Sunday 18 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 152-168

ತತಸ್ತು ಭೀಮಸ್ಯ ಬಭೂವ ಬುದ್ಧಿರಸ್ಪರ್ದ್ಧಿನಃ ಸರ್ವಜಯೋ ಹಿ ದತ್ತಃ ।

ಅಮುಷ್ಯ ರಾಮೇಣ ನ ಚ ಸ್ಪೃಧಾSಯಂ ಕರ್ಣ್ಣೋ ಮಯಾ ಯುದ್ಧ್ಯತಿ ಕೃಚ್ಛ್ರಗೋ ಹ್ಯಯಮ್ ॥೨೬.೧೫೨ ॥

 

ತಥಾSಪಿ ಮೇ ಭಗವಾನತ್ಯನುಗ್ರಹಾಜ್ಜಯಂ ದದಾತ್ಯಾತ್ಮವಚೋSಪಹಾಯ ।

ಮಯಾ ತು ಮಾನ್ಯಂ ವಚನಂ ಹರೇಃ ಸದಾ ತಸ್ಮಾದ್ ದಾಸ್ಯೇ ವಿವರಂ ತ್ವದ್ಯ ಶತ್ರೋಃ ॥ ೨೬.೧೫೩ ॥

 

ತದನಂತರ ಭೀಮಸೇನನಿಗೆ ಬಂದ ಒಂದು ಚಿಂತನೆ,

ಕರ್ಣನಿಗೆ ಪರಶುರಾಮ ಈ ತರವಾದ ವರ ನೀಡಿದ್ದಾನೆ.

ಕರ್ಣ ಯಾವುದೇ ಸ್ಪರ್ಧಾಭಾವ ಇಲ್ಲದೇ ಮಾಡಿದ ಯುದ್ಧ,

ಆಗ ಮಾತ್ರವೇ ಗೆಲುವು ತಂದುಕೊಡುವುದು ಅದು ಸಿದ್ಧ.

ಈ ಕರ್ಣನಾದರೋ ನನ್ನ ಜೊತೆಗೆ ಸ್ಪರ್ಧೆಯಿಂದ ಯುದ್ಧ ಮಾಡುತ್ತಿಲ್ಲ,

ಅವನ ಯೋಚನೆ 'ಯುದ್ಧದಿಂದ ಓಡಿಹೋದೆ ಎಂದಾಗಬಾರದಲ್ಲ'.

 

ಕರ್ಣನಿಗೆ ಸರ್ವರ ಜಯ ವರವಾಗಿ ಕೊಟ್ಟಿದ್ದರೂ ಪರಶುರಾಮರೂಪಿ ಭಗವಂತ,

ನನ್ನ ಮೇಲಿನ ಪರಮಾನುಗ್ರಹದಿಂದ ನನಗಾಗಿ ತನ್ನ ಮಾತನ್ನು ಮೀರುತ್ತಾನಾತ.

ನನಗೆ ಜಯ ಕೊಡುತ್ತಾನೆ ಆದರೆ ದೇವರ ಮಾತನ್ನು ನಾನು ಗೌರವಿಸಬೇಕು,

ಹಾಗಾಗಿ ಶತ್ರುವಿಗೆ ಈಗ ನನ್ನನ್ನು ಹೊಡೆಯಲು ಒಂದು ಅವಕಾಶ ಕೊಡಬೇಕು.

 

ಏವಂ ಸ್ಮೃತ್ವಾ ತೇನ ರನ್ಧ್ರೇ ಪ್ರದತ್ತೇ ಕರ್ಣ್ಣೋSಸ್ತ್ರವೀರ್ಯ್ಯೇಣ ಧನುರ್ನ್ನ್ಯಕೃನ್ತತ್ ।

ರಶ್ಮೀನ್ ಹಯಾನಾಂ  ಚ ತತೋ ರಥಂ ಸ ತತ್ಯಾಜ ನೈಜಂ ಬಲಮೇವ ವೇದಯನ್ ॥ ೨೬.೧೫೪ ॥

 

ಈರೀತಿಯಾಗಿ ಚಿಂತಿಸಿ ಕರ್ಣನಿಗೆ ಅವಕಾಶ ಕೊಟ್ಟ ಭೀಮಸೇನ,

ಕರ್ಣನು ಅಸ್ತ್ರದಿಂದ ಕತ್ತರಿಸಿ ಹಾಕಿದ ಭೀಮಸೇನನ ಧನುಸ್ಸನ್ನ.

ತದನಂತರ ಕತ್ತರಿಸಿ ಹಾಕಿದ ಭೀಮನ ಕುದುರೆಗಳ ಕಡಿವಾಣ,

ಭೀಮ ರಥ ಬಿಟ್ಟ ಮಾಡಲು ತನ್ನ ಸ್ವಾಭಾವಿಕ ಬಲದನಾವರಣ.

 

 

ನ ಮೇ ರಥಾದ್ಯೈರ್ದ್ಧನುಷಾSಪಿ ಕಾರ್ಯ್ಯಮಿತ್ಯೇವ ಸ ಖ್ಯಾಪಯಿತುಂ ವೃಕೋದರಃ ।

ಖಮುತ್ಪಪಾತೋತ್ತಮವೀರ್ಯ್ಯತೇಜಾ ರಥಂ ಚ ಕರ್ಣ್ಣಸ್ಯ ಸಮಾಸ್ಥಿತಃ ಕ್ಷಣಾತ್ ॥ ೨೬.೧೫೫ ॥

 

ನನಗೆ ರಥಗಳಿಂದ ಏನೂ ಪ್ರಯೋಜನವಿಲ್ಲ, ಬಿಲ್ಲಿನಿಂದಲೂ ನನಗೇನೂ ಅನುಕೂಲವಿಲ್ಲ.

ಎಂದು ಜಗತ್ತಿಗೇ ತೋರಿಸಲು ಭೀಮಸೇನನು, ತಾನು ಆಕಾಶಕ್ಕೆ ನೆಗೆದು ಕರ್ಣನ ರಥದಲ್ಲಿಳಿದನು.

 

ಭೀತಸ್ತು ಕರ್ಣ್ಣೋ ರಥಕೂಬರೇ ತದಾ ವ್ಯಲೀಯತಾತಃ ಸ ವೃಕೋದರೋ ರಥಾತ್ ।

ಅವಪ್ಲುತೋ ಜ್ಞಾಪಯಿತುಂ ಸ್ವಶಕ್ತಿಂ ನಿರಾಯುಧತ್ವೇSಪ್ಯರಿನಿಗ್ರಹಾದೌ ॥ ೨೬.೧೫೬ ॥

 

ಆಗ ಕರ್ಣನು ಬಲು ಭಯಗ್ರಸ್ತನಾದ, ರಥದ ನೊಗವನಾಧರಿಸಿ ಬಾಗಿನಿಂದ.

ತಾನಾಗಿದ್ದರೂ ಆಯುಧ ರಹಿತ, ಶತ್ರು ನಿಗ್ರಹದಲ್ಲಿ ಸರ್ವಸಮರ್ಥ.

ಹೀಗೆ ಭೀಮ ತನ್ನ ಸಹಜಶಕ್ತಿಯ ಜಗಕೆ ತೋರಿದ,

ಹಾಗೆ ಮಾಡಿದವನೇ ಆ ರಥದಿಂದ ಕೆಳಗೆ ಹಾರಿದ.

 

ನೈಚ್ಛದ್ ಗೃಹೀತುಂ ವಿನಿಹನ್ತುಮೇವ ವಾ ರಥಂ ಧನುರ್ವಾSಸ್ಯ ರಣೇSಪಹರ್ತ್ತುಮ್ ।

ದ್ರೋಣಸ್ಯ ಯದ್ವತ್ ಪೂರ್ವಮತೀವ ಶಕ್ತೋSಪ್ಯಮಾನಯದ್ ರಾಮವಚೋSಸ್ಯ ಭಕ್ತ್ಯಾ ॥ ೨೬.೧೫೭ ॥

 

ಕರ್ಣನ ಸೆರೆ, ಅವನ ಸಂಹಾರ, ರಥಾಪಹಾರ, ಧನುಸ್ಸಾಪಹಾರ,ಇದ್ಯಾವುದನ್ನೂ ಭೀಮಸೇನ ಮಾಡಬಯಸಲಿಲ್ಲ,

ಯಾವರೀತಿ ಹಿಂದೆ ದ್ರೋಣರಥವನ್ನು ನಾಶ ಮಾಡಲು ಭೀಮ ಶಕ್ತನಾಗಿದ್ದನೋ ಹಾಗೇ ಕರ್ಣರಥವ ನಾಶಮಾಡಲಿಲ್ಲ.

ಇದು ಭೀಮಗಿದ್ದ ಪರಶುರಾಮನ ಮೇಲಿನ ಭಕ್ತಿ, ಕರ್ಣಗಿದ್ದ ಭಾರ್ಗವವರವನ್ನು ಗೌರವಿಸಿದ ರೀತಿ.

 

ಸತ್ಯಾಂ ಕರ್ತ್ತುಂ ವಾಸವೇಶ್ಚ ಪ್ರತಿಜ್ಞಾಂ ಸಮ್ಮಾನಯನ್ ವೈಷ್ಣವತ್ವಾಚ್ಚ ಕರ್ಣ್ಣಮ್ ।

ದಾತುಂ ರನ್ಧ್ರಂ ಸೂರ್ಯ್ಯಜಸ್ಯ ಪ್ರಯಾತಃ ಶರಕ್ಷೇಪಾರ್ತ್ಥಂ ದೂರಮತಿಷ್ಠದತ್ರ ॥ ೨೬.೧೫೮ ॥

 

ಅರ್ಜುನ ಪ್ರತಿಜ್ಞೆಯನ್ನು ಸತ್ಯವನ್ನಾಗಿ ಮಾಡಲು, ಕರ್ಣ ಕೂಡಾ ವಿಷ್ಣು ಭಕ್ತನಾಗಿರುವುದರಿಂದಲೂ, ಭೀಮ ಅವನ ಕೊಲ್ಲಲಿಲ್ಲ;

ಹೀಗಾಗಿ ಸೂರ್ಯಪುತ್ರ ಕರ್ಣನಿಗೆ ಬಾಣ ಬಿಡಲು ಅವಕಾಶ ಮಾಡಿಕೊಟ್ಟು ಸ್ವಲ್ಪ ದೂರದಲ್ಲಿ ನಿಂತ ತಾನು ಅಮಿತ ಭುಜಬಲ.

 

ತತಃ ಕರ್ಣ್ಣೋ ದೂರಗತಂ ವೃಕೋದರಂ ಸಮ್ಮಾನಯನ್ತಂ ರಾಮವಾಕ್ಯಂ ವಿಜಾನನ್ ।

ಶರೈರವಿದ್ಧ್ಯತ್ ಸ ಚ ತಾನವಾರಯದ್ ಗಜೈರ್ಮ್ಮೃತೈಸ್ತಾಂಶ್ಚ ಚಕರ್ತ್ತ ಕರ್ಣ್ಣಃ  ॥ ೨೬.೧೫೯ ॥

 

ತದನಂತರ ದೂರದಲ್ಲಿದ್ದ ಭೀಮಸೇನನ ಕಂಡ, 

ಪರಶುರಾಮವಾಕ್ಯ ಗೌರವಿಸುವುದ ಮನಗಂಡ.

ಕರ್ಣ ತನ್ನ ಬಾಣಗಳಿಂದ ಭೀಮಸೇನನನ್ನು ಹೊಡೆಯುತ್ತಾನೆ,

ಭೀಮ ಸತ್ತ ಆನೆಗಳಿಂದ ಅವನ ಬಾಣಗಳ ತಡೆಯುತ್ತಾನೆ,

ಆ ಆನೆಗಳನ್ನೂ ಕರ್ಣ ತನ್ನ ಬಾಣಗಳಿಂದ ಕತ್ತರಿಸುತ್ತಾನೆ.

 

ವ್ಯಸೂನ್ ಗಜಾನ್ ಪ್ರಕ್ಷಿಪನ್ತಂ ಸಮೇತ್ಯ ಸಂಸ್ಪೃಶ್ಯ ಚಾಪೇನ ವಚಶ್ಚ ದುಷ್ಟಮ್ ।

ಸಂಶ್ರಾವಯಾಮಾಸ ಸುಯೋಧನಸ್ಯ ಪ್ರೀತ್ಯೈ ಪ್ರಜಾನನ್ನಪಿ ತಸ್ಯ ವೀರ್ಯ್ಯಮ್ ॥ ೨೬.೧೬೦ ॥

 

ಕರ್ಣ ಸತ್ತ ಆನೆಗಳನ್ನು ಎಸೆಯುತ್ತಿದ್ದ ಭೀಮನ ಬಳಿ ಬಂದ,

ಭೀಮಸೇನನ ಪರಾಕ್ರಮಾದಿಗಳನ್ನು ತಿಳಿದೂ ಬಿಲ್ಲಿಂದ ತಿವಿದ,

ಆಪ್ತಸ್ನೇಹಿತ ದುರ್ಯೋಧನನ ಪ್ರೀತಿಗಾಗಿ ಕೆಟ್ಟ ಮಾತನ್ನಾಡಿದ.

 

ಸಂಶ್ರಾವಯನ್ತಂ ವಚನಾನಿ ರೂಕ್ಷಾಣ್ಯಪಾಹನದ್ ಬಾಣವರೈಸ್ತದಾSರ್ಜ್ಜುನಃ ।

ಸ ವರ್ಮ್ಮಹೀನಃ ಪಾರ್ತ್ಥಬಾಣಾಭಿತಪ್ತೋ ವ್ಯಪಾಗಮದ್ ಭೀಮ ಆಪಾSತ್ಮಯಾನಮ್ ॥ ೨೬.೧೬೧ ॥

 

ಹೀಗೆ ಭೀಮಗೆ ಘೋರಮಾತುಗಳನ್ನಾಡುತ್ತಿದ್ದ ಕರ್ಣ,

ಅದನ್ನು ಕಂಡು ಕೇಳಿ ಬಲು ಕೋಪಗೊಂಡ ಅರ್ಜುನ,

ಶ್ರೇಷ್ಠವಾದ ಬಾಣಗಳಿಂದ ಅವನಿಗೆ ಚೆನ್ನಾಗಿ ಹೊಡೆದ,

ಕವಚಹೀನನಾದ ಕರ್ಣ ಪಾರ್ಥಬಾಣಗಳಿಂದ ನೊಂದು ಓಡಿದ.

ತದನಂತರ ಭೀಮಸೇನನು ತನ್ನ ರಥವನ್ನು ಏರಿದವನಾದ.

 

ಕರ್ಣ್ಣೋ ಭೀಮೇ ವಾಸವೀಂ ನೈವ ಶಕ್ತಿಂ ವಿಮೋಕ್ತುಮೈಚ್ಛನ್ನೈವ ಬೀಭತ್ಸುತೋSನ್ಯಾನ್ ।

ಹನ್ಯಾಮಿತಿ ಪ್ರಾಹ ಯತಃ ಸ ಕುನ್ತ್ಯೈ ಯದ್ಯಪ್ಯವದ್ಧ್ಯಃ ಸ ತಯಾSಪಿ ಭೀಮಃ ॥ ೨೬.೧೬೨ ॥

 

ಕರ್ಣನು ಭೀಮಸೇನನ ಮೇಲೆ ಪ್ರಯೋಗ ಮಾಡಲಿಲ್ಲ ಇಂದ್ರಕೊಟ್ಟ ಶಕ್ತ್ಯಾಯುಧ,

ಕಾರಣ ಅರ್ಜುನನ ಬಿಟ್ಟು ಇತರ ಪಾಂಡವರ ಕೊಲ್ಲಲ್ಲ ಎಂದು ಕುಂತಿಗೆ ಮಾತು ಕೊಟ್ಟಿದ್ದ.         ವಾಸ್ತವವಾಗಿ ಉಚ್ಛ ಭೀಮಸೇನನಾಗಿದ್ದ ಯಾವ ಶಕ್ತ್ಯಾಯುಧದಿಂದಲೂ ಅವಧ್ಯ.

 

ನಾರಾಯಣಾಸ್ತ್ರಂ ಶಿರಸಿ ಪ್ರಪಾತಿತಂ ನ ಯಸ್ಯ ಲೋಮಾಪ್ಯದಹಚ್ಚಿರಸ್ಥಿತಮ್ ।

ಕಿಂ ತಸ್ಯ ಶಕ್ತಿಃ ಪ್ರಕರೋತಿ ವಾಸವೀ ತಥಾSನ್ಯದಪ್ಯಸ್ತ್ರಶಸ್ತ್ರಂ ಮಹಚ್ಚ ॥ ೨೬.೧೬೩ ॥

 

ಪ್ರಯೋಗಿಸಲ್ಪಟ್ಟ ನಾರಾಯಣಾಸ್ತ್ರ ಭೀಮನ ತಲೆಯ ಮೇಲೇ ಇತ್ತು,

ಯಾವ ಭೀಮಸೇನನ ಒಂದು ಕೂದಲನ್ನೂ ಕೂಡಾ ಸುಡದಾಗಿತ್ತು ,

ಅಂತಹ ಭೀಮಸೇನನನ್ನು ಇಂದ್ರನ ಅಸ್ತ್ರ(ಶಕ್ತಿ) ಏನು ಮಾಡೀತು,

(ಅವನು ಭಾಗವತೋತ್ತಮನೆಂಬುದು ಶಾಸ್ತ್ರ ಹೇಳುವ ಮಾತು ).

 

ಭೀಮಃ ಕರ್ಣ್ಣರಥಂ ಪ್ರಾಪ್ತಃ ಶಕ್ತಿಂ ನಾSದಾತುಮೈಚ್ಛತ ।

ಅಭಿಪ್ರಾಯಂ ಕೇಶವಸ್ಯ ಜಾನನ್ ಹೈಡಿಮ್ಬಮೃತ್ಯವೇ  ॥ ೨೬.೧೬೪ ॥

 

ಭೀಮಸೇನ ಕರ್ಣನ ರಥಕ್ಕೆ ಬಂದೂ ಅಲ್ಲಿದ್ದ ಶಕ್ತ್ಯಾಯುಧವನ್ನು ಬಯಸಲಿಲ್ಲ,

ಘಟೋತ್ಕಚನ ಸಾವೂ ಅದರಿಂದ ಮತ್ತದು

ಕೃಷ್ಣಸಂಕಲ್ಪ ಎಂಬುದನ್ನೂ ಬಲ್ಲ.

ಸತ್ಯದರಿವು ಮತ್ತು ದೈವಪ್ರಜ್ಞೆಯಿಂದ ಅವನು ಶಕ್ತಿಯನ್ನು ತೆಗದುಕೊಳ್ಳಲಿಲ್ಲ.

 

ತತಃ ಕರ್ಣ್ಣೋSನ್ಯಮಾಸ್ಥಾಯ ರಥಮರ್ಜ್ಜುನಮಭ್ಯಯಾತ್ ।

ದಿವ್ಯಂ ರಥಂ ಧನುಶ್ಚೈವ ಕೃಷ್ಣಬುದ್ಧ್ಯಾSರ್ಜ್ಜುನೋ ಹರೇತ್ ॥ ೨೬.೧೬೫ ॥

 

ಇತಿ ಭೀತಸ್ತು ತಾಂ ಶಕ್ತಿಮಾದಾಯಾರ್ಜ್ಜುನಮೃತ್ಯವೇ ।

ಯುದ್ಧಾಯಾಯಾದ್ ರಥಂ ಚಾಪಂ ಶಕ್ತಿಂ ಚೈಕತ್ರ ನಾಕರೋತ್ ॥ ೨೬.೧೬೬ ॥

 

ಏಕಂ ಹೃತಂ ಚೇದನ್ಯತ್ ಸ್ಯಾದಿತಿ ಮತ್ವಾ ಭಯಾಕುಲಃ ।

ಬಿಭೇತಿ ಸರ್ವದಾ ನೀತೇಃ ಕೃಷ್ಣಸ್ಯಾಮಿತತೇಜಸಃ ॥ ೨೬.೧೬೭ ॥

 

ತದನಂತರ ಕರ್ಣನು ಇನ್ನೊಂದು ರಥವನ್ನೇರಿ ಅರ್ಜುನನನ್ನು ಎದುರುಗೊಂಡ.

ಕರ್ಣನಲ್ಲಿದ್ದ ದಿವ್ಯರಥ, ದಿವ್ಯಧನುಸ್ಸು ಮತ್ತು ಶಕ್ತ್ಯಾಯುಧಗಳ ಶಕ್ತಿ ಅಗಾಧ.

ಕೃಷ್ಣಪ್ರೇರಣೆಯಿಂದ ಅರ್ಜುನ ಅವುಗಳನ್ನು  ಕಸಿಯಬಹುದೆಂದು ಭಯಗೊಂಡ.

ಕೇವಲ ಶಕ್ತಿಯನ್ನು ಹಿಡಿದು ಅರ್ಜುನನನ್ನು ಕೊಲ್ಲಬೇಕೆಂದು ಕರ್ಣ ಯುದ್ಧಕ್ಕಾಗಿ ಬಂದ.

ಅವನು ಯುದ್ಧದಿ ಯಾವತ್ತೂ ಈ ಮೂರನ್ನು ಒಟ್ಟಿಗೆ ಹಿಡಿದುಕೊಂಡು ಬರದವನಾಗಿದ್ದ .

 

ಒಂದು ನಾಶವಾದರೆ ಇನ್ನೊಂದಿರಲಿ ಎಂಬ ಭಯ ಕೂಡಿಕೊಂಡ ಕರ್ಣನ ಯುದ್ಧನೀತಿ,

ಎಣೆಯಿರದ ಪರಾಕ್ರಮವುಳ್ಳ ಶ್ರೀಕೃಷ್ಣನ ಬುದ್ಧಿಗೆ ಅವನಲ್ಲಿ ಯಾವಾಗಲೂ ಅಪಾರ ಭೀತಿ.

 

ನಿಶ್ಚಿತೋ ಮರಣಾಯೈವ ಮೃತಿಕಾಲೇ ತು ತಂ ರಥಮ್ ।

ಆರುಹ್ಯಾಗಾದ್ಧಿ ಪೂರ್ವಂ ತು ನ ಕಾಲಂ ಮನ್ಯತೇ ಮೃತೇಃ ॥ ೨೬.೧೬೮ ॥

 

ಮುಂದೆ ಕರ್ಣಗೆ ತನ್ನ ಮರಣ ನಿಶ್ಚಿತ ಎಂದು ತಿಳಿದ ಮೇಲೆ,

ಕೊನೇ ಕಾಲಕ್ಕೆ ದಿವ್ಯಬಿಲ್ಲಿನೊಂದಿಗೆ ತನ್ನ ದಿವ್ಯ ರಥದಮೇಲೆ,

ಕರ್ಣ ತಯಾರಾಗಿ ಸಾಗಿ ಬಂದ ಯುದ್ಧಭೂಮಿಗೆ,

ಮೊದಲು ತನ್ನ ಮೃತ್ಯುಕಾಲದರಿವಿರಲಿಲ್ಲವನಿಗೆ.

No comments:

Post a Comment

ಗೋ-ಕುಲ Go-Kula