Sunday 10 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 130 - 137

ಮುಕ್ತಾಸ್ತು ಮಾನುಷಾ ದೇವಾನ್ ದೇವಾ ಇನ್ದ್ರಂ ಸ ಶಙ್ಕರಮ್ ।
ಸ ಬ್ರಹ್ಮಾಣಂ ಕ್ರಮೇಣೈವ ತೇನ ಯಾನ್ತ್ಯಖಿಲಾ ಹರಿಮ್ ॥೧.೧೩೦॥

ಮುಕ್ತ ಮನುಷ್ಯರು ದೇವತೆಗಳಲ್ಲಿ ಲೀನ,
ದೇವತೆಗಳು ಇಂದ್ರನಲ್ಲಿ ವಿಲೀನ,
ಇಂದ್ರ ಶಂಕರನನ್ನು ಸೇರುತ್ತಾನೆ,
ಶಂಕರ ಬ್ರಹ್ಮನನ್ನು ಹೊಂದುತ್ತಾನೆ,
ಬ್ರಹ್ಮನೊಂದಿಗೆ ಎಲ್ಲಾ ಮುಕ್ತಗಣ,
ಕಲ್ಪಾಂತ್ಯದಲ್ಲಿ ಮುಕ್ತಿಯತ್ತ ಪಯಣ.

ಉತ್ತರೋತ್ತರವಶ್ಯಾಶ್ಚ ಮುಕ್ತಾ ರುದ್ರಪುರಸ್ಸರಾಃ।
ನಿರ್ದೋಷಾ ನಿತ್ಯಸುಖಿನಃ ಪುನರಾವೃತ್ತಿವರ್ಜಿತಾಃ ।
ಸ್ವೇಚ್ಛಯೈವ ರಮನ್ತೇsತ್ರ ನಾನಿಷ್ಟಂ ತೇಷು ಕಿಞ್ಚನ ॥೧.೧೩೧॥

ಮುಕ್ತರಾದ ಜೀವರ ಮುಕ್ತಿಯಲ್ಲಿನ ವಾಸ,
ಆಗುತ್ತಾರವರು ತಮಗಿಂತ ಉತ್ತಮರ ವಶ,
ಮುಕ್ತಿಯಲ್ಲಿಲ್ಲ ಯಾವ ದುಃಖದ ಪ್ರವೇಶ,
ಅಲ್ಲಿ ಜೀವರಿಗೆ ಲಭ್ಯ  ನಿತ್ಯ ಸುಖದ ವಾಸ.

ಮುಕ್ತರಾದವರಿಗಿಲ್ಲ ಭೂಲೋಕ ಸಂಸಾರ,
ಮಾಡಬಹುದು ಭೂಲೋಕದ ಇಚ್ಛಾವಿಹಾರ,
ಅವರಿಗಿದೆ ಸ್ವರೂಪಿಚ್ಛಾನುಸಾರ ಭೋಗ,
ಇರುವುದಿಲ್ಲ ಅನಿಷ್ಟದ ಲವಲೇಶ ಭಾಗ.

ಅಸುರಾ ಕಲಿಪರ್ಯನ್ತಾ ಏವಂ ದುಃಖೋತ್ತರೋತ್ತರಾಃ ।
ಕಲಿರ್ದುಃಖಾಧಿಕಸ್ತೇಷು ತೇsಪ್ಯೇವಂ ಬ್ರಹ್ಮವದ್ ಗಣಾಃ ॥೧.೧೩೨॥

ಮುಕ್ತಿ ಯೋಗ್ಯರಿಗೆ ಮೇಲೇರಿ ಚತುರ್ಮುಖನೊಂದಿಗೆ ಬಿಡುಗಡೆಯ ಭೋಗ,
ಹಾಗೇ ಕಲಿಯಾದಿ ದೈತ್ಯರಿಗೆ ಅಂಧಂತಮಸ್ಸಿನ ತಮ್ತಮ್ಮ ದುಃಖದ ಭಾಗ,
ಅಂಧಂತಮಸ್ಸಿನ ದುಃಖ ಎಲ್ಲರಿಗಿಂತ ಕಲಿಗೆ ಅಧಿಕ ಪಾಲು,
ಬ್ರಹ್ಮಪದವಿ ಯೋಗ್ಯರಂತೆ ಕಲಿ ಪದವಿಗೂ ಉಂಟಲ್ಲಿ ಅಧಮರ ಸಾಲು.

ತಥಾsನ್ಯೇsಪ್ಯಸುರಾಃ ಸರ್ವೇ ಗಣಾ ಯೋಗ್ಯತಯಾ ಸದಾ ।
ಬ್ರಹ್ಮೈವಂ ಸರ್ವಜೀವೇಭ್ಯಃ ಸದಾ ಸರ್ವಗುಣಾಧಿಕಃ ॥೧.೧೩೩॥
ಮುಕ್ತೋsಪಿ ಸರ್ವಮುಕ್ತಾನಾಮಾಧಿಪತ್ಯೇ ಸ್ಥಿತಃ ಸದಾ ।
ಆಶ್ರಯಸ್ತಸ್ಯ ಭಗವಾನ್ ಸದಾ ನಾರಾಯಣಃ ಪ್ರಭುಃ ॥೧.೧೩೪॥

ದೇವತೆಗಳಲ್ಲಿ ಹೇಗುಂಟೋ ತಾರತಮ್ಯೋಕ್ತ ಪದವಿ ಸ್ಥಾನ ಮಾನ,
ಅಸುರರಲ್ಲೂ ಹಾಗೇ ತಾರತಮ್ಯೋಕ್ತ ಪದವಿ ಹೀನ ಅತಿಹೀನ,
ರಾಜನಾಗಿ ಜೀವೋತ್ತಮರಿಗೆ -ಬ್ರಹ್ಮನಿಗೆ ಸುಖದ ಭೋಗ,
ರಾಜನಾಗಿ ದೈತ್ಯರಿಗೆ -ಕಲಿಗೆ ಅಂಧಂತಮಸ್ಸಿನ ದುಃಖ ಭಾಗ,
ಬ್ರಹ್ಮನಿಗೆ ತಾರತಮ್ಯೋಕ್ತ ಪುಣ್ಯದ ಸುಖ,
ಕಲಿಗೆ ತದ್ವಿರುದ್ಧವಾದ ಪಾಪರಾಶಿಯ ದುಃಖ,
ಬ್ರಹ್ಮನಿಗೆ ಒಡೆಯ ನಾರಾಯಣ ಆಶ್ರಯದಾತ,
ಕಲಿಯ  ಯೋಗ್ಯತೆಯಂತೆ ಅವನ ತಮಸ್ಸಿಗೆ ಹಾಕಿದಾತ.

ಬ್ರಹ್ಮಾಂಡ ಪಿಂಡಾಂಡದಲ್ಲೆರಡರಲ್ಲೂ ಇವರಿಬ್ಬರ ಆಟ,
ದೇವ ರಾಕ್ಷಸರ ನಿರಂತರ ಕಾಳಗದ (ಮಥನದ ) ನೋಟ,
ಯೋಗ್ಯತಾ ಸ್ವಭಾವಗಳ ಹೋರಾಟದಲ್ಲಿ ಗೆದ್ದ ಜೀವ,
ನಾಯಕನಾಗಿದ್ದು ಜೀವೋತ್ತಮ ಜ್ಞಾನ ಮುಕುತಿ ಕೊಟ್ಟು ಕಾವ,
ಅಂತೆಯೇ ಅಸುರರ -ವಿಷ್ಣುದ್ವೇಷಿಗಳ ಕೂಟ,
ನಾಯಕ ಕಲಿ ಕೊಂಡೊಯ್ದು ಕೊಡುವ ದುಃಖದೂಟ.

ಇತ್ಯೃಗ್ಯಜುಃಸಾಮಾಥರ್ವಪಞ್ಚರಾತ್ರೇತಿಹಾಸತಃ ।
ಪುರಾಣೇಭ್ಯಃಸ್ತಥಾsನ್ಯೇಭ್ಯಃ ಶಾಸ್ತ್ರೇಭ್ಯೋ ನಿರ್ಣಯಃ ಕೃತಃ ॥೧.೧೩೫॥
ವಿಷ್ಣ್ವಾಜ್ಞಯೈವ ವಿದುಷಾ ತತ್ ಪ್ರಸಾದಬಲೋನ್ನತೇಃ ।
ಆನನ್ದತೀರ್ಥಮುನಿನಾ ಪೂರ್ಣಪ್ರಜ್ಞಾಭಿದಾಯುಜಾ ॥೧.೧೩೬॥
ತಾತ್ಪರ್ಯಂ ಶಾಸ್ತ್ರಾಣಾಂ ಸರ್ವೇಷಾಮುತ್ತಮಂ ಮಯಾ ಪ್ರೋಕ್ತಮ್ ।
ಪ್ರಾಪ್ಯಾನುಜ್ಞಾಂ ವಿಷ್ಣೋರೇತಜ್ಜ್ಞಾತ್ವೈವ ವಿಷ್ಣುರಾಪ್ಯೋsಸೌ ॥೧.೧೩೭॥

ಋಗ್ ವೇದ ಯಜುರ್ವೇದ,
ಸಾಮವೇದ ಅಥರ್ವವೇದ,
ಪಂಚರಾತ್ರ ಇತಿಹಾಸ ಪುರಾಣ,
ಸಮಸ್ತ ಶಾಸ್ತ್ರಗಳು ನಿರ್ಣಯಿಸಿದ ಹೂರಣ,
ಇದು ಪೂರ್ಣಪ್ರಜ್ಞರು ಮಾಡುವ ಪ್ರಮಾಣ,
ಈ ಕಾರ್ಯಕ್ಕೆ ನಾರಾಯಣನ ಅನುಗ್ರಹವೇ ಕಾರಣ,
ತಂದೆಯಾಜ್ಞೆಯಂತೆ ಆನಂದತೀರ್ಥನೆಂಬ ಮುನಿಯಾದ ನಾನು,
ಶಾಸ್ತ್ರ ಮಥಿಸಿ ಇಟ್ಟಿದ್ದೇನೆ ನಾರಾಯಣನನ್ನು ಹೊಂದುವ ಜೇನು.

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯನಿರ್ಣಯೇ ಸರ್ವಶಾಸ್ತ್ರತಾತ್ಪರ್ಯನಿರ್ಣಯೋ ನಾಮ ಪ್ರಥಮೋsಧ್ಯಾಯಃ ॥

ಹೀಗೆ ಶ್ರೀಮದಾನಂದತೀರ್ಥ ಭಗವತ್ಪಾದರಿಂದ ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯ ವಾದ,
ಸರ್ವಶಾಸ್ತ್ರತಾತ್ಪರ್ಯನಿರ್ಣಯದ ಹೂರಣ, ಪ್ರಥಮ ಅಧ್ಯಾಯ ಶ್ರೀ ಹರಿಗೆ ಸಮರ್ಪಣ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula