Sunday 24 April 2016

Sāra Saṅgama 21

ಸಾರ ಸಂಗಮ  by “ತ್ರಿವೇಣಿ ತನಯ

ಸಂಘರ್ಷ

ಬದುಕೆಂದರೆ ಅದು ನಿತ್ಯ ಸಂಘರ್ಷ,
ಅಪೇಕ್ಷಿಸದೆ ಬರುವ ನೋವು ಮತ್ತೆ ಹರ್ಷ,
ನಿನ್ನಿಷ್ಟದಂತೆ ಜಗವ ತಿದ್ದುವದಾಗದ ಮಾತು,
ನಿನ್ನತನ ಬಿಡದೇ ಹೊಂದಿಕೊಂಡರೆ ನಿಂದೇನು ಹೋಯ್ತು?

ಇಷ್ಟ -ಕಷ್ಟ

ನಿನ್ನಿಷ್ಟದಂತೆ ಪರರಿರಲಿ ಎಂಬಪೇಕ್ಷೆ ಸಲ್ಲ,
ಜೀವಸ್ವಭಾವಗಳ ಎಂದೂ ಬದಲಿಸಲಾಗಲ್ಲ,
ಬೇಕು ಬೇಡಗಳವು ಅವರವರ ರೀತಿ,
ಅಂಟದಂತಿದ್ದು ಹೊಂದಿಕೊಳ್ಳುವುದೇ ನೀತಿ.

ಯೋಗ್ಯ

ಯೋಗ್ಯ ಅಯೋಗ್ಯಗಳು ಸಾರ್ವತ್ರಿಕವಲ್ಲ,
ಜೀವಿಗಳಿಗನುಸಾರ ಬದಲಾಗುವವೇ ಎಲ್ಲ,
ಯಾರೆಂತೇ ಇರಲಿ ಅಂಟದಂತಿರುವುದೇ ಯೋಗ್ಯ,
ಬೆರೆತು ಬಾಳುತ "ನಿರ್ಲಿಪ್ತ "ನಾಗುವುದೇ ಭಾಗ್ಯ.

ಕರ್ಮ -ಧರ್ಮ

ನಿನ್ನ ಕರ್ಮ ಅಗಾಧವಿರೆ ದೈವವ ಹಳಿಯಬೇಡ,
ನೀ ತಂದ ಬುತ್ತಿ ಬಿಚ್ಚಿ ಉಣ್ಣುತಿಹೆ ನೀ ನೋಡ,
ಖಾಲಿ ಮಾಡುತ ಬುತ್ತಿ ಹಚ್ಚು ಜ್ಞಾನ ಭಕುತಿಯ ಬತ್ತಿ,
ಕಟ್ಟು ಜ್ಞಾನದಾ ಬುತ್ತಿ ಸಾಧು ಸಜ್ಜನರ ಬೆನ್ಹತ್ತಿ.

ಒಗ್ಗಟ್ಟು -ಬಿಕ್ಕಟ್ಟು

ಆಗಬೇಕಾಗಿರುವುದು ಹಿಂದುಗಳ ಒಗ್ಗಟ್ಟು,
ಮುಗಿಯದ ಹಾಡು ಒಳಪಂಗಡಗಳ ಬಿಕ್ಕಟ್ಟು,
ಬ್ರಿಟಿಷರು ಬಿಟ್ಟು ಹೋಗಿದ್ದು ಒಡೆದು ಆಳುವ ನೀತಿ,
ನಮ್ಮವರೂ ಮುಂದುವರೆಸಿದ್ದಾರೆ ಓಟಿಗೆ ಅದೇ ರೀತಿ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula