Saturday 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 30: 141-179

 ನ ವೈ ಮುಮುಕ್ಷುರ್ನ್ನ ಬುಭೂಷುರತ್ರ ನ ವೈ ಪ್ರಪಿತ್ಸುಶ್ಚ ಕುತೋ ಬುಭುಕ್ಷುಃ ।

ಅಸತ್ಯಕಾಮಾ ಅಭವನ್ ಕುತಶ್ಚಿತ್ ಪ್ರದಾತರಿ ಪ್ರಾಜ್ಞವರೇSನಿಲಾತ್ಮಜೇ ॥ ೩೦.೧೪೧ ॥

 

ಪ್ರಾಜ್ಞರಲ್ಲಿಯೇ ಬಲು ಶ್ರೇಷ್ಠನಾದ, ಭೀಮನೇ ದಾನವಿಭಾಗದ ಮುಖ್ಯನಾಗಿದ್ದ.

ಪಾಂಡವರ ಆ ಅಶ್ವಮೇಧಯಾಗದಲ್ಲಿ, ಸಂತಸದಿಂದಿದ್ದರು ಮೋಕ್ಷಾಪೇಕ್ಷಿಗಳಲ್ಲಿ.

(ಯಾರೂ ಅಲ್ಲಿರಲಿಲ್ಲ ಅತೃಪ್ತ,   ಎಲ್ಲರೂ ಆಗಿದ್ದರು ಸಂತೃಪ್ತ).

ಅಯೋಗ್ಯ ಕಾಮನೆಯೇ ಇರಲಿಲ್ಲವಲ್ಲಿ.

 

ದಿನೇದಿನೇ ತತ್ರ ಮಹಾನ್ನಪರ್ವತಾಃ ಸಭಕ್ಷಸಾರಾ ರಸವನ್ತ ಊರ್ಜ್ಜಿತಾಃ ।

ನದ್ಯಃ ಪಯಃಸರ್ಪ್ಪಿರಜಸ್ರಪೂರ್ಣ್ಣಾಃ ಸಮಾಕ್ಷಿಕಾದ್ಯಾ ಅಪಿ ಪಾಯಸಹ್ರದಾಃ ॥ ೩೦.೧೪೨ ॥

 

ಹ್ರದಾ ಮಹಾನ್ತಸ್ತ್ರಿದಶಾದಿಯೋಗ್ಯಾಃ ಸುಯೋಗಯುಕ್ತಾ ಹರಿಚನ್ದನಾದೇಃ ।

ತಥಾsಞ್ಜನಾಲಕ್ತಕಮುಖ್ಯಮಣ್ಡನದ್ರವ್ಯಾಗ್ರ್ಯವಾಪ್ಯೋ ಮಣಿಕಾಞ್ಚನೋದ್ಭವಾಃ ॥ ೩೦.೧೪೩ ॥

 

ಯಥೇಷ್ಟಪಾನಾಶನಭೋಗಶಿಷ್ಟಾಃ ಸಹಸ್ರಶೋ ಮಾರುತಿನಾ ತು ಕಾರಿತಾಃ ।

ಗನ್ಧಾ ರಸಾದ್ಯಾಶ್ಚ ಸಮಸ್ತಭೋಗಾ ದಿವೀವ ತತ್ರಾSಸುರತೀವ ಹೃದ್ಯಾಃ ॥ ೩೦.೧೪೪ ॥

 

ಆ ಯಜ್ಞದಲ್ಲಿ ಇರುತ್ತಿತ್ತು ನಿತ್ಯ ಮಾಹಾನ್ನದ ಪರ್ವತ ,

ಭಕ್ಷಗಳು,ರಸಗಳು,ಹಾಲು,ತುಪ್ಪಶ್ರೀಖಂಡ ಸಮಸ್ತ,

ಪಾಯಸ ಇತ್ಯಾದಿಗಳು ಸರೋವರದಂತೆ ಯಥೇಚ್ಛ.

 

ಅಲ್ಲಿ ದೇವತೆಗಳಿಗೆ ಯೋಗ್ಯವಾಗಿರುವ ಒಳ್ಳೆಯ ಆಭರಣ, ಚಂದನ;

ಬಾವಿಯಂತಿದ್ದು ಒದಗಿಸುತ್ತಿತ್ತು ಅಲಕ್ತಕ (ಮದರಂಗಿ) ಮತ್ತು ಅಂಜನ .

ಆ ಬಾವಿಗೆ ಮುತ್ತು ಹಾಗೂ ಕಾಂಚನವೇ ಕಟ್ಟೆಯಾಗಿತ್ತು. 

ಬೇಕಾದಷ್ಟು ಪಾನೀಯ,ಆಹಾರ, ಹೀಗೆ ಎಲ್ಲವೂ ಇತ್ತು.

ಸಹಸ್ರಾರು ರೀತಿಯ ರಸಗಳು ಮತ್ತು ಗಂಧ,

ಎಲ್ಲಾ ಭೋಗ ಸಾಮಗ್ರಿಗಳ ವ್ಯವಸ್ಥೆಯಿಂದಹೊಂದಿಸಿಡಿಸಲ್ಪಟ್ಟಿತ್ತಲ್ಲಿ ಭೀಮಸೇನನಿಂದ.

 

ನೈತಾದೃಶಃ ಕಶ್ಚನ ಭೂತಪೂರ್ವೋ ಮಖೋ ವಿನಾ ರಾಮವಿರಿಞ್ಚವಜ್ರಿಣಾಮ್ ।

ಮಖಾನಿತಿ ಪ್ರೋಚುರಶೇಷಲೋಕಾ ದೃಷ್ಟ್ವಾ ಮಖಂ ತಂ ಪುರುಷೋತ್ತಮೇರಿತಮ್ ॥ ೩೦.೧೪೫ ॥

 

ರಾಮಚಂದ್ರ, ಚತುರ್ಮುಖ ಬ್ರಹ್ಮ, ಇಂದ್ರ, ಈ ಮೂರು ಜನರ ಯಜ್ಞ ಬಿಟ್ಟು ,

ಇನ್ನು ಯಾವ ಯಜ್ಞವೂ ಕೂಡಾ ಈರೀತಿ ಇರಲಿಲ್ಲ ಎಂದು ಹೇಳಿದರು ಒಟ್ಟು.

 

ಸ ಏವಮದ್ಧಾ ಹರಿದೈವತಃ ಕ್ರತುಃ  ಪಞ್ಚಾಶ್ವಮೇಧಾತ್ಮಕ ಉಚ್ಚಕಲ್ಪಃ ।

ದಿನೇದಿನೇ ಸ್ವೃದ್ಧಗುಣೋ ಬಭೂವ ಮುದಾವಹೋ ವತ್ಸರಪಞ್ಚಕತ್ರಯಮ್ ॥ ೩೦.೧೪೬ ॥

 

ಈರೀತಿಯಾಗಿ ಪರಮಾತ್ಮನನ್ನೇ ಪ್ರತ್ಯಕ್ಷ ದೇವತೆಯಾಗಿ ಒಳಗೊಂಡ,

ಐದು ಅಶ್ವಮೇಧಕ್ಕೆ ಸಮನಾಗಿ,ದಿನದಿಂದ ದಿನಕ್ಕೆ ಉತ್ಕೃಷ್ಟವಾಗಿ ನಡೆದ,

ಆ ಯಜ್ಞವು ಹದಿನೈದು ವರ್ಷಗಳ ಕಾಲ ನಡೆಯಿತು,

ಮತ್ತು ಅದು ಎಲ್ಲಾ ಸಜ್ಜನರಿಗೆ ಸಂತಸ ಉಂಟುಮಾಡಿತು.

 

ಯಜ್ಞಾವಸಾನೇ  ನಿಖಿಲಾಶ್ಚ ಪಾಣ್ಡವಾಃ ಕೃಷ್ಣಾ ಚ ಪೃಥ್ವೀಮಖಿಲಾಂ ಸವಿತ್ತಾಮ್ ।

ಮಙ್ಗಲ್ಯಮಾತ್ರಂ ದಯಿತಾಶರೀರೇ ನಿಧಾಯ ಸರ್ವಾಭರಣಾನಿ ಚೈವ ॥ ೩೦.೧೪೭ ॥

 

ಸಮರ್ಪ್ಪಯಾಮಾಸುರಜೇ ವರೇಣ್ಯೇ ವ್ಯಾಸೇ ವಿಭಾಗಾಯ ಯಥೋಕ್ತಮೃತ್ವಿಜಾಮ್ ।

ಪ್ರಿಯೋ ವಿಭಾಗೋ ಯದಮುಷ್ಯ ವಿಷ್ಣೋರತೋ ವಿಭಾಗಾರ್ತ್ಥಮಿವಾSರ್ಪ್ಪಯಂಸ್ತೇ ॥ ೩೦.೧೪೮ ॥

 

ಹೃದಾ ಸಮಸ್ತಂ ಹರಯೇSರ್ಪ್ಪಿತಂ ತೈಃ ಸ ಹಿ ದ್ವಿಜಸ್ಥೋSಪಿ ಸಮಸ್ತಕರ್ತ್ತಾ ।

ದೇಹೇನ್ದ್ರಿಯಪ್ರಾಣಮನಾಂಸಿ ಚೇತನೈಃ ಸಹೈವ ತಸ್ಮಾ ಅತಿಸೃಜ್ಯ ನೇಮುಃ ॥ ೩೦.೧೪೯ ॥

 

ಯಜ್ಞ ಮುಗಿದೊಡನೆ ದ್ರೌಪದಿ ಸಹಿತರಾದ ಎಲ್ಲಾ ಪಾಂಡವರು,

ಹಣದಿಂದ ಕೂಡಿದ ಎಲ್ಲಾ ಭೂಮಿಯನ್ನೂ ಕೂಡಾ ದಾನ ಮಾಡಿದರು.

ಅವರು ತಮ್ಮ ಹೆಂಡದಿರ ಮೈಮೇಲೆ ಇರುವ ಮಾಂಗಲ್ಯವನ್ನು ಬಿಟ್ಟು,

ಇತರ ಎಲ್ಲಾ ಆಭರಣಗಳನ್ನೂ ಕೂಡಾ ದಾನ ಎಂಬ ಭಾವದಿ ಕೊಟ್ಟು,

ವೇದವ್ಯಾಸರಲ್ಲಿ ವಿಭಾಗಮಾಡಿಕೊಡಲು ಸಮರ್ಪಣೆ ಮಾಡಿದ ಗುಟ್ಟು.

ಪರಮಾತ್ಮನಿಗೆ ಆ ರೀತಿಯಾಗಿ ಸಮರ್ಪಣೆ ಮಾಡುವುದು ಅತ್ಯಂತ ಪ್ರಿಯ.

ಹೀಗೆ  ಪಾಂಡವರದು ವೇದವ್ಯಾಸ ದೇವರಲ್ಲಿ ಎಲ್ಲವನ್ನೂ ಅರ್ಪಿಸಿದ ಹೃದಯ.

ಎಲ್ಲಾ ಬ್ರಾಹ್ಮಣರಲ್ಲಿ ಇರುವುದೂ ಆ ಪರಮಾತ್ಮನೇ ಆಗಿರುವುದರಿಂದ,        

ಪಾಂಡವರು ದೇಹೇoದ್ರಿಯ,ಪ್ರಾಣ, ಮನ, ಎಲ್ಲ ಕೊಟ್ಟರವನಿಗೆ ನಮನದಿಂದ.

 

ತ್ವದೀಯಮೇತನ್ನಿಖಿಲಂ ವಯಂ ಚ ನಾಸ್ತ್ಯಸ್ಮದೀಯಂ ಕ್ವಚ ಕಿಞ್ಚನೇಶ ।

ಸ್ವತನ್ತ್ರ ಏಕೋSಸಿ ನ ಕಶ್ಚಿದನ್ಯಃ ಸರ್ವತ್ರ ಪೂರ್ಣ್ಣೋSಸಿ ಸದೇತಿ ಹೃಷ್ಟಾಃ ॥ ೩೦.೧೫೦ ॥

 

ಅತ್ಯಂತ ಸಂತಸದಿಂದ ಪಾಂಡವರು ‘ಇದೆಲ್ಲವೂ ನಿನ್ನದು, ಇಲ್ಲಿ ನಮ್ಮದು ಎಂದು ಯಾವುದೂ ಕೂಡಾ ಇಲ್ಲ.

ನೀನು ಸರ್ವತಂತ್ರ ಸ್ವತಂತ್ರನಾಗಿದ್ದೀಯ, ನಿನಗಿಂತ ಸಮರ್ಥನಾಗಿರುವವನು ಇನ್ನ್ಯಾರೂ ಇಲ್ಲ.

ನೀನು ಎಲ್ಲಾ ಕಡೆಗಳಲ್ಲೂ ಯಾವಾಗಲೂ ಪೂರ್ಣನಾಗಿರುವೆ’ ಎಂದು ಹೇಳಿ ಸಮರ್ಪಿಸಿದರು ಎಲ್ಲಾ.

 

ತತೋ ವಿಭಕ್ತೇ ಮುನಯೋSವದಂಸ್ತೇ ಪ್ರತ್ಯರ್ಪ್ಪಯಾಮೋ ವಯಮೇಷು ರಾಜ್ಯಮ್ ।

ಪೂರ್ಣ್ಣಾ ಹಿರಣ್ಯೇನ ವಯಂ ಧರಾಯಾಃ ಪ್ರಪಾಲನೇ ಯೋಗ್ಯತಮಾ ಇಮೇ ಹಿ ॥ ೩೦.೧೫೧ ॥

 

ತದನಂತರ ವೇದವ್ಯಾಸರು ಎಲ್ಲವನ್ನೂ ವಿಭಾಗ ಮಾಡಿ ಕೊಡುತ್ತಿರಲು,

‘ನಾವು ಈ ಪಾಂಡವರಿಗೆ ರಾಜ್ಯ ಹಿಂತಿರುಗಿಸುತ್ತೇವೆ ಎಂದರು ಮುನಿಗಳು.

ಹಿರಣ್ಯಾದಿಗಳಿಂದಲೇ ನಾವು ತೃಪ್ತರು.

ನಾವು ಭೂಮಿ ಆಳಲಲ್ಲ ಯೋಗ್ಯರು. ಇವರಲ್ಲವೇ ಆಳುವುದಕ್ಕೆ ಯೋಗ್ಯರು?’

 

ಪಾರ್ತ್ಥಾಃ ಸಭಾರ್ಯ್ಯಾ ದ್ವಿಜವಾಕ್ಯಮೇತನ್ನಿಶಮ್ಯ ಕೃಷ್ಣಾಯ ಪುನಃ ಪ್ರಣಮ್ಯ ।

ಊಚುಸ್ತಪೋ ನೋSಸ್ತು ವನೇSರ್ಪ್ಪಯಿತ್ವಾ ರಾಜ್ಯಂ ಮಖಾನ್ತೇ ತ್ವಯಿ ಧರ್ಮ್ಮಲಬ್ಧಮ್ ॥ ೩೦.೧೫೨ ॥

 

ಹೆಂಡಂದಿರೊಡಗೂಡಿದ ಪಾಂಡವರು ಬ್ರಾಹ್ಮಣರ ಈ ಮಾತನ್ನು ಆಲಿಸಿ,

ಹೀಗೆ ಹೇಳುತ್ತಾರೆ ಅವರೆಲ್ಲಾ ವೇದವ್ಯಾಸದೇವರಿಗೆ ಮತ್ತೆ ನಮಸ್ಕರಿಸಿ,

‘ನಾವು ಕಾಡಿನಲ್ಲಿ ತಪಸ್ಸನ್ನು ಮಾಡಿಕೊಂಡು ಇರುತ್ತೇವೆ.

ನಿಮ್ಮಲ್ಲಿ ಈ ರಾಜ್ಯವನ್ನಿಟ್ಟು ನಾವು ಕಾಡಿಗೆ ಹೋಗುತ್ತೇವೆ’ .

 

ಇತೀರಿತಃ ಪ್ರಾಹ ಸ ಬಾದರಾಯಣೋ ಮುನೀಶ್ವರೈರಪ್ಯನುಯಾಚಿತಃ ಪ್ರಭುಃ ।

ಹಿರಣ್ಯಮೇವ ಸ್ವಮಿದಂ ಮುನೀನಾಂ ಮದಾಜ್ಞಯಾ ಭುಙ್ಗ್ಧ್ವಮಶೇಷರಾಜ್ಯಮ್ ॥ ೩೦.೧೫೩ ॥

 

ವೇದವ್ಯಾಸದೇವರು ಈರೀತಿಯಾಗಿ ಹೇಳಲ್ಪಡುತ್ತಾರೆ ,

ಮುನಿಗಳು ಕೂಡಾ ಪಾಂಡವರನ್ನು ತಡೆಯಿರಿ ಏನ್ನುತ್ತಾರೆ .

ಆಗ ವ್ಯಾಸರು ಹೇಳುತ್ತಾರೆ ‘ಮುನಿಗಳಿಗೆ ಬಂಗಾರವೇ ಅವರ ಹಣ.

ನನ್ನದಾಗಿರುವ ಈ ರಾಜ್ಯವ ನನ್ನಾಜ್ಞೆಯಂತೆ ನೀವಾಳುವುದು ಭೂಷಣ.

 

ಸಮರ್ಪ್ಪಿತಂ ಮೇ ಫಲವಚ್ಚ ತತ್ ಸ್ಯಾತ್ ಪುನರ್ಗ್ಗ್ರಹೋ ನೈವ ಚ ದೋಷಕಾರೀ ।

ಪಿತಾಮಹೋSಹಂ ಭವತಾಂ ವಿಶೇಷತೋ ಗುರುಃ ಪತಿಶ್ಚೈವ ತತೋ ಮದರ್ಹಥ ॥ ೩೦.೧೫೪ ॥

 

ನನಗೆ ಸಮರ್ಪಣೆ ಮಾಡಿರುವುದರಿಂದ ಇದು ಫಲ ,

ನಾನೇ ಕೊಡುತ್ತಿರುವುದರಿಂದ ದೋಷಕಾರಿ ಅಲ್ಲ.

ಅಷ್ಟೇ ಅಲ್ಲದೇ, ನಾನು ನಿಮ್ಮೆಲ್ಲರ ಅಜ್ಜ, ವಿಶೇಷವಾಗಿ ಗುರು.

ನಿಮ್ಮೊಡೆಯನಾಗಿರುವ ನನ್ನ ಸಂಪತ್ತಿಗೆ ನೀವು ಯೋಗ್ಯರು.

 

ಇತೀರಿತಾಸ್ತೇ ಪ್ರತಿಪದ್ಯ ರಾಜ್ಯಂ ದದುರ್ಹಿರಣ್ಯಂ ನಿಖಿಲಂ ಚ ತಸ್ಮೈ ।

ವಿಭಜ್ಯ ವಿಪ್ರಾನ್ ಸ ನಿಜಂ ತು ಭಾಗಮದಾತ್ ಪೃಥಾಯೈ ನಿಖಿಲಂ ಪ್ರಸನ್ನಃ ॥ ೩೦.೧೫೫ ॥

 

ಈರೀತಿಯಾಗಿ ಹೇಳಲ್ಪಟ್ಟ ಪಾಂಡವರು ರಾಜ್ಯವ ಹೊಂದುತ್ತಾರೆ,

ಎಲ್ಲಾ ದ್ರವ್ಯವನ್ನೂ ಕೂಡಾ ವೇದವ್ಯಾಸರಿಗೆ ಅರ್ಪಿಸುತ್ತಾರೆ.

ವ್ಯಾಸರು ಅದನ್ನು ಬ್ರಾಹ್ಮಣರಿಗೆ ವಿಭಾಗಿಸಿ ಕೊಡುತ್ತಾರೆ,

ತನ್ನದಾದ ದ್ರವ್ಯ ಭಾಗವನ್ನು ಕುಂತಿದೇವಿಗೆ  ನೀಡುತ್ತಾರೆ.

 

ಸಭಾರ್ಯ್ಯಕಾಣಾಂ ವರರತ್ನಭೂಷಣಾನ್ಯಶೇಷತಃ ಪುತ್ರಭುವಾಂ ಪ್ರದಾಯ ।

ಪೃಥಕ್ಪೃಥಗ್ ಯೋಗ್ಯವರಾನಥೈಭ್ಯಃ ಪ್ರಾದಾತ್ ಪ್ರಭುಸ್ತೇ ಮುದಿತಾಃ ಪ್ರಣೇಮುಃ ॥ ೩೦.೧೫೬ ॥

 

ಆನಂತರ ವ್ಯಾಸರು ಹೆಂಡಂದಿರಿಂದ ಕೂಡಿದ ತನ್ನ ಮೊಮ್ಮೊಕ್ಕಳಾದ ಪಾಂಡವರಿಗೆ,

ಆಭರಣ ಮೊದಲಾದವುಗಳನ್ನು ಕೊಟ್ಟು, ಯೋಗ್ಯವಾದ ವರವೀಯುತ್ತಾರವರಿಗೆ.

ಪ್ರತ್ಯೇಕ ಪ್ರತ್ಯೇಕವಾಗಿ ವರಗಳ ಕೊಟ್ಟರು. ತೃಪ್ತ ಪಾಂಡವರು ಸಂತಸದಿ ನಮಿಸಿದರು.

 

ತದ್ ಯಜ್ಞಪಞ್ಚಕಮಜಸ್ತ್ರಿಗುಣಾಂ ಸ ಏಭ್ಯಃ ಸದ್ದಕ್ಷಿಣಾಂ ಕ್ರತುಪತಿರ್ನ್ನಿಖಿಲಾಮವಾಪ್ಯ ।

ಚಕ್ರೇSಶ್ವಮೇಧತ್ರಯಮೇಕಮೇಕಂ ತೇಷಾಂ ಹರಿರ್ಬಹುಸುವರ್ಣ್ಣಕನಾಮಧೇಯಮ್ ॥ ೩೦.೧೫೭ ॥

 

ಪಾಂಡವರು ಹದಿನೈದು ವರ್ಷಗಳಲ್ಲಿ ನಡೆಸಿದ ಆ ಐದು ಅಶ್ವಮೇಧಯಜ್ಞ,                  

ಪಂಚಾತ್ಮಕನಾದ ಪರಮಾತ್ಮನಿಗೆ, ಪಂಚಾತ್ಮಕವಾದ ಜೀವಶಕ್ತಿಯಲ್ಲಿ ಯಜ್ಞ.

ಮೂರುಪಟ್ಟು ಕೊಟ್ಟ ದಕ್ಷಿಣೆಯೊಂದಿಗೆ, ಮೂರು ಭಗವದ್ರೂಪಗಳಿಗೆ ದೀವಿಗೆ.

ಹೀಗೆ ಸಮೀಚೀನವಾದ ದಕ್ಷಿಣೆ ಹೊಂದಿದ ಅಂಥಾ ‘ಬಹುಸುವರ್ಣಕ’ ಎಂಬ ಯಾಗ,

ಆ ಒಂದೊಂದು ಯಾಗವನ್ನು ವ್ಯಾಸರು ಮೂರು ಅಶ್ವಮೇಧವನ್ನಾಗಿಸಿದ ಯೋಗ.

(ಒಟ್ಟಿನಲ್ಲಿ ಅದು ಹದಿನೈದು ಅಶ್ವಮೇಧಕ್ಕೆ ಸಮನಾಗಿ ನಡೆದ ಅದ್ವಿತೀಯ ವೈಭೋಗ).

 

ಸಕೃಷ್ಣೇಷ್ವಥ ಪಾರ್ತ್ಥೇಷು ಸುಸ್ನಾತಾವಭೃಥೇಷ್ವಲಮ್ ।

ಪಞ್ಚೇನ್ದ್ರವದ್ ವಿರಾಜತ್ಸು ಸ್ತೂಯಮಾನೇಷ್ವೃಷೀಶ್ವರೈಃ ॥ ೩೦.೧೫೮ ॥

 

ಸ್ಥೂಯಮಾನೇ ಚ ತದ್ಯಜ್ಞೇ ಕ್ರೋಧೋ ನಕುಲತಾಂ ಗತಃ ।

ಕೃತ್ವೋಗ್ರಗರ್ಜ್ಜನಂ ಯಜ್ಞಂ ತಾಂಶ್ಚ ಯಜ್ಞಕೃತೋSಖಿಲಾನ್ ॥ ೩೦.೧೫೯ ॥

 

ಗರ್ಹಯನ್ನೂಚಿವಾನಿತ್ಥಂ ಭಾರ್ಯ್ಯಾಪುತ್ರಸ್ನುಷಾಯುತಃ ।

ಸತ್ತ್ಕುಪ್ರಸ್ಥಮದಾದ್ ವಿಪ್ರ ಉಞ್ಛವೃತ್ತಿಃ ಸುಭಕ್ತಿತಃ ॥ ೩೦.೧೬೦ ॥

 

ಧರ್ಮ್ಮಾಯಾತಿಥಯೇ ತಸ್ಯ ಕಲಾಂ ನಾರ್ಹತಿ  ಷೋಡಶೀಮ್ ।

ಯಜ್ಞೋSಯಮಿತಿ ಹೇತುಂ ಚ ವಿಪ್ರೈಃ ಪೃಷ್ಟೋSಭ್ಯಭಾಷತ ॥ ೩೦.೧೬೧ ॥

 

ಶ್ರೀಕೃಷ್ಣನಿಂದ ಸಹಿತರಾದ  ಪಾಂಡವರು ಯಜ್ಞದ ಕೊನೆಯಲ್ಲಿ ಮಾಡಿದರು ಅವಭೃತಸ್ನಾನ ,

ಐದು ಇಂದ್ರರಂತೆ ಶೋಭಿಸುತ್ತಿದ್ದರವರು, ಋಷಿಗಳೆಲ್ಲಾ ಸ್ತೋತ್ರ ಮಾಡುತ್ತಾ ಹೊಗಳಿದರು ಆ ಯಜ್ಞ.

ಅದೇ ಸಮಯದಿ ಕ್ರೋಧಾಭಿಮಾನಿಯಾದ ‘ಕ್ರೋಧ’ ನಾಮಕ ದೈತ್ಯನು ಮುಂಗುಸಿಯಾಗಿ ಬಂದ,

ಅವನು ಕ್ರೂರ ಗರ್ಜನೆಯನ್ನು ಮಾಡುತ್ತಾ, ಆ ಯಜ್ಞವನ್ನೂ, ಯಜ್ಞ ಮಾಡಿದವರನ್ನೂ ನಿಂದಿಸಿದ.

ಹೀಗೆ ಅವನು ಕಥೆಯೊಂದನ್ನು ಹೇಳಿದ –

‘ಹೆಂಡತಿ, ಮಗ ಹಾಗೂ ಸೊಸೆಯಿಂದ ಕೂಡಿರುವ ಒಬ್ಬ ಬ್ರಾಹ್ಮಣನಿದ್ದ.

ಅವನು ಉಞ್ಛವೃತ್ತಿಯಿಂದ (ಕೇವಲ ನೆಲದಲ್ಲಿ ಬಿದ್ದ ಧಾನ್ಯ ಆಹಾರವಾಗಿ ಬಳಸಿ) ಬದುಕುತ್ತಿದ್ದ.

(ಅದರಿಂದಾಗಿ ಅವನಿಗೆ ದಿನಾಲೂ ಊಟವಿರುತ್ತಿರಲಿಲ್ಲ ಎಂಬುದು ಸಿದ್ಧ). ಹೀಗಿರುವಾಗ ಒಮ್ಮೆ ಒಬ್ಬ ಅತಿಥಿ ಆ ಬ್ರಾಹ್ಮಣನ ಮನೆಗೆ ಬಂದ.

ಯಮಧರ್ಮನೇ ಅವರ ಪರೀಕ್ಷೆಗೆ ಅತಿಥಿ ವೇಷದಲ್ಲಿ ಬಂದಿದ್ದ.

ಹಾಗೆ ಬಂದ ಅತಿಥಿಗೆ ಆ ಬ್ರಾಹ್ಮಣ, ತಾವು ತಿನ್ನಲು ಇಟ್ಟುಕೊಂಡಿದ್ದ ಎಲ್ಲಾ ಹಿಟ್ಟನ್ನು ನೀಡಿದ.’

ಮುಂದುವರಿದು ಆ ದೈತ್ಯ ಅಲ್ಲಿ ಎಲ್ಲರನ್ನು ನಿಂದಿಸುತ್ತಾ ಹೇಳಿದ-

‘ ಆ ಬ್ರಾಹ್ಮಣ ಕೊಟ್ಟ ದಾನದ ಹದಿನಾರನೇ ಒಂದು ಭಾಗ ಈ ಯಜ್ಞ ಹೊಂದಿಲ್ಲ’ ಎಂದ.

ಆಗ ಬ್ರಾಹ್ಮಣರಿಂದ ಕಾರಣವನ್ನು ಕೇಳಲ್ಪಟ್ಟವನಾಗಿ ಅವನು ಹೀಗೆ ನುಡಿದ-

 

ಅತಿಥೇಸ್ತಸ್ಯ ಪಾದೋದಕ್ಲಿನ್ನಃ ಪಾರ್ಶ್ವೋ ಹಿರಣ್ಮಯಃ ।

ಏಕೋ ಮಮಾಭೂದಪರಃ ಸರ್ವತೀರ್ತ್ಥಾದಿಕೇಷ್ವಪಿ ॥ ೩೦.೧೬೨ ॥

 

ಮಜ್ಜತೋSವಭೃಥೇಷ್ವದ್ಧಾ ಯಜ್ಞಾನಾಮತ್ರ ಚಾSದರಾತ್ ।

ನಾಭೂದಿತ್ಯಥ ತತ್ತತ್ವವೇದಿಭಿರ್ಮ್ಮುನಿಪುಙ್ಗವೈಃ ॥ ೩೦.೧೬೩ ॥

 

ಕೃಷ್ಣೇನ ಚ ತಮೋSನ್ಧಂ ತಂ ಪ್ರಾಪಯದ್ಭಿಃ ಸ್ಮಿತೇ ಕೃತೇ ।

ಅದರ್ಶನಂ ಜಗಾಮಾSಶು ತಮಃ ಪ್ರಾಪ ಚ ಕಾಲತಃ ॥ ೩೦.೧೬೪ ॥

 

‘ಆ ಅತಿಥಿಯ ಪಾದವನ್ನು ತೊಳೆದ ಪವಿತ್ರ ನೀರಿನಿಂದ ಒದ್ದೆಯಾದ ನನ್ನ ಒಂದು ಭಾಗವು ಆಯಿತು ಬಂಗಾರ,

ಪ್ರತಿಯೊಂದು ತೀರ್ಥಸ್ನಾನ ಮಾಡಿದರೂ, ಯಜ್ಞದ ಅವಭೃತದಲ್ಲಿ ಸ್ನಾನ ಮಾಡಿದರೂ, ಇನ್ನೊಂದು ಭಾಗವಾಗಲಿಲ್ಲ ಬಂಗಾರ.

ಆ ದೈತ್ಯ ಈ ರೀತಿಯಾಗ ಹೇಳಿದಾಗ ಇದರ ರಹಸ್ಯ ಅಲ್ಲಿದ್ದ ಮುನಿಗಳಿಗೆಲ್ಲಾ ಅರ್ಥವಾಗಿ ಹೋಯಿತು.

ಆಗ ಶ್ರೀಕೃಷ್ಣ ಹಾಗೂ ಎಲ್ಲಾ ಋಷಿಗಳಿಂದ (ಅವನನ್ನು ಅಂಧತಮಸ್ಸಿಗೆ ತಳ್ಳಲು) ಒಂದು ಕಿರುನಗು ವ್ಯಕ್ತವಾಯಿತು. ಆಗ ಆ ದೈತ್ಯನು ಅಲ್ಲಿಂದ ಮಾಯವಾದ, ಕಾಲಕ್ರಮೇಣ ಅಂಧಂತಮಸ್ಸನ್ನು ಹೊಂದಿದ.

 

ತದರ್ತ್ಥಮೇವ ಹೈರಣ್ಯಃ ಪಾರ್ಶ್ವಸ್ತಸ್ಯಾಭವತ್ ಪುರಾ ।

ಕೃಷ್ಣಸ್ಯ ಪಾಣ್ಡವಾನಾಂ ಚ ಮಖಾದೇಶ್ಚ ಗುಣಾನ್ ಬಹೂನ್ ॥ ೩೦.೧೬೫ ॥

 

ವದನ್ತೋ ಭತ್ಸಯಾಞ್ಚಕ್ರುಸ್ತನ್ಮತಜ್ಞಾ ಮಧುದ್ವಿಷಃ ।

ಶ್ರಾದ್ಧಾರ್ಥಂ ಹಿ ಪಯಃ ಪೂರ್ವಂ ಜಮದಗ್ನೇರದೂಷಯತ್ ॥ ೩೦.೧೬೬ ॥

 

ನಾಕುಲೇನೈವ ರೂಪೇಣ ಕ್ರೋಧಸ್ತಂ ಪಿತರೋSಶಪನ್ ।

ಭವ ತ್ವಂ ನಕುಲಸ್ತಾವದ್ ಯಾವದ್ ಧರ್ಮ್ಮಾದಿಕಾನ್ ಸುರಾನ್  ॥ ೩೦.೧೬೭ ॥

 

ಕ್ಷೇಪ್ಸ್ಯಸೀತಿ ತಮೋ ಘೋರಂ ಭೂಯಃ ಪಾಪೇನ ಯಾತ್ವಯಮ್ ।

ಇತ್ಯಭಿಪ್ರೇತ್ಯ ತೈಃ ಶಪ್ತಸ್ತಥಾ ಕೃತ್ವಾ ತಮೋSಭ್ಯಯಾತ್ ॥ ೩೦.೧೬೮ ॥

 

ಪಾಂಡವರ ಯಾಗವನ್ನು ನಿಂದಿಸಿ ಅಂಧoತಮಸ್ಸನ್ನು ಹೊಂದಲಿಕ್ಕಾಗಿಯೇ ಮುಂಗುಸಿಯ ರೂಪದಲ್ಲಿರುವ ಆ ದೈತ್ಯನ ಒಂದು ಭಾಗ ಬಂಗಾರವಾಗಿತ್ತು.

ಶ್ರೀಕೃಷ್ಣನ,ಪಾಂಡವರ ಮತ್ತು ಯಜ್ಞದ ಗುಣಗಳನ್ನು ಸ್ತೋತ್ರಮಾಡುತ್ತಾ, ದೈತ್ಯನ ಕುರಿತ ಕೃಷ್ಣನಭಿಪ್ರಾಯವನ್ನು ತಿಳಿದ ಬ್ರಾಹ್ಮಣರಿಂದ ಅಸುರನ ನಿಂದೆಯಾಗಿತ್ತು.

 

(ಆ ಮುಂಗುಸಿ ರೂಪದ ದೈತ್ಯನ ಪೂರ್ವ ಕಥೆಯ ನಿರೂಪಣೆ-)

ಹಿಂದೆ ಜಮದಗ್ನಿಯು ಶ್ರಾದ್ಧಕ್ಕೆಂದೇ ಇಟ್ಟಿದ್ದ ಹಾಲಿನ ವಿವರಣೆ,

ಮುಂಗುಸಿಯಾಗಿ ಬಂದು ಅದನ್ನು ನೆಕ್ಕಿ ಅಪವಿತ್ರ ಮಾಡಿದವನೇ,

ಆದ ಆ ಕ್ರೋಧನಾಮಕ ದೈತ್ಯನನ್ನು ಕೋಪಗೊಂಡ ಪಿತೃದೇವತೆಗಳು ಹಿಂದೆಯೇ ಶಪಿಸಿದ್ದರು-

‘ಎಲ್ಲೀತನಕ ಯಮನಿರ್ಮಿತ ದೇವತೆಗಳನ್ನು ನಿಂದಿಸುತ್ತೀಯೋ, ಅಲ್ಲೀತನಕ ಮುಂಗುಸಿಯಾಗಿರು’.

ಅವರನ್ನು ನಿಂದಿಸಿದ ಪಾಪದಿಂದ ಅವನು ಅಂಧoತಮಸ್ಸನ್ನು ಕುರಿತು ಹೊಗಲಿ ಎನ್ನುವ ಅಭಿಪ್ರಾಯ,

ಅದೇ ರೀತಿಯಾಗಿ ಅವರಿಂದ ಅವನು ಶಪಿಸಲ್ಪಟ್ಟು ಹಾಗೇ ಮಾಡಿ ಹೊಂದಿದ ಅಂಧoತಮಸ್ಸಿನಾಶ್ರಯ.

 

ಯದ್ಯಪ್ಯಲ್ಪಧನತ್ಯಕ್ತಂ ವಿತ್ತಂ ಬಹುಫಲಂ ಭವೇತ್ ।

ತಥಾSಪ್ಯನನ್ತಫಲದಾಃ ಕರ್ತ್ತುರೇವ ಮಹಾಗುಣಾಃ ॥ ೩೦.೧೬೯ ॥

 

ಅತ್ಯಂತ ಅಲ್ಪವಾಗಿರುವ ದ್ರವ್ಯವುಳ್ಳ ಬಡವನಿಂದ ಕೊಡಲ್ಪಟ್ಟ ದಾನ,

ಬಹುಫಲದಾಯಕವಾದರೂ ಮಹಾಫಲ ಅದು ಕರ್ತೃವಿನ ಗುಣ ಜ್ಞಾನ.  

 

ಸತಾಂ ಪ್ರೀತಿಶ್ಚ ತತ್ರಾಪಿ ಸದ್ವರೋ ಹರಿರೇವ ಹಿ ।

ಪಾರ್ತ್ಥೇಭ್ಯೋSಭ್ಯಧಿಕಃ ಕರ್ತ್ತಾ ಸಮೋ ವಾ ಕೋ ಗುಣೈರ್ಭವೇತ್ ॥ ೩೦.೧೭೦ ॥

 

ಸಜ್ಜನರ ಪ್ರೀತಿಯೂ ಕೂಡಾ ಅನಂತ ಫಲವನ್ನು ಕೊಡುತ್ತದೆ.

ಸಜ್ಜನರಲ್ಲಿ ಅಗ್ರಗಣ್ಯ ಶ್ರೀನಾರಾಯಣನೆಂದು ಶಾಸ್ತ್ರ ಹೇಳುತ್ತದೆ.

ಜ್ಞಾನ-ಭಕ್ತಿ ಇತ್ಯಾದಿ ಮಹಾಗುಣವಂತರಲ್ಲಿ, ಪಾಂಡರಿಗಿಂತ ಮಿಗಿಲಾದವರು ಇರುವುದೆಲ್ಲಿ.

ಸಮಕರ್ತೃವೂ ಇಲ್ಲವೆಂಬುದೇ ಸ್ಪಷ್ಟವಿಲ್ಲಿ.

 

ಸತಾಂ ಚ ಪ್ರವರೋ ವಿಷ್ಣುಃ ಸದ್ಭಿರ್ಮ್ಮುನಿವರೈರ್ಯ್ಯುತಃ ।

ಪ್ರತ್ಯಕ್ಷತಃ ಕಾರಯತಿ ಪಾರ್ತ್ಥೈಃ ಪ್ರಿಯತಮೈಶ್ಚ ತೈಃ ॥ ೩೦.೧೭೧ ॥

 

ಯಂ ಮಖಪ್ರವರಂ ತಸ್ಯ ಸಮಂ ಕಿಂ ಶುಭಸಾಧನಮ್ ।

ಪಠನ್ತಿ ಪೈಙ್ಗಿನಶ್ಚೈತಾನ್ ಮನ್ತ್ರಾನನ್ವರ್ತ್ಥಕಾನಿಹ ॥ ೩೦.೧೭೨ ॥

 

ಸಜ್ಜನಶ್ರೇಷ್ಠನಾದ ವಿಷ್ಣುವಿನಿಂದಸಜ್ಜನರಾದ ಅನೇಕ ಮುನಿಶ್ರೇಷ್ಠರಿಂದ,

(ಉಳಿದ ಎಲ್ಲಾ ಸಜ್ಜನರ ಸಾಕ್ಷಿಯಿಂದ) ,

ತನಗೆ ಅತ್ಯಂತ ಪ್ರಿಯರಾದ ಪಾಂಡವರಿಂದ,

ಪ್ರತ್ಯಕ್ಷ ತಾನೇ ಇದ್ದು ಶ್ರೇಷ್ಠಯಜ್ಞ ಮಾಡಿಸಿದ.

ಆದ್ದರಿಂದ ಈ ಯಜ್ಞಕ್ಕೆ ಎಣೆಯಾಗಿರುವ ಪುಣ್ಯಸಾಧನವು ಯಾವುದಿದೆ?

ಪೈಙ್ಗಿ ಶ್ರುತಿ ಅಭ್ಯಾಸಿಗರು ಈ ಕುರಿತಾಗಿ ಅನ್ವರ್ಥಕಮಂತ್ರಗಳ ಹೇಳಿದ್ದಿದೆ-

 

‘ಅವೈಷ್ಣವಕೃತಂ ಕರ್ಮ್ಮ ಸರ್ವಮನ್ತವದುಚ್ಯತೇ ।

‘ಅನನ್ತಂ ವೈಷ್ಣವಕೃತಂ ತತ್ರ ವರ್ಣ್ಣಕ್ರಮಾತ್ ಪರಮ್ ॥ ೩೦.೧೭೩ ॥

 

 

‘ವೈಷ್ಣವೇಷ್ವಪಿ ಮರ್ತ್ತ್ಯೈರ್ಯ್ಯತ್ ಕೃತಂ ಶತಗುಣಂ ತತಃ ।

‘ಗಾನ್ಧರ್ವಂ ಕರ್ಮ್ಮ ತಸ್ಮಾಚ್ಚ ಮುನಿಭಿಃ  ಪಿತೃಭಿಸ್ತತಃ ॥ ೩೦.೧೭೪ ॥

 

‘ದೇವಶಕ್ರಶಿವಬ್ರಹ್ಮಕೃತಂ ತಸ್ಮಾತ್ ಕ್ರಮೇಣ ಚ ।

‘ಶತೋತ್ತರಮಿತಿ ಜ್ಞೇಯಂ ನಾನ್ಯದ್ ಬ್ರಹ್ಮಕೃತೋಪಮಮ್ ॥ ೩೦.೧೭೫ ॥

 

‘ವೈಷ್ಣವತ್ವಂ ಕ್ರಮೋದ್ವೃದ್ಧಂ ಬ್ರಹ್ಮಾನ್ತಂ ಜೀವರಾಶಿಷು ।

‘ಫಲಾಧಿಕ್ಯಂ ಕರ್ಮ್ಮಣಾಂ ಹಿ ವಿಷ್ಣೋಃ ಪ್ರೀತ್ಯೈವ ನಾನ್ಯಥಾ ’ ॥ ೩೦.೧೭೬ ॥

 

ವಿಷ್ಣುಭಕ್ತರಲ್ಲದವರಿಂದ ಮಾಡಲ್ಪಟ್ಟ ಎಲ್ಲಾ ಕರ್ಮವೂ ಕೂಡಾ ಅಲ್ಪಫಲವುಳ್ಳದ್ದಾಗಿದೆ.

ವೈಷ್ಣವರ ಕರ್ಮಕ್ಕೆ ಅನಂತ ಫಲ ಮತ್ತದರ ಉತ್ತಮತ್ವ ಬ್ರಾಹ್ಮಣಾದಿ ವರ್ಣಕ್ರಮದಲ್ಲಿದೆ.

 

ವೈಷ್ಣವರಲ್ಲಿ ಕೂಡಾ, ಮನುಷ್ಯರು ಮಾಡಿದ ಕರ್ಮಕ್ಕಿಂತಲೂ ಗಂಧರ್ವರು ಮಾಡಿದ ಕರ್ಮ ಶತಗುಣ ಅಧಿಕ,

ಗಂಧರ್ವರ ಕರ್ಮಕ್ಕಿಂತ ಪಿತೃಗಳ ಕರ್ಮ ಶತಗುಣ ಅಧಿಕ,

ಹಾಗೇ ಮುನಿಗಳು, ದೇವತೆಗಳು, ಇಂದ್ರ, ಶಿವ, ಹಾಗು ಬ್ರಹ್ಮಾದಿಗಳ, ಕರ್ಮ ಇದೇ ಕ್ರಮದಲ್ಲಿ ನೂರು-ನೂರು ಪಟ್ಟು ಅಧಿಕ. ಬ್ರಹ್ಮನಿಗೆ ಎಣೆಯಾಗಿ ಯಾರೂ ಕೂಡಾ ಯಾವ ಕರ್ಮವನ್ನೂ ಮಾಡಲು ಸಾಧ್ಯವಿಲ್ಲ. ವಿಷ್ಣುಭಕ್ತಿ ಎನ್ನುವುದು ಬ್ರಹ್ಮನ ತನಕ ಕ್ರಮವಾಗಿ ಹೆಚ್ಚಾಗುತ್ತಾ ಬರುವ ದೈವಜಾಲ. ಕರ್ಮಗಳ ಅಧಿಕಫಲಪ್ರದತ್ವ ನಾರಾಯಣನ ಪ್ರೀತಿಯಿಂದಲೇ ಹೊರತು ಬೇರೆ ರೀತಿ ಇಲ್ಲ.

 

ಇತಿ ತೇನ ನ ಪಾರ್ತ್ಥಾನಾಂ ಕರ್ಮ್ಮಣಾSನ್ಯತ್  ಸಮಂ ಕ್ವಚಿತ್ ।

ಗುಣೈರ್ಜ್ಞಾನಾದಿಭಿರ್ವಾSಪಿ ತಸ್ಮಾತ್ ಕ್ರೋಧಃ ಸ ತಾಮಸಃ ।

ವಿನಿನ್ದ್ಯ ತಾನ್ ಸುಸತ್ತ್ವಸ್ಥಾಂಸ್ತಮೋSನ್ಧಮುಪಜಗ್ಮಿವಾನ್ ॥ ೩೦.೧೭೭ ॥

 

ಈ ರೀತಿ ಇರುವುದರಿಂದ ಗುಣದಿಂದಾಗಲೀ, ಜ್ಞಾನಾದಿಗಳಿಂದಾಗಲೀ,

ಪಾಂಡವರ ಕರ್ಮಕ್ಕಿಂತ ಮಿಗಿಲಾದ ಅಥವಾ ಸಮನಾದ ಇನ್ನೊಂದು ಕರ್ಮವೇ ಇಲ್ಲ. 

ಆ ಕಾರಣದಿಂದ ತಮೋಗುಣದ ಆ ಕ್ರೋಧ ದೈತ್ಯನು ಅತ್ಯಂತ ಸಾತ್ವಿಕರಾಗಿರುವ ಪಾಂಡವರನ್ನು ನಿಂದಿಸಿ, ಅಂಧತಮಸ್ಸನ್ನು ಹೊಂದಿದ್ದರಲ್ಲಿ ಆಶ್ಚರ್ಯವಿಲ್ಲ.

 

ಅಥ ಪೃಷ್ಟೋ ವಾಸುದೇವಃ ಸುರವಿಪ್ರಾದಿಸಂಸದಿ ।

ಯುಧಿಷ್ಠಿರೇಣ ಸಂಹೃಷ್ಟೋ ಜಗಾದಾಶೇಷತಃ ಪ್ರಭುಃ ॥ ೩೦.೧೭೮ ॥

 

ಆನಂತರ ದೇವತೆಗಳು, ಬ್ರಾಹ್ಮಣರು, ಮೊದಲಾದವರು ಸೇರಿರುವ ಸಭೆಯಲ್ಲಿ, ಯುಧಿಷ್ಠಿರನಿಂದ ಕೇಳಲ್ಪಟ್ಟ ಶ್ರೀಕೃಷ್ಣನು, ಸಮಗ್ರವಾದ ಧರ್ಮಾದಿಗಳನ್ನು ಹೇಳಿದನಲ್ಲಿ.

(ಈ ವಿವರಣೆ ಇದೆ ವೈಷ್ಣವಧರ್ಮಪರ್ವ ಎಂದು ಆಶ್ವಮೇಧಿಕ ಪರ್ವದ ಕೊನೆಯಲ್ಲಿ).

 

ತೇ ಚ ಶ್ರುತ್ವಾSಖಿಲಾನ್ ಧರ್ಮ್ಮಾನ್ ಭಕ್ತ್ಯಾ ಪರಮಯಾ ಯುತಾಃ ।

ಪೂಜಯನ್ತೋ ಜಗನ್ನಾಥಮಾಪುಶ್ಚ ಪರಮಾಂ ಮುದಮ್ ॥ ೩೦.೧೭೯ ॥

 

ಉತ್ಕೃಷ್ಟವಾದ ಭಕ್ತಿಯಿಂದ ಕೂಡಿದ ಆ ಪಾಂಡವರು ,

ಶ್ರೀಕೃಷ್ಣ ಹೇಳಿದ ಎಲ್ಲಾ ಧರ್ಮಗಳನ್ನೂ ಆಲಿಸಿದರು,

ನಾರಾಯಣನನ್ನು ಪೂಜಿಸುವವರಾದರು, ಉತ್ಕೃಷ್ಟವಾದ ಆನಂದವನ್ನು ಹೊಂದಿದರು.

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಯಾಗಸಮಾಪ್ತಿರ್ನ್ನಾಮ ತ್ರಿಂಶೋSದ್ಧ್ಯಾಯಃ ॥

 

[ ಆದಿತಃ ಶ್ಲೋಕಾಃ ೪೭೪೫+೧೭೯=೪೯೨೪ ]

 

 

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ,

ಯಾಗಸಮಾಪ್ತಿ ಎಂಬ ಹೆಸರಿನ ಮೂವತ್ತನೇ ಅಧ್ಯಾಯ,

ಶ್ರೀಕೃಷ್ಣ,ಭೀಮಸೇನರ ಅಡಿಗಳಿಗರ್ಪಿಸಿದ ಧನ್ಯಭಾವ.

*********

No comments:

Post a Comment

ಗೋ-ಕುಲ Go-Kula