Sunday 3 October 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 207 - 214

ತತೋsರ್ಜ್ಜುನೋ ಯತ್ರ ತಿಷ್ಠನ್ ನ ಕಶ್ಚಿತ್ ಪರಾಜಯಂ ಯಾತಿ ಕೃಷ್ಣಾಜ್ಞಯೈವ ।

ರಥೇನ ತೇನೈವ ಯಯೌ ಸಭಾರ್ಯ್ಯಃ ಶಕ್ರಪ್ರಸ್ಥಂ ಚಾವಿಶದ್ ಭ್ರಾತೃಗುಪ್ತಮ್ ॥೨೦.೨೦೭॥

ಅದರಲ್ಲಿ ನಿಂತ ಮಾತ್ರಕ್ಕೆ ಯಾರಿಗೂ ಪರಾಜಯ ಕೊಡದಂಥ ಕೃಷ್ಣನ ಆ ದಿವ್ಯ ರಥ,

ಅಂಥಾ ರಥದಲ್ಲಿ ಸುಭದ್ರೆಯೊಂದಿಗೆ ಪ್ರವೇಶಿಸಿದ ಅರ್ಜುನ ಭೀಮರಕ್ಷಿತ ಇಂದ್ರಪ್ರಸ್ಥ.

 

ಸಮ್ಭಾವಿತೋ ಭ್ರಾತೃಭಿಶ್ಚಾತಿತುಷ್ಟೈರೂಚೇsಥ ಸರ್ವಂ ತೇಷು ಯಚ್ಚಾsತ್ಮವೃತ್ತಮ್ ।

ಶಾನ್ತೇಷು ವಾಕ್ಯಾದಾತ್ಮನೋ ಯಾದವೇಷು ಕೃಷ್ಣೋ ಯುಕ್ತೋ ಹಲಿನಾsಗಾಚ್ಚ ಪಾರ್ತ್ಥಾನ್ ॥೨೦.೨೦೮॥

ಸಂತುಷ್ಟರಾದ ಸಹೋದರರಿಂದ ಆದರಿಸಲ್ಪಟ್ಟ ಅರ್ಜುನ,

ತನ್ನ ವೃತ್ತಾಂತವೆಲ್ಲವನ್ನು ಅವರಿಗೆ ಹೇಳಿದನವ  ಫಲ್ಗುಣ.

ಕೃಷ್ಣನ ಮಾತಿನ ಮೋಡಿಯಿಂದ ಯಾದವರಾಗಿರಲು ಶಾಂತ,

ಅಣ್ಣ ಬಲರಾಮನೊಡಗೂಡಿ ಕೃಷ್ಣ ಹೊರಟ ಪಾಂಡವರತ್ತ.

 

ಸಾರ್ದ್ಧಂ ಯಯೌ ಶಕಟೈ ರತ್ನಪೂರ್ಣ್ಣೈಃ ಶಕ್ರಪ್ರಸ್ಥಂ ಪೂಜಿತಸ್ತತ್ರ ಪಾರ್ತ್ಥೈಃ ।

ದದೌ ತೇಷಾಂ ತಾನಿ ರಾಮೇಣ ಯುಕ್ತಸ್ತಥಾ ಕೃಷ್ಣಾಯೈ ಭೂಷಣಾನಿ ಸ್ವಸುಶ್ಚ ॥೨೦.೨೦೯॥

ರತ್ನಗಳಿಂದ ತುಂಬಿದ ರಥಗಳೊಂದಿಗೆ ಕೃಷ್ಣ ಇಂದ್ರಪ್ರಸ್ಥಕ್ಕೆ ಬಂದ,

ಪಾಂಡವರಿಂದ ಪೂಜೆಗೊಂಡ ಭಗವಾನ್ ಕೃಷ್ಣ ಸತ್ಕೃತನಾದ.

ದ್ರೌಪದಿ, ತಂಗಿ ಸುಭದ್ರೆಯರಿಗೆ ಹೇರಳ ಆಭರಣಗಳ ನೀಡಿದ.

 

ಮಾಸಾನುಷಿತ್ವಾ ಕತಿಚಿದ್ ರೌಹಿಣೇಯೋ ಯಯೌ ಪುರೀಂ ಸ್ವಾಂ ಕೇಶವೋsತ್ರಾವಸಚ್ಚ ।

ಬಹೂನ್ ವರ್ಷಾನ್ ಪಾಣ್ಡವೈಃ ಪೂಜ್ಯಮಾನಃ ಪ್ರೀತಿಂ ತೇಷಾಮಾದಧಾನೋsಧಿಕಾಂ ಚ ॥೨೦.೨೧೦॥

ಬಲರಾಮ ಕೆಲ ತಿಂಗಳುಗಳ ಕಾಲ ಇಂದ್ರಪ್ರಸ್ಥದಿ ತಂಗಿದ್ದ,

ಇಂದ್ರಪ್ರಸ್ಥ ವಾಸದ ನಂತರ ದ್ವಾರಕೆಗೆ ಹಿಂತಿರುಗಿ ನಡೆದ.

ಕೃಷ್ಣ ಬಹುವರ್ಷಕಾಲ ಪಾಂಡವರಿಂದ ಪೂಜೆಗೊಳ್ಳುತ್ತಾ,

ಅಲ್ಲೇ ವಾಸ ಮಾಡಿದ ಅವರಿಗೆಲ್ಲಾ ತನ್ನ ಪ್ರೀತಿ ಹರಿಸುತ್ತಾ.

 

[ದ್ರೌಪದೀ ಪುತ್ರರ ಮೂಲಸ್ವರೂಪವನ್ನು ಪರಿಚಯಿಸುತ್ತಾರೆ:]

ಆಸನ್ ಕೃಷ್ಣಾಯಾಃ ಪಞ್ಚ ಸುತಾ ಗುಣಾಢ್ಯಾ ವಿಶ್ವೇ ದೇವಾಃ ಪಞ್ಚ ಗನ್ಧರ್ವಮುಖ್ಯೈಃ ।

ಆವಿಷ್ಟಾಸ್ತೇ ಚಿತ್ರರಥಾಭಿತಾಮ್ರಕಿಶೋರಗೋಪಾಲಬಲೈಃ ಕ್ರಮೇಣ ॥೨೦.೨೧೧॥

ದ್ರೌಪದಿಗೆ ಪಾಂಡವರಿಂದ ಐದು ಜನ ಗುಣವಂತ ಮಕ್ಕಳಾದರು.

ಸ್ವರೂಪದಿ ಅವರೈದು ಮಂದಿ ವಿಶ್ವೇದೇವತೆಗಳು ಆಗಿದ್ದವರು.

ಚಿತ್ರರಥ,ಅಭಿತಾಮ್ರ,ಕಿಶೋರ,ಗೋಪಾಲ,ಬಲ,

ಹುಟ್ಟಿ ಬಂದ ಆ ಐವರದಾಗಿತ್ತು ಗಂಧರ್ವಮೂಲ.

 

ಪ್ರತಿವಿನ್ಧ್ಯಃ ಸುತಸೋಮಃ ಶ್ರುತಾಖ್ಯಕೀರ್ತ್ತಿಃ ಶತಾನೀಕ ಉತ ಶ್ರುತಕ್ರಿಯಃ ।

ಯುಧಿಷ್ಠಿರಾದ್ಯೈಃ ಕ್ರಮಶಃ ಪ್ರಜಾತಾಸ್ತೇಷಾಂ ದ್ವಯೋಶ್ಚಾವರಜೋsಭಿಮನ್ಯುಃ ॥೨೦.೨೧೨॥

ದ್ರೌಪದಿಯಲ್ಲಿ ಪಾಂಡವರಿಂದಾದ ಐವರು ಮಕ್ಕಳು,

ಒಬ್ಬೊಬ್ಬ ಪಾಂಡವನಿಂದ ಜನಿಸಿದ ವಿಶ್ವೇದೇವತೆಗಳು.

ಪ್ರತಿವಿಂಧ್ಯ -ಧರ್ಮರಾಜನಿಂದ,

ಸುತಸೋಮ -ಭೀಮಸೇನನಿಂದ,

ಶ್ರುತಕೀರ್ತಿ -ಅರ್ಜುನನಿಂದ,

ಶತಾನೀಕ -ನಕುಲನಿಂದ,

ಶ್ರುತಕರ್ಮ -ಸಹದೇವನಿಂದ.

ಪ್ರತಿವಿಂಧ್ಯ ಸುತಸೋಮನ ನಂತರ ಹುಟ್ಟಿದ್ದ ಅಭಿಮನ್ಯು,

ಶ್ರುತಕೀರ್ತಿ, ಶತಾನೀಕ, ಶ್ರುತಕರ್ಮರಿಗಿಂತ ಹಿರಿಯನು.

 

[ಅಭಿಮನ್ಯುವಿನ ಮೂಲಸ್ವರೂಪವನ್ನು ಪರಿಚಯಿಸುತ್ತಾರೆ:]

ಚನ್ದ್ರಾಂಶಯುಕ್ತೋsತಿತರಾಂ ಬುಧೋsಸೌ ಜಾತಃ ಸುಭದ್ರಾಜಠರೇsರ್ಜ್ಜುನೇನ ।

ಧರ್ಮ್ಮೇರಶಕ್ರಾಂಶಯುತೋsಶ್ವಿನೋಶ್ಚ ತಥೈವ ಕೃಷ್ಣಸ್ಯ ಸ ಸನ್ನಿಧಾನಯುಕ್ ॥೨೦.೨೧೩॥

ಅರ್ಜುನ ಸುಭದ್ರೆಯಲ್ಲಿ ಹುಟ್ಟಿದ ಅಭಿಮನ್ಯು,

ಚಂದ್ರನ ಅಂಶದಿಂದ ಹುಟ್ಟಿದ ಬುಧನವನು.

ಧರ್ಮರಾಜ, ಮುಖ್ಯಪ್ರಾಣ, ಇಂದ್ರ ಇವರ ಅಂಶ,

ಮತ್ತೆ ಅದರ ಮೇಲೆ ಅಶ್ವೀದೇವತೆಗಳ ಆವೇಶ.

ಜೊತೆಯಲ್ಲಿ ಶ್ರೀಕೃಷ್ಣ ಸನ್ನಿಧಾನವಿದ್ದದ್ದು ವಿಶೇಷ.

 

ಸರ್ವೇsಪಿ ತೇ ವೀರ್ಯ್ಯವನ್ತಃ ಸುರೂಪಾ ಭಕ್ತಾ ವಿಷ್ಣೋಃ ಸರ್ವಶಾಸ್ತ್ರೇಷ್ವಭಿಜ್ಞಾಃ ।

ಮೋದಂ ಯಯುಃ ಪಾಣ್ಡವಾಸ್ತೈಃ ಸುತೈಶ್ಚ ವಿಶೇಷತಃ ಸಾತ್ತ್ವತೀನನ್ದನೇನ ॥ ೨೦.೨೧೪ ॥

 ಈ ಆರೂ ಮಂದಿ ಒಳ್ಳೆಯ ವೀರ್ಯವಂತರು,

ಸ್ಫುರದ್ರೂಪಿ ದೈವಭಕ್ತರು-ಶಾಸ್ತ್ರ ಅರಿತವರು.

ಪಾಂಡವರಿಗಿತ್ತು ಸಂತೋಷ ತಮ್ಮ ಮಕ್ಕಳಿಂದ,

ವಿಶೇಷತಃ ಗುಣಾಧಿಕ್ಯನಾದ ಅಭಿಮನ್ಯುವಿನಿಂದ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula