Wednesday 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 175-179

 

ಕೃಷ್ಣಶ್ಚ ಪಾರ್ತ್ಥೌ ಚ ತಥೈಕಯಾನಂ ಸಮಾಸ್ಥಿತಾ ಧರ್ಮ್ಮಜಮಭ್ಯಗಚ್ಛನ್ ।

ತೇಷಾಂ ಶಙ್ಖಧ್ವನಿಸಮ್ಬೋಧಿತಾತ್ಮಾ ರಾಜಾ ಪ್ರೀತಶ್ಚಾತಿತರಾಂ ಬಭೂವ             ॥೨೧.೧೭೫॥

ಕೃಷ್ಣ, ಭೀಮಾರ್ಜುನರು ಒಂದೇ ರಥದಲ್ಲಿ ಬಂದರು ಧರ್ಮರಾಜನ ಬಳಿಗೆ,

ಧರ್ಮರಾಜ ಸಂತುಷ್ಟನಾದ ಕೇಳಿ ಗೆಲುವಿನ ಸಂಕೇತವಿದ್ದ ಶಂಖನಾದದ ಧ್ವನಿಗೆ.

 

ದ್ವೈಪಾಯನೋsಥ ಭಗವಾನಭಿಗಮ್ಯ ಪಾರ್ತ್ಥಾನಾಜ್ಞಾಪಯತ್ ಸಕಲಸಮ್ಭೃತಿಸಾಧನಾಯ ।

ತಂ ರಾಜಸೂಯಸಹಿತಂ ಪರಮಾಶ್ವಮೇಧಯಜ್ಞಂ ಸಮಾದಿಶದನನ್ಯಕೃತಂ ವಿರಿಞ್ಚಾತ್ ॥೨೧.೧೭೬॥

ಆನಂತರ ಪಾಂಡವರ ಬಳಿಗೆ ಷಡ್ಗುಣ ಐಶ್ವರ್ಯ ಸಂಪನ್ನರಾದ ವೇದವ್ಯಾಸರ ಆಗಮನ,

ಹೇಳುತ್ತಾರೆ ಮಾಡಲು ಬ್ರಹ್ಮನ ಬಿಟ್ಟು ಬೇರಾರೂ ಮಾಡಿರದ ರಾಜಸೂಯ ಅಶ್ವಮೇಧ ಯಜ್ಞ.

ವ್ಯಾಸರು ಆಜ್ಞೆ ಮಾಡಿ ಹೇಳುತ್ತಾರೆ-ಮಾಡಿಕೊಳ್ಳಿ ಸಕಲ ಸಿದ್ಧತೆ ಮತ್ತು ಪರಿಕರ ಸಾಧನಗಳನ್ನ.

 

[ಕೇವಲ ರಾಜಸೂಯ ಮಾಡುವುದಲ್ಲ, ಅಶ್ವಮೇಧದಿಂದ ಕೂಡಿರುವ ರಾಜಸೂಯ ಮಾಡಬೇಕು ಎನ್ನುವ ಆಜ್ಞೆ. ಪಾಂಡವರನ್ನು ಬಿಟ್ಟು ಬೇರೆ ಯಾರಿಗೂ ಮಾಡಲು ಅಸಾಧ್ಯವಾದ, ವಿಶಿಷ್ಟವಾದ ಯಾಗವನ್ನು ವೇದವ್ಯಾಸರು ಪಾಂಡವರಲ್ಲಿ ಮಾಡಲು ಆಜ್ಞೆಯನ್ನಿತ್ತರು].

 

ಕರ್ತ್ತಾ ಹಿ ತಸ್ಯ ಪರಮೇಷ್ಠಿಪದಂ ಪ್ರಯಾತಿ ಯದ್ಯನ್ಯಸದ್ಗುಣವರೈಃ ಪರಮೇಷ್ಠಿತುಲ್ಯಃ ।

ಭೀಮೇ ಮಖಸ್ಯ ಫಲಮತ್ಯಧಿಕಂ ನಿಧಾತುಂ ವ್ಯಾಸಃ ಕ್ರತುಂ ತಮದಿಶದ್ ಗುರುರಬ್ಜಜಸ್ಯ ॥೨೧.೧೭೭॥

ಈ ಯಾಗ ಮಾಡುವವ ಉಳಿದ ಗುಣಗಳಲ್ಲಾಗಿದ್ದರೆ ಬ್ರಹ್ಮನಿಗೆ ಸಮಾನ,

ಅದರಿಂದ ಸಿಗುತ್ತದೆ ಅವನಿಗೆ ಮುಂದೆ ಆ ಬ್ರಹ್ಮಪದವಿಯ ವರದಾನ.

ವಾಯುದೇವನಾಗಿದ್ದ (ಭೀಮ) ಚತುರ್ಮುಖಗೆ ಸಮಾನ,

ಬ್ರಹ್ಮಗುರು ವ್ಯಾಸರಿಂದ ಭೀಮ ಆ ಫಲ ಹೊಂದಲು ಆಜ್ಞ.

 

[ಯಜಮಾನನಾಗಿ ಧರ್ಮರಾಜ ಕುಳಿತಿರುವಾಗ ಭೀಮಸೇನನಿಗೆ ಹೇಗೆ ಅತ್ಯುತ್ಕೃಷ್ಟ ಫಲ ಸಲ್ಲುತ್ತದೆ ಎನ್ನುವ ಪ್ರಶ್ನೆಗೆ ಉತ್ತರರೂಪವಾಗಿ ಕರ್ಮದ ರಹಸ್ಯವನ್ನು ವಿವರಿಸುತ್ತಾರೆ:]

 

ಅಸಾಧಾರಣಹೇತುರ್ಯ್ಯಃ ಕರ್ಮ್ಮಣೋ ಯಸ್ಯ ಚೇತನಃ ।

ಸ ಏವ ತತ್ಫಲಂ ಪೂರ್ಣ್ಣಂ ಭುಙ್ಕ್ತೇsನ್ಯೋsಲ್ಪಮಿತಿ ಸ್ಥಿತಿಃ             ॥೨೧.೧೭೮॥

ಯಾವ ಕರ್ಮಕ್ಕೆ ಯಾರು ಪ್ರಮುಖವಾದ ಕಾರಣ,

ಅವನಾಗುತ್ತಾನೆ ಆ ಫಲ ಅನುಭವಿಸುವ ಅರ್ಹ ಯಜಮಾನ.

ಉಳಿದವರಿಗೆ ಯೋಗ್ಯತೆಯಂತೆ ಫಲ ಸ್ವಲ್ಪ ಮಾತ್ರ,

ಇದನ್ನೇ ನಿರ್ಣಯಿಸಿ ಹೇಳುತ್ತದೆ ಆ ಧರ್ಮಶಾಸ್ತ್ರ.

 

[ಹಾಗಿದ್ದರೆ ಎಲ್ಲವುದಕ್ಕೂ ಮುಖ್ಯ ಹೇತುವಾಗಿರುವ ನಾರಾಯಣನಿಗೆ ಸಮಸ್ತಫಲ ಸಲ್ಲಬೇಕಲ್ಲವೇ ಎಂದರೆ:]

 

ವಿನಾ ವಿಷ್ಣುಂ ನಿರ್ಣ್ಣಯೋsಯಂ ಸ ಹಿ ಕರ್ಮ್ಮಫಲೋಜ್ಝಿತಃ ।

ಹೇತವೋsಪಿ ಹಿ ಪಾಪಸ್ಯ ನ ಪ್ರಾಯಃ ಫಲಭಾಗಿನಃ ।

ದೇವಾಃ ಪುಣ್ಯಸ್ಯ ದೈತ್ಯಾಶ್ಚ ಮಾನುಷಾಸ್ತದ್ವಿಭಾಗಿನಃ             ॥೨೧.೧೭೯॥

ಭಗವಂತನನ್ನು ಹೊರತು ಪಡಿಸಿ ಈ ನಿರ್ಣಯ,

ಅವಗೆ ಕರ್ಮಲೇಪವಿಲ್ಲದ್ದರಿಂದ ಆಗದದನ್ವಯ.

ದೇವತೆಗಳೇ ಆದರೂ ದೈತ್ಯರ ಪಾಪದ ಪ್ರೇರಣೆಗೆ ಕಾರಣ,

ಹೆಚ್ಚಾಗಿ ಅವರಾಗುವುದಿಲ್ಲ ಅದರ ಫಲಭೋಗಕ್ಕೆ ಭಾಗಿನ.

ಒಂದೊಮ್ಮೆ ದೈತ್ಯರುಗಳು ಎಲ್ಲೋ ಮಾಡಿದರೂ ಪುಣ್ಯಕರ್ಮ,

ವಿರುದ್ಧಸ್ವಭಾವದವರಿಗೆ ಫಲವಿಲ್ಲವೆಂಬುದದು ಶಾಸ್ತ್ರ ಮರ್ಮ

ಮನುಷ್ಯ ಮಾತ್ರರಿಗಿಲ್ಲ ಪುಣ್ಯ ಪಾಪಗಳ ಪೂರ್ಣ ಭೋಗಿಸುವ ಶಕ್ತಿ,

ಪುಣ್ಯಕ್ಕೆ ದೇವತೆಗಳು, ಪಾಪಕ್ಕೆ ದೈತ್ಯರೂ ಭಾಗಿ - ಸ್ವಲ್ಪವೇ ಉಂಬ ನೀತಿ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula