Sunday 25 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 27: 94-137

 

 

ಅತೀತ್ಯ ಪುತ್ರಂ ತು ಗುರೋಃ ಸಮಾಗತೇ ಪಾರ್ತ್ಥೇ ಕರ್ಣ್ಣೋ ದ್ರಾವಯಾಮಾಸ ಸೇನಾಮ್ ।

ಪಾಣ್ಡೋಃ ಸುತಾನಾಂ ಶರವರ್ಷಧಾರೋ ದುರ್ಯ್ಯೋಧನಶ್ಚಾನು ಯಯೌ ತಮೇವ ॥೨೭.೯೪ ॥

 

ಈರೀತಿ ಗುರುಪುತ್ರ ಅಶ್ವತ್ಥಾಮನನ್ನು ದಾಟಿ ಅರ್ಜುನ ಬರುತ್ತಿದ್ದ ,

ಕರ್ಣ ಪಾಂಡವಸೇನೆಯನ್ನು ಬಾಣಗಳ ಮಳೆಯಿಂದ ಓಡಿಸಲಾರಂಭಿಸಿದ.

ಅವನನ್ನು ಅನುಸರಿಸಿ, ದುರ್ಯೋಧನನು ಯುದ್ಧ ಮಾಡಲೆಂದು ಬಂದ.

 

ಕರ್ಣ್ಣಮಾಯಾನ್ತಮಾಲೋಕ್ಯ ದ್ರಾವಯನ್ತಂ ನಿಜಾಂ ಚಮೂಮ್ ।

ಧನುರನ್ಯತ್ ಸಮಾದಾಯ ಧೃಷ್ಟದ್ಯುಮ್ನೋ ನ್ಯವಾರಯತ್ ॥೨೭.೯೫ ॥

 

ಬರುತ್ತಿರುವ ಕರ್ಣನನ್ನು ಧೃಷ್ಟದ್ಯುಮ್ನ ಕಂಡ,

ತನ್ನ ಸೇನೆಯನ್ನು ಓಡಿಸುತ್ತಿದ್ದನ್ನು ನೋಡಿದ,

ಬೇರೊಂದು ಧನುಸ್ಸು ಹಿಡಿದು ಕರ್ಣನ ತಡೆದ.

 

ತಯೋರಾಸೀನ್ಮಹದ್ ಯುದ್ಧಂ ಚಿರಂ ಸಮಮವಿಶ್ರಮಮ್ ।

ತದೈವ ಸಾತ್ಯಕಿರ್ವೀರೋ ದುರ್ಯ್ಯೋಧನಮವಾರಯತ್ ॥೨೭.೯೬ ॥

 

ಅವರಿಬ್ಬರ ನಡುವೆ ನಡೆಯಿತು ಸಮವಾದ ಧೀರ್ಘಕಾಲದ,

ವಿಶ್ರಾಂತಿಯೇ ಇಲ್ಲದಂಥ ನಿರಂತರವಾದ ದೊಡ್ಡ ಯುದ್ಧ.

ಅವಾಗಲೇ ಸಾತ್ಯಕಿ ಬಂದು ದುರ್ಯೋಧನನನ್ನು ತಡೆದ.

 

ನಿವಾರಿತಃ ಸಾತ್ಯಕಿನಾ ರಣೇ ದುರ್ಯ್ಯೋಧನೋ ನೃಪಃ ।

ನಿಹತ್ಯ ಸಾತ್ಯಕೇರಶ್ವಾನ್ ದ್ರೌಪದೇಶ್ಚಾಪಮಚ್ಛಿನತ್ ॥೨೭.೯೭ ॥

 

ತಡೆಯಲ್ಪಟ್ಟ,ರಾಜಾ ಕೌರವ ಸಾತ್ಯಕಿಯಿಂದ,

ಯುದ್ಧದಿ ಸಾತ್ಯಕಿಯ ಕುದುರೆಗಳನ್ನು ಕೊಂದ, 

ಹಾಗೆಯೇ ಧೃಷ್ಟದ್ಯುಮ್ನನ ಬಿಲ್ಲನ್ನು ಕತ್ತರಿಸಿದ .

 

ತದನ್ತರೈವ ಕರ್ಣ್ಣೋSಪಿ ಪಾರ್ಷತಾಶ್ವಾನಪಾತಯತ್ ।

ತಯೋರ್ವಿರಥಯೋರೇವ ಭಗ್ನಂ ತತ್ ಪಾಣ್ಡವಂ ಬಲಮ್ ॥೨೭.೯೮ ॥

 

ಅದೇ ಸಂಧರ್ಭದಲ್ಲಿ ಕರ್ಣ ಧೃಷ್ಟದ್ಯುಮ್ನನ ಕುದುರೆಗಳನ್ನು ಕೊಲ್ಲಲು,

ಹೀಗೆ ಸಾತ್ಯಕಿ ಮತ್ತು ಧೃಷ್ಟದ್ಯುಮ್ನ ಇಬ್ಬರೂ ರಥಹೀನರಾಗಲು,

ಪಾಂಡವ ಸೇನೆ ಅನುಭವಿಸಬೇಕಾಯಿತು ಆ ಸಮಯಕ್ಕೆ ಸೋಲು .

 

ಬಲಂ ಸ್ವಕೀಯಂ ಬಹುಧಾ ವಿಭಿನ್ನಂ ಸಮೀಕ್ಷ್ಯ ಭೀಮೋ ಮೃಗರಾಜಕೇತುಃ ।

ಕೃತ್ವಾ ಧರಾಕಮ್ಪಕಮುಗ್ರನಾದಂ ರಣೇSಭ್ಯಯಾತ್  ಕೌರವರಾಜಸೈನ್ಯಮ್ ॥೨೭.೯೯ ॥

 

ಹೀಗೆ ತಮ್ಮ ಸೇನೆಯು ಬಹುಪ್ರಕಾರವಾಗಿ ನಾಶವಾಗುತ್ತಿತ್ತು,

ಅದು ಸಿಂಹಧ್ವಜನಾದ ಭೀಮಸೇನನ ಗಮನ, ದೃಷ್ಟಿಗೆ ಬಿತ್ತು.

ಭೂಮಿಯನ್ನೇ ನಡುಗಿಸುವ ಭಯಂಕರ ಗರ್ಜನೆಯನ್ನು ಮಾಡಿದ,

ದುರ್ಯೋಧನನ ಸೇನೆಯನ್ನು ಯುದ್ಧದಲ್ಲಿ ಎದುರುಗೊಂಡವನಾದ.

 

ನಾದೇನ ಬಾಣೈಶ್ಚ ವೃಕೋದರೇಣ ಭಗ್ನಂ ತದಾ ಕೌರವಸೈನ್ಯಮಾಶು ।

ದಿಶೋ ವಿದುದ್ರಾವ ಸುಯೋಧನೋSಪಿ ಕೃತೋ ರಣೇ ತೇನ ವಿವಾಹನಾಯುಧಃ ॥೨೭.೧೦೦ ॥

 

ಸಿಂಹ ನಾದದಿಂದ, ಬಾಣಗಳಿಂದ, ನಾಶಗೊಂಡ ಕೌರವಸೇನೆ ಭೀಮನಿಂದ,

ದಿಕ್ಕು-ದಿಕ್ಕುಗಳಲ್ಲಿ ಓಡಿ ಹೋಯಿತು ಸೈನ್ಯ.

ದುರ್ಯೋಧನನಾದ ಭೀಮನಿಂದ ರಥಹೀನ,            

ಹಾಗೂ ಆಗಬೇಕಾಯಿತು ಅವ ಆಯುಧಹೀನ.

 

ದೃಷ್ಟ್ವೈವ ತತ್ ಪಾಣ್ಡವಾನಾಂ ಚ ಸೇನಾ ಸಮಾವೃತ್ತಾ ಕ್ಷಿಪ್ರಮವಾರ್ಯ್ಯವೇಗಾ ।

ತಯಾ ಪುನಃ ಕೌರವಾಣಾಂ ಬಲಂ ತದ್ ಭಗ್ನಂ ದೂರಾದ್ ದೂರತರಂ ಪ್ರದುದ್ರುವೇ ॥೨೭.೧೦೧ ॥

 

ಓಡಿಹೋಗುತ್ತಿದ್ದ ಪಾಂಡವರ ಸೇನೆ ಇದನ್ನು ನೋಡಿತು,

ಶೀಘ್ರದಲ್ಲಿ  ಮರಳಿ ಬಂದು ಒಂದೆಡೆ ಜಮಾವಣೆ ಆಯಿತು.

ಎಣಿಸಲಾರದ ವೇಗದಲ್ಲಿತ್ತು ಪಾಂಡವ ಸೈನ್ಯ,

ಆಗುತ್ತಿತ್ತು ಕೌರವರ ಸೇನೆಯಲ್ಲಿ ಸರ್ವನಾಶನ,

ಹಾಗೇ ಮಾಡಿತು ದೂರ-ದೂರಕ್ಕೆ ಪಲಾಯನ.

 

ಹನ್ಯಮಾನಂ ದಿಶೋ ಯಾತಂ ಪಾಞ್ಚಾಲೈರ್ಭೀಮಸಂಶ್ರಯಾತ್ ।

ಸುಯೋಧನಬಲಂ ದೃಷ್ಟ್ವಾ ಜಜ್ವಾಲಾSಧಿರಥಿಃ ಕ್ರುಧಾ ॥೨೭.೧೦೨ ॥

 

ಹೀಗೆ ಭೀಮಬೆಂಗಾವಲಿನಿಂದ ಕೂಡಿದ ಪಾಂಚಾಲಸೇನೆಯಿಂದ,

ನಾಶಗೊಂಡು ದಿಕ್ಕು-ದಿಕ್ಕುಗಳಿಗೆ ಚಲ್ಲಾಪಿಲ್ಲಿಯಾಗಿ ಓಡುತ್ತಿದ್ದ,

ದುರ್ಯೋಧನನ ಸೇನೆಯನ್ನು ಕಂಡ, ಕರ್ಣನು ಸಿಟ್ಟಿನಿಂದ ಉರಿದುಹೋದ. 

 

ಸೋSಮೋಘಂ ರಾಮದೇವತ್ಯಮಸ್ತ್ರಂ ಭಾರ್ಗ್ಗವಸಂಜ್ಞಿತಮ್ ।

ಸರ್ವಾಸ್ತ್ರನಾಶಕಂ ದಿವ್ಯಮಪ್ರತಿದ್ವನ್ದ್ವಮಾದದೇ ॥೨೭.೧೦೩ ॥

 

ಅವನ ದೇವತೆ ಪರಶುರಾಮ, ಅಸ್ತ್ರಗುರು ಅವ ಭಾರ್ಗವನಾಮ.

ಎಲ್ಲಾ ಅಸ್ತ್ರವನ್ನೂ ನಾಶಮಾಡುವ ಅಲೌಕಿಕವಾದ,

ಎಣೆಯಿರದ, ವ್ಯರ್ಥವಲ್ಲದ ಅಸ್ತ್ರವ ತೆಗೆದುಕೊಂಡ.

 

ತಚ್ಚ ಭೀಮಪುರೋಗೇಷು ಸೈನ್ಯೇಷ್ವಮುಚದುದ್-ಬ್ಲಣಮ್ ।

ತದಸ್ತ್ರಂ ವರ್ಜಯಾಮಾಸ ಭೀಮಂ ರಾಮಪ್ರಸಾದತಃ  ॥೨೭.೧೦೪ ॥

 

ಆ ಭಾರ್ಗವ ಅಸ್ತ್ರವು ಅತ್ಯಂತ ಭಯಂಕರವಾಗಿತ್ತು,

ಕರ್ಣನಿಂದ ಭೀಮನಿದ್ದ ಸೈನ್ಯದ ಮೇಲೆ ಬಿಡಲ್ಪಟ್ಟಿತು.

ಆ ಅಸ್ತ್ರ ರಾಮನ ಅನುಗ್ರಹದಿಂದಾಗಿ ಭೀಮನನ್ನು ಬಿಟ್ಟಿತು. 

 

ಅನ್ಯೇ ತು ದುದ್ರುವುಃ ಕೇಚಿಚ್ಛಿಷ್ಟಾಃ ಪ್ರಾಪುರ್ಯ್ಯಮಕ್ಷಯಮ್ ।

ನಹ್ಯಸ್ತ್ರಂ ದ್ರವಮಾಣಾಂಸ್ತದ್ಧನ್ತಿ ತೇನ ಸಪಾರ್ಷತಾಃ ॥೨೭.೧೦೫ ॥

 

ಪಾಞ್ಚಾಲಾ ದ್ರೌಪದೇಯಾಶ್ಚ ಶೈನೇಯಾದ್ಯಾಶ್ಚ ಸರ್ವಶಃ ।

ಪಲಾಯನೇನೋರ್ವರಿತಾ ಅರ್ಜ್ಜುನೋSಪ್ಯಸ್ತ್ರಮುದ್ಯತಮ್  ॥೨೭.೧೦೬ ॥

 

ವೀಕ್ಷ್ಯ ಪ್ರತ್ಯಸ್ತ್ರಹೀನಂ ತದಪ್ರಾಪ್ಯೈವ ರವೇಃ ಸುತಮ್ ।

ವಾಸುದೇವಮಿದಂ ಪ್ರಾಹ ವರ್ಜ್ಜಯಿತ್ವೈವ ಸೂತಜಮ್  ॥೨೭.೧೦೭ ॥

 

ಆಗ ಕೆಲವರು ಮಾಡಿದರು ಪಲಾಯನ,

ಉಳಿದ ಕೆಲವರು ಹೊಂದಿದರು ಮರಣ.

ಆ ಅಸ್ತ್ರಕ್ಕೆ ಓಡುವವರನ್ನು ಕೊಲ್ಲುವುದಿಲ್ಲ ಎಂಬುದು ನೀತಿ,

ಹೀಗಾಗಿ ಧೃಷ್ಟದ್ಯುಮ್ನ ಮೊದಲಾದವರು ಬದುಕಿದ ರೀತಿ.

ಪಾಂಚಾಲರು,ದ್ರೌಪದಿ ಪುತ್ರರು,ಸಾತ್ಯಕಾದಿಗಳು,

ಓಡಿ ಬದುಕಿಕೊಂಡು, ಕಂಡರು ಮುಂದಿನ ಬಾಳು. 

ಅರ್ಜುನನೂ ಕೂಡಾ ಪ್ರತ್ಯಸ್ತ್ರವಿಲ್ಲದ ಈ ಅಸ್ತ್ರವನ್ನು ಕಂಡು,

ಆ ಅಸ್ತ್ರಕ್ಕೆ ಎದುರಾಗದಂತೆ ತೆರಳಬೇಕು ಎಂದುಕೊಂಡು,

ನಿಶ್ಚಯಿಸಿ, ಕೃಷ್ಣಗೆ ಹೇಳಿದ ‘ಕರ್ಣನ ಬಿಟ್ಟು ಬೇರೆಡೆ ಹೋಗುವೆನೆಂದು.

 

ಅನ್ಯತ್ರ ಯಾಮಿ ನೈವಾಸ್ಮಾದಸ್ತ್ರಾಜ್ಜೀವನಮನ್ಯಥಾ ।

ಇತ್ಯೂಚಿವಾಂಸಂ ಪಾರ್ತ್ಥಂ ತಂ ಕೃಷ್ಣೋSಪ್ರಾಪ್ಯೈವ ಸೂತಜಮ್ ॥೨೭.೧೦೮ ॥

 

ಅನ್ಯೇನೈವ ಪಥಾ ಭೀಮಂ ಪ್ರಾಪಯಾಮಾಸ ವಿಶ್ವಕೃತ್ ।

ತತ್ರಾರ್ಜ್ಜುನೋSವದದ್ ಭೀಮಂ ಯಾಹಿ ದ್ರಷ್ಟುಂ ಯುಧಿಷ್ಠಿರಮ್ ॥೨೭.೧೦೯ ॥

 

 

‘ಬೇರೆಕಡೆ ಹೋಗುತ್ತೇನೆ, ಇಲ್ಲದಿದ್ದರೆ ಈ ಅಸ್ತ್ರದಿಂದ ನಾನು ಬದುಕುಳಿಯುವುದಿಲ್ಲ’,

ಹೀಗೆ ಹೇಳಿದ ಅರ್ಜುನನನ್ನು ಕರ್ಣನೆಡೆ ಕಳಿಸದೇ, ಭೀಮನಲ್ಲಿಗೆ ಬಿಟ್ಟ ಹಿರಿಗೊಲ್ಲ.                             ಬೇರೊಂದು ದಾರಿಯಿಂದ ಅರ್ಜುನನನ್ನು ಭೀಮನ ಬಳಿ ಸೇರಿಸಿದ,

ಅರ್ಜುನ ಭೀಮಗೆ ‘ಯುಧಿಷ್ಠಿರನನ್ನು ನೋಡಿಕೊಂಡು ಬಾ’ ಎಂದು ಹೇಳಿದ.

 

ಪ್ರವೃತ್ತಿಂ ವಿದ್ಧಿ ಭೂಪಸ್ಯ ಮಾಂ ತು ಸಂಶಪ್ತಕಾ ಯುಧೇ ।

ಆಹ್ವಯನ್ತಿ ಹತೋಚ್ಛೇಷಾಸ್ತಾನಹಂ ಯಾಮಿ ತದ್ ಯುಧೇ ॥೨೭.೧೧೦ ॥

 

ತಿಳಿದುಕೋ ಯುಧಿಷ್ಠಿರ ಹೇಗಿದ್ದಾನೆ ಎಂಬ ವರ್ತಮಾನ,

ಅಳಿದುಳಿದ ಸಂಶಪ್ತಕರು ಮಾಡುತ್ತಿದ್ದಾರೆ ಯುದ್ಧಾಹ್ವಾನ,

ಅವರನ್ನು ಕುರಿತು ಯುದ್ಧಕ್ಕಾಗಿ ಸಾಗುತ್ತದೆ ನನ್ನ ಪಯಣ.

 

ಇತ್ಯೂಚಿವಾಂಸಂ ತಮುವಾಚ ಭೀಮೋ ಜಾನನ್ ಸ್ವಬಾಹ್ವೋರ್ಬಲಮಪ್ರಮೇಯಮ್ ।

ಸಂಶಪ್ತಕಾನ್ ಸೂತಜಂ ಕೌರವಾಂಶ್ಚ ಯೋತ್ಸ್ಯೇSಹಮೇಕಸ್ತ್ವಮುಪೈಹಿ ಭೂಪಮ್ ॥೨೭.೧೧೧ ॥

 

ಈರೀತಿಯಾಗಿ ಹೇಳುತ್ತಿರುವ ಅರ್ಜುನನ ಮಾತನ್ನು ಭೀಮ ಕೇಳುತ್ತಾನೆ,

ತನ್ನ ಬಾಹುವಿನ ಎಣಿಯಿರದ ಬಲವನ್ನು ತಿಳಿದವನಾಗಿ ಹೀಗೆ ಹೇಳುತ್ತಾನೆ-

‘ನಾನೊಬ್ಬನೇ ಸಂಶಪ್ತಕರನ್ನೂ, ಕರ್ಣನನ್ನೂ, ದುರ್ಯೋಧನಾದಿಗಳನ್ನೂ,

ಎದುರಿಸಿ ಯುದ್ಧ ಮಾಡುತ್ತೇನೆ;ನೀನೇ ಹೋಗಿ ನೋಡಿಬಾ’ ಯುಧಿಷ್ಠಿರನನ್ನು.

 

ತ್ಯಕ್ತ್ವಾ ರಣಂ ನಾಹಮಿತೋ ವ್ರಜೇಯಂ ನ ಮಾಂ ವದೇತ್ ಕಶ್ಚನ ಯುದ್ಧಭೀತಮ್ ।

ಇತಿ ಬ್ರುವಾಣಂ ತಮನನ್ತಶಕ್ತಿಃ ಪ್ರೀತಃ ಕೃಷ್ಣಃ ಪ್ರಶಶಂಸಾಧಿಕೇಷ್ಟಮ್ ॥೨೭.೧೧೨ ॥

 

ಯುದ್ಧವನ್ನು ಬಿಟ್ಟು ನಾನು ಇಲ್ಲಿಂದ ಯಾವತ್ತೂ ಹೋಗುವುದಿಲ್ಲ,

ಏಕೆಂದರೆ ಯಾವೊಬ್ಬನೂ ನನ್ನನ್ನು 'ರಣಹೇಡಿ' ಅನ್ನಬಾರದಲ್ಲ.

ಈರೀತಿಯಾಗಿ ಹೇಳುತ್ತಿದ್ದ ಬಲಭೀಮಸೇನ,

ಅವನನ್ನು ಚೆನ್ನಾಗಿ ಪ್ರಶಂಸಿದ ಅನಂತಶಕ್ತ ಕೃಷ್ಣ.

 

ಯಯೌ ಯುಧಿಷ್ಠಿರಂ ದ್ರಷ್ಟುಂ ಶಿಬಿರಂ ಸಾರ್ಜ್ಜುನೋ ಹರಿಃ ।

ದೃಷ್ಟ್ವಾತೌ ನೃಪತಿಃ ಕರ್ಣ್ಣಂ ಹತಂ ಮತ್ವಾ ಶಶಂಸ ಹ ॥೨೭.೧೧೩ ॥

 

 

ಧರ್ಮಜನ ಕಾಣಲು ಅರ್ಜುನನೊಂದಿಗೆ ಶ್ರೀಕೃಷ್ಣ ತೆರಳಿದ.

ಇವರಿಬ್ಬರನ್ನು ಕಂಡ ಧರ್ಮಜ ,ಕರ್ಣ ಸತ್ತನೆಂದು ಊಹಿಸಿದ.

ಅವರಿಬ್ಬರನ್ನೂ ಯುಧಿಷ್ಠಿರ ಆಗ ಬಹಳ ಚೆನ್ನಾಗಿ ಹೊಗಳಿದ.

 

ಅಭಿವಾದ್ಯ ಹನಿಷ್ಯಾಮೀತ್ಯುಕ್ತಃ ಪಾರ್ತ್ಥೇನ ಸ ಕ್ರುಧಾ ।

ಭೃಶಂ ವಿನಿನ್ದ್ಯ ಭೀಭತ್ಸುಮಾಹ ಕೃಷ್ಣಾಯ ಗಾಣ್ಡಿವಮ್  ॥೨೭.೧೧೪ ॥

 

ದೇಹಿ ಪುತ್ರಂ ಸ ರಾಧಾಯ ಹನಿಷ್ಯತಿ ನ ಸಂಶಯಃ ।

ಅಥವಾ ಭೀಮ ಏವೈನಂ ನಿವೃತ್ತೇ ತ್ವಯಿ ಪಾತಯೇತ್ ॥೨೭.೧೦೫ ॥

 

ತ್ವಂ ತು ಕುನ್ತ್ಯಾ ವೃಥಾ ಸೂತಃ ಕ್ಲೀಬೊ ಮಿಥ್ಯಾಪ್ರತಿಶ್ರುತಃ ।

ಅಹಂ ಹಿ ಸೂತಪುತ್ರೇಣ ಕ್ಲಿಷ್ಟೋ ಮಾರುತಿತೇಜಸಾ ॥೨೭.೧೧೬ ॥

 

ಜೀವಾಮೀತ್ಯಗ್ರಜೇನೋಕ್ತ ಉದ್ಬಬರ್ಹಾಸಿಮುತ್ತಮಮ್ ।

ವಾಸುದೇವಸ್ತದಾSSಹೇದಂ ಕಿಮೇತದಿತಿ ಸರ್ವವಿತ್ ॥೨೭.೧೧೭ ॥

 

ಆಗ ಅರ್ಜುನ ಅಣ್ಣನಿಗೆ ನಮಸ್ಕರಿಸಿದ,           

ಕರ್ಣನನ್ನು ಇನ್ನು ಕೊಲ್ಲಬೇಕಷ್ಟೇ' ಎಂದ.

ಧರ್ಮಜ ಸಿಟ್ಟಿನಿಂದ ಅವನನ್ನು ಚೆನ್ನಾಗಿ ಬೈದ.

‘ಗಾಂಡೀವವನ್ನು ಇಟ್ಟುಕೊಂಡು ನೀನು  ಮಾಡುತ್ತಿರುವುದೇನು?

ಅದನ್ನು ಕೃಷ್ಣಗೆ ಕೊಡು, ಅವನು ಆ ಕರ್ಣನ ಕೊಂದುಹಾಕುವನು.

ನೀನು ನಿನ್ನ ಪ್ರತಿಜ್ಞೆಯನ್ನು ಹಿಂಪಡೆದಿರುವುದಾಗಿ ಹೇಳು,

ಆಗ ಭೀಮಸೇನನೇ ಅವನನ್ನು ಸಾಯಿಸುತ್ತಾನೆ ಕೇಳು.

ನೀನು ಕುಂತಿಗೆ ಹುಟ್ಟಿರುವುದೇ ವ್ಯರ್ಥ,

ನಪುಂಸಕನ ಪ್ರತಿಜ್ಞೆಗೆಲ್ಲಿದೆ ಯೋಗ್ಯತಾರ್ಥ.         

ನಾನು ಕರ್ಣನಿಂದ ಅನುಭವಿಸಿದೆ ಬಹಳ ಕಷ್ಟ ವೇದನೆ,

ಭೀಮನ ಬಲದಿಂದಾಗಿ ನಾನಿನ್ನೂ ಬದುಕಿ ಉಳಿದಿದ್ದೇನೆ’.

ಈರೀತಿಯಾಗಿ ಅಣ್ಣ ಧರ್ಮರಾಯ ಹೇಳುತ್ತಿದ್ದ,

ಅರ್ಜುನ ಒರೆಯಿಂದ ದೊಡ್ಡ ಕತ್ತಿಯನ್ನು ತೆಗೆದ.

ಆಗ ಸರ್ವಜ್ಞ ಕೃಷ್ಣ ‘ಏನು ಮಾಡುತ್ತಿರುವೆ’ ಎಂದ.

 

ತಮಾಹ ಗಾಣ್ಡಿವಂ ದಾತುಂ ಯೋ ವದೇತ್ ತದ್ವಧೋ ಮಯಾ ।

ಪ್ರತಿಜ್ಞಾತಸ್ತತೋ ಹನ್ಮಿ ನೃಪಮಿತ್ಯಾಹ ತಂ ಹರಿಃ ॥೨೭.೧೧೮ ॥

 

ಆಗ ಅರ್ಜುನ- ‘ಗಾಂಡೀವವನ್ನು ಬೇರೆಯವರಿಗೆ ಕೊಟ್ಟುಬಿಡು’ ಎನ್ನುವವರನ್ನು,

ಸಂಹಾರ ಮಾಡುತ್ತೇನೆ ಎಂಬ ಪ್ರತಿಜ್ಞೆಯನ್ನು ಹಿಂದೆಯೇ ಮಾಡಿದ್ದೇನೆ ನಾನು.

ಆ ಕಾರಣದಿಂದ ಧರ್ಮರಾಜನನ್ನು ಕೊಲ್ಲುತ್ತೇನೆ, ಆಗ ಸರ್ವಜ್ಞನಾದ ಶ್ರೀಕೃಷ್ಣ ಹೀಗೆ ಹೇಳುತ್ತಾನೆ-

 

ಸತ್ಯಸ್ಯ ವಚನಂ ಶ್ರೇಯಃ ಸತ್ಯಜ್ಞಾನಂ ತು ದುಷ್ಕರಮ್ ।

ಯತ್ ಸತಾಂ ಹಿತಮತ್ಯನ್ತಂ ತತ್ ಸತ್ಯಮಿತಿ ನಿಶ್ಚಯಃ ॥೨೭.೧೧೯ ॥

 

ಧರ್ಮ್ಮಸ್ಯ ಚರಣಂ ಶ್ರೇಯೋ ಧರ್ಮ್ಮಜ್ಞಾನಂ ತು ದುಷ್ಕರಮ್ ।

ಯಃ ಸತಾಂ ಧಾರಕೋ ನಿತ್ಯಂ ಸ ಧರ್ಮ್ಮ ಇತಿ ನಿಶ್ಚಯಃ ॥೨೭.೧೨೦ ॥

 

ಸತ್ಯವನ್ನಾಡುವುದು ತುಂಬಾ ಒಳ್ಳೆಯದು ,

ಆದರೆ ಸತ್ಯದ ಜ್ಞಾನ ಮಾತ್ರ ದುರ್ಲಭ ಜಾಡು.

ಸಜ್ಜನರಿಗೆ ಹಿತವಾವುದು ಅದು ಸತ್ಯ ನೋಡು.

ಧರ್ಮ ಮಾಡುವುದು ತುಂಬಾ ಒಳ್ಳೆಯದು,

ಕಷ್ಟ ಧರ್ಮ ಯಾವುದು ಎಂದು ತಿಳಿವುದು. 

ಯಾವುದನ್ನು ಮಾಡುವುದರಿಂದ ಸಜ್ಜನರಿಗಿದೆ ಬದುಕು,

ಅದು ಧರ್ಮ,ಮತ್ತೆ ಅದೇ ನಿಶ್ಚಯ ಧರ್ಮದ ಸರಕು.

 

ಕೌಶಿಕಾಖ್ಯೋ ಬ್ರಾಹ್ಮಣೋ ಹಿ ಲೀನಂ ಗ್ರಾಮಜನಂ ಕ್ವಚಿತ್ ।

ತಸ್ಕರೇಷ್ವಭಿಧಾಯೈವ ನಿರಯಂ ಪ್ರತ್ಯಪದ್ಯತ ॥೨೭.೧೨೧ ॥

 

ಹಿಂದೆ ಕೌಶಿಕಾ ಎಂಬ ಹೆಸರಿನ ಬ್ರಾಹ್ಮಣ,

ಸತ್ಯವ ಹೇಳುವೆ ಎಂದುಕೊಂಡ ಕಾರಣ,

ತನ್ನ ಆಶ್ರಮದಲ್ಲಿ ಅಡಗಿಕೊಂಡ ಗ್ರಾಮದವರನ್ನು,

ಕಳ್ಳರಿಗೆ ತಿಳಿಸಿಯೇ ನರಕವನ್ನು ಹೊಂದಿರುವನು.

 

 

ಕಶ್ಚಿದ್ ವ್ಯಾಧೋ ಮೃಗಂ ಹತ್ವಾ ಮಾತಾಪಿತೃನಿಮಿತ್ತತಃ ।

ಭಕ್ಷಾರ್ತ್ಥಮಭ್ಯಗಾತ್ ಸ್ವರ್ಗ್ಗಮಸುರೋSಸೌ ಮೃಗೋ ಯತಃ ॥೨೭.೧೨೨ ॥

 

ಉಪದ್ರವಾಯ ಲೋಕಸ್ಯ ತಪಶ್ಚರತಿ ದುರ್ಮ್ಮತಿಃ ।

ತಸ್ಮಾತ್ ಸದ್ಧಾರಕೋ ಧರ್ಮ್ಮ ಇತಿ ಕೃತ್ವಾ ವಿನಿಶ್ಚಯಮ್ ॥೨೭.೧೨೩ ॥

 

ಮಾ ನೃಪಂ ಜಹಿ ಸತ್ಯಾಂ ತ್ವಙ್ಕುರು ವಾಚಂ ತತಃ ಕುರು ।

ಇತ್ಯುಕ್ತೋ ಬಹುಧಾSನಿನ್ದತ್ ಕ್ರೋಧಾದೇವಾರ್ಜ್ಜುನೋ ಭೃಶಮ್ ॥೨೭.೧೨೪ ॥

 

ಯಾವುದೋ ಒಬ್ಬ ಬೇಡ, ತಂದೆ ತಾಯಿಯರಿಗೆ ಪ್ರೀತಿಯಾಗಲೀ ಎಂದು,

ಅವರ ಆಹಾರಕ್ಕಾಗಿ  ಮೃಗವನ್ನು ಕೊಂದರೂ ಸ್ವರ್ಗವನ್ನು ಹೊಂದಿದ್ದು.

ಆ ಮೃಗದ ರೂಪದಲ್ಲಿ ಯಾವ ಕಾರಣದಿಂದ ಅಸುರನಿದ್ದ,

ಲೋಕಕ್ಕೆ ಉಪದ್ರವ ಕೊಡುವುದಕ್ಕಾಗಿ ತಪಸ್ಸನ್ನಾಚರಿಸುತ್ತಿದ್ದ.

ಹೀಗಾಗಿ ಸಜ್ಜನರನ್ನು ಬದುಕಗೊಡುವ ಮರ್ಮ, ದುರ್ಜನ ಸಂಹಾರವು ಅಲ್ಲಿ ಆಯಿತು ಧರ್ಮ.

ಆದ್ದರಿಂದ ಸಜ್ಜನರಿಗೆ ಪೋಷಕವಾದುದು ಎಂದು ನಿಶ್ಚಯಮಾಡು,

ನಿನ್ನ ಅಣ್ಣ ಧರ್ಮಜನನ್ನು ಕೊಲ್ಲದೇ  ಮಾತನ್ನೂ ಸತ್ಯವ ಮಾಡು.

ಅದಕ್ಕಾಗಿ ನೀನು ನಿನ್ನ ಅಣ್ಣನನ್ನು ಚೆನ್ನಾಗಿ ಬೈದುಬಿಡು,

ಸಿಟ್ಟಿನ ಅರ್ಜುನ ಹಿಡಿದ ಅಣ್ಣನ ಚೆನ್ನಾಗಿ ಬೈಯುವ ಜಾಡು .

 

ತ್ವಂ ನೃಶಂಸೋSಕೃತಜ್ಞಶ್ಚ ನಿರ್ವೀರ್ಯ್ಯಃ ಪರುಷಂವಧಃ ।

ತ್ವತ್ತಃ ಸುಖಂ ನಾಸ್ತಿ ಕಿಞ್ಚಿನ್ನ ಮಾಂ ಗರ್ಹಿತುಮರ್ಹಸಿ ॥೨೭.೧೨೫ ॥

 

ಭೀಮೋ ಮಾಂ ಗರ್ಹಿತುಂ ಯೋಗ್ಯೋ ಯೋ ಹ್ಯಸ್ಮಾಕಂ ಸದಾ ಗತಿಃ ।

ಯೋ ಯುದ್ಧ್ಯತೇ ಸರ್ವವೀರೈರದ್ಯಾಪಿ ತ್ವಂ ತು ನಿನ್ದಕಃ ॥೨೭.೧೨೬ ॥

 

ದಯೆ ಇಲ್ಲದ ನೀನು ಕೃತಜ್ಞನಲ್ಲ, ನಿರ್ವೀರ್ಯ, ಕೆಲಸಮಾಡಿದವರನ್ನು ಬಯ್ಯುವುದಾವ ಕಾರ್ಯ.

ನಮಗೆ ನಿನ್ನಿಂದೇನೂ ಸುಖವಿಲ್ಲ,

ನನ್ನನ್ನು ಬೈಯ್ಯುವ ಯೋಗ್ಯತೆ ನಿನಗಿಲ್ಲ.

ನನ್ನನ್ನು ಬಯ್ಯುವ  ಅಧಿಕಾರ ಇದ್ದರೆ ಅದು ಭೀಮಸೇನನಿಗೆ ಮಾತ್ರ.

ಅವನಲ್ಲವೇ ನಮಗೆ ಗತಿ? ಈಗಲೂ ಕೂಡಾ ಅವನದೇ ಮುಖ್ಯ ಪಾತ್ರ.

ಎಲ್ಲಾ ವೀರರ ಜೊತೆಗೆ ಯುದ್ಧ ಮಾಡುತ್ತಿದ್ದಾನೆ. ನೀನೋ ಮಾಡುತ್ತಿರುವುದು ಬರಿಯ ನಿಂದನೆ.

 

ಇತ್ಯಾದ್ಯುಕ್ತ್ವಾSSತ್ಮನಾಶಾಯ ವಿಕೋಶಂ ಚಕೃವಾನಸಿಮ್ ।

ಪುನಃ ಕೃಷ್ಣೇನ ಪೃಷ್ಟಃ ಸನ್ ಸ್ವಾಭಿಪ್ರಾಯಮುವಾಚ ಸಃ ॥೨೭.೧೨೭ ॥

 

ಇವೇ ಮೊದಲಾದ ಬಿರುಸು ಮಾತುಗಳನ್ನಾಡಿದ,

ತನ್ನ ಕೊಂದುಕೊಳ್ಳಲು ಒರೆಯಿಂದ ಖಡ್ಗ ತೆಗೆದ.

ಪುನಃ ಶ್ರೀಕೃಷ್ಣನಿಂದ ಪ್ರಶ್ನಿಸಲ್ಪಟ್ಟ ಅರ್ಜುನ,

ಮಾಡುತ್ತಾನೆ ತನ್ನ ಅಭಿಪ್ರಾಯದ ಮಂಡನ .

 

ತಚ್ಛ್ರುತ್ವಾ ಗರ್ಹಯಿತ್ವೈನಂ ಪುನರಾಹ ಜನಾರ್ದ್ದನಃ ।

ಮತಿಪೂರ್ವಂ ದೇಹಹಾನಾತ್ ಪಾಪಂ ಮಹದವಾಪ್ಯತೇ  ॥೨೭.೧೨೮ ॥

 

ಧರ್ಮ್ಮಾರ್ತ್ಥಕಾಮಮೋಕ್ಷಾಣಾಂ ಸಾಧನಂ ದೇಹತೋSಸ್ತಿ ಯತ್ ।

ಅತೋ ಮಾ ತ್ಯಜ ದೇಹಂ ತು ಕುರು ಚಾSತ್ಮಪ್ರಶಂಸನಮ್ ॥೨೭.೧೨೯ ॥

 

(ದೊಡ್ಡವರನ್ನು ಬೈಯ್ಯುವುದು ಎಂದರೆ ಅವರನ್ನು ಕೊಂದ ಹಾಗೇ,

ಇಂತಹ ಬಾಳು ನನಗೆ ಬೇಡ, ಅದು ಬಲು ದೊಡ್ಡ ಪಾಪದ ಬೇಗೆ,

ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅರ್ಜುನ ಖಡ್ಗ ತೆಗೆದ ಬಗೆ).

ಅದನ್ನು ಕೇಳಿದ ಕೃಷ್ಣ ಅವನನ್ನು ಚೆನ್ನಾಗಿ ಬೈದು ಹೇಳುತ್ತಾನೆ-,

‘ಬುದ್ಧಿಪೂರ್ವಕ ದೇಹನಾಶ ಮಾಡಿಕೊಂಡರೆ ಪಾಪಕ್ಕಿಲ್ಲ ಕೊನೆ.

ಯಾವ ಕಾರಣದಿಂದ ಭಗವಂತ ಕೊಟ್ಟ ಈ ದೇಹ ಧರ್ಮ, ಅರ್ಥ, ಕಾಮ, ಮೋಕ್ಷಕ್ಕೆ ಸಾಧನ,

ಆ ಕಾರಣದಿಂದ ದೇಹ ಬಿಡದೇ ನಿನ್ನ ಆತ್ಮಪ್ರಶಂಸೆ ಮಾಡಿಕೋ,ಅದೇ ಆತ್ಮಹತ್ಯೆಗೆ ಸಮಾನ.

 

ವಧೋ ಗುರೂಣಾಂ ತ್ವಙ್ಕಾರಃ ಸ್ವಪ್ರಶಂಸೈವ ಚಾSತ್ಮನಃ ।

ಇತ್ಯುಕ್ತಃ ಸ ತ್ವಹಙ್ಕಾರಾಚ್ಛಶಂಸ ಸ್ವಗುಣಾನಲಮ್ ॥೨೭.೧೩೦ ॥

 

‘ಕೀಳುಮಟ್ಟದ ಭಾಷೆಯಲ್ಲಿ ಗುರುಗಳನ್ನು ನಿಂದಿಸುವುದು ಅವರ ವಧೆ ಎನಿಸುತ್ತದೆ.

ಹಾಗೇ ತನ್ನನ್ನು ತಾನು ವಿಪರೀತ ಹೊಗಳಿಕೊಂಡರೆ ಅದು ಆತ್ಮಹತ್ಯೆ ಎನಿಸುತ್ತದೆ’.

ಈರೀತಿಯಾಗಿ ಶ್ರೀಕೃಷ್ಣ ಅರ್ಜುನಗೆ ಚೆನ್ನಾಗಿ ತಿಳಿಸಿ ಹೇಳಿದ,

ಅರ್ಜುನ ಅಹಂಕಾರದಿಂದ ತನ್ನ ಗುಣಗಳನ್ನೇ ತಾ ಹೊಗಳಿಕೊಂಡ.

 

 

ಗುರುನಿನ್ದಾSSತ್ಮಪೂಜಾ ಚ  ನ ಧರ್ಮ್ಮಾಯ ಭವೇತ್ ಕ್ವಚಿತ್ ।

ತಥಾSಪ್ಯರ್ಜ್ಜುನಹಾರ್ದ್ದಂ ತತ್ ಸಮ್ಪ್ರಕಾಶ್ಯ ಜನಾರ್ದ್ದನಃ ॥೨೭.೧೩೧ ॥

 

ತಸ್ಯ ಲಜ್ಜಾಂ ಸಮುತ್ಪಾದ್ಯ ನಾಶಯಿತ್ವಾ ಚ ತಂ ಮದಮ್ ।

ನಾಹಂ ವೇದ ಪರಂ ಧರ್ಮ್ಮಂ ಕೃಷ್ಣ ಏವ ಗತಿರ್ಮ್ಮಮ ॥೨೭.೧೩೨ ॥

 

ಇತಿ ಭಾವಂ ಸಮುತ್ಪಾದ್ಯ ದೋಷಾನ್ ನಾಶಯಿತುಂ ಹರಿಃ ।

ಕಾರಯಾಮಾಸ ತತ್ ಸರ್ವಮರ್ಜ್ಜುನೇನ ಜಗತ್ಪತಿಃ ॥೨೭.೧೩೩ ॥

 

ಗುರುನಿಂದನೆ, ಸ್ವಪ್ರಶಂಸೆ ಇತ್ಯಾದಿ ಕೂಡಾ ಧರ್ಮಬಾಹಿರ,

ಕೃಷ್ಣ ಇದನ್ನು ಅರ್ಜುನನನಿಂದ ಮಾಡಿಸಿದ್ದು ಲೋಕನೀತಿ ಸಾರ.

ಅರ್ಜುನನ ಅಭಿಪ್ರಾಯವನ್ನು ಲೋಕಕ್ಕೆ ತೋರಿಸಿ,

ಅವನಲ್ಲಿ ನಾಚಿಕೆ ಹುಟ್ಟಿಸಿ, ಅಹಂಕಾರವ  ನಾಶಗೊಳಿಸಿ,

‘ನನಗೆ ಧರ್ಮ ಗೊತ್ತಿಲ್ಲ, ಕೃಷ್ಣನೇ ನನಗೆ ಗತಿ’,            

ಎನ್ನುವ ಭಾವ ತೋರಲೆಂದು ಅವನ ಮತಿ,                    

ಅವನ ದೋಷಗಳನ್ನು ನಾಶಮಾಡಲೆಂದೇ ಜಗತ್ಪತಿ,

ಅರ್ಜುನನಿಂದ ಇದೆಲ್ಲವನ್ನೂ ಮಾಡಿಸಿದ್ದು ತತ್ವನೀತಿ.

 

ತತ ಏತದವಿಜ್ಞಾನಾತ್ ಕುಪಿತೋ ನೃಪತಿರ್ಭೃಶಮ್ ।

ಆಹಾಸ್ತು ರಾಜಾ ಭೀಮಸ್ತ್ವಂ ಯುವಾ ಮಾಂ ಜಹಿ ಚ ಸ್ವಯಮ್ ।

ವನಂ ವಾ ವಿಫಲೋ ಯಾಮೀತ್ಯುಕ್ತ್ವೋತ್ತಸ್ಥೌ ಸ್ವತಲ್ಪತಃ ॥೨೭.೧೩೪ ॥

 

ತದನಂತರ, ಈ ಎಲ್ಲಾ ಹಿನ್ನೆಲೆಯನ್ನು ತಿಳಿಯದೇ ಕೋಪಗೊಂಡ ಯುಧಿಷ್ಠಿರ -,

‘ಭೀಮ ರಾಜನಾಗಲಿ, ನೀನು ಯುವರಾಜನಾಗು, ನನ್ನನ್ನು ಮಾಡು ಸಂಹಾರ.

ಇಲ್ಲಾ ನಾನು ಕಾಡಿಗೆ ಹೋಗಿಬಿಡುತ್ತೇನೆ’ ಎಂದ,

ತಾನು ಮಲಗಿದ್ದ ಹಾಸಿಗೆಯಿಂದವನು ಮೇಲೆದ್ದ.

 

ತಂ ವಾಸುದೇವಃ ಪ್ರತಿಗೃಹ್ಯ ಹೇತುಮುಕ್ತ್ವಾ ಸರ್ವಂ ಶಮಯಾಮಾಸ ನೇತಾ ।

ಪಾರ್ತ್ಥಶ್ಚ ಭೂಪಸ್ಯ ಪಪಾತ ಪಾದಯೋಃ  ಕ್ಷಮಾಪಯನ್ ಸೋSಪಿ ಸುಪ್ರೀತಿಮಾಪ ॥೨೭.೧೩೫ ॥

 

 

ಅವನನ್ನು ವಾಸುದೇವ ಕೃಷ್ಣನು ತಡೆದ,               

ಘಟನೆಯ ಹಿಂದಿನ ಕಾರಣಗಳನ್ನು ಹೇಳಿದ,         

ಅವನಿಗೆ ತಿಳಿಹೇಳಿ ಸಮಾಧಾನಗೊಳಿಸಿದ.            

ಅರ್ಜುನ ಕ್ಷಮೆ ಬೇಡುತ್ತಾ, ಯುಧಿಷ್ಠಿರನ ಪಾದಕ್ಕೆ ಬಿದ್ದ.

ಧರ್ಮರಾಜ ಕೂಡಾ ಅವನ ಬಗೆಗೆ ಪ್ರೀತಿಯನ್ನು ಹೊಂದಿದ.

 

ತೌ ಭ್ರಾತರೌ ವಾಸುದೇವಪ್ರಸಾದಾನ್ಮಹಾಪದೋ ಮುಕ್ತಿಮಾಪ್ಯಾತಿಹೃಷ್ಟೌ ।

ಭಕ್ತ್ಯಾ ಸಮಸ್ತಾಧಿಪತಿಂ ಶಶಂಸತುಸ್ತ್ವಯಾ ಸಮಃ ಕೋ ನು ಹರೇ ಹಿತೋ  ನಃ ॥೨೭.೧೩೬ ॥

 

ಹೀಗೆ ಆ ಇಬ್ಬರು ಅಣ್ಣತಮ್ಮಂದಿರು ಪರಮಾತ್ಮನ ಅನುಗ್ರಹದಿಂದ,

ಬಿಡುಗಡೆಯನ್ನು ಹೊಂದಿದವರಾದರು ಆ ದೊಡ್ಡ ಆಪತ್ತಿನಿಂದ.

ಅತ್ಯಂತ ಸಂತುಷ್ಟರಾಗಿ, ಭಕ್ತಿಯಿಂದ ಎಲ್ಲಕ್ಕೂ ಒಡೆಯನಾದ ಶ್ರೀಕೃಷ್ಣನನ್ನು ಹೊಗಳಿದರು. ಪರಮಾತ್ಮನೇ, ನಿನಗಿಂತ ಹೊರತಾದ, ಹಿತೈಷಿ ನಮಗೆ ಇನ್ಯಾರು ;ನೀನೇ ದೇವತೆಗಳ ದೇವರು.

 

ತತಃ ಪ್ರಣಮ್ಯ ಬೀಭತ್ಸುರಗ್ರಜಂ ಪರಿರಮ್ಭಿತಃ ।

ತೇನಾಭಿನನ್ದಿತಃ ಪ್ರೀತ್ಯಾ ಚಾSಶೀರ್ಭಿಃ ಪ್ರಯಯೌ ಯುಧೇ ॥೨೭.೧೩೭ ॥

 

ಆನಂತರ ಅರ್ಜುನ ಅಣ್ಣನಿಗೆ ಮಾಡಿ ನಮಸ್ಕಾರ,

ಆಲಂಗಿತನಾಗಿ ಪಡೆದ ಆಶೀರ್ವಾದದ ಪ್ರೀತಿಸಾರ.

ಅಭಿನಂದನೆಗಳನ್ನು ಸ್ವೀಕರಿಸಿದ ,

ಯುದ್ಧಮಾಡಲೆಂದು ತೆರಳಿದ.

No comments:

Post a Comment

ಗೋ-ಕುಲ Go-Kula