Saturday 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 28: 157-200


ಏತಸ್ಮಿನ್ನನ್ತರೇ ಕೃಷ್ಣೋ ಧರ್ಮ್ಮಜೇನಾರ್ಜ್ಜುನೇನ ಚ ।

ತತ್ರಾSಗಮತ್ ತದಸ್ತ್ರಂ ಚ ಭೀಮಂ ಚಾವ್ಯರ್ತ್ಥತಾಂ ನಯನ್ ॥೨೮.೧೫೭॥

 

ಅವದ್ಧ್ಯೋ ಭೀಮಸೇನಸ್ತದಸ್ತ್ರಂ ಚಾಮೋಘಮೇವ ಯತ್ ।

ವಿಷ್ಣುನೈವೋಭಯಂ ಯಸ್ಮಾತ್ ಕ್ಲ್ ಪ್ತಂ ಭೀಮೋSಸ್ತ್ರಮೇವ ತತ್  ॥೨೮.೧೫೮॥

 

ಗಾಯತ್ರೀ ತತ್ರ ಮನ್ತ್ರೋ ಯದ್ ಬ್ರಹ್ಮಾ ತದ್ಧ್ಯಾನದೇವತಾ ।

ದ್ಧ್ಯೇಯೋ ನಾರಾಯಣೋ ದೇವೋ ಜಗತ್ಪ್ರಸವಿತಾ ಸ್ವಯಮ್ ॥೨೮.೧೫೯॥

 

ಭೀಮಸೇನನಿಂದ ಸೋತ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು ತೆಗೆದುಕೊಳ್ಳುವ ಕಾಲದಲ್ಲಿ,

ಧರ್ಮರಾಜ ಹಾಗೂ ಅರ್ಜುನನಿಂದ ಕೂಡಿಕೊಂಡ ಶ್ರೀಕೃಷ್ಣನು ಬರುವನು ಅಲ್ಲಿ .

ಅಸ್ತ್ರದ ಅಮೋಘತ್ವ ಮತ್ತು ಭೀಮನ ಅವಧ್ಯತ್ವ ವ್ಯರ್ಥವಾಗದಂತೆ ತಡೆವುದಿತ್ತಲ್ಲಿ .

 

ಭೀಮಸೇನನು ಯಾವ ಅಸ್ತ್ರದಿಂದಲೂ ವಧ್ಯನಾಗುವನಲ್ಲ.

ಬ್ರಹ್ಮಾಸ್ತ್ರವಾದರೋ, ಯಾವತ್ತೂ ಎಂದೂ ವ್ಯರ್ಥ ಆಗುವುದಿಲ್ಲ.

ತನ್ನ ಸಂಕಲ್ಪದಂತೆ ಇವೆರಡನ್ನೂ ಹೊಂದಿಸಿಕೊಡುವವನಾಗಿ ಶ್ರೀಕೃಷ್ಣ ಅಲ್ಲಿಗೆ ಬಂದ.

ಭೀಮಸೇನನು ಆ ಅಸ್ತ್ರದ ಅಭಿಮಾನಿಯಾಗಿರುವುದರಿಂದ ಅಸ್ತ್ರವೇ ಆಗಿದ್ದ.

ಬ್ರಹ್ಮಾಸ್ತ್ರದಲ್ಲಿ ಗಾಯತ್ರೀಯೇ ಮಂತ್ರ. ಧ್ಯಾನಪ್ರಚೋದನೆಗೆ ಮಾಡುವ ತಂತ್ರ.

ಋಷಿ ಮತ್ತು ಅಭಿಮಾನಿ ಸ್ವಯಂ ಚತುರ್ಮುಖ ಬ್ರಹ್ಮ.

ಅಂತರ್ಯಾಮಿಯಾಗಿ ನಾರಾಯಣನೇ ಪರಬ್ರಹ್ಮ.

 

(ಬ್ರಹ್ಮಾಸ್ತ್ರಕ್ಕೆ ಅಮುಖ್ಯ ದೇವತೆ ಬ್ರಹ್ಮ, ಅವನ ಒಳಗೆ ಅಂತರ್ಯಾಮಿಯಾಗಿ ನಾರಾಯಣನನ್ನು ಚಿಂತನೆ ಮಾಡಬೇಕು. ಬ್ರಹ್ಮನಿಗೆ ಸಮಾನನಾದವನು ಮುಖ್ಯಪ್ರಾಣ. ಅವನೇ ಭೀಮನಾಗಿರುವುದರಿಂದ ಆ ಅಸ್ತ್ರಕ್ಕಿಲ್ಲ ಅವನ ಸುಡುವ ತ್ರಾಣ.) 

 

ಊಚೇ ಚ ಪಾರ್ತ್ಥಯೋಃ ಕೃಷ್ಣೋ ಯತ್ ಕೃತಂ ದ್ರೌಣಿನಾ ಪುರಾ ।

ಸ್ವಾಯುಧಾನಾಂ ಯಾಚನಂ ಚಾಪ್ಯಶಕ್ತೇನ ತದುದ್ಧೃತೌ ॥೨೮.೧೬೦॥

 

ಪೃಷ್ಟೇನೋಕ್ತಂ ತ್ವಯಾ ಹೀನಾಂ ಕೃತ್ವಾ ದುರ್ಯ್ಯೋಧನಾಯ ಗಾಮ್ ।

ದಾತುಂ ತ್ವದಾಯುಧಂ ಮೇSದ್ಯೇತ್ಯೇವಮುಕ್ತೇ ತ್ಮನೋದಿತಮ್ ॥೨೮.೧೬೧॥

 

ಮೈವಂ ಕಾರ್ಷೀಃ ಪುನರಿತಿ ದ್ಧ್ಯಾಯತಾSಬ್ಧೇಸ್ತಟೇ ಸ್ವಮು ।

ತದಸ್ತ್ರಂ ಪ್ರಜ್ವಲದ್ ದೃಷ್ಟ್ವಾSಪಾಣ್ಡವತ್ವವಿಧಿತ್ಸಯಾ ॥೨೮.೧೬೨॥

 

ಧರಾಯಾಂ ದ್ರೌಣಿನಾ ಮುಕ್ತಂ ಕೃಷ್ಣೇನ ಪ್ರೇರಿತೋSರ್ಜ್ಜುನಃ ।

ಸ್ವಸ್ತ್ಯಸ್ತು ದ್ರೋಣಪುತ್ರಾಯ ಭೂತೇಭ್ಯೋ ಮಹ್ಯಮೇವ ಚ । ॥೨೮.೧೬೩॥

 

ಇತಿ ಬ್ರುವಂಸ್ತದೇವಾಸ್ತ್ರಮಸ್ತ್ರಶಾನ್ತ್ಯೈ ವ್ಯಸರ್ಜ್ಜಯತ್ ।

ಅನಸ್ತ್ರಜ್ಞೇಷು ಮುಕ್ತಂ ತದ್ಧನ್ಯಾದಸ್ತ್ರಮುಚಂ ಯತಃ ॥೨೮.೧೬೪॥

 

ಶ್ರೀಕೃಷ್ಣ ಹಿಂದೆ ನಡೆದ ಘಟನೆಯೊಂದನ್ನು ವಿವರಿಸಿ ಹೇಳುತ್ತಾನೆ- ,

ತನ್ನಿಂದ ಎತ್ತಲು ಅಸಾಧ್ಯವಾದ ಶ್ರೀಕೃಷ್ಣನ ಚಕ್ರಕ್ಕೆ ದ್ರೌಣಿಯ ಪ್ರಾರ್ಥನೆ.

‘ಯಾವ ಕಾರಣಕ್ಕಾಗಿ ಆಯುಧವನ್ನು ಬಯಸುತ್ತಿದ್ದೀಯ’ ಎಂದು ಕೃಷ್ಣ ಕೇಳುತ್ತಾನೆ,

‘ನಿನ್ನನ್ನು(ಕೃಷ್ಣನನ್ನು) ಸಾಯಿಸಿ, ಭೂಮಿಯ ದುರ್ಯೋಧನನಿಗೆ ಕೊಡಲು ಬೇಕೆನ್ನುತ್ತಾನೆ .

ಈ ರೀತಿಯಾಗಿ ಹೇಳಿದಾಗ, ಕೃಷ್ಣ ಹೇಳುತ್ತಾನೆ- ‘ನಿನ್ನ ಮೂಲರೂಪವನ್ನೊಮ್ಮೆ ಜ್ಞಾಪಿಸಿಕೋ,

ನಿನ್ನ ಪದವಿ ಉಳಿಸಿಕೊಳ್ಳಲು ಸಮುದ್ರ ತೀರದಲ್ಲಿ ನನ್ನ ಧ್ಯಾನ ಮಾಡುತ್ತಿರುವ ರೂಪವನ್ನು ನೆನಪಿಸಿಕೋ.

ಅದರಿಂದ ಈ ರೀತಿ ಮಾಡಬೇಡ’ ಎನ್ನುತ್ತಾನೆ ಕೃಷ್ಣ ಪರಮಾತ್ಮ.

(ತನ್ನ ಮೂಲರೂಪ ಮತ್ತು ಅವತಾರದ ವೈರುಧ್ಯದಲ್ಲಿದ್ದ ಅಶ್ವತ್ಥಾಮ.)

 

ಇಂತಹ ಅಶ್ವತ್ಥಾಮನಿಂದ ಭೂಮಿಯಲ್ಲಿರುವ ಪಾಂಡವರು ಮತ್ತು ಅವರ ಸಂತತಿ,

ಇರಬಾರದು ಎಂದೇ ಬಿಟ್ಟ ಬ್ರಹ್ಮಾಸ್ತ್ರವು ಪ್ರಜ್ವಲಿಸುತ್ತಾ ಬರುತ್ತಿರುವ ಆ ಪರಿಸ್ಥಿತಿ,

ಇದೆಲ್ಲಾ ನೋಡಿದ ಶ್ರೀಕೃಷ್ಣ ಅರ್ಜುನಗೆ ಮಾಡಿದ ಪ್ರೇರಣೆ,

ಅರ್ಜುನನಲ್ಲಿ ಮೂಡಿತ್ತು ಸಮಸ್ತ ಜಗಹಿತದ ಧೋರಣೆ.

‘ದ್ರೋಣಾಚಾರ್ಯರ ಮಗನಿಗೆ ಒಳ್ಳೆಯದಾಗಲಿ,

ಎಲ್ಲಾ ಪಂಚಭೂತಗಳಿಗೂ ಕೂಡಾ ಮಂಗಳವಾಗಲಿ,

ನನಗೂ ಕೂಡಾ ಕಲ್ಯಾಣವಾಗಲಿ’ ಎಂದು ಪ್ರಾರ್ಥಿಸಿಕೊಳ್ಳುತ್ತಾ,

ಅಶ್ವತ್ಥಾಮ ಬಿಟ್ಟ ಬ್ರಹ್ಮಾಸ್ತ್ರದ ಶಮನಕ್ಕಾಗಿ ಅದೇ ಅಸ್ತ್ರವನ್ನು ಬಿಟ್ಟ .

 

(ಏಕೆ ಅರ್ಜುನ ‘ಅಶ್ವತ್ಥಾಮನಿಗೆ ಒಳ್ಳೆಯದಾಗಲಿ’ ಎಂದು ಹೇಳಿ ಬ್ರಹ್ಮಾಸ್ತ್ರ ಪ್ರಯೋಗಿಸಿದ ಎಂದರೆ- ಅಸ್ತ್ರವನ್ನು ಯಾರು ಬಲ್ಲವರಲ್ಲವೋ ಅಂತವರ ಮೇಲೆ ಪ್ರಯೋಗಿಸಲ್ಪಟ್ಟ ಅಸ್ತ್ರ ಆಗುತ್ತದೆ ಅದು ಸಾವಿನ ಬರೆ).

 

ಗುರುಭಕ್ತ್ಯಾ ತತೋ ದ್ರೌಣೇಃ ಸ್ವಸ್ತ್ಯಸ್ತ್ವಿತ್ಯಾಹ ವಾಸವಿಃ ।

ತದಾSಸ್ತ್ರಯೋಸ್ತು ಸಂಯೋಗೇ ಭೂತಾನಾಂ ಸಂಹೃತಿರ್ಭವೇತ್  ॥೨೮.೧೬೫॥

 

ಭೂತಾನಾಂ ಸ್ವಸ್ತಿರಪ್ಯತ್ರ ಕಾಙ್ಕ್ಷಿತಾ ಕರುಣಾತ್ಮನಾ ।

ತಥಾSಪ್ಯಸ್ತ್ರದ್ವಯಂ ಯುಕ್ತಂ ಭೂತಾನಾಂ ನಾಶಕೃದ್ ಧ್ರುವಮ್ ॥೨೮.೧೬೬॥

 

ಹೀಗಾಗಿ ಅರ್ಜುನಗಿದ್ದ ತನ್ನ ಗುರುಗಳ ಮೇಲಿನ ಪ್ರೀತಿ,

‘ದ್ರೋಣಾಚಾರ್ಯರ ಮಗನಿಗೆ ಒಳ್ಳೆಯದಾಗಲಿ’ ಎಂದ ರೀತಿ.

(ಭೂತಗಳಿಗೂ ಮಂಗಳವಾಗಲಿ ಎಂದು ಏಕೆ ಹೇಳಿದ ಎಂಬುದರ ಕಾರಣ) ,

ಎರಡು ಬ್ರಹ್ಮಾಸ್ತ್ರಗಳ ಸೇರ್ಪಡೆಯಾದಲ್ಲಿ ಸಮಸ್ತ ಪ್ರಾಣಿ ಪಂಚಭೂತಗಳ ಹನನ.

ಕರುಣಾಪೂರ್ಣ ಮನಸ್ಕ ಅರ್ಜುನ ಬಯಸಿದ್ದ ಜೀವರ ಪಂಚಭೂತಗಳ ಕಲ್ಯಾಣ.

 

ತಸ್ಮಾನ್ನಿವಾರಯನ್ ಯೋಗಂ ತಯೋರ್ಮ್ಮದ್ಧ್ಯೇSಭವತ್ ಕ್ಷಣಾತ್ ।

ನಿಸ್ಸೀಮಶಕ್ತಿಃ ಪರಮಃ ಕೃಷ್ಣಃ ಸತ್ಯವತೀಸುತಃ ॥೨೮.೧೬೭॥

 

ಅರ್ಜುನನ ಸಂಕಲ್ಪ ಅದು ಏನೇ ಇದ್ದರೂ ಕೂಡಾ ,

ಎರಡು ಬ್ರಹ್ಮಾಸ್ತ್ರಗಳು ಸೇರಿದರೆ ವಿನಾಶ ಗಾಢ .

ಆ ಕಾರಣದಿಂದ ಆ ಎರಡು ಅಸ್ತ್ರಗಳ ಸೇರ್ಪಡೆಯನ್ನು  ತಡೆಯುವದಾಗಿತ್ತು ಉದ್ದೇಶ,

ಅವೆರಡು ಅಸ್ತ್ರಗಳ ಮಧ್ಯದಲ್ಲಿ ಬಂದು ನಿಂತರು ಅಮಿತ ಶಕ್ತಿಯ, ಸತ್ಯವತಿಪುತ್ರ ವೇದವ್ಯಾಸ.

 

 

ಸಂಸ್ಥಾಪ್ಯಾಸ್ತ್ರದ್ವಯಂ ದೂರೇ ತಾವಾಹ ಪುರುಷೋತ್ತಮಃ ।

ಸನ್ತಿ ಹ್ಯಸ್ತ್ರವಿದಃ ಪೂರ್ವಂ ಪ್ರಾಯಶ್ಚೈತನ್ನ ತೈಃ ಕೃತಮ್ ॥೨೮.೧೬೮॥

 

ಲೋಕೋಪದ್ರವಕೃತ್ ಕರ್ಮ್ಮ ಸನ್ತಃ ಕುರ್ಯ್ಯುಃ ಕಥಂ ಕ್ವಚಿತ್ ।

ಇತ್ಯುಕ್ತೇ ಫಲ್ಗುನಃ ಪ್ರಾಹ ಮಯಾ ಮುಕ್ತಂ ಮಹಾಪದಿ ॥೨೮.೧೬೯॥

 

ಶಾನ್ತ್ಯರ್ತ್ಥಮೇವ ಚ ವಿಭೋ ಕ್ಷನ್ತವ್ಯಂ ಭವತಾ ತತಃ ।

ದ್ರೌಣಿರಪ್ಯೇವಮೇವಾSಹ ತೌ ವೇದಪತಿರಬ್ರವೀತ್  ॥೨೮.೧೭೦॥

 

ನಿವರ್ತ್ಯತಾಮಸ್ತ್ರಮಿತಿ ಶಕ್ರಸೂನುಸ್ತಥಾSಕರೋತ್ ।

ನಿವರ್ತ್ತನಾಪ್ರಭುಂ ದ್ರೌಣಿಂ ವಾಸುದೇವೋSಭ್ಯಭಾಷತ ॥೨೮.೧೭೧॥

 

ವೇದವ್ಯಾಸರು ಎರಡೂ ಅಸ್ತ್ರಗಳನ್ನು ದೂರದಲ್ಲಿ ನಿಲ್ಲಿಸಿದರು,

ಅಶ್ವತ್ಥಾಮ ಹಾಗೂ ಅರ್ಜುನರನ್ನು ಕುರಿತು ಹೀಗೆ ಹೇಳಿದರು-

ಅಸ್ತ್ರವನ್ನು ಬಲ್ಲವರು ಹಿಂದೆಯೂ ಇದ್ದರು. ಅವರು ಈರೀತಿಯಾಗಿ ಮಾಡದೇ ಇದ್ದವರು.

ಲೋಕಕ್ಕೆ ಉಪದ್ರವ ಉಂಟುಮಾಡುವ ಕೆಲಸವನ್ನು ಸಜ್ಜನರು,

ಹೇಗೆ ತಾನೇ ಮಾಡಿಯಾರು ಎಂದು ವ್ಯಾಸರು ಪ್ರಶ್ನಿಸುವರು.

ವ್ಯಾಸರು ಈರೀತಿಯಾಗಿ ಹೇಳಿದಾಗ ಅರ್ಜುನ- ‘ಮಹಾ ಆಪತ್ತಿನಲ್ಲಿ ಈ ಅಸ್ತ್ರವು ಬಿಡಲ್ಪಟ್ಟಿದೆ.

ಸರ್ವಸಮರ್ಥರಾದ ವೇದವ್ಯಾಸರೇ, ಆ ಅಸ್ತ್ರ ಶಾಂತಿ ಆಗಲೀ ಎನ್ನುವುದೇ ನನ್ನ ಸಂಕಲ್ಪವಿದೆ’.

ಅಶ್ವತ್ಥಾಮಾಚಾರ್ಯರೂ ಕೂಡಾ ಹಾಗೆಯೇ ಹೇಳುತ್ತಾರೆ.

ಆಗ ವ್ಯಾಸರು ‘ಬ್ರಹ್ಮಾಸ್ತ್ರ ಉಪಸಂಹಾರ’ ಆಗಲೆನ್ನುತ್ತಾರೆ.

ವೇದವ್ಯಾಸರ ಮಾತಿನಂತೆ ಅರ್ಜುನ ಹಾಗೇ ಮಾಡುತ್ತಾನೆ.

ಆದರೆ ಅಶ್ವತ್ಥಾಮನಿಗೆ ಆಗುವುದಿಲ್ಲ ಉಪಸಂಹಾರದ ಸಾಧನೆ.

ಆಗ ಶ್ರೀಕೃಷ್ಣ ಪರಮಾತ್ಮ ಈ ರೀತಿಯ ಮಾತುಗಳನ್ನಾಡುತ್ತಾನೆ.

 

ಕ್ಷತ್ರತೇಜಾ ಬ್ರಹ್ಮಚಾರಿ ಕೌಮಾರಾದಪಿ ಪಾಣ್ಡವಃ ।

ನಿವರ್ತ್ತನೇ ತತಃ ಶಕ್ತೋ ನಾಯಂ ದ್ರೋಣಾತ್ಮಜೋSಪಿ ಸನ್  ॥೨೮.೧೭೨॥                                                                                                                                                

 

ಅಬ್ರಹ್ಮಚರ್ಯ್ಯಾದಿತ್ಯುಕ್ತೇ ವ್ಯಾಸೋ ದ್ರೌಣಿಮಭಾಷತ ।

ನಿವರ್ತ್ತನಾಸಮರ್ತ್ಥಸ್ತ್ವಂ ದೇಹಿ ನೈಸರ್ಗ್ಗಿಕಂ ಮಣಿಮ್  ॥೨೮.೧೭೩॥

 

‘ಯಾವ ಕಾರಣದಿಂದ ಕ್ಷತ್ರಿಯ ತೇಜಸ್ಸನ್ನು ಹೊಂದಿರುವ ಅರ್ಜುನ,

ಹದಿನೈದನೇ ವಯಸ್ಸಿನಿಂದಲೂ ಕೂಡಾ ಬ್ರಹ್ಮಚರ್ಯವ್ರತಾಧೀನ.

ಆಕಾರಣದಿಂದಲೇ ಅಸ್ತ್ರವ ಉಪಸಂಹಾರ ಮಾಡುವಲ್ಲಿ ಅವನು ಸಮರ್ಥನಾದ.

ಆದರೆ ಅಶ್ವತ್ಥಾಮ ದ್ರೋಣಪುತ್ರನಾಗಿಯೂ ಬ್ರಹ್ಮಚರ್ಯ ಇಲ್ಲದೇ ಅಸಮರ್ಥನಾದ.

ಶ್ರೀಕೃಷ್ಣನು ಹೀಗೆ ಹೇಳಲು, ವೇದವ್ಯಾಸರು ಅಶ್ವತ್ಥಾಮನ ಕುರಿತು ಹೇಳುತ್ತಾರೆ-

‘ಅಸ್ತ್ರ ಉಪಸಂಹಾರದಲ್ಲಿ ಅಸಮರ್ಥನಾದೆ ನಿನ್ನ ನೈಜ ಮಣಿ ಕೊಡು’ ಎನ್ನುತ್ತಾರೆ.

 

[ದುರ್ಯೋಧನನ ಪತ್ನಿಯಲ್ಲಿ ಮಗುವನ್ನು ಹುಟ್ಟಿಸಲು ಒಪ್ಪಿದ್ದ, ಆ ಮಗು ಮುಂದೆ ಭೂಮಿ ಆಳುವಂತೆ ಮಾಡುತ್ತೇನೆ ಎಂದು ಕೌರವನಿಗೆ ಮಾತು ಕೊಟ್ಟಿದ್ದ, ಆಗಲೇ ಅಶ್ವತ್ಥಾಮ, ತನ್ನ ಬ್ರಹ್ಮಚರ್ಯವ್ರತವನ್ನು ಕಳೆದುಕೊಂಡಿದ್ದ.]

 

ಜಿತಃ ಪ್ರಾಗೇವ ಭೀಮೇನ ಭೀಮಾಯೈವ ಮಹಾಪ್ರಭಮ್ ।

ಅಪಿ ಕೇವಲಯಾ ವಾಚಾ ಪಾರ್ತ್ಥೇಭ್ಯೋSಸ್ತ್ರಂ ನಿವರ್ತ್ತಯ ॥೨೮.೧೭೪॥

 

ಇತ್ಯುಕ್ತೋ ಮೂರ್ದ್ಧಜಂ ರತ್ನಂ ಜರಾಮರಣನಾಶನಮ್ ।

ಕ್ಷುತ್ತೃಟ್-ಶ್ರಮಾಪಹಂ ದಿವ್ಯಗನ್ಧಂ ಧ್ವಾನ್ತಹರಂ ಶುಭಮ್ ॥೨೮.೧೭೫॥

 

ಉತ್ಕೃತ್ಯ ಭೀಮಾಯ ದದೌ ಮುಕ್ತಾಃ ಪಞ್ಚೈವ ಪಾಣ್ಡವಾಃ ।

ಅಸ್ತ್ರಾದಿತಿ ತತೋ ವೇದಭರ್ತ್ತಾ ವಾಸವಿಮಬ್ರವೀತ್ ॥೨೮.೧೭೬॥

 

ತಾತ ಮುಕ್ತಂ ದ್ರೌಣಿನಾSಪಿ ತ್ವಮೇವಾಸ್ತ್ರಂ ನಿವರ್ತ್ತಯ ।

ಇತ್ಯುಕ್ತಸ್ತಂ ಪ್ರಣಮ್ಯಾSಶು ಸಞ್ಜಹಾರಾರ್ಜ್ಜುನೋSಪಿ ತತ್ ॥೨೮.೧೭೭॥

 

‘ಬ್ರಹ್ಮಾಸ್ತ್ರ ಪ್ರಯೋಗಕ್ಕೂ ಮೊದಲೇ ಭೀಮಸೇನನಿಂದ ಪರಾಜಿತನಾದ ನೀನು,

ಕೊಡು ಭೀಮನಿಗಾಗಿಯೇ ನಿನ್ನ ತಲೆಯಲ್ಲಿ ಹೊಳೆಯುತ್ತಿರುವ,  ಸಹಜಮಣಿಯನ್ನು .

ಮತ್ತು ಕೇವಲ ಮಾತಿನಿಂದಲೇ ಮಾತ್ರ , ಉಪಸಂಹರಿಸು ಪಾಂಡವರಿಗೆ ಬಿಟ್ಟಅಸ್ತ್ರ’.

ಈರೀತಿ ವೇದವ್ಯಾಸರಿಂದ ಹೇಳಲ್ಪಟ್ಟ ಆ ದ್ರೋಣಪುತ್ರ ಅಶ್ವತ್ಥಾಮನು,

ಮುದಿತನ-ಮರಣ ನಾಶಪಡಿಸಬಲ್ಲ, ಹಸಿವು, ನೀರಡಿಕೆ, ದಣಿವು, ಇವುಗಳೆಲ್ಲವನ್ನು,

ಪರಿಹರಿಸತಕ್ಕ, ಒಳ್ಳೆಯ ಪರಿಮಳದ ಕತ್ತಲು ಕಳೆವ ಮಂಗಳಪ್ರದವಾದ ರತ್ನವನ್ನು ,

ತನ್ನ ತಲೆಯಿಂದ ಕಿತ್ತು ಭೀಮಸೇನನಿಗೆ ಕೊಟ್ಟು ಬಿಟ್ಟ, ಮಾಡಿದ ಪಂಚಪಾಂಡವರನ್ನು ಅಸ್ತ್ರದಿಂದ ಮುಕ್ತ.

ಆನಂತರ ವೇದವ್ಯಾಸರು ಅರ್ಜುನನಿಗೆ - ‘ಎಲೋ ಅರ್ಜುನನೇ, ಅಶ್ವತ್ಥಾಮ ಬಿಟ್ಟಿರುವ ಅಸ್ತ್ರವ ನೀನೇ ಉಪಸಂಹರಿಸು’ ಎಂದಾಗ , ಅವರ ಮಾತ ಕೇಳಿದ ಅರ್ಜುನನು ವೇದವ್ಯಾಸರನ್ನು ನಮಸ್ಕರಿಸಿ, ಅಸ್ತ್ರವನ್ನು  ಉಪಸಂಹಾರ ಮಾಡುವನಾಗ.

 

ಯಾದವೇಶೋSಥ ಗೌತಮ್ಯಾಃ ಸುತಮಾಹೈಕಸನ್ತತೇಃ ।

ವಾಚ ನಿವರ್ತ್ತಯಾಸ್ತ್ರಂ ತೇ ಇತ್ಯುಕ್ತೋ ದ್ರೌಣಿರಬ್ರವೀತ್ ॥೨೮.೧೭೮॥

 

ಪಕ್ಷಪಾತಾದಿಚ್ಛಸಿ ತ್ವಂ ಭಾಗಿನೇಯಸ್ಯ ಸನ್ತತಿಮ್ ।

ತತ್ರೈವ ಪಾತಯಾಮ್ಯಸ್ತ್ರಮುತ್ತರಾಗರ್ಭಕೃನ್ತನೇ ॥೨೮.೧೭೯॥

 

ತದನಂತರ ಶ್ರೀಕೃಷ್ಣ ಪರಮಾತ್ಮನು ಅಶ್ವತ್ಥಾಮನಿಗೆ ಹೇಳಿದ,

‘ಪಾಂಡವರ ಉಳಿದಿರುವ ಒಂದೇ ಒಂದು ಕುಡಿ ಉಳಿಸು ಎಂದ.

ಅದರಿಂದಲೂ ಕೂಡಾ ಅಸ್ತ್ರವನ್ನು ಉಪಸಂಹರಿಸು ನಿನ್ನ ಮಾತಿನಿಂದ’.

ಆಗ ಅಶ್ವತ್ಥಾಮ - ‘ನಿನ್ನ ಬಯಕೆಯದು ತಂಗಿಯ ಮಗನೆಂಬ ಪಕ್ಷಪಾತದಿಂದ'.

ನೀನು ನಿನ್ನ ತಂಗಿಯ ಸಂತತಿಯನ್ನು ಉಳಿಸಲು ಬಯಸುತ್ತಿರುವೆ,

ಉತ್ತರೆಯ ಗರ್ಭ ನಾಶಮಾಡಲು ನಾನು ಈ ಅಸ್ತ್ರವ ಅಲ್ಲೇ ಹಾಕುವೆ’.

 

ವಾಸುದೇವಃ ಪುನಃ ಪ್ರಾಹ ಯದಿ ಹನ್ತವ್ಯ ಏವ ತೇ ।

ಗರ್ಭಸ್ತಥಾSಪಿ ನೈವಾಸ್ತ್ರಂ ಪಾತಯಾಸ್ಮಿನ್ ಕಥಞ್ಚನ ॥೨೮.೧೮೦॥

 

ಅಭಿಮನ್ಯೋರ್ಮೃತಸ್ಯೈವ ದೇಹೇ ಪಾತಯ ಮಾನದ ।

ಏವಂ ತ್ವದಸ್ತ್ರನಿಹತಂ ಗರ್ಭಮುಜ್ಜೀವಯಾಮ್ಯಹಮ್ ॥೨೮.೧೮೧॥

 

ಆಗ ಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ- ‘ಒಂದು ವೇಳೆ ಉತ್ತರೆಯ ಗರ್ಭ ನಾಶವೇ ಆಗಿದ್ದರೆ ನಿನ್ನ ನಿಯಮ, ಈ ಅಸ್ತ್ರ ಬೇಡ, ಇದೇ ಅಸ್ತ್ರದಿಂದಲೇ ಎಂದಾದರೆ, ಅದು ಅಭಿಮನ್ಯುವಿನ ಮೃತದೇಹಕ್ಕೆ ಹಾಕಿದ ಪರಿಣಾಮ'. (ಅಭಿಮನ್ಯುವಿನ ಮೃತದೇಹಕ್ಕೆ ಅಸ್ತ್ರವ ಹಾಕುವುದು ಹೇಗೋ ವ್ಯರ್ಥ, ಹಾಗೇ ಉತ್ತರೆಯ ಗರ್ಭದಲ್ಲಿ ಅಸ್ತ್ರ ಹಾಕುವುದೂ ಅಷ್ಟೇ ವ್ಯರ್ಥ.).

‘ನಿನ್ನ ಅಸ್ತ್ರದಿಂದ ಸಾಯಿಸಲ್ಪಟ್ಟ ಗರ್ಭವನ್ನು, ಕೇಳಿಸಿಕೋ, ನಾನು ಅದನ್ನ ಬದುಕಿಸುವೆನು’.

 

ಪಾತಯೇ ಗರ್ಭ ಏವಾಹಮಿತ್ಯೂಚೇ ಗೌತಮೀಸುತಃ ।

ಅಥಾSಹ ವಾಸುದೇವಸ್ತಮೀಷತ್ಕ್ರುದ್ಧ ಇವ ಪ್ರಭುಃ ॥೨೮.೧೮೨॥

 

ದುರ್ಮ್ಮತೇ ಪಶ್ಯ ಮೇ ವೀರ್ಯ್ಯಂ ಯತ್ ತೇ ಶಕ್ಯಂ ಕುರುಷ್ವ ತತ್ ।

ಉಜ್ಜೀವಯಾಮ್ಯಹಂ ಗರ್ಭಂ ಯತತಃ ಶಕ್ತಿತೋSಪಿ ತೇ ॥೨೮.೧೮೩॥

 

ಸನ್ತತಿರ್ವರ್ಷಸಾಹಸ್ರಂ ಪಾಣ್ಡವಾನಾಂ ಭವೇದ್ ಭುವಿ ।

ಮತ್ಪಾಲಿತಾಂ ನ ಕಶ್ಚಿತ್ ತಾಂ ತಾವದ್ಧನ್ತುಂ ಕ್ಷಮಃ ಕ್ವಚಿತ್ ॥೨೮.೧೮೪॥

 

‘ನಾನು ಗರ್ಭದಲ್ಲಿಯೇ ಅಸ್ತ್ರವನ್ನು ಬೀಳಿಸುತ್ತೇನೆ’ ಎಂದು ಅಶ್ವತ್ಥಾಮನ ಹಠ ,

ಆಗ ಶ್ರೀಕೃಷ್ಣ ಮುನಿದವನಂತೆ ತೋರಿಕೊಂಡು ಅಶ್ವತ್ಥಾಮನಿಗೆ ಹೇಳಿದ ಪಾಠ.

‘ಎಲೈ ದುರ್ಬುದ್ಧಿಯುಳ್ಳವನೇ, ನನ್ನ ಪರಾಕ್ರಮವನ್ನು ನೋಡು,

ನಿನ್ನ ಕೈಯಲ್ಲಿ ಏನಾಗುತ್ತದೋ ಅದನ್ನೆಲ್ಲವನ್ನೂ ನೀನು ಮಾಡು.

ನಿನ್ನ ಸಮಗ್ರಶಕ್ತಿಯಿಂದ ಪ್ರಯತ್ನಪಟ್ಟರೂ, ನಾನು ಉಳಿಸುತ್ತೇನೆ ಉತ್ತರೆಯ ಆ ಬಸಿರು.

ಪಾಂಡವರ ಸಂತತಿಯು ಈ ಭೂಮಿಯಲ್ಲಿ ಸಾವಿರ ವರ್ಷಗಳ ಕಾಲ ಬಾಳುತ್ತದೆ.

ನಾನು ಪಾಲನೆ ಮಾಡಿದ, ಆ ಸಂತತಿಯನ್ನು ಸಂಹರಿಸಲು ಯಾರಿಗೆ ಸಾಧ್ಯವಿದೆ?

 

ಜಾನಾಮಿ ತೇ ಮತಿಂ ದುಷ್ಟಾಂ ಜಿಘಾಂಸೋಃ ಪಾರ್ತ್ಥಸನ್ತತಿಮ್ ।

ಚಿಕೀರ್ಷೋರ್ದ್ಧಾರ್ತ್ತರಾಷ್ಟ್ರಸ್ಯ ತನ್ತುಂ ಭೂಯಃ ಸುದುಷ್ಕರಮ್ ॥೨೮.೧೮೫॥

 

ಮದಾಜ್ಞಯಾ ಸಾ ವಿಫಲಾ ಭವಿತ್ರೀ ವಾಞ್ಚಾ ಮುಮುಕ್ಷಾ ವಿಮುಖಸ್ಯ ವಿಷ್ಣೋಃ ।

ಯಥೈವ ತೇನೈವ ನರಾಧಿರೂಢೋ ಗಮ್ಯಸ್ತವ ಸ್ಯಾನ್ನಚ ಭೂಮಿಭಾಗಃ ॥೨೮.೧೮೬॥

 

ದುರ್ಗ್ಗನ್ಧಯುಕ್ತೋ ವ್ರಣಸಞ್ಚಿತಾಙ್ಗಃ ಸದಾ ಚರಃ ಸ್ಯಾ ವಿಪಿನೇಷು ಮನ್ದ ।

ಯಾವದ್ ಭುವಿ ಸ್ಯಾದಿಹ ಪಾರ್ತ್ಥತನ್ತುರ್ವ್ಯಾಸೋSಪಿ ತಂ ಪ್ರಾಹ ತಥೇತಿ ದೇವಃ ॥೨೮.೧೮೭॥

 

ಪಾಂಡವರ ಸಂತತಿಯನ್ನು ಕೊಲ್ಲಬೇಕು, ಧೃತರಾಷ್ಟ್ರನ ಸಂತತಿಯನ್ನು ಬೆಳಸಬೇಕು. ಎನ್ನುವ ನಿನ್ನ ನೀಚ ಸಂಕಲ್ಪವನ್ನು ನಾನು ಅತಿದುಷ್ಟಬುದ್ಧಿಯೆಂದು ತಿಳಿಯುತ್ತೇನೆ. ನಾರಾಯಣನಿಗೆ ಬೆನ್ನು ತಿರುಗಿಸಿದವನಿಗೆ ಬಿಡುಗಡೆಯ ಬಯಕೆ ವಿಫಲ ಮಾಡುತ್ತೇನೆ. ಹಾಗೆಯೇ ನಿನ್ನ ಬಯಕೆಯೂ ನನ್ನ ಆಜ್ಞೆಯಿಂದ ಖಂಡಿತ ವಿಫಲವಾಗುತ್ತದೆ.

ಮನುಷ್ಯರಿರುವ ಭೂಭಾಗ ನಿನ್ನಿಂದ ತಲುಪದಿರಲಿ, ನಿನಗೆ ನನ್ನ ಶಾಪವಿದೆ.                 

ವಿಪರೀತ ಕೆಟ್ಟ ವಾಸನೆಯಿಂದ ಕೂಡಿದವನಾಗಿ, ಹುಣ್ಣುಗಳಿಂದ,

ಕೀವು ತುಂಬಿದ ಮೈಯ್ಯವನಾಗಿ, ಕಾಡುಗಳಲ್ಲಿ ತಿರುಗಾಟ ನಿನ್ನಿಂದ.

ಎಲ್ಲಿಯ ತನಕ ಪಾಂಡವರ ಸಂತತಿ ಇರುತ್ತದೋ ಅಲ್ಲಿಯ ತನಕ ಇದೇ ಅವಸ್ಥೆ ನಿನ್ನದು’.

ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿದ ವ್ಯಾಸರೂ ಕೂಡಾ ಹೇಳಿದರು‘ಹಾಗೇ ಆಗಲಿ’ ಎಂದು.

 

ರೂಪದ್ವಯೇನಾಪಿ ಹರೇಸ್ತಥೋಕ್ತೋ ಜಗಾದ ಕಾಳೀತನಯಂ ಸ ಕೃಷ್ಣಮ್ ।

ತ್ವಯಾ ಸಹ ಸ್ಯಾನ್ಮಮ ಸಙ್ಗಮೋ ವಿಭೋ ಯಥೇಷ್ಟತಃ ಸ್ಯಾನ್ನಚ ಮೇSತ್ರ ವಿಘ್ನಃ ॥೨೮.೧೮೮॥

 

ಪರಮಾತ್ಮನ ಎರಡು ರೂಪಗಳಿಂದಲೂ ಈರೀತಿಯಾಗಿ ಹೇಳಲ್ಪಟ್ಟ ಅಶ್ವತ್ಥಾಮಾಚಾರ್ಯರು, 

ಸತ್ಯವತಿಯ ಮಗನಾದ ವೇದವ್ಯಾಸರನ್ನು ಕುರಿತು ಕೆಳಗೆ ಹೇಳಿದಂತೆ ಬೇಡಿಕೆಯನ್ನು ಇಡುವರು.

‘ಸರ್ವಸಮರ್ಥನಾದ ಓ ನಾರಾಯಣನೇ, ವೇದವ್ಯಾಸರೇ,

ನನ್ನ ಇಚ್ಛಾನುಸಾರ ನಿಮ್ಮ ಸಂಗಮಕ್ಕೆ ಬಾರದಿರಲಿ ತೊಂದರೆ’.

 

ಇತ್ಯುಕ್ತ ಓಮಿತಿ ಪ್ರಾಹ ಭಗವಾನ್ ಬಾದರಾಯಣಃ ।

ತಂ ಪ್ರಣಮ್ಯ ಯಯೌ ಸೋSಪಿ ಸ್ವಪ್ನದೃಷ್ಟಮನುಸ್ಮರನ್ ॥೨೮.೧೮೯॥

 

ಈರೀತಿಯಾಗಿ ಹೇಳಲ್ಪಟ್ಟ ಶಡ್ಗುಣೈಶ್ವರ್ಯ ಸಂಪನ್ನರಾದ ಬಾದರಾಯಣ ವೇದವ್ಯಾಸರು ‘ಓಂ’(ಆಯಿತು) ಎಂದು ಹೇಳಿದರು. ಅಶ್ವತ್ಥಾಮಾಚಾರ್ಯರು, ವೇದವ್ಯಾಸರಿಗೆ ನಮಸ್ಕರಿಸಿ, ಕನಸಿನಲ್ಲಿ ಕಂಡದ್ದನ್ನು  ನೆನಪಿಸಿಕೊಳ್ಳುತ್ತಾ ಅಲ್ಲಿಂದ ತೆರಳಿದರು.

 

ಸ್ವಪ್ನೇ ಹಿ ದ್ರೌಪದೇಯಾನಾಂ ವಧೋ ದೃಷ್ಟೋSತ್ಮನಾ ನಿಶಿ ।

ಅರ್ಜ್ಜುನೇನ ಪ್ರತಿಜ್ಞಾನಂ ದ್ರೌಪದ್ಯೈ ಸ್ವವಧಂ ಪ್ರತಿ ॥೨೮.೧೯೦॥

 

ನಿಬಧ್ಯಾSನಯನಂ ಚೈವ ತೇನೈವ ಶಿಬಿರಂ ಪ್ರತಿ ।

ಮುಞ್ಚೇತಿ ದ್ರೌಪದೀವಾಕ್ಯಂ ನೇತಿ ಭೀಮವಚಸ್ತಥಾ ॥೨೮.೧೯೧॥

 

ಕೃಷ್ಣವಾಕ್ಯಾನ್ಮಣಿಂ ಹೃತ್ವಾ ದೇಶಾನ್ನಿರ್ಯಾತನಂ ತಥಾ ।

ಇತ್ಯಾದಿ ಸ್ವಪ್ನದೃಷ್ಟಂ ಯತ್ ಪ್ರಾಯಃ ಸತ್ಯಮಭೂದಿತಿ ॥೨೮.೧೯೨॥

 

ತಾನು ದ್ರೌಪದಿಯ ಮಕ್ಕಳನ್ನು ಶಿಬಿರದಲ್ಲಿ ಹತ್ಯೆ ಮಾಡಿದ್ದುದು,

ತನ್ನನ್ನು ಕೊಲ್ಲುವುದಾಗಿ ದ್ರೌಪದಿ ಮುಂದೆ ಅರ್ಜುನ ಪ್ರತಿಜ್ಞೆಗೈದುದು,

ಅರ್ಜುನ ತನ್ನನ್ನು ಸೆರೆಹಿಡಿದು ಶಿಬಿರಕ್ಕೆ ಕರೆದೊಯ್ದುದ್ದುದು,

ದ್ರೌಪದಿ ಗುರುಪುತ್ರನಾದ ತನ್ನನ್ನು ಬಿಡುವಂತೆ ಹೇಳುವುದು,

ಆದರೆ ಭೀಮ ಅದನ್ನು ನಿರಾಕರಿಸಿ ಕೃಷ್ಣನ ಮಾತಿನಂತೆ ಮಣಿಯನ್ನು ಕಿತ್ತುಕೊಳ್ಳುವುದು,

ಮತ್ತು ತನ್ನನ್ನು ದೇಶದಿಂದ ಗಡಿಪಾರು ಮಾಡುವುದು.

ಹೀಗೆ ತಾನು ಕನಸಿನಲ್ಲಿ ಕಂಡ ಘಟನೆಗಳು ಪ್ರಾಯಃ ಸತ್ಯವಾದದ್ದನ್ನು ಅಶ್ವತ್ಥಾಮರು ಚಿಂತಿಸಿದುದು.

 

ಚಿನ್ತಯನ್ ಪ್ರಯಯೌ ದಾವಂ ದ್ರೌಣಿಃ ಶಸ್ತ್ರಭೃತಾಂ ವರಃ ।

ಸ ಕೃಷ್ಣೋಕ್ತಮಪಿ ಪ್ರಾಪ್ಯ ಬಾದರಾಯಣಶಿಷ್ಯತಾಮ್ ॥೨೮.೧೯೩॥

 

ಪ್ರಾಪ್ಯೋತ್ತರದ್ವಾಪರೇ ಚ ವೇದಾನ್ ಸಂವಿಭಜಿಷ್ಯತಿ ।

ತತಃ ಸಪ್ತರ್ಷಿರ್ಭೂತ್ವಾ ಪಾರಾಶರ್ಯ್ಯಪ್ರಸಾದತಃ ॥೨೮.೧೯೪॥

 

ಏಕೀಭಾವಂ ಸ್ವರೂಪೇಣ ಯಾಸ್ಯತ್ಯಚ್ಯುತನಿಷ್ಠಯಾ ।

ಕೃಪೋSಥ ಪಾಣ್ಡವಾನ್ ಪ್ರಾಪ್ಯ ಗೌರವಾತ್ ಪೂಜಿತಶ್ಚ ತೈಃ ॥೨೮.೧೯೫॥

 

ಅಭೂದಾಚಾರ್ಯ್ಯ ಏವಾಸೌ ರಾಜ್ಞಾಂ ತತ್ತನ್ತುಭಾವಿನಾಮ್ ।

ಬಾದರಾಯಣಶಿಷ್ಯತ್ವಂ ಪುನಃ ಪ್ರಾಪ್ಯ ಭಜನ್ನಮುಮ್  ॥೨೮.೧೯೬॥

 

ಸಾಕಂ ಸ್ವಭಾಗಿನೇಯೇನ ಭಾವ್ಯೇಕೋ ಮುನಿಸಪ್ತಕೇ ।

ಕೃತವರ್ಮ್ಮಾ ದ್ವಾರವತೀಂ ಯಯೌ ಕೃಷ್ಣಾನುಮೋದಿತಃ ॥೨೮.೧೯೭॥

 

ಹೀಗೆ ತನ್ನ ಕನಸನ್ನು ನೆನಪಿಸಿಕೊಳ್ಳುತ್ತಾ, ಅಗ್ರಗಣ್ಯರೆನಿಸಿಕೊಂಡ ಶಾಸ್ತ್ರವೇತ್ತ, ಅಶ್ವತ್ಥಾಮರು ತೆರಳಿದರು ಕಾಡಿನತ್ತ.          ಹಾಗೆಯೇ, ಅವರು ಕೃಷ್ಣನಿಂದ ಹೇಳಲ್ಪಟ್ಟ ಶಾಪ ಫಲವನ್ನು ಸಾವಿರ ವರ್ಷಗಳ ಕಾಲ ಅನುಭವಿಸುತ್ತಾರೆ, ನಂತರ ವೇದವ್ಯಾಸರ ಶಿಷ್ಯನಾಗಿ, ಮುಂದಿನ ದ್ವಾಪರಯುಗದಲ್ಲಿ ವೇದಗಳನ್ನು ವಿಭಾಗ ಮಾಡುತ್ತಾರೆ. ಮುಂದೆ ವ್ಯಾಸರ ಅನುಗ್ರಹದಿಂದ ಸಪ್ತರ್ಷಿಗಳಲ್ಲಿ ಒಬ್ಬನಾಗಿ,  ಹರಿಭಕ್ತಿಯಿಂದ ತನ್ನ ಸ್ವರೂಪದಲ್ಲಿ ಐಕ್ಯ ಹೊಂದುತ್ತಾರೆ.

 

ತದನಂತರ ಕೃಪಾಚಾರ್ಯರು ಪಾಂಡವರನ್ನು ಹೊಂದುತ್ತಾರೆ,

ಪಾಂಡವರ ಅತ್ಯಂತ ಗೌರವದ ಪೂಜೆಗೆ ಪಾತ್ರರಾಗುತ್ತಾರೆ.

ಪಾಂಡವರ ಸಂತತಿಯ ರಾಜರುಗಳಿಗೆ ಆಚಾರ್ಯರಾಗುತ್ತಾರೆ.

ಪಾಂಡವಸಂತತಿಯ ನಾಶದ ನಂತರ ಮತ್ತೆ ವ್ಯಾಸರ ಶಿಷ್ಯತ್ವ ಹೊಂದುತ್ತಾರೆ,

ವ್ಯಾಸರನ್ನೇ ಭಕ್ತಿಯಿಂದ ಸೇವಿಸಿ, ತನ್ನ ತಂಗಿಯ ಮಗ ಅಶ್ವತ್ಥಾಮರ ಕೂಡುತ್ತಾರೆ.

ಮುಂದೆ ಭಗವಂತನ ಅನುಗ್ರಹದಿಂದ ಸಪ್ತರ್ಷಿಗಳಲ್ಲಿ ಒಬ್ಬರಾಗುತ್ತಾರೆ.

ಕೃಷ್ಣನಿಂದ ಅನುಮತಿಯ ಪಡೆದುಕೊಂಡ, ಕೃತವರ್ಮನು ದ್ವಾರಕಾ ಪಟ್ಟಣಕ್ಕೆ ತೆರಳಿದ.

 

ಕೃಷ್ಣಾಯೈ ತಂ ಮಣಿಂ ದತ್ವಾ ಭೀಮಸ್ತಾಂ ಪರ್ಯ್ಯಸಾನ್ತ್ವಯತ್ ।

ವಿಕೋಪಾ ಭೀಮವಾಕ್ಯೇನ ರಾಜ್ಞೇ ಸಾ ಚ ಮಣಿಂ ದದೌ ॥೨೮.೧೯೮॥

 

ಭೀಮಸೇನನು ಅಶ್ವತ್ಥಾಮನಿಂದ ಪಡೆದ ಮಣಿಯನ್ನು ದ್ರೌಪದಿಗೆ ಕೊಟ್ಟು ಸಮಾಧಾನಪಡಿಸಿದನು.

ಭೀಮನ ಮಾತಿನಿಂದ ಪುತ್ರಸಂಹಾರ ಕೋಪವ ಕಳೆದುಕೊಂಡವಳು, ರಾಜಗರ್ಪಿಸಿದಳು ಭೀಮನಿತ್ತ ಮಣಿಯನ್ನು.

 

ರಾಜಾರ್ಹೇ ಹಿ ಮಣೌ ದತ್ತೇ ಮಹ್ಯಂ ಭೀಮೇನ ಲೌಕಿಕಾಃ ।

ಸ್ತ್ರೀಪಕ್ಷಪಾತಂ ರಾಜಾ ಚ ಶಙ್ಕೇಯುರ್ಮ್ಮಾರುತೇರಿತಿ ॥೨೮.೧೯೯॥

 

ಮಣಿಂ ರಾಜ್ಞೇ ದದೌ ಕೃಷ್ಣಾ ಭರ್ತ್ತೃಪ್ರಿಯಹಿತೇ ರತಾ ।

ಸೋSಪ್ಯಾಬದ್ಧ್ಯ ಮಣಿಂ ಮೂರ್ಧ್ನಿ ರೇಜೇ ರಾಜಾ ಗವಾಮಿವ ॥೨೮.೨೦೦॥

 

ಒಬ್ಬ ರಾಜ ಮಾತ್ರ ಧರಿಸಬಹುದಾದ ಮಣಿಯು ಭೀಮಸೇನನಿಂದ ದ್ರೌಪದಿಗಾಗಿ ಕೊಡಲ್ಪಟ್ಟಾಗ,

ಲೋಕದಲ್ಲಿ ಜನರು ಭೀಮ ಸ್ತ್ರೀಪಕ್ಷಪಾತಿ ಎಂದುಕೊಳ್ಳಬಾರದು ಎಂಬುದವಳ ಉನ್ನತ ಯೋಚನಾ ಭಾಗ.

ದ್ರೌಪದಿ ಗಂಡನಿಗೆ ಪ್ರಿಯವೂ ಮತ್ತು ಹಿತವಾದುದರಲ್ಲಿ ಆಸಕ್ತಳು,

ಅಂಥವಳು ಅಶ್ವತ್ಥಾಮನ ಮಣಿಯನ್ನು ಯುಧಿಷ್ಠಿರನಿಗೆ ಕೊಟ್ಟಳು.

ಅವನು, ಆ ಮಣಿಯನ್ನು ತಲೆಯಲ್ಲಿ ಧರಿಸಿದ,

ಸ್ವರ್ಗದ ಒಡೆಯನಾದ ಇಂದ್ರನಂತೆ ಶೋಭಿಸಿದ.

No comments:

Post a Comment

ಗೋ-ಕುಲ Go-Kula