Friday 18 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 57 - 62

 ಕೃಷ್ಣಸ್ತತಶ್ಚಾಪಮಧಿಜ್ಯಮಾಶು ಕೃತ್ವಾsಚಿನ್ತ್ಯಶ್ಛಿನ್ನಬಾಣೇನ ಲಕ್ಷಮ್ ।

ಅಪಾತಯದ್ ದುನ್ದುಭಯಶ್ಚ ದಿವ್ಯಾ ನೇದುಃ ಪ್ರಸೂನಂ ವವೃಷುಃ ಸುರಾಶ್ಚ ॥೨೦.೫೭॥

ನಂತರ ಅಚಿಂತ್ಯಮೂರ್ತಿ ಕೃಷ್ಣ ಬಿಲ್ಲನ್ನು ನೇಣಿಂದ ಬಿಗಿದ,

ಗುರಿಯನ್ನು ಮುರಿದ ಬಾಣದಿಂದ ಹೊಡೆದು ಕೆಳಗೆ ಬೀಳಿಸಿದ.

ಆಗ ಅಲೌಕಿಕ ದುಂದುಭಿಗಳು ಮೊಳಗಿದವು,

ದೇವತೆಗಳು ಮಳೆಗರೆದರು ರಾಶಿರಾಶಿ ಹೂವು.

 

ಕೃಷ್ಣೇ ಬ್ರಹ್ಮಾದ್ಯೈಃ ಸ್ತೂಯಮಾನೇ ನರೇನ್ದ್ರಕನ್ಯಾ ಮಾಲಾಂ ಕೇಶವಾಂಸೇ ನಿಧಾಯ ।

ತಸ್ಥಾವುಪಾಸ್ಯಾಥ ಸರ್ವೇ ನರೇನ್ದ್ರಾ ಯುದ್ಧಾಯಾಗುಃ ಕೇಶವಂ ಸ್ವಾತ್ತಶಸ್ತ್ರಾಃ ॥೨೦.೫೮॥

ಕೃಷ್ಣ ಬ್ರಹ್ಮಾದಿ ದೇವತೆಗಳಿಂದ ಸ್ತುತಿಸಿಕೊಳ್ಳಲ್ಪಡುತ್ತಿರಲು,

ಲಕ್ಷಣೆ ಕೃಷ್ಣಗೆ ಮಾಲೆ ಹಾಕಿ ಅವನ ಬಳಿಯಲ್ಲಿ ನಿಂತಳು.

ಆಗ ಎಲ್ಲಾ ರಾಜರು ಶಸ್ತ್ರ ಸ್ವೀಕರಿಸಿ,

ಮೇಲೇರಿ ಬಂದರು ಯುದ್ಧ ಬಯಸಿ.

 

ವಿದ್ರಾಪ್ಯ ತಾನ್ ಮಾಗಧಾದೀನ್ ಸ ಕೃಷ್ಣೋ ಭೀಮಾರ್ಜ್ಜುನಾಭ್ಯಾಂ ಸಹಿತಃ ಪುರೀಂ ಸ್ವಾಮ್ ।

ಯಯಾವೇತಾ ಅಷ್ಟ ಮಹಾಮಹಿಷ್ಯಃ ಕೃಷ್ಣಸ್ಯ ದಿವ್ಯಾ ಲೋಕಸುನ್ದರ್ಯ್ಯ ಇಷ್ಟಾಃ ॥೨೦.೫೯॥

ಜರಾಸಂಧ ಮೊದಲಾದವರನ್ನು ಶ್ರೀಕೃಷ್ಣ ಓಡಿಸಿದ,

ಭೀಮಾರ್ಜುನರೊಂದಿಗೆ  ತನ್ನ ಊರಿಗೆ ತೆರಳಿದ.

ಕೃಷ್ಣಗತಿಪ್ರಿಯರಾದ ಅಲೌಕಿಕವಾದ ದಿವ್ಯ ಸುಂದರಿಯರು,

ಅಷ್ಟಮಹಿಷಿಯರಾಗಿ ಕೃಷ್ಣನ ಹೆಂಡಂದಿರಾಗಿ ಬಂದವರಾದರು.

 

[ ಮಹಾಭಾರತದ ಸಭಾಪರ್ವದಲ್ಲಿ ಹೀಗೆ ಹೇಳಿದ್ದಾರೆ: ‘ರುಗ್ಮಿಣೀ ಚ ಪತಿವ್ರತಾ । ಸತ್ಯಾ ಜಾಂಬವತೀ ಚೋಭೇ ಗಾನ್ಧಾರೀ ಶಿಶುಮಾsಪಿ ಚ ವಿಶೋಕಾ ಲಕ್ಷಣಾ ಚಾಪಿ ಸುಮಿತ್ರಾ ಕೇತುಮಾ ತಥಾ’ (ಸಭಾಪರ್ವ ೫೯. ೨) . ರುಗ್ಮಿಣೀ, ಸತ್ಯಭಾಮ, ಜಾಮ್ಬವತೀ, ಗಾನ್ಧಾರಿ(ನೀಲಾದೇವಿ, ಪರಮಾತ್ಮ ಶಿಶುವಾಗಿದ್ದಾಗಲೇ ಮದುವೆಯಾದ ಇವಳನ್ನು ‘ಶಿಶುಮಾ’ ಎಂದೂ ಕರೆಯುತ್ತಾರೆ. ಇವಳೇ ರಾಧೆ). ವಿಶೋಕಾ(ಭದ್ರೆ), ಲಕ್ಷಣಾಸುಮಿತ್ರಾ(ಮಿತ್ರವಿನ್ದೆ) ಮತ್ತು ಜ್ಞಾನವನ್ನು ಕೊಡುವ ಕೇತುಮಾ(ಕಾಳಿನ್ದೀ). ಇವರೇ ಆ ಅಷ್ಟ ಮಹಾಮಹಿಷಿಯರು. ಮೇಲ್ನೋಟಕ್ಕೆ ನಾಮಾಂತರ ಅನಿಸಿದರೂ, ಈ ಹೆಸರುಗಳು ಅವರ ಗುಣನಿರೂಪಣೆ ಮಾಡುವ ಹೆಸರುಗಳಾಗಿವೆ].

 

ಭೈಷ್ಮೀ ಸತ್ಯಾ ಚೈಕತನುರ್ದ್ದ್ವಿಧೈವ ಜಾತಾ ಭೂಮೌ ಪ್ರಕೃತಿರ್ಮ್ಮೂಲಭೂತಾ ।

ತಯೈವಾನ್ಯಾಃ ಸರ್ವದಾsನುಪ್ರವಿಷ್ಟಾಸ್ತಾಸಾಂ ಮದ್ಧ್ಯೇ ಜಾಮ್ಬವತೀ ಪ್ರಧಾನಾ  ॥೨೦.೬೦॥

ಆ ಎಂಟು ಮಹಿಷಿಯರಲ್ಲಿ ರುಗ್ಮಿಣೀ ಮತ್ತು ಸತ್ಯಭಾಮಾ ಒಬ್ಬಳೇ,

ಮೂಲಪ್ರಕೃತಿ ಎರಡಾಗಿ ಅವತರಿಸಿ ಭೈಷ್ಮೀ ಭಾಮೆಯಾಗಿ ಬಂದವಳೇ.

ಉಳಿದ ಎಲ್ಲರಲ್ಲೂ ಇತ್ತು ಅವಳ ಪ್ರವೇಶ,

ಷಣ್ಮಹಿಷಿಯರಲ್ಲಿ ಜಾಂಬವತಿಯೇ ವಿಶೇಷ.

 

ರಾಮೇಣ ತುಲ್ಯಾ ಜಾಮ್ಬವತೀ ಪ್ರಿಯತ್ವೇ ಕೃಷ್ಣಸ್ಯಾನ್ಯಾಃ ಕಿಞ್ಚಿದೂನಾಶ್ಚ ತಸ್ಯಾಃ ।

ಯದಾssವೇಶೋ ಬಹುಲಃ ಸ್ಯಾದ್ ರಮಾಯಾಸ್ತದಾ ತಾಸು ಪ್ರೀಯತೇ ಕೇಶವೋsಲಮ್ ॥೨೦.೬೧॥

ಜಾಮ್ಬವತಿ ಕೃಷ್ಣಪ್ರೀತಿ ವಿಷಯದಲ್ಲಿ ಬಲರಾಮಗೆ ಸಮಾನ,

ಉಳಿದ ಐವರು ಪತ್ನಿಯರ ಕಡೆಗೆ ಕಿಂಚಿತ್ ಕಡಿಮೆ ಪ್ರಮಾಣ.

ಯಾವಾಗ ಅವರಲ್ಲಿ ಹೆಚ್ಚಾಗುತ್ತದೆ ಲಕ್ಷ್ಮೀ ಆವೇಶ,

ಶ್ರೀಕೃಷ್ಣ ಅವರನ್ನು ಹೆಚ್ಚು ಪ್ರೀತಿಸುವುದು ವಿಶೇಷ .

 

ಯದಾssವೇಶೋ ಹ್ರಾಸಮುಪೈತಿ ತತ್ರ ಪ್ರದ್ಯುಮ್ನತೋ ವಿಂಶಗುಣಾಧಿಕಾಃ ಸ್ಯುಃ ।

ಅನಾದಿತಸ್ತಾಃ ಕೇಶವಾನ್ನಾನ್ಯಸಂಸ್ಥಾ ರೇಮೇ ತಾಭಿಃ ಕೇಶವೋ ದ್ವಾರವತ್ಯಾಮ್ ॥೨೦.೬೨॥

ಯಾವಾಗ ಅವರಲ್ಲಿ ರಮಾವೇಶ ಕಡಿಮೆಯಾಗುತ್ತದೋ ಆಗ,

ಪ್ರದ್ಯುಮ್ನನಿಗಿಂತ ಇಪ್ಪತ್ತುಪಟ್ಟು ಅಧಿಕರಾಗಿಬಿಡುತ್ತಾರಾಗ.

ಅನಾದಿ ಕಾಲದಿಂದ ಅವರು ಕೇಶವನ ಬಿಟ್ಟು ಬೇರೆಯವರೊಂದಿಗಿಲ್ಲ,

ಅಂತಹ ಅವರೊಂದಿಗೆ ದ್ವಾರಕೆಯಲ್ಲಿ ಕ್ರೀಡೆಯಾಡಿದ ಕೃಷ್ಣನೆಂಬ ಗೊಲ್ಲ.

No comments:

Post a Comment

ಗೋ-ಕುಲ Go-Kula