Sunday 3 April 2016

Sāra Saṅgama 12

ಸಾರ ಸಂಗಮ  by “ತ್ರಿವೇಣಿ ತನಯ


ಹುಟ್ಟಾ ತಿರುಕ -ಎಣೆಯಿರದ ಧನಿಕ

ತಿರುಕನಿಗೇನು ಗೊತ್ತು ತೀರದವನ ಸಂಪತ್ತು,
ಸ್ವಲ್ಪ ಏರು ಪೇರಾದರೂ ಎಲ್ಲವೂ ಆಪತ್ತು,
ಸಾಕು ಭ್ರಮೆಯ ಬಾಳಿನ ಹೊಲಸು ಮತ್ತು,
ಶರಣಾಗಿ ಅವನ ಕರುಣೆಗಾಗಿ ತಪಿಸಿ ಬೆನ್ಹತ್ತು.

ವಿದ್ಯೆ -ವಿನಯ

ಫಲಭರಿತ ಮರವದು ಬಾಗುವುದು ನೋಡು,
ಜ್ಞಾನಿ ತಾ ಬಾಗುವನು ಹಾಡುತಾ ವಿನಯದ ಹಾಡು,
ಒಣ ಮರವೆಂದಿಗೂ ಬಾಗಲಾರದು  ತಾನು,
ಮೂರ್ಖ ಮನುಜ ತಾ ಮಣಿದಾನು ಏನು?

ಮುಖವಾಡ

ಪ್ರಾಮಾಣಿಕತೆ ಎಂಬುವುದು ಎಲ್ಲೆಲ್ಲೂ ಇಲ್ಲ,
ಎಲ್ಲೆಲ್ಲೂ ಮುಖವಾಡದ ಬದುಕೇ ಎಲ್ಲ,
ಹೊಲಸು ನಾಟಕವಾಡಿ ಗಳಿಸುವುದು ಏನು?
ಗಳಿಸಿದ್ದೇನೇ ಇದ್ದರೂ ಹೊತ್ತೊಯ್ಯಬಲ್ಲೆಯಾ ನೀನು.

ಇಟ್ಹಾಂಗೆ ಇರು

ವ್ರತ ನೇಮ ಉಪವಾಸ ಮಾಡಿದೆನೆಂಬ ಹಮ್ಮು ಬೇಡ,
ಜಪ ತಪ ಅನುಷ್ಠಾನಗೈದೆನೆಂಬ ಬಿಮ್ಮು ಬೇಡ,
ಬದುಕೆಲ್ಲ ಭಾರೀ ಮಡಿ ಮಾಡಿದೆನೆಂಬುದು ಸಲ್ಲ ನೋಡ,
ಜಗದೊಳು ಯಾರ ಎಷ್ಟು ಮೆಚ್ಚಿದೆ ನೀ ಹೇಳು?
ಸೃಷ್ಟಿಕರ್ತನ ಸೃಷ್ಟಿ ಮೆಚ್ಚದ ಅದೆಂಥಾ ಸಾಧನಾ ಗೀಳು?
ಸರ್ವಾಂತರ್ಯಾಮಿಯ ನಮಿಸುತ್ತ ಇಟ್ಹಾಂಗೆ ಇರುವುದೇ ಬಾಳು!

ನಿರ್ಮಲ ಮನ -ಅದೇ ಸಾಧನ

ನಿರ್ಮಲ ಮನವದು ಸುಖದ ಬಾಳಿಗೆ ಸೋಪಾನ,
ಮನ ಕೆಡಿಸಿಕೊಂಡು ಬದುಕ ಮಾಡಿಕೊಳ್ಳದಿರು ಅಧ್ವಾನ,
ಕಾಲನ ನಿಯಮ ಎಂತು ಬದಲಿಸಬಲ್ಲೆ ನೀ ಹೇಳು?
ಬಂದದ್ದು ಒಪ್ಪಿ "ಕೃಷ್ಣಾರ್ಪಣ"ಎನ್ನುವುದೇ ಬಾಳು.


(Contributed by Shri Govind Magal)

No comments:

Post a Comment

ಗೋ-ಕುಲ Go-Kula