Monday 10 September 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 09 - 12

ಕೃತಶ್ಚ ಕದ್ರ್ವಾಸ್ತನಯೋsತ್ರ ವಾಸುಕಿರ್ನ್ನೇತ್ರಂ ತ್ವಯಾ ಕಶ್ಯಪಜಃ ಸ ನಾಗರಾಟ್ ।
ಮಮನ್ಥುರಬ್ಧಿಂ ಸಹಿತಾಸ್ತ್ವಯಾ ಸುರಾಃ ಸಹಾಸುರಾ ದಿವ್ಯಪಯೋ 
ಘೃತಾಧಿಕಮ್ ॥೧೦.೦೯ ॥

ಓ ಭಗವಂತ, ಕದ್ರು ಕಶ್ಯಪರ ಸಂತಾನ ನಾಗರಾಜ ವಾಸುಕಿ,
ನೀ ಸಮುದ್ರ ಮಥನದಿ ಬಳಸಿದೆ ಅವನ ಹಗ್ಗವಾಗಿ ಹಾಕಿ.
ತುಪ್ಪಯುಕ್ತ ; ತುಪ್ಪದಂತೆ ಗಟ್ಟಿಯಾದ ಆ ಸಮುದ್ರದ ಹಾಲು,
ದೇವದಾನವರು ಕಡೆದರದನ ಮಂದರವ ಮಾಡಿ ಕಡೆಗೋಲು.

ನೈಚ್ಛನ್ತ ಪುಚ್ಛಂ ದಿತಿಜಾ ಅಮಙ್ಗಲಂ ತದಿತ್ಯಥಾಗ್ರಂ ಜಗೃಹುರ್ವಿಷೋಲ್ಬಣಮ್ ।
ಶ್ರಾನ್ತಾಶ್ಚ ತೇsತೋ ವಿಬುಧಾಸ್ತು ಪುಚ್ಛಂ ತ್ವಯಾ ಸಮೇತಾ 
ಜಗೃಹುಸ್ತ್ವದಾಶ್ರಯಾಃ ॥೧೦.೧೦॥

ಹೀಗೆ ಕಡೆಯುವಾಗ ವಾಸುಕಿಯ ಬಾಲ,
ದೈತ್ಯರಿಗೆ ಅನಿಸಿತು ಬಾಲ ಅಮಂಗಲ.
ಮುಖ ಹಿಡಿದ ಅವರಿಗೆ ವಿಷ ಸ್ಪರ್ಶದಿಂದ ಆಯಾಸ,
ಬಾಲ ಹಿಡಿದ ದೇವತೆಗಳಿಗೆ ನಿನ್ನಾಶ್ರಯವೇ ಗ್ರಾಸ.

ಅಥಾತಿಭಾರಾದವಿಶತ್ ಸುಕಾಞ್ಚನೋ ಗಿರಿಃ ಸ ಪಾತಾಳಮಥ ತ್ವಮೇವ ।
ತಂ ಕಚ್ಛಪಾತ್ಮಾ ತ್ವಭರಃ ಸ್ವಪೃಷ್ಠೇ ಹ್ಯನನ್ಯಧಾರ್ಯ್ಯಂ 
ಪುರುಲೀಲಯೈವ ॥೧೦.೧೧॥

ಅನಂತರ ಬಂಗಾರಮಯವಾದ ಮಂದರ ಬೆಟ್ಟ,
ಒತ್ತಡದಿಂದ ಕುಸಿಯಲಾರಂಭಿಸಿತು ಪಾತಾಳದತ್ತ.
ಆಗ ನೀನೇ ಹೊತ್ತೆ ಯಾರೂ ಹೊರಲಾಗದ ಪರ್ವತದ ಭಾರ,
ನಿನ್ನ ಸಂಕಲ್ಪ ಲೀಲೆಯಿಂದ ಮಾಡಿ ತೋರಿದೆ ಕೂರ್ಮಾವತಾರ.

ಉಪರ್ಯ್ಯಧಶ್ಚಾsತ್ಮನಿ ನೇತ್ರಗೋತ್ರಯೋಸ್ತ್ವಯಾ ಪರೇಣಾsವಿಶತಾ ಸಮೇಧಿತಾಃ ।
ಮಮಂಥುರಬ್ಧಿಂ ತರಸಾ ಮದೋತ್ಕಟಾಃ ಸುರಾಸುರಾಃ 
ಕ್ಷೋಭಿತನಕ್ರಚಕ್ರಮ್ ॥೧೦.೧೨॥

ಹಗ್ಗ ಬೆಟ್ಟ ಒಳಗೆ ಹೊರಗೆ ಮೇಲೆ ಕೆಳಗೆ ಮತ್ತೆಲ್ಲರಲ್ಲಿ,
ನೀನೇ ಅಂತರ್ಯಾಮಿ ಶಕ್ತಿ;ನೀನಿರದೇ ಯಾವುದಿದೆ ಇಲ್ಲಿ.
ನಿನ್ನ ಪ್ರವೇಶದಿಂದ ದೇವಾಸುರರಲ್ಲಿ ವಿಶೇಷ ಶಕ್ತಿ ಆವಾಹನ,
ಜಲಚರ ಭರಿತವಾದ ಕಡಲ ವೇಗದಿ ಮಾಡಿದರು ಮಥನ.

No comments:

Post a Comment

ಗೋ-ಕುಲ Go-Kula