Saturday 16 May 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 146 -153


ಜರಾಸುತಾದಯೋ ರುಷಾ ತಮಭ್ಯಯುಃ ಶರೋತ್ತಮೈಃ ।
ವಿಧಾಯ ತಾನ್ ನಿರಾಯುಧಾನ್ ಜಗಾಮ ಕೇಶವಃ ಶನೈಃ ॥೧೭.೧೪೬॥
ಜರಾಸಂಧ ಮುಂತಾದವರು ಕ್ರೋಧದಿಂದ ,
ಕೃಷ್ಣಗೆದುರಾದರು ಉತ್ತಮ ಬಾಣಗಳಿಂದ .
ಮಾಡುತ್ತಾ ಅವರನ್ನೆಲ್ಲಾ ನಿರಾಯುಧ ,
ಕೃಷ್ಣ ನಿಧಾನವಾಗಿ ಹೊರಟುಹೋದ .

ಪುನರ್ಗ್ಗೃಹೀತಕಾರ್ಮ್ಮುಕಾನ್ ಹರಿಂ ಪ್ರಯಾತುಮುದ್ಯತಾನ್ ।
ನ್ಯವಾರಯದ್ಧಲಾಯುಧೋ ಬಲಾದ್ ಬಲೋರ್ಜ್ಜಿತಾಗ್ರಣೀಃ ॥೧೭.೧೪೭॥
ಮತ್ತೆ ಜರಾಸಂಧಾದಿಗಳಿಂದ ಬಿಲ್ಲುಗಳನೆತ್ತಿಕೊಂಡು ಕೃಷ್ಣನತ್ತ ನಡೆ ,
ಬಲವಂತ ಸೈನಿಕರನುಳ್ಳ ಬಲರಾಮನಾದ ಅವರಿಗೆ ತಡೆಗೋಡೆ .

ತದಾ ಸಿತಃ ಶಿರೋರುಹೋ ಹರೇರ್ಹಲಾಯುಧಸ್ಥಿತಃ ।
ಪ್ರಕಾಶಮಾವಿಶದ್ ಬಲಂ ವಿಜೇತುಮತ್ರ ಮಾಗಧಮ್ ॥೧೭.೧೪೮॥
ಆಗ ಬಲರಾಮನಲ್ಲಿದ್ದ ಪರಮಾತ್ಮನ ಶುಕ್ಲಕೇಶ ,
ಜರಾಸಂಧನ ಗೆಲ್ಲಲಾಯಿತವಗೆ ಬಲದಾವೇಶ .

ಸ ತಸ್ಯ ಮಾಗಧೋ ರಣೇ ಗದಾನಿಪಾತಚೂರ್ಣ್ಣಿತಃ ।
ಪಪಾತ ಭೂತಳೇ ಬಲೋ ವಿಜಿತ್ಯ ತಂ ಯಯೌ ಪುರೀಮ್ ॥೧೭.೧೪೯॥
ಬಲರಾಮನ ಗದೆಯೇಟಿಗೆ ಜರಾಸಂಧ ನೆಲಕ್ಕೆ ಬಿದ್ದ ,
ಜರಾಸಂಧನ ಗೆದ್ದ ಬಲರಾಮ ದ್ವಾರಕೆಯತ್ತ ತೆರಳಿದ .

ವರೋರುವೇಷಸಂವೃತೋsಥ ಚೇದಿರಾಟ್ ಸಮಭ್ಯಯಾತ್ ।
ತಮಾಸಸಾರ ಸಾತ್ಯಕಿರ್ನ್ನದನ್ ಮೃಗಾಧಿಪೋ ಯಥಾ ॥೧೭.೧೫೦॥
ಮದುಮಗನ ಅಲಂಕಾರದಲ್ಲಿ ಶಿಶುಪಾಲ ಯುದ್ಧಕೆ ಬಂದ,
ಗರ್ಜಿಸುವ ಸಿಂಹದಂತೆ ಸಾತ್ಯಕಿ ಅವನನ್ನು ಎದುರಿಸಿದ .

ಚಿರಂ ಪ್ರಯುದ್ಧ್ಯ ತಾವುಭೌ ವರಾಸ್ತ್ರಶಸ್ತ್ರವರ್ಷಿಣೌ ।
ಕ್ರುಧಾ ನಿರೀಕ್ಷ್ಯ ತಸ್ಥತುಃ ಪರಸ್ಪರಂ ಸ್ಫುರತ್ತನೂ ॥೧೭.೧೫೧॥
ಬಹುಕಾಲ ನಡೆಯಿತು ಅವರಲ್ಲಿ ಶ್ರೇಷ್ಠ ಅಸ್ತ್ರ ಶಸ್ತ್ರಗಳ ಯುದ್ಧ ,
ಸೋಲು ಗೆಲುವು ಕಾಣದೇ ನಿಂತರು ಮಾಡುತ್ತಾ ದೃಷ್ಟಿಯುದ್ಧ .

ಸಮಾನಭಾವಮಕ್ಷಮೀ ಶಿನೇಃ ಸುತಾತ್ಮಜಃ ಶರಮ್ ।
ಅಥೋದ್ಬಬರ್ಹ ತತ್ಕ್ಷಣಾದ್ ಬಲಾನ್ಮುಮೋಚ ವಕ್ಷಸಿ ॥೧೭.೧೫೨॥
ಶಿನಿಯ ಮಗ ಸತ್ಯಕ-ಸತ್ಯಕನ ಮಗ ಸಾತ್ಯಕಿ ಆ ಕ್ಷಣ ,
ತಮ್ಮಲ್ಲಿ ಸಮಾನತೆ ಸಹಿಸದೇ ತೆಗೆದನೊಂದು ಬಾಣ .
ತನ್ನೆಲ್ಲಾ ಬಲವನ್ನು ಅದರಲ್ಲಿಟ್ಟ ,
ಶಿಶುಪಾಲನೆದೆಗೆ ಆ ಬಾಣನೆಟ್ಟ .

ಸ ತೇನ ತಾಡಿತೋsಪತದ್ ವಿಸಜ್ಞಕೋ ನೃಪಾತ್ಮಜಃ ।
ವಿಜಿತ್ಯ ತಂ ಸ ಸಾತ್ಯಕಿರ್ಯ್ಯಯೌ ಪ್ರಹೃಷ್ಟಮಾನಸಃ ॥೧೭.೧೫೩॥
ಶಿಶುಪಾಲ ಆ ಬಾಣದಿಂದ ಮೂರ್ಛಿತನಾಗಿ ಬಿದ್ದ ,
ಶಿಶುಪಾಲನ ಗೆದ್ದ ಸಾತ್ಯಕಿ ಸಂತಸದಿಂದ ನಡೆದ .

No comments:

Post a Comment

ಗೋ-ಕುಲ Go-Kula