Tuesday 3 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 22 - 27

ಪ್ರೀತಿಂ ವಿಧಿತ್ಸುರಗಮದ್ ಭವನಂ ನಿಜಸ್ಯ ಕುಮ್ಭೋದ್ಭವಸ್ಯ ಪರಮಾದರತೋsಮುನಾ ಚ ।
ಸಮ್ಪೂಜಿತೋ ಧನುರನೇನ ಗೃಹೀತಮಿನ್ದ್ರಾಚ್ಛಾರ್ಙ್ಗಂ ತದಾದಿಪುರುಷೋ ನಿಜಮಾಜಹಾರ॥೫.೨೨॥

ತನ್ನ ಭಕ್ತ ಅಗಸ್ತ್ಯರಿಗೆ ಉಂಟುಮಾಡಲು ಪ್ರೀತಿ,
ಶ್ರೀರಾಮ ಅವರ ಮನೆಗೆ ಕೊಡುತಾನೆ ತಾ ಭೇಟಿ.
ಅಗಸ್ತ್ಯರಿಂದ ಶ್ರೀರಾಮಗೆ ಪೂಜಾ ಸತ್ಕಾರ,
ಇಂದ್ರನಿಂದ ಬಂದ ಶಾರ್ಙ್ಗಧನುಸ್ಸಿನ ಸ್ವೀಕಾರ.


ಆತ್ಮಾರ್ತ್ಥಮೇವ ಹಿ ಪುರಾ ಹರಿಣಾ ಪ್ರದತ್ತಮಿನ್ದ್ರೇ ತದಿನ್ದ್ರ ಉತ ರಾಮಕರಾರ್ಥಮೇವ ।
ಪ್ರಾದಾದಗಸ್ತ್ಯಮುನಯೇ ತದವಾಪ್ಯ ರಾಮೋ ರಕ್ಷನ್ ಋಷೀನವಸದೇವ ಸ ದಣ್ಡಕೇಷು ॥೫.೨೩॥

ಹರಿಯಿಂದ ತನಗಾಗೇ ಶಾರ್ಙ್ಗವನ್ನು ಇಂದ್ರಗೆ ಕೊಡುವಿಕೆ,
ರಾಮನ ಸೇರಲೆಂದೇ ಇಂದ್ರನಿಂದ ಅಗಸ್ತ್ಯರಿಗೆ ಹಸ್ತಾಂತರಿಕೆ.
ಅಗಸ್ತ್ಯರಿಂದ ಶ್ರೀರಾಮ ಮಾಡಿದ ಧನುಸ್ಸು ಸ್ವೀಕಾರ,
ಋಷಿಗಳ ರಕ್ಷಿಸುತ್ತಾ ದಂಡಕದಲ್ಲಿ ಹೂಡಿದ ಬಿಡಾರ.

ಕಾಲೇ ತದೈವ ಖರದೂಷಣಯೋರ್ಬಲೇನ ರಕ್ಷಃ ಸ್ವಸಾ ಪತಿನಿಮಾರ್ಗಣತತ್ಪರಾssಸೀತ್ ।
ವ್ಯಾಪಾದಿತೇ ನಿಜಪತೌ ಹಿ ದಶಾನನೇನ ಪ್ರಾಮಾದಿಕೇನ ವಿಧಿನಾsಭಿಸಸಾರ ರಾಮಮ್ ॥೫.೨೪॥

ರಾವಣನ ಮರೆವಿನಿಂದಾಗಿತ್ತು ಶೂರ್ಪಣಖಿಯ ಗಂಡನ ಮರಣ,
ಗಂಡನ ಹುಡುಕುತ್ತಿದ್ದಳವಳು ಒಡಗೂಡಿ - ಖರದೂಷಣ.
ಸೆಳೆಯಿತು ಶೂರ್ಪಣಖಿಯ ಶ್ರೀರಾಮನ ಮೋಹಕ ರೂಪ,
ಅದೇ ಗುಂಗಿನಲ್ಲಿ ಬಂದಳಾ ರಾಕ್ಷಸಿ ರಾಮಚಂದ್ರನ ಸಮೀಪ.

ಸಾsನುಜ್ಞಯೈವ  ರಜನೀಚರಭರ್ತುರುಗ್ರಾ  ಭ್ರಾತೃದ್ವಯೇನ  ಸಹಿತಾ  ವನಮಾವಸನ್ತೀ ।
ರಾಮಂ ಸಮೇತ್ಯ ಭವ ಮೇ ಪತಿರಿತ್ಯವೋಚದ್ ಭಾನುಂ ಯಥಾ ತಮ ಉಪೇತ್ಯ ಸುಯೋಗಕಾಮಮ್ ॥೫.೨೫॥

ರಾವಣನಾದೇಶದಂತೆ ಶೂರ್ಪಣಖಿಯ ದಂಡಕದಲ್ಲಿ ವಾಸ,
ಸೋದರರಾದ ಖರದೂಷಣರದೂ ಅವಳೊಂದಿಗೇ ಸಹ ವಾಸ.
ಕಾರ್ಗತ್ತಲು ಹೋಗಿ ಸೂರ್ಯನ ಸಂಗ ಕೋರಿದಂತೆ,
ರಾಕ್ಷಸಿ ರಾಮನ ಮದುವೆಯಾಗೆಂದು ಕೇಳಿದಳಂತೆ.

ತಾಂ ತತ್ರ ಹಾಸ್ಯಕಥಯಾ ಜನಕಾಸುತಾಗ್ರೇ ಗಚ್ಛಾನುಜಂ ಮ ಇಹ ನೇತಿ ವಚಃ ಸ ಉಕ್ತ್ವಾ ।
ತೇನೈವ ದುಷ್ಟಚಿರಿತಾಂ ಹಿ ವಿಕರ್ಣ್ಣನಾಸಾಂ ಚಕ್ರೇ ಸಮಸ್ತರಜನೀಚರನಾಶಹೇತೋಃ 
॥೫.೨೬॥

ರಾಮ ಮಾಡಿದ ಸಮಸ್ತ ದುಷ್ಟ ರಾಕ್ಷಸರ ನಾಶಕ್ಕೆ ಸಂಕಲ್ಪ,
ಹಾಸ್ಯ ಮಾಡುತ್ತಲೇ ಕಳಿಸಿದ ಅವಳ ಲಕ್ಷ್ಮಣನ ಸಮೀಪ.
ನನಗೆ ನೀನು ಬೇಡ ನನ್ನ ತಮ್ಮನ ಬಳಿ ಹೋಗು,
ಲಕ್ಷ್ಮಣನ ಮೂಲಕ ಕತ್ತರಿಸಿದ ಅವಳ ಕಿವಿ ಮೂಗು.

ತತ್ ಪ್ರೇರಿತಾನ್ ಸಪದಿ ಭೀಮಬಲಾನ್ ಪ್ರಯಾತಾಂಸ್ತಸ್ಯಾಃ ಖರತ್ರಿಶಿರದೂಷಣಮುಖ್ಯಬನ್ಧೂನ್ ।
ಜಘ್ನೇ ಚತುರ್ದಶಸಹಸ್ರಮವಾರಣೀಯಕೋದಣ್ಡಪಾಣಿರಖಿಲಸ್ಯ ಸುಖಂ ವಿಧಾತುಮ್ 
॥೫.೨೭॥

ಗಾಯಗೊಂಡ ಶೂರ್ಪಣಖಿಯಿಂದ ರಕ್ಕಸರಿಗೆ ಪ್ರಚೋದನೆ,
ಎದಿರಾಯ್ತು ಖರ ತ್ರಿಶಿರ ದೂಷಣರ ಅಸಂಖ್ಯ ಬಲಿಷ್ಠ ಸೇನೆ.
ಎಲ್ಲ ಸಜ್ಜನರ ಸೌಖ್ಯ ಸಂತಸಕ್ಕೋಸ್ಕರ,
ಅಜೇಯ ರಾಮ ಮಾಡಿದ ದುಷ್ಟಸಂಹಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula