Sunday 13 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 44 - 47

 ವಸನ್ನಜಸ್ತತ್ರ ಬಹೂಂಶ್ಚ ಮಾಸಾನ್ ಸಫಲ್ಗುನೋsಯಾನ್ಮೃಗಯಾಂ ಕದಾಚಿತ್ ।

ಹತ್ವಾ ಮೃಗಾನ್ ಯಮುನಾತೀರಸಂಸ್ಥಃ ಸೋsನ್ಯಾಂ ಕಾಳಿನ್ದೀಂ ದದೃಶೇ ತತ್ಸ್ವಸಾರಮ್॥೨೦.೪೪॥

ಇಂದ್ರಪ್ರಸ್ಥದಲ್ಲಿ ಮಾಡಿದ ಕೃಷ್ಣ ಅನೇಕ ತಿಂಗಳ ವಾಸ,

ಒಮ್ಮೆ ಅರ್ಜುನನೊಂದಿಗೆ ಬೇಟೆಗೆ ಹೊರಟ ಪ್ರವಾಸ.

ಬೇಟೆಯಲ್ಲಿ ಕೆಲವು ಮೃಗಗಳನ್ನು ಕೊಂದ,

ಆ ನಂತರ ಯಮುನಾನದಿ ತೀರಕೆ ಬಂದ,

ಅಲ್ಲಿ ಇನ್ನೊಬ್ಬಳು ಕಾಳಿಂದಿಯನ್ನು ನೋಡಿದ.

 

 

ಸಾ ಸೂರ್ಯ್ಯಪುತ್ರೀ ಯಮುನಾsನುಜಾತಾ ತಪಶ್ಚರನ್ತೀ ಕೃಷ್ಣಪತ್ನೀತ್ವಕಾಮಾ ।

ಪೃಷ್ಟಾsರ್ಜ್ಜುನೇನಾsಹ ಸಮಸ್ತಮೇತತ್ ಪತ್ನೀಂ ಚ ತಾಂ ಜಗೃಹೇ ವಾಸುದೇವಃ ॥೨೦.೪೫॥

ಅವಳು ಸೂರ್ಯನ ಪುತ್ರಿ,

ಯಮುನೆಯ ಸಹೋದರಿ.

ಕೃಷ್ಣನ ಹೆಂಡತಿಯಾಗಬೇಕೆಂದವಳ ಬಯಕೆ,

ಅದಕ್ಕಾಗೇ ತಪಸ್ಸಿನಲ್ಲಿ ನಿರತಳಾಗಿದ್ದಳು ಆಕೆ,

ಅರ್ಜುನನಿಂದ ಪ್ರಶ್ನಿಸಲ್ಪಟ್ಟವಳಾಗಿ ಕೊಟ್ಟಳೆಲ್ಲಾ  ವಿವರ,

ನಂತರ ವಾಸುದೇವ ಹೆಂಡತಿಯಾಗಿ ಮಾಡಿದವಳ ಸ್ವೀಕಾರ.

 

ತತೋ ಗತ್ವಾ ನಗ್ನಜಿತೋ ಗೃಹಂ ಚ ಸ್ವಯಮ್ಬರೇ ಸಪ್ತ ವೃಷಾನಗೃಹ್ಣಾತ್ ।

ಸರ್ವೈರಗ್ರಾಹ್ಯಾನಸುರಾನ್ ವರೇಣ ಶಿವಸ್ಯ ಯೈರ್ನ್ನಿರ್ಜ್ಜಿತಾ ಭೂಮಿಪಾಲಾಃ ॥೨೦.೪೬॥

ಆನಂತರ ನಗ್ನಜಿತ್ ಎಂಬ ರಾಜನ ಮನೆಯಲ್ಲಿದ್ದ ಸ್ವಯಂವರಕ್ಕೆ ಕೃಷ್ಣ ತೆರಳಿದ,

ಎಲ್ಲಾ ರಾಜರುಗಳೂ ಸೋತು ಹೋಗಿದ್ದರು ಗೂಳಿಗಳ ರೂಪದ ಅಸುರರಿಂದ.

ಆ ಏಳು ಗೂಳಿಗಳು ಮೆರೆಯುತ್ತಿದ್ದವು ಶಿವವರ ಬಲದಿಂದ,

ಯಾರೂ ಮಾಡಲಾಗದ ಅಸುರ ನಿಗ್ರಹವನ್ನು ಕೃಷ್ಣ ಮಾಡಿದ.

 

ತತೋ ನೀಲಾಂ ತಸ್ಯ ಸುತಾಂ ಚ ಲೇಭೇ ಪೂರ್ವಂ ನೀಲಾ ಗೋಪಕನ್ಯಾsಪಿ ಯಾssಸೀತ್ ।

ಸಾ ದೇಹೇsಸ್ಯಾಃ ಪ್ರಾವಿಶತ್ ಪೂರ್ವಮೇಷಾ ಯಸ್ಮಾದೇಕಾ ದ್ವಿವಿಧಾ ಸಮ್ಪ್ರಜಾತಾ ॥೨೦.೪೭॥

ಆನಂತರ ಪಡೆದುಕೊಂಡ ಅವನ ಮಗಳು ನೀಲೆಯನ್ನು,

ಈ ಮೊದಲು ಗೋಪಕನ್ಯೆಯಾಗಿ ಇದ್ದಂಥ  ಬಾಲೆಯನ್ನು.

ಗೋಪಕನ್ಯೆ ನೀಲೆಯ ದೇಹದಲ್ಲಿ ಮಾಡಿದಳು ಪ್ರವೇಶ,

ಮೊದಲು ಎರಡು ರೂಪವಿದ್ದವಳು ಒಂದಾದದ್ದು ವಿಶೇಷ.

(ಎಲ್ಲೆಲ್ಲೂ ಕೃಷ್ಣನ ಜೊತೆ ಕೇಳಿಬರುವ ರಾಧೆಯೇ ಈ ನೀಲೆ,

ಕೃಷ್ಣನನ್ನು ವ್ರಜದಲ್ಲಿದ್ದಾಗಲೇ ಮದುವೆ ಆದ ಮೊದಲ ಬಾಲೆ.

ಎಲ್ಲರಿಗಿಂತ ಮುಂಚೆ ಮುಂಜಿಗೂ ಮುನ್ನ ಮದುವೆಯಾಗುವುದಿತ್ತವಳ ಬಯಕೆ,

ಹಾಗೆ ಬೇಡಿಕೊಂಡವಳನನುಗ್ರಹಿಸಿ ಕೃಷ್ಣ ಮದುವೆಯಾಗಿ ಪೂರೈಸಿದ್ದ ಕೋರಿಕೆ)

No comments:

Post a Comment

ಗೋ-ಕುಲ Go-Kula