Tuesday 27 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 117 - 122

ರಙ್ಗಪ್ರವಿಷ್ಟಮಭಿವೀಕ್ಷ್ಯ ಜಗಾದ ಮಲ್ಲಃ ಕಂಸಪ್ರಿಯಾರ್ತ್ಥಮಭಿಭಾಷ್ಯ ಜಗನ್ನಿವಾಸಮ್ ।
ಚಾಣೂರ ಇತ್ಯಭಿಹಿತೋ ಜಗತಾಮವದ್ಧ್ಯಃ ಶಮ್ಬುಪ್ರಸಾದತ ಇದಂ ಶೃಣು ಮಾಧವೇತಿ ॥೧೩.೧೧೭॥
 ರಂಗದ ಒಳಹೊಕ್ಕ ಕೃಷ್ಣಗೆ ಎದುರಾದನವನು  ಚಾಣೂರನೆಂಬ ಮಲ್ಲ,
ಕಂಸಪ್ರೀತಿಗೆ ಶಿವವರದಿ ಅವಧ್ಯನಾದವ ನುಡಿದ ಮಾಧವಾ ಕೇಳೆಂಬ ಸೊಲ್ಲ.
ಚಾಣೂರನಿಂದ ಮಾಧವಾ ಎಂಬ ಸಂಬೋಧನೆ,
ನೀನಾರೆಂದು ನಾವು ಗುರುತಿಸಿದ್ದೇವೆಂಬ ಸೂಚನೆ.

ರಾಜೈವ ದೈವತಮಿತಿ ಪ್ರವದನ್ತಿ ವಿಪ್ರಾ ರಾಜ್ಞಃ ಪ್ರಿಯಂ ಕೃತವತಃ ಪರಮಾ ಹಿ ಸಿದ್ಧಿಃ ।
ಯೋತ್ಸ್ಯಾವ ತೇನ ನೃಪತಿಪ್ರಿಯಕಾಮ್ಯಯಾssವಾಂ ರಾಮೋsಭಿಯುದ್ಧ್ಯತು ಬಲೀ ಸಹ ಮುಷ್ಟಿಕೇನ॥೧೩.೧೧೮॥
ರಾಜನೇ ದೇವತೆಯೆಂದು ಬ್ರಾಹ್ಮಣರು ಹೇಳಿಕೊಂಡು ಬಂದ ನೀತಿ,
ಅಂಥ ರಾಜನ ಮೆಚ್ಚಿಸಿದವರಿಗೆ ಉಂಟಾಗುತ್ತದೆ ಉತ್ಕೃಷ್ಟ ಪರಗತಿ.
ಆ ಕಾರಣದಿಂದ ನಾವಿಬ್ಬರು ಮಾಡೋಣ ಯುದ್ಧ,
ಬಲರಾಮ ಮುಷ್ಟಿಕನೊಂದಿಗೆ ಕಾದಲಾಗಲಿ ಸಿದ್ಧ.

ಇತ್ಯುಕ್ತ ಆಹ ಭಗವಾನ್ ಪರಿಹಾಸಪೂರ್ವಮೇವಂ ಭವತ್ವಿತಿ ಸ ತೇನ ತದಾsಭಿಯಾತಃ ।
ಸನ್ದರ್ಶ್ಯ ದೈವತಪತಿರ್ಯ್ಯುಧಿ ಮಲ್ಲಲೀಲಾಂ ಮೌಹೂರ್ತ್ತಿಕೀಮಥ ಪದೋರ್ಜ್ಜಗೃಹೇ ಸ್ವಶತ್ರುಮ್ ॥೧೩.೧೧೯॥
ಚಾಣೂರನ ಮಾತು ಕೇಳಿದ ಶ್ರೀಕೃಷ್ಣ ನಸುಗುತ್ತಾ ಅದಕ್ಕೆ ಒಪ್ಪಿದ,
ಒಂದು ಮುಹೂರ್ತ ಯುಧ್ಧಲೀಲೆ ತೋರಿ ಶತ್ರುವ ಕಾಲಲಿ ಹಿಡಿದ.




ಉತ್ಕ್ಷಿಪ್ಯ ತಂ ಗಗನಗಂ ಗಿರಿಸನ್ನಿಕಾಶಮುದ್ಭ್ರಾಮ್ಯ ಚಾಥ ಶತಶಃ ಕುಲಿಶಾಕ್ಷತಾಙ್ಗಮ್ ।
ಆವಿದ್ಧ್ಯ ದುರ್ದ್ಧರಬಲೋ ಭುವಿ ನಿಷ್ಪಿಪೇಷ ಚೂರ್ಣ್ಣೀಕೃತಃ ಸ ನಿಪಪಾತ ಯಥಾ ಗಿರೀನ್ದ್ರಃ ॥೧೩.೧೨೦॥
ಬೆಟ್ಟದಂತಿದ್ದ ಮಲ್ಲ ಚಾಣೂರನ ಕೃಷ್ಣ ಮೇಲೆತ್ತಿದ,
ಅಮಿತಬಲದ ಕೃಷ್ಣ ಅವನ ತಿರುಗಿಸಿ ನೆಲಕ್ಕಪ್ಪಳಿಸಿದ.
ಚಾಣೂರ ಬೆಟ್ಟ ನೆಲಕ್ಕೆ ಬಿದ್ದಂತೆ ಬಿದ್ದು ಪುಡಿಯಾದ.

ಕೃಷ್ಣಂ ಚ ತುಷ್ಟುವುರಥೋ ದಿವಿ ದೇವಸಙ್ಘಾ ಮರ್ತ್ತ್ಯಾ ಭುವಿ ಪ್ರವರಮುತ್ತಮಪೂರುಷಾಣಾಮ್ ।
ತದ್ವದ್ ಬಲಸ್ಯ ದೃಡಮುಷ್ಟಿನಿಪಿಷ್ಟಮೂರ್ದ್ಧಾ ಭ್ರಷ್ಟಸ್ತದೈವ ನಿಪಪಾತ ಸ ಮುಷ್ಟಿಕೋsಪಿ ॥೧೩.೧೨೧॥
ಆಗುತ್ತಿದ್ದಂತೆ ಚಾಣೂರನೆಂಬ ದುಷ್ಟ ಮಲ್ಲನ ನಿಗ್ರಹ,
ಶ್ರೀಕೃಷ್ಣನ ಹೊಗಳುತ್ತಾ ಸ್ತುತಿಸಿತು ದೇವತಾ ಸಮೂಹ.
ಸಾತ್ವಿಕ ಮನುಷ್ಯರಿಂದ ಉತ್ತಮೋತ್ತಮನ ಗುಣಗಾನ,
ಭುವಿಯಲ್ಲಿ ವಿಶೇಷ ಸ್ತುತಿಸಲ್ಪಟ್ಟ ಶ್ರೇಷ್ಠ ನಾರಾಯಣ.
ಹಾಗೆಯೇ ಮುಷ್ಟಿಕ ನಡೆಸಿದ್ದ ಬಲರಾಮನೊಂದಿಗೆ ಯುದ್ಧ,
ರಾಮನೇಟಿನಿಂದ ತಲೆಯೊಡೆದು ಗತಪ್ರಾಣನಾಗಿ ಬಿದ್ದ. 

ಕೂಟಶ್ಚ ಕೋಸಲ ಉತ ಚ್ಛಲನಾಮಧೇಯೋ ದ್ವೌ ತತ್ರ ಕೃಷ್ಣನಿಹತಾವಪರೋ ಬಲೇನ ।
ಕಂಸಸ್ಯ ಯೇ ತ್ವವರಜಾಶ್ಚ ಸುನೀಥಮುಖ್ಯಾಃ ಸರ್ವೇ ಬಲೇನ ನಿಹತಾಃ ಪರಿಘೇಣ ವೀರಾಃ ॥೧೩.೧೨೨॥
ಕೂಟ ಕೋಸಲರೆಂಬ ಮಲ್ಲರು ಕೃಷ್ಣನಿಂದಾದರು ಹತ,
ಛಲ ನಾಮಕ ದುಷ್ಟಮಲ್ಲನು ಬಲರಾಮನಿಂದಾದ ಮೃತ.
ಕಂಸನ ತಮ್ಮಂದಿರಾದ ಸುನೀಥ ಮೊದಲಾದವರು,
ಬಲರಾಮನ ಒನಕೆಏಟಿಗೆ ಬಲಿಯಾಗಿ ಸತ್ತು ಬಿದ್ದರು.

No comments:

Post a Comment

ಗೋ-ಕುಲ Go-Kula