Monday 4 April 2016

Sāra Saṅgama 13

ಸಾರ ಸಂಗಮ  by “ತ್ರಿವೇಣಿ ತನಯ

ಎಲ್ಲ ನಿಶ್ಚಿತ -ಜ್ಞಾನ ಸುರಕ್ಷಿತ

ಅದು ಬೇಕು ಇದು ಬೇಡ ಅನ್ನಲು ನೀನಾರು?
ನಿಶ್ಚಯವಾಗಿಹೋಗಿದೆ ನಿನ್ನ ಪಾತ್ರದ ಕಾರುಬಾರು,
ಅಂಟದೇ ನಿರ್ವಾಹಿಸಿದರೆ ನೀನು ಸುರಕ್ಷಿತ,
ಅಂಟಿಕೊಂಡರೆ ಚಕ್ರಭ್ರಮಣವದು ಖಚಿತ.

ಬಂಧನ -ಚಂದನ

ನಾನು ನನ್ನದೆಂಬುದೇ ಬಲು ದೊಡ್ಡ ಬಂಧನ,
ಬಿಟ್ಟರದನು ಬದುಕಾದೀತು ಘಮಿಸುವ ಚಂದನ,
ವ್ಯಾಪಾರ ನಿನ್ನ ಕೈಯಲಿಲ್ಲ ಸ್ನೇಹದಿ ಪ್ರೀತಿಸುತ್ತ ಬಾಳು,
ಕರೆ ಬಂದಾಗ ನೆಮ್ಮದಿಯಲಿ ಕೈತೊಳೆದು ಏಳು.

ನೀ ಬಿಂಬ -ಜಗ  ಪ್ರತಿ ಬಿಂಬ

ಅವರ್ಹಾಗೆ ಇವರ್ಹೀಗೆ ಅನ್ನೋದ್ಯಾಕೆ ಒಣಜಂಬ,
ಕಾಣುವುದುದದು ಎಲ್ಲರಲು ನಿನ್ನದೇ ಪ್ರತಿಬಿಂಬ,
ನೀ ನಿರ್ಮಲ ನಿರ್ಲಿಪ್ತವಿರೆ ಎಲ್ಲರೂ ಸೊಗಸು,
ಒಳಕೊಳೆಯ ಪ್ರಭಾವವಿರೆ ಎಲ್ಲರೂ ಹೊಲಸು.

ಪರೀಕ್ಷೆ -ಪರಿಹಾರ ಭಿಕ್ಷೆ

ಬದುಕಿನ ತಿರುವುಗಳಲಿ ಪರೀಕ್ಷೆಗಳು ನೂರು,
ಕ್ಷಣ ಕ್ಷಣಕೂ ಪರಿಹರಿಸಿ ದಾರಿತೋರುವ ಅವನಾರು?
ಅವನ ನಂಬಿ ನಡೆವವರಿಗೆ ನೋವಿನ ಲೇಪವಿಲ್ಲ,
ನಿನ್ನ ಪಾಲಿನ ಬುತ್ತಿ ಬಿಚ್ಚಿಡುವ ಬೇವು- ಬೆಲ್ಲ.

ದೃಷ್ಟಿ ನಿನ್ನ ಪಾದದಲ್ಲಿ

ಬದಲಾವಣೆ ಬದುಕಿನ ಅವಿಭಾಜ್ಯ ಅಂಗ,
ಬದಲಿಸದಿರು ಎಂದೆಂದೂ ಸಜ್ಜನರ ಸಂಗ,
ಲೌಕಿಕ ಬದುಕಿನ ತಿರುವುಗಳು ಎಂತೇ ಇರಲಿ,
ನಿನ್ನ ಪಾದದ ಸ್ಮರಣೆಯದು ತಪ್ಪದಿರಲಿ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula