Wednesday 21 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 103 - 111

ಪೂರ್ಣ್ಣೇನ್ದುವೃನ್ದನಿವಹಾಧಿಕಕಾನ್ತಶಾನ್ತಸೂರ್ಯ್ಯಾಮಿತೋರುಪರಮದ್ಯುತಿಸೌಖ್ಯದೇಹಃ ।
ಪೀತಾಮ್ಬರಃ ಕನಕಭಾಸುರಗನ್ಧಮಾಲ್ಯಃ ಶೃಙ್ಗಾರವಾರಿಧಿರಗಣ್ಯಗುಣಾರ್ಣ್ಣವೋsಗಾತ್ ॥೧೩.೧೦೩ ॥
ಪೂರ್ಣಚಂದ್ರರ ಗುಂಪಿಗಿಂತಲೂ ಮಿಗಿಲಾದ ಬೆಳಕು,
ಸುಖಪೂರ್ಣ ಮನೋಹರ ಸೂರ್ಯಕಾಂತಿಯ ತಳಕು.
ಜಗದ ಸುಖವೇ ಮೈದಾಳಿ ಬಂದ,
ಹಳದಿ ಬಟ್ಟೆಯನುಟ್ಟು ಮೈಗೆಪೂಸಿದ ಗಂಧ.
ಹೂಮಾಲೆ ಧರಿಸಿಕೊಂಡ ಚೆಲುವಿನ ಸಮುದ್ರ,
ಮುನ್ನಡೆದ ತಾನು ಎಣೆಯಿರದ ಗುಣಸಾಂದ್ರ.

ಪ್ರಾಪ್ಯಾಥ ಚಾsಯುಧಗೃಹಂ ಧನುರೀಶದತ್ತಂ ಕೃಷ್ಣಃ ಪ್ರಸಹ್ಯ ಜಗೃಹೇ ಸಕಲೈರಭೇದ್ಯಮ್ ।
ಕಾಂಸಂ ಸ ನಿತ್ಯಪರಿಪೂರ್ಣ್ಣಸಮಸ್ತಶಕ್ತಿರಾರೋಪ್ಯ ಚೈನಮನುಕೃಷ್ಯ ಬಭಞ್ಜ ಮದ್ಧ್ಯೇ ॥೧೩.೧೦೪ ॥
ಆನಂತರ ಆಯುಧಶಾಲೆಗೆ ನುಗ್ಗಿದ,
ರುದ್ರದತ್ತ ಭಾರೀ ಬಿಲ್ಲನ್ನು ಕೃಷ್ಣ ಎತ್ತಿದ.
ಕಂಸನಿಗೆ ಶಿವನಿಂದ ಕೊಡಲ್ಪಟ್ಟ ಬಿಲ್ಲಾಗಿತ್ತದು ಅಭೇದ್ಯ,
ಸರ್ವಜ್ಞ ಸರ್ವಶಕ್ತ ನಾರಾಯಣ ಬಗ್ಗಿಸಿ ಅದನ್ನು ಮುರಿದ.

ತಸ್ಮಿನ್ ಸುರಾಸುರಗಣೈರಖಿಲೈರಭೇದ್ಯೇ ಭಗ್ನೇ ಬಭೂವ ಜಗದಣ್ಡವಿಭೇದಭೀಮಃ ।
ಶಬ್ದಃ ಸ ಯೇನ ನಿಪಪಾತ ಭುವಿ ಪ್ರಭಗ್ನಸಾರೋsಸುರೋ ಧೃತಿಯುತೋsಪಿ ತದೈವ ಕಂಸಃ॥೧೩.೧೦೫॥
ಧನುಸ್ಸದು ದೇವತೆಗಳಿಂದ ದೈತ್ಯಗಣದಿಂದ ಅಭೇದ್ಯ,
ಮುರಿಯುತ್ತಿದ್ದಂತೆ ಬಂತು ಜಗತ್ತೇ ತುಂಡಾದಂಥ ಶಬ್ದ.
ಆ ಶಬ್ದ ಧೈರ್ಯಶಾಲೀ ಕಂಸನ ಕಿವಿಗೆ ಬಿತ್ತು,
ಸಿಂಹಾಸನದಿಂದ ಕೆಳಗೆ ಬಿದ್ದವನ ಶಕ್ತಿ ಉಡುಗಿತ್ತು.

ಆದಿಷ್ಟಮಪ್ಯುರು ಬಲಂ ಭಗವಾನ್ ಸ ತೇನ ಸರ್ವಂ ನಿಹತ್ಯ ಸಬಲಃ ಪ್ರಯಯೌ ಪುನಶ್ಚ ।
ನನ್ದಾದಿಗೋಪಸಮಿತಿಂ ಹರಿರತ್ರ ರಾತ್ರೌ ಭುಕ್ತ್ವಾ ಪಯೋsನ್ವಿತಶುಭಾನ್ನಮುವಾಸ ಕಾಮಮ್ ॥೧೩.೧೦೬॥
ಕೃಷ್ಣ ಕಂಸ ಕಳಿಸಿದ ಮಹಾನ್ ಸೈನ್ಯವನು ಕೊಂದ,
ಮುರಿದ ಬಿಲ್ಲಿಂದ ಅಣ್ಣನೊಡಗೂಡಿ ಬಂದವರ ಬಡಿದ.
ನಂತರ ನಂದಾದಿಗಳು ಇರುವ ಸ್ಥಳಕ್ಕೆ ತೆರಳಿದ,
ಹಾಲನ್ನವನುಂಡು ಆ ರಾತ್ರಿ ಅಲ್ಲೇ ವಿರಮಿಸಿದ.

ಕಂಸೋsಪ್ಯತೀವ ಭಯಕಮ್ಪಿತಹೃತ್ಸರೋಜಃ ಪ್ರಾತರ್ನ್ನರೇನ್ದ್ರಗಣಮದ್ಧ್ಯಗತೋsಧಿಕೋಚ್ಚಮ್ ।
ಮಞ್ಚಂ ವಿವೇಶ ಸಹ ಜಾನಪದೈಶ್ಚ ಪೌರೈರ್ನ್ನಾನಾsನುಮಞ್ಚಕಗತೈರ್ಯ್ಯುವತೀಸಮೇತೈಃ ॥೧೩.೧೦೭॥
ಮಾರನೇ ಬೆಳಿಗ್ಗೆ ಬೇರೆಬೇರೆ ಆಸನಗಳಲ್ಲಿ ಸಪತ್ನೀಕರಾಗಿ ದೇಶವಾಸಿಗಳು ಕುಳಿತಿರಲು,
ಆ ಸಮೂಹದ ಮಧ್ಯೆ ಎತ್ತರದ ಆಸನದಲ್ಲಿ ಕುಳಿತ ಕಂಸನ ಎದೆಯಲ್ಲಿ ತೀರದ ದಿಗಿಲು.

ಸಂಸ್ಥಾಪ್ಯ ನಾಗಮುರುರಙ್ಗಮುಖೇ ಕುವಲ್ಯಾಪೀಡಂ ಗಿರೀನ್ದ್ರಸದೃಶಂ ಕರಿಸಾದಿಯುಕ್ತಮ್ ।
ಚಾಣೂರಮುಷ್ಟಿಕಮುಖಾನಪಿ ಮಲ್ಲವೀರಾನ್ ರಙ್ಗೇ ನಿಧಾಯ ಹರಿಸಂಯಮನಂ ಕಿಲೈಚ್ಛತ್ ॥೧೩.೧೦೮॥
ಪ್ರವೇಶ ಮಾಡುವ (ಕ್ರೀಡಾಂಗಣದ)ರಂಗದ ಮುಖ್ಯ ಬಾಗಿಲು,
ಮಾವುತನೊಡಗೂಡಿದ ಕುವಲ್ಯಾಪೀಡನೆಂಬಾನೆಯ ಕಾವಲು.
ರಂಗದ ಒಳಗೆ ಚಾಣೂರ ಮುಷ್ಟಿಕ ಮುಂತಾದ ಮಲ್ಲರು,
ಇವರನ್ನೆಲ್ಲಾ ಇಟ್ಟು ಹರಿಯ ನಿಗ್ರಹಿಸುವ ಕಂಸನ ಹುನ್ನಾರು.

ಅಕ್ಷೋಹಿಣೀಗಣಿತಮಸ್ಯ ಬಲಂ ಚ ವಿಂಶದಾಸೀದಸಹ್ಯಮುರುವೀರ್ಯ್ಯಮನನ್ಯವದ್ಧ್ಯಮ್ ।
ಶಮ್ಭೋರ್ವರಾದಪಿ ಚ ತಸ್ಯ ಸುನೀಥನಾಮಾ ಯಃ ಪೂರ್ವಮಾಸ ವೃಕ ಇತ್ಯಸುರೋsನುಜೋsಭೂತ್ ॥೧೩.೧೦೯॥
ರುದ್ರವರದಿಂದ ಬಲಿಷ್ಠವಾದ ಕಂಸನ ಇಪ್ಪತ್ತು ಅಕ್ಷೋಹಿಣಿ ಸೇನೆ,
ಸೇನಾಧಿಪತಿಯಾಗಿದ್ದವನು ಕಂಸನ ತಮ್ಮನಾದ ಸುನೀಥ ನಾಮಕನೆ.
ಆ ಸುನೀಥ, ಹಿಂದೆ ವ್ರಕಾಸುರ/ಭಸ್ಮಾಸುರ ಎಂಬ ಅಸುರನಾಗಿದ್ದವನೇ.

ಸಪ್ತಾನುಜಾ ಅಪಿ ಹಿ ತಸ್ಯ ಪುರಾತನಾ ಯೇ ಸರ್ವೇsಪಿ ಕಂಸಪೃತನಾಸಹಿತಾಃ ಸ್ಮ ರಙ್ಗೇ ।
ತಸ್ಥುಃ ಸರಾಮಮಭಿಯಾನ್ತಮುದೀಕ್ಷ್ಯ ಕೃಷ್ಣಮಾತ್ತಾಯುಧಾ ಯುಧಿ ವಿಜೇತುಮಜಂ ಸುಪಾಪಾಃ ॥೧೩.೧೧೦॥
ಸುನೀಥನಿಗೆ ಪೂರ್ವಜನ್ಮದಲ್ಲಿ ಸಹೋದರರಾಗಿದ್ದವರು ಏಳು ಜನ,
ಈ ಜನ್ಮದಲ್ಲಿ ಮತ್ತೆ ಸಹೋದರರಾಗಿ ಸೇರಿದ್ದರು ಕಂಸನ ಸೇನ.
ಅವರು ಮೂಲತಃ ದುಷ್ಟರು-ಆಯುಧ ಹಿಡಿದ ಪಾಪಿಷ್ಠರು,
ರಾಮನೊಡನೆ ಬರುತ್ತಿದ್ದ ಹುಟ್ಟಿರದಕೃಷ್ಣನ ಕೊಲ್ಲಲು ನಿಂತಿದ್ದರು.




ಕೃಷ್ಣೋsಪಿ ಸೂರ ಉದಿತೇ ಸಬಲೋ ವಯಸ್ಯೈಃ ಸಾರ್ದ್ಧಂ ಜಗಾಮ ವರರಙ್ಗಮುಖಂ ಸುರೇಶೈಃ ।
ಸಂಸ್ತೂಯಮಾನ ಉರುವಿಕ್ರಮ ಆಸುರಾಣಾಂ ನಿರ್ಮ್ಮೂಲನಾಯ ಸಕಳಾಚಲಿತೋರುಶಕ್ತಿಃ ॥೧೩.೧೧೧॥
ಮುಂದಿನ ಸೂರ್ಯೋದಯವಾಗುತ್ತಿದ್ದಂತೆ,
ಅಮಿತ ಶಕ್ತಿಯ ಕೃಷ್ಣರಾಮರು ರಂಗಕ್ಕೆ ಹೊರಟರಂತೆ.
ಗೆಳೆಯರೊಂದಿಗೆ ಕೂಡಿಕೊಂಡು ಅಸುರವಿನಾಶದ ಉದ್ದೇಶ,
ಹೊರಟ ರಂಗಕ್ಕೆ ಸಮಸ್ತ ದೇವತೆಗಳಿಂದ ಸ್ತುತಿಸಲ್ಪಟ್ಟ ಸರ್ವೇಶ.

No comments:

Post a Comment

ಗೋ-ಕುಲ Go-Kula