Sunday 18 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 186-196

 

ದ್ರೌಣಿಕರ್ಣ್ಣಾಭಿಗುಪ್ತಂ ತಂ ನಾಶಕದ್ಧನ್ತುಮರ್ಜ್ಜುನಃ ।

ತತ್ರ ವೇಗಂ ಪರಂ ಚಕ್ರೇ ದ್ರೌಣಿಃ ಪಾರ್ತ್ಥನಿವಾರಣೇ ॥೨೬.೧೮೬ ॥

 

ಅಶ್ವತ್ಥಾಮ, ಕರ್ಣರಿಂದ ರಕ್ಷಿಸಲ್ಪಟ್ಟ ಜಯದ್ರಥ,  ಅವನನ್ನು ಕೊಲ್ಲಲು ಅರ್ಜುನನಾಗಲಿಲ್ಲ ಶಕ್ತ. ಅಶ್ವತ್ಥಾಮ ಹೊರಟ ಅರ್ಜುನನ ತಡೆಯುವತ್ತ. ಯುದ್ಧಕ್ಕಿಳಿದ ಅವನಲ್ಲಿದ್ದದ್ದು ರಭಸದ ಚಿತ್ತ.

 

ನಚೈನಮಶಕತ್ ತರ್ತ್ತುಂ ಯತ್ನವಾನಪಿ ಫಲ್ಗುನಃ ।

ತಯೋರಾಸೀಚ್ಛಿರಂ ಯುದ್ಧಂ ಚಿತ್ರಂ ಲಘು ಚ ಸುಷ್ಠು ಚ ॥೨೬.೧೮೭ ॥

 

ಅರ್ಜುನನ ಪ್ರಯತ್ನವೂ ಕೂಡಾ ಅಶ್ವತ್ಥಾಮನನ್ನು ಮೀರಲಾಗಲಿಲ್ಲ ಬದ್ಧ,

ಅವರಿಬ್ಬರಿಗೂ ನಡೆಯಿತು ಆಶ್ಚರ್ಯಕರ ಭೀಕರ ಬಲುವೇಗವಾದ ಯುದ್ಧ.

 

ತದ್ ದೃಷ್ಟ್ವಾ ಭಗವಾನ್ ಕೃಷ್ಣೋ ಲೋಹಿತಾಯತಿ ಭಾಸ್ಕರೇ ।

ಅಜಿತೇ ದ್ರೋಣತನಯೇ ತ್ವಹತೇ ಚ ಜಯದ್ರಥೇ ।

ಅರ್ಜ್ಜುನಸ್ಯ ಜಯಾಕಾಙ್ಕ್ಷೀ ಸಸರ್ಜ್ಜ ತಮ ಊರ್ಜ್ಜಿತಮ್ ॥೨೬.೧೮೮ ॥

 

ಅದನ್ನು ಶ್ರೀಕೃಷ್ಣ ನೋಡಿದ, ಸೂರ್ಯದೇವ ಕೆಂಪಾಗುತ್ತಿದ್ದ,

ಅಶ್ವತ್ಥಾಮ ಸೋಲದೇ ಇದ್ದ , ಜಯದ್ರಥ ಇನ್ನೂ ಸಾಯದಿದ್ದ.

ಅರ್ಜುನಗೆ ಹಾಕಲು ಜಯದ ಮಾಲೆ, ಕೃಷ್ಣ ಸೃಷ್ಟಿಮಾಡಿದ ದಟ್ಟವಾದ ಕತ್ತಲೆ.

 

ತಮೋವ್ಯಾಪ್ತೇ ಗಗನೇ ಸೂರ್ಯ್ಯಮಸ್ತಂ ಗತಂ ಮತ್ವಾ ದ್ರೌಣಿಪೂರ್ವಾಃ ಸಮಸ್ತಾಃ ।

ವಿಶಶ್ರಮುಃ ಸೈನ್ಧವಶ್ಚಾರ್ಜ್ಜುನಸ್ಯ ಹತಪ್ರತಿಜ್ಞಸ್ಯ ಮುಖಂ ಸಮೈಕ್ಷತ ॥೨೬.೧೮೯ ॥

 

ಕತ್ತಲೆ ತುಂಬಿದ ಆಕಾಶದ ಆ ನೋಟ, ಸೂರ್ಯ ಮುಳುಗಿದಂತೇ ಇದ್ದ ಆಟ.

ಯುದ್ಧವಿರಾಮ ಎಂದು ತಿಳಿದ ಅಶ್ವತ್ಥಾಮ ಮುಂತಾದವರದು ವಿಶ್ರಾಂತಿಯತ್ತ ಚಿತ್ತ,

ಸೈಂಧವ ನೋಡಲೆತ್ನಿಸುತ್ತಿದ್ದ ಪ್ರತಿಜ್ಞೆ ಈಡೇರಿಸದ ಹತಾಶೆಯಲ್ಲಿದ್ದ ಅರ್ಜುನನತ್ತ.

 

ತದಾ ಹರೇರಾಜ್ಞಯಾ ಶಕ್ರಸೂನುಶ್ಚಕರ್ತ್ತ ಬಾಣೇನ ಜಯದ್ರಥಸ್ಯ ।

ಅಗ್ನಿಂ ವಿವಿಕ್ಷನ್ನಿವ ದರ್ಶಿತಃ ಶಿರಸ್ತದಾ ವಚಃ ಪ್ರಾಹ ಜನಾರ್ದ್ದನಸ್ತಮ್ ॥೨೬.೧೯೦ ॥

 

 

ಅಗ್ನಿ ಪ್ರವೇಶ ಮಾಡುವನೇನೋ ಎಂಬಂತೆ ಆಗ ಅರ್ಜುನ ಕಾಣಿಸಿದ,

ಆಗ ಕೃಷ್ಣನಾಜ್ಞೆಯಂತೆ ಅವನು ಬಾಣದಿಂದ ಸೈಂಧವನ ಕತ್ತು ಕತ್ತರಿಸಿದ.

ಆಗ ಶ್ರೀಕೃಷ್ಣನು ಅರ್ಜುನನನ್ನು ಕುರಿತು ಈ ಮುಂದಿನ ಮಾತನ್ನು ಹೇಳಿದ.

 

ನೈತಚ್ಛಿರಃ ಪಾತಯ ಭೂತಳೇ ತ್ವಮಿತೀರಿತಃ ಪಾಶುಪತಾಸ್ತ್ರತೇಜಸಾ ।

ದಧಾರ ಬಾಣೈರನುಪುಙ್ಖಪುಙ್ಖೈಃ ಪುನಸ್ತಮೂಚೇ ಗರುಡಧ್ವಜೋ ವಚಃ ॥೨೬.೧೯೧ ॥

 

ಇದಂ ಪಿತುಸ್ತಸ್ಯ ಕರೇ ನಿಪಾತ್ಯತಾಂ ವರೋSಸ್ಯ ದತ್ತೋ ಹಿ ಪುರಾSಮುನಾSಯಮ್ ।

ಶಿರೋ ನಿಕೃತ್ತಂ ಭುವಿ ಪಾತಯೇದ್ ಯಸ್ತವಾಸ್ಯ ಭೂಯಾಚ್ಚ ಶಿರಃ ಸಹಸ್ರಧಾ ॥೨೬.೧೯೨ ॥

 

ಇತಿ ಸ್ಮ ವದ್ಧ್ಯಃ ಸ ಪಿತಾSಪಿ ತೇನೇತ್ಯುದೀರಿತೇ ತಸ್ಯ ಸನ್ಧ್ಯಾಕ್ರಿಯಸ್ಯ ।

ಅಙ್ಕೇ ವ್ಯಧಾತ್ ತಚ್ಛಿರ ಆಶು ವಾಸವಿಃ ಸ ಸಮ್ಭ್ರಮಾತ್ ತದ್ ಭುವಿ ಚ ನ್ಯಪಾತಯತ್ ॥೨೬.೧೯೩ ॥

 

‘ಇವನ ತಲೆಯನ್ನು ಭೂಮಿಯಲ್ಲಿ ಬೀಳಿಸಬೇಡ’ ಎಂದು ಶ್ರೀಕೃಷ್ಣ ಪ್ರಚೋದಿಸಿದ,

ಅರ್ಜುನ ಪಾಶುಪತಾಸ್ತ್ರದ ಪ್ರಭಾವದಿಂದ ಸರಣಿ ಬಾಣವನ್ನು ಬಿಡುತ್ತಾ ತಡೆದ.

ಆ ತಲೆ ಕೆಳಗೆ ಬೀಳದಂತೆ ನೋಡಿಕೊಂಡವಗೆ ಮತ್ತೆ ಗರುಡಧ್ವಜ ಶ್ರೀಕೃಷ್ಣನು ಹೇಳಿದ:

“ಈ ತಲೆ ಸೈಂಧವನ ತಂದೆಯ ಕೈಯಲ್ಲಿ ಬೀಳಲಿ" ಅವನಿಗೆ ವರವಿದೆ ಅವನ ತಂದೆಯಿಂದ;

ಇವನ ತಲೆಯ ನೆಲಕ್ಕೆ ಕೆಡವಿದವನ ತಲೆಯೂ ಒಡೆಯುತ್ತದೆ ಸಾವಿರ ಹೋಳಾಗುವುದರಿಂದ.

 

ಆ ಕಾರಣದಿಂದ ಧೂರ್ತನಾದ ಜಯದ್ರಥನ ತಂದೆ ಕೂಡಾ ವಧಾರ್ಹನಾಗಿದ್ದಾನೆ,

ಅರ್ಜುನ ಆ ತಲೆಯನ್ನು ಜಯದ್ರಥನ ತಂದೆಯ ತೊಡೆಯ ಮೇಲೆ ಬೀಳಿಸುತ್ತಾನೆ,

ಆಗವನು ಕುರುಕ್ಷೇತ್ರದ ಆಸುಪಾಸಿನಲ್ಲಿ ಕುಳಿತು ಮಾಡುತ್ತಿರುತ್ತಾನೆ ಸಂಧ್ಯಾವಂದನೆ,

ಜಯದ್ರಥನ ತಂದೆ ವೃದ್ಧಕ್ಷತ್ರ ಉದ್ವೇಗದಿಂದ ಆ ತಲೆಯನ್ನು ನೆಲಕ್ಕೆ ಬೀಳಿಸುತ್ತಾನೆ .

 

ತತೋSಭವತ್ ತಸ್ಯ ಶಿರಃ ಸಹಸ್ರಧಾ ಹರಿಶ್ಚ ಚಕ್ರೇ ತಮಸೋ ಲಯಂ ಪುನಃ ।

ತದೈವ ಸೂರ್ಯ್ಯೇ ಸಕಲೈಶ್ಚ ದೃಷ್ಟೇ ಹಾಹೇತಿ ವಾದಃ ಸುಮಹಾನಥಾSಸೀತ್ ॥೨೬.೧೯೪ ॥

 

ತದನಂತರ ಆ ವೃದ್ಧಕ್ಷತ್ರನ ತಲೆಯು ಸಾವಿರ ಚೂರಾಯಿತು.

ಶ್ರೀಕೃಷ್ಣಪರಮಾತ್ಮ ಕತ್ತಲ ಲಯ ಮಾಡಲು ಬೆಳಕಾಯಿತು.

ಎಲ್ಲರಿಗೂ ಕಾಣಿಸಿಕೊಂಡ ಸೂರ್ಯ, ಎದ್ದಿತಲ್ಲಿ ಪಶ್ಚಾತ್ತಾಪದ ಹಾಹಾಕಾರ.

 

ಭೀಮಸ್ತದಾ ಶಲ್ಯಸುಯೋಧನಾದೀನ್ ಕೃಪಂ ಚ ಜಿತ್ವಾ ವ್ಯನದತ್ ಸುಭೈರವಮ್ ।

ಕುರ್ವನ್ ಸಾಹಾಯ್ಯಂ ಫಲ್ಗುನಸ್ಯೈವ ತುಷ್ಟೋ ಬಭೂವ ಶೈನೇಯ ಉತೋ ಹತೇ ರಿಪೌ ॥೨೬.೧೯೫ ॥

 

ಆಗ ಭೀಮಸೇನ: ಶಲ್ಯ, ದುರ್ಯೋಧನ ಮೊದಲಾದವರನ್ನು ಗೆದ್ದ,

ಕೃಪಾಚಾರ್ಯರನ್ನೂ ಗೆದ್ದು ಭಯಂಕರವಾಗಿ ಸಿಂಹನಾದ ಮಾಡಿದ.

ಶತ್ರುವಾದ ಜಯದ್ರಥ ಕೊಲ್ಲಲ್ಪಡುತ್ತಿದ್ದ. ಅರ್ಜುನನಿಗೆ ಬೆಂಗಾವಲಾಗಿ ನಿಂತಿದ್ದ,

ಸಾತ್ಯಕೀ ಸಮೇತ ಭೀಮ ಸಂತುಷ್ಟನಾದ.

 

ಅಪೂರಯತ್ ಪಾಞ್ಚಜನ್ಯಂ ಚ ಕೃಷ್ಣೋ ಮುದಾ ತದಾ ದೇವದತ್ತಂ ಚ ಪಾರ್ತ್ಥಃ ।

ಭೀಮಸ್ಯ ನಾದಂ ಸಹಪಾಞ್ಚಜನ್ಯಘೋಷಂ ಶ್ರುತ್ವಾ ನಿಹತಂ ಸಿನ್ಧುರಾಜಮ್ ।

ಜ್ಞಾತ್ವಾ ರಾಜಾ ಧರ್ಮ್ಮಸುತೋ ಮುಮೋದ ದುರ್ಯ್ಯೋಧನಶ್ಚಾSಸ ಸುದುಃಖಿತಸ್ತದಾ ॥೨೬.೧೯೬ ॥

 

ಆಗ ಶ್ರೀಕೃಷ್ಣನು ಪಾಂಚಜನ್ಯವನ್ನು ಊದಿದ, ಅರ್ಜುನನು ತನ್ನ ದೇವದತ್ತವನ್ನು ಊದಿದ.  ಧರ್ಮರಾಜನು  ಪಾಂಚಜನ್ಯದ ನಾದ, ಮತ್ತು ಭೀಮನ ಘರ್ಜನೆಯನ್ನು ಕೇಳಿದ.

ಜಯದ್ರಥ ಸತ್ತಿರುವನೆಂದರಿತವಗೆ ಆನಂದ,  ದುರ್ಯೋಧನನೋ ಬಹಳ ದುಃಖಿತನಾದ . 

No comments:

Post a Comment

ಗೋ-ಕುಲ Go-Kula