Monday 7 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 32 - 36

 ಛಿತ್ವಾ ಶಿರಸ್ತಸ್ಯ ಚಕ್ರೇಣ ಕೃಷ್ಣೋ ಜಾನನ್ನಕ್ರೂರೇ ಮಣಿಮೇನೇನ ದತ್ತಮ್ ।

ಅಪ್ಯಜ್ಞವಲ್ಲೋಕವಿಡಮ್ಬನಾಯ ಪರೀಕ್ಷ್ಯ ವಾಸೋsತ್ರ ನೇತ್ಯಾಹ ರಾಮಮ್ ॥೨೦.೩೨॥

ಶ್ರೀಕೃಷ್ಣ ಮಾಡಿದ ಚಕ್ರದಿಂದ ಶತಧನ್ವನ ಶಿರಚ್ಛೇದನ,

ಮಣಿಯ ಹುಡುಕಾಟ ತೋರಿದ್ದು ಕೇವಲ ಲೋಕವಿಡಂಬನ.

ಅದು ಅಕ್ರೂರಗೆ ಕೊಡಲ್ಪಟ್ಟಿದೆ ಎಂದು ಕೃಷ್ಣ ಅರಿತಿದ್ದ,

ಅವನ ಬಟ್ಟೆ ಪರೀಕ್ಷಿಸಿ ಮಣಿ ಇಲ್ಲಣ್ಣಾ ಎಂದು ಹೇಳಿದ.

 

ಅವಿಶ್ವಾಸಾತ್ ಸ ತು ಸಕ್ರೋಧ ಏವ ಯಯೌ ವಿದೇಹಾನವಸತ್ ಪಞ್ಚ ಚಾಬ್ದಾನ್ ।

ಜಾನನ್ ಪಾರ್ತ್ಥೇಭ್ಯೋsಹಾರ್ಯ್ಯತಾಂ ಕೇಶವಸ್ಯ ವಶೀಕರ್ತ್ತುಂ ಧಾರ್ತ್ತರಾಷ್ಟ್ರೋ ಬಲಂ ಗಾತ್ ॥೨೦.೩೩॥

ಮಣಿ ಇಲ್ಲವೆಂದ ಕೃಷ್ಣನಲ್ಲಿ ಬಲರಾಮಗೆ ಬರಲಿಲ್ಲ ವಿಶ್ವಾಸ,

ಕೋಪಗೊಂಡು ವಿದೇಹ ದೇಶದೆಡೆ ಹೊರಟ ತಾ ಪ್ರವಾಸ.

ಅಲ್ಲಿಯೇ ಬಲರಾಮ ಮಾಡಿದ ಐದು ವರ್ಷಗಳ ವಾಸ.

ಪಾಂಡವರ ಕಡೆಯಿರುವ ಕೃಷ್ಣನ ತನ್ನೆಡೆಗೆ  ಸೆಳೆವುದು ಅಸಾಧ್ಯ,

ಇದನ್ನರಿತ ದುರ್ಯೋಧನ ರಾಮನ ಒಲಿಸಲು ವಿದೇಹಕ್ಕೆ ತೆರಳಿದ.

ಬಭೂವ ಶಿಷ್ಯೋsಸ್ಯ ತಥಾ ಗದಾಯಾಮಸನ್ನಿಧಾನಂ ಕೇಶವಸ್ಯ ಪ್ರತೀಕ್ಷನ್ ।

ತದಾ ಯಯಾಚೇ ಭಗಿನೀಂ  ಚ ತಸ್ಯ ಸ ಚ ಪ್ರತಿಜ್ಞಾಮಕರೋತ್ ಪ್ರದಾನೇ ೨೦.೩೪॥

ಕೇಶವನಿರದಾಗ ದುರ್ಯೋಧನ ಬಲರಾಮನಲ್ಲಿ ಬಂದು ಶಿಷ್ಯನಾದ,

ಗದಾಯುದ್ಧ ಪರಿಣಿತಿಯೊಂದಿಗೆ ಬಲರಾಮನ ತಂಗಿಯ ಬೇಡಿದ.

ಬಲರಾಮ ದುರ್ಯೋಧನನಿಗೆ ತಂಗಿ ಕೊಡುವ ಪ್ರತಿಜ್ಞೆ ಮಾಡಿದ.

 

ಜ್ಯೇಷ್ಠಂ ಹ್ಯೇನಂ ಕೇಶವೋ ನಾತಿವರ್ತ್ತೇದಿತ್ಯೇವ ಮೇನೇ ಧಾರ್ತ್ತರಾಷ್ಟ್ರಃ ಸ ತಸ್ಮಾತ್ ।

ಜಗ್ರಾಹ ಹಸ್ತಂ ದಕ್ಷಿಣಂ ಸತ್ಯಹೇತೋರ್ದ್ದದೌ ಚ ರಾಮಃ ಕರಮಸ್ಮೈ ಹಲಾಙ್ಕಮ್ ॥೨೦.೩೫॥

ಕೃಷ್ಣ ಅಣ್ಣ ಬಲರಾಮನ ಮಾತನ್ನು ಮೀರಲಾರ ಎಂದೆಣಿಸಿದ ದುರ್ಯೋಧನ,

ಬಲರಾಮನ ಬಲಗೈ ಹಿಡಿದು ಬೇಡಿದ ತಂಗಿಯ ತನಗೇ ಕೊಡುವ ವಾಗ್ದಾನ.

ಬಲರಾಮ ಮಾತುಕೊಟ್ಟ ಅವಗೆ ಇಡುತ್ತ ತನ್ನ ನೇಗಿಲ ಚಿನ್ಹೆಯ ಹಸ್ತವನ್ನ.

 

ರೂಪೇಣ ತಸ್ಯಾ ಮೋಹಿತೋ ಧಾರ್ತ್ತರಾಷ್ಟ್ರೋ ವಿಶೇಷತಃ ಕೃಷ್ಣರಾಮೌ ಭಗಿನ್ಯಾಃ ।

ಸ್ನೇಹಾದ್ ವಶಂ ಯಾಸ್ಯತ ಇತ್ಯಗೃಹ್ಣಾದ್ದಸ್ತಂ ಹಲಾಙ್ಕಂ ಹಲಿನೋ ರಿಪುಘ್ನಮ್ ॥೨೦.೩೬॥

ಸುಭದ್ರೆಯ ರೂಪಕ್ಕೆ ಸೋತು ದುರ್ಯೋಧನನಾಗಿದ್ದ ಮೋಹಿತ,

ತಂಗಿಮೇಲಿನ ಪ್ರೀತಿಯಿಂದ ರಾಮಕೃಷ್ಣರು ವಶರಾಗುತ್ತಾರೆ ಎಂದವನ ಮತ.

ಹೀಗೆ ಯೋಚಿಸುತ್ತ ಹಿಡಿದ ಶತ್ರುಸಂಹಾರಕ ನೇಗಿಲಚಿಹ್ನೆಯ ಬಲರಾಮನ ಹಸ್ತ.

No comments:

Post a Comment

ಗೋ-ಕುಲ Go-Kula