Tuesday 26 April 2016

Sāra Saṅgama 23

ಸಾರ ಸಂಗಮ  by “ತ್ರಿವೇಣಿ ತನಯ

ಬಿಡುವ ಸಂತೆ -ಬಿಡು ಚಿಂತೆ

ಎದ್ದು ಹೋಗುವವನಿಗೇಕೆ ಇಲ್ಲಿಯ ಚಿಂತೆ,
ಎಂದಾದರೂ ಒಂದಿನ ಬಿಡಲೇ ಬೇಕೀ ಸಂತೆ,
ಸಂತೆಯೊಳಿದ್ದರೂ ಅಂಟದ ಸಂತನಂತೆ ಇರು,
ಎಂತಾದರಾಗಲಿ ಅವನ ಕಾರುಣ್ಯವ ಬೇಡುತಿರು.


ಹುಚ್ಚು -ಕಿಚ್ಚು

ಬಿಟ್ಟುಬಿಡು ರೋಷ ದ್ವೇಷಗಳ ಹುಚ್ಚು,
ಬೆಳೆಯಿತೆಂದರೆ ಅದು ಆದೀತು ಕಿಚ್ಚು,
ಸ್ನೇಹದಿ ಬಾಳುತಾ ಪ್ರೀತಿಜ್ಯೋತಿಯ ಹಚ್ಚು,
ನಾಕು ದಿನದ ಬಾಳಿನಲಿ ಏಕೆ ಸಲ್ಲದ ರೊಚ್ಚು.


ಸರಳ -ನಿರಾಳ

ಮುಖವಾಡಗಳ ಬದುಕಿನ ಸಾಧನೆ ಏನು?
ಕಳಚಿದ ನಂತರ ಸತ್ಯವದು ಸಾಕಾರವಾಗದೇನು!
ಯಾರ ಮೆಚ್ಚಿಸಲೀ ನಾಟಕದ ಹುನ್ನಾರ,
ಸಹಜ ಸರಳತೆಯ ಮೆಚ್ಚುವ ರಮೇಶ್ವರ.


ಪುಣ್ಯಭೂಮಿ

ಎಲ್ಲಾ ಧರ್ಮವ ಒಪ್ಪಿದ ದೇಶ,
ಎಂದೂ ಬರಿದಾಗದ ಜ್ಞಾನದ ಕೋಶ,
ಊಸರವಳ್ಳಿಗಳಿಂದ ದೂರವೇ ಇರು,
ಉತ್ತಮ ಶಾಸ್ತ್ರಗಳ್ಹಿಡಿದು ಊರ್ಧ್ವಕ್ಕೇರು.


ನೆಮ್ಮದಿ -ನಿಜ ಜ್ಞಾನದಿ

ಲೋಕವೆಲ್ಲಾ ದುಡ್ಡು ಹೆಸರಿನ ಹಿಂದೆ,
ದುಡ್ಡಿದ್ದವರು ಅದರ ರಕ್ಷಣೆಗೆ ಮುಂದೆ,
ದುಡ್ಡು ಹೆಸರುಗಳು ನೆಮ್ಮದಿ ಕೊಡುವವಲ್ಲ,
ತೃಪ್ತಿ-ಜ್ಞಾನತೃಷೆಯ ಬಾಳದು ಆನಂದವೇ ಎಲ್ಲ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula