ಪುರುಷೋತ್ತಮತೋsಸ್ತ್ರವೃನ್ದಮ್ ।
ವಿಪ್ರೋsಪ್ಯಯಂ ತಮಜಮೇಮಿ ಭೃಗೋಃ ಕುಲೋತ್ಥಮಿತ್ಥಂ ವಿಚಿನ್ತ್ಯ ಸ ಯಯೌ ಭೃಗುಪಾಶ್ರಮಾಯಾ ॥೧೫.೪೭॥
ಹೀಗೆ ನಿರಾಕರಿಸಲ್ಪಟ್ಟ ಸ್ವಾಭಿಮಾನಿಯಾದ ಕರ್ಣ,
ಪರಶುರಾಮರಿಂದಲೇ ಅಸ್ತ್ರ ಪಡೆಯಲಿಚ್ಛಿಸಿತವನ ಮನ.
ಯಾವ ಭೃಗುಕುಲೋತ್ಪನ್ನನಿಂದ ಅಸ್ತ್ರ ಪಡೆದಿದ್ದನೋ ದ್ರೋಣ,
ಹರಿಯಿಂದಲೇ ಪಡೆವೆನೆಂದಾರಂಭಿಸಿದ ಆಶ್ರಮದತ್ತ ಯಾನ.

ಸ ಸರ್ವವೇತ್ತುಶ್ಚ ವಿಭೋರ್ಭಯೇನ ವಿಪ್ರೋsಹಮಿತ್ಯವದದಸ್ತ್ರವರಾತಿಲೋಭಾತ್ ।
ಜಾನನ್ನಪಿ ಪ್ರದದಾವಸ್ಯ ರಾಮೋ ದಿವ್ಯಾನ್ಯಸ್ತ್ರಾಣ್ಯಖಿಲಾನ್ಯವ್ಯಯಾತ್ಮಾ ॥೧೫.೪೮॥
ಕರ್ಣನ ಶ್ರೇಷ್ಠ ಅಸ್ತ್ರಗಳ ಲೋಭದ ಕಾರಣ,
ಪರಶುರಾಮಗೆ ಹೇಳಿದ ಸುಳ್ಳು ತಾನು ಬ್ರಾಹ್ಮಣ.
ಪರಶುರಾಮನೋ ಎಂದೆಂದೂ ಎಲ್ಲಾ ಬಲ್ಲ ಸರ್ವಜ್ಞ,
ಕರ್ಣಗುಪದೇಶಿಸಿದರು ಉದ್ದೇಶಿಸಿ ಯುದ್ಧ ಯಜ್ಞ.

ಅಸ್ತ್ರಜ್ಞಚೂಳಾಮಣಿಮಿನ್ದ್ರಸೂನುಂ ವಿಶ್ವಸ್ಯ ಹನ್ತುಂ ಧೃತರಾಷ್ಟ್ರಪುತ್ರಃ ।
ಏನಂ ಸಮಾಶ್ರಿತ್ಯ ದೃಢೋ ಭವೇತೇತ್ಯದಾಜ್ಜ್ಞಾತ್ವೈವಾಸ್ತ್ರಮಸ್ಮೈ ರಮೇಶಃ   ॥೧೫.೪೯॥
ಧೃತರಾಷ್ಟ್ರಪುತ್ರನಾದ ದುರ್ಯೋಧನನಿಗೆ,
ನಂಬಿಸಲು ಅರ್ಜುನನ ಕರ್ಣ ಕೊಲ್ಲುವ ಬಗೆ.
ದೃಢವಿಶ್ವಾಸ ಹೊಂದಲಿಕ್ಕಾಗಿ ದುರ್ಯೋಧನ,
ಕರ್ಣಗೆ ಪರಶುರಾಮ ಮಾಡಿದ ಅಸ್ತ್ರಪ್ರದಾನ.

ಜ್ಞಾನಂ ಚ ಭಾಗವತಮಪ್ಯಪರಾಶ್ಚ ವಿದ್ಯಾ ರಾಮಾದವಾಪ್ಯ ವಿಜಯಂ ಧನುರಗ್ರ್ಯಯಾನಮ್ ।
ಅಬ್ದೈಶ್ಚತುರ್ಭಿರಥ ಚ ನ್ಯವಸತ್ ತದನ್ತೇ ಹಾತುಂ ನ ಶಕ್ತ ಉರುಗಾಯಮಿಮಂ ಸ ಕರ್ಣ್ಣಃ ॥೧೫.೫೦॥
ಕರ್ಣ ನಾಕು ವರ್ಷಗಳಲ್ಲಿ ಪರಮಾತ್ಮನಿಂದ,
ಜ್ಞಾನ ಉಳಿದ ವಿದ್ಯೆ ಪಡೆದ ರಾಮನನುಗ್ರಹದಿಂದ.
ಹೊಂದಿದ ಶ್ರೇಷ್ಠರಥ ವಿಜಯವೆಂಬ ಬಿಲ್ಲ,
ಬಿಡಲಾಗದೆ ರಾಮನಲ್ಲೇ ಉಳಿದ ಕೆಲಕಾಲ.


No comments:

Post a Comment

ಗೋ-ಕುಲ Go-Kula