Friday 8 April 2016

Sāra Saṅgama 16

ಸಾರ ಸಂಗಮ  by “ತ್ರಿವೇಣಿ ತನಯ

ಇರೋ ಹೊತ್ತು -ಯಾರಿಗೆ ಗೊತ್ತು

ಹುಟ್ಟು ಬಾಲ್ಯ ಹರೆಯ ಮದುವೆ,
ಹೆಂಡತಿ ಮಕ್ಕಳ ಸಲಹುವ ಸೇವೆ,
ಐವತ್ತು ಅರವತ್ತಕ್ಕೇ ಸ್ವಲ್ಪ ಪುರುಸೊತ್ತು,
ಮಿಕ್ಕ ಆಯುಷ್ಯ ಎಷ್ಟೋ ಯಾರಿಗ್ಗೊತ್ತು.

ಸಂಕುಚಿತ ಮನ

ನಮ್ಮ ಮಕ್ಕಳು ಮರಿ ನೊಂದರೆ ಮಿಡಿವ ಮನ,
ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸದಿರುವುದು ಎಷ್ಟು ಹೀನ,
ಕಾರಣವಿಷ್ಟೇ -ನಾನು ನನ್ನದೆಂಬ ಮಮಕಾರ,
ಮೇಲೆ ಅರ್ಥವಿರದ ಹೊಲಸು ದುರಹಂಕಾರ.

ಕೊಟ್ಟ ಅನಂತ -ಮಾಯ ಅನವರತ

ಮಾನವ ಬಾಳಲ್ಲಿ ಪಡಕೊಂಡದ್ದು ಅನಂತ,
ಎರಡ್ಹೊತ್ತಿನ ತುತ್ತಿಗಾಡುವ ಆಟವದು ಅನವರತ,
ಕೊಡಲಿಕ್ಕೇನಿದೆ ಕೊಟ್ಟವನ ಸ್ಮರಿಸಲೂ ಬಿಂಕ,
ಇಂದು ನಾಳೆ ಎನ್ನುತ್ತಲೇ ಮುಕ್ತಾಯ ಅಂಕ.

ಅಹಂ -ಖಾರ

ಬೆಳೆಯಗೊಡದಿರು ಎಂದೂ ಅಹಂಕಾರದ ಕೋಡು,
ಅದರಿಂದ ಎಂದೆಂದಿಗೂ ದುರ್ಗತಿಯೇ ನೋಡು,
ಎದೆ ಮನವ ಮೃದು ಮಾಡಿ ಬಾಗುತಲಿರುನೀನು,
ಬೀಗುವದ ಬಿಟ್ಟು ಬಾಗಿದರೆ ಹರಿ ಒಲಿದಾನು ತಾನು.

ಗುರು -ದೇವ ಗುರು

ಕತ್ತಲು ಕಳೆದು ಬೆಳಕು ತೋರುವಾತ ಗುರು,
ಚಿತ್ತ ಶುದ್ಧ ಮಾಡಿ ಪುಟಕ್ಕಿಡುವವ ಗುರು,
ಬೆತ್ತಲು ಮಾಡಿ ನಿನ್ನನ್ನೇ ತೋರಿಸುವಾತ ಗುರು,
ಎತ್ತ ನೋಡಿದರೂ ಹರಿವ್ಯಾಪಾರ ತೋರುವಾತ ಗುರು.


(Contributed by Shri Govind Magal)

No comments:

Post a Comment

ಗೋ-ಕುಲ Go-Kula