Saturday 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 28: 31-78

 

ದಿವ್ಯಾಸ್ತ್ರೈರಪಿ ಸಂಯೋಜ್ಯ ತಾಂ ತದಾ ಧರ್ಮ್ಮನನ್ದನಃ ।

ಸತ್ಯಧರ್ಮ್ಮಫಲೈಶ್ಚೈವ ಚಿಕ್ಷೇಪಾಸ್ಯ ಹೃದಿ ತ್ವರನ್ ॥೨೮.೩೧॥

 

ಧರ್ಮಜ ಆ ಶಕ್ತಿಯನ್ನು ಶ್ರೇಷ್ಠವಾದ ಅಸ್ತ್ರ ಮಂತ್ರಗಳಿಂದ ಅಭಿಮಂತ್ರಣಮಾಡಿದ,

ಸತ್ಯ ಧರ್ಮಗಳ ಪುಣ್ಯಗಳಿಂದ ಕೂಡಿಸಿ ಶಲ್ಯನ ಹೃದಯದಲ್ಲಿ ಶೀಘ್ರದಲ್ಲಿ ಎಸೆದ.  

 

ಸ ಭಿನ್ನಹೃದಯೋ ಭೂಮೌ ಪಪಾತಾಭಿಮುಖೋ ನೃಪಮ್ ।

ಸತ್ಯಧರ್ಮ್ಮರತಃ ಶಲ್ಯ ಇನ್ದ್ರಸ್ಯಾತಿಥಿತಾಮಗಾತ್ ॥೨೮.೩೨॥

 

ಶಲ್ಯನು ಸೀಳಲ್ಪಟ್ಟ ಎದೆಯುಳ್ಳವನಾಗಿ,  ಧರ್ಮಜನಿಗೆ ಎದುರಾಗಿ ನೆಲಕ್ಕೆ ಬಿದ್ದ.

ಹೀಗೆ ಸತ್ಯ-ಧರ್ಮದಲ್ಲಿ ರತನಾಗಿರುವ ಶಲ್ಯರಾಜನು ಇಂದ್ರನ ಅತಿಥಿಯಾದ.

 

ಮದ್ರರಾಜೇ ಹತೇ ವೀರೇ ಸುಶರ್ಮ್ಮಾSರ್ಜ್ಜುನಮಭ್ಯಯಾತ್ ।

ಸಂಶಪ್ತಕಾವಶಿಷ್ಟೈಸ್ತಮನಯನ್ಮೃತ್ಯವೇSರ್ಜ್ಜುನಃ ॥೨೮.೩೩॥

 

ವೀರನಾಗಿರುವ ಮದ್ರರಾಜ ಶಲ್ಯನಿಗೆ ಈರೀತಿಯಾಗಿ ಒದಗಿ ಬರಲು ಮರಣ,

ತ್ರಿಗರ್ತರಾಜ ಸುಶರ್ಮ ಅಳಿದುಳಿದ ಸಂಶಪ್ತಕರೊಡನೆ ಎದುರಿಸಿದ ಅರ್ಜುನನ್ನ. ಸುಶರ್ಮನನ್ನು ಅವನ ಸೇನೆಯ ಜೊತೆಗೆ ಯಮನಲ್ಲಿಗೆ ಕಳುಹಿಸಿದನು ಅರ್ಜುನ.

 

ದುರ್ಯ್ಯೋಧನಸ್ಯಾವರಜಾನವಿಶಿಷ್ಟಾನ್ ವೃಕೋದರಃ ।

ಸರ್ವಾನ್ ಜಘಾನ ಸೇನಾಂ ಚ ನಿಶ್ಯೇಷಮಕರೋದ್ ರಣೇ ॥೨೮.೩೪॥

 

ಭೀಮನು ಉಳಿದ ಎಲ್ಲಾ ದುರ್ಯೋಧನನ ತಮ್ಮಂದಿರನ್ನು ಕೊಂದ,

ಆನಂತರ ಭೀಮ ಶತ್ರು ಸೇನೆಯನ್ನೂ ಕೂಡಾ ನಿಶ್ಯೇಷ ಮಾಡಿದ.

 

ಉಲೂಕಂ ಸಹದೇವೋSಥ ಶಕುನಿಂ ಚಾತಿಪಾಪಿನಮ್ ।

ಜಘಾನ ದ್ರೌಣಿಹಾರ್ದ್ದಿಕ್ಯಕೃಪಾನ್ ಭೀಮಾರ್ಜ್ಜುನೌ ತತಃ ॥೨೮.೩೫॥

 

ಬಹುಶೋ ವಿರಥೀಕೃತ್ಯ ಪೀಡಯಿತ್ವಾ ಪುನಃಪುನಃ ।

ದ್ರಾವಯಾಮಾಸತುಸ್ತೇ ತು ಭೀಷಿತಾ ವಿವಿಶುರ್ವನಮ್ ॥೨೮.೩೬॥

 

ಉಲೂಕನನ್ನು, ಅತ್ಯಂತ ಪಾಪಿಷ್ಠನಾದ ಶಕುನಿಯನ್ನೂ ಕೂಡಾ ಸಹದೇವ ಕೊಂದುಹಾಕುತ್ತಾನೆ ,

ಆನಂತರ ಭೀಮಾರ್ಜುನರು ಅಶ್ವತ್ಥಾಮ, ಕೃತವರ್ಮ, ಕೃಪಾಚಾರ್ಯರನ್ನು ಮಾಡಿದರು ರಥಹೀನರನ್ನೆ.

ಬಾರಿ ಬಾರಿ ಹಾಗೆ ಮಾಡಿ, ಮತ್ತೆ ಮತ್ತೆ ಪೀಡಿಸಿ ಓಡಿಸಿದರು.

ಆ ಮೂವರೂ ಭಯಗೊಂಡು ಕಾಡಲ್ಲಿ  ಅವಿತುಕೊಂಡರು .  

 

ಶೈನೇಯೇನ ಗೃಹೀತೋSಥ ಸಞ್ಜಯೋSನನ್ತಶಕ್ತಿನಾ ।

ವ್ಯಾಸೇನ ಮೋಚಿತೋSಥೈಕಃ ಪಾರ್ತ್ಥಾನ್ ದುರ್ಯ್ಯೋಧನೋSಭ್ಯಯಾತ್ ॥೨೮.೩೭॥

 

ತದನಂತರ ಸಾತ್ಯಕಿಯಿಂದ ಹಿಡಿಯಲ್ಪಟ್ಟ ಸಂಜಯನು,

ಅನಂತಶಕ್ತಿಯುಳ್ಳ ಆ ವೇದವ್ಯಾಸರಿಂದ ಬಿಡಿಸಲ್ಪಟ್ಟನು.

ಉಳಿದ ಒಬ್ಬನೇ ಕೌರವ ಪಾಂಡವರನ್ನು ಎದುರುಗೊಂಡನು.

 

ತೇಷಾಮಭೂತ್ ತಸ್ಯ ಚ ಘೋರರೂಪಂ ಯುದ್ಧಂ ಸ ಬಾಣೈರ್ಬಹುಶೋSರ್ಜ್ಜುನಂ ಚ ।

ಚಕಾರ ಮೂರ್ಚ್ಛಾಭಿಗತಂ ಯುಧಿಷ್ಠಿರಂ ಯಮಾವಯತ್ನಾದ್ ವಿರಥಾಂಶ್ಚಕಾರ ॥೨೮.೩೮॥

 

ನಡೆಯಿತು ಪಾಂಡವರಿಗೂ ಮತ್ತು ದುರ್ಯೋಧನನಿಗೂ ಘೋರರೂಪವಾದ ಯುದ್ಧ,

ಅವನು ಬಹಳ ಬಾರಿ ಅರ್ಜುನನನ್ನು ಬಾಣಗಳಿಂದ ಮೂರ್ಛೆಗೊಳಗಾಗುವಂತೆ ಮಾಡಿದ.

ಯುಧಿಷ್ಠಿರ, ನಕುಲ ಸಹದೇವರನ್ನೂ, ಯಾವುದೇ ಪ್ರಯತ್ನವಿಲ್ಲದೇ ರಥಹೀನರನ್ನಾಗಿ ಮಾಡಿದ.

 

ತಂ ಭೀಮಸೇನೋ ವಿರಥಂ ಚಕಾರ ಗಜಂ ಸಮಾರುಹ್ಯ ಪುನಃ ಸಮಭ್ಯಯಾತ್ ।

ಪುನಶ್ಚ ಶೈನೇಯಶಿಖಣ್ಡಿಪಾರ್ಷತಾನ್  ಯಮೌ ನೃಪಂ ಚ ವ್ಯದಧಾನ್ನಿರಾಯುಧಾನ್ ॥೨೮.೩೯॥

 

ಭೀಮಸೇನನು ದುರ್ಯೋಧನನನ್ನು ರಥಹೀನರನ್ನಾಗಿ ಮಾಡಿದ.

ಆಗ ದುರ್ಯೋಧನನು ಆನೆಯೊಂದನ್ನು ಏರಿ ಮತ್ತೆ ಬಂದ.

ದುರ್ಯೋಧನ ಮತ್ತೆ ಸಾತ್ಯಕಿ, ಶಿಖಂಡಿ, ಧೃಷ್ಟದ್ಯುಮ್ನರನ್ನೂ,

ನಿರಾಯುಧರ ಮಾಡಿದ ನಕುಲ ಸಹದೇವರನ್ನೂ, ಧರ್ಮರಾಜನನ್ನೂ .

 

ಗಜೇ ಚ ಭೀಮೇನ ಶರೈರ್ನ್ನಿಪಾತಿತೇ ಸಮಾರುಹದ್ ವಾಜಿವರಂ ಸುನಿರ್ಭಯಃ ।

ಸ ತೇನ ಚ ಪ್ರಾಸಕರೋ ರಣೇSರಿಹಾ ಚಚಾರ ಶೈನೈಯಮತಾಡಯಚ್ಚ ॥೨೮.೪೦॥

 

ಭೀಮಸೇನ ದುರ್ಯೋಧನನ ಆನೆಯನ್ನು ಕೊಂದ,

ಯಾವುದೇ ಭಯವಿಲ್ಲದೇ ಕುದುರೆಯನ್ನು ಏರಿಬಂದ,

ಪ್ರಾಸವೆಂಬ ಆಯುಧವನ್ನು ಹಿಡಿದು ಸಂಚಾರ ಮಾಡಿದ,

ಮತ್ತು ಆ ಆಯುಧದಿಂದ ಸಾತ್ಯಕಿಯನ್ನು ಹೊಡೆದ.

 

ಮುಮೋಹ ತೇನಾಭಿಹತಃ ಸ ಸಾತ್ಯಕಿರ್ಯ್ಯಮಾವಪಿ ಪ್ರಾಸನಿಪೀಡಿತೌ ರಥೇ ।

ನಿಷೀದತರ್ದ್ಧರ್ಮ್ಮಸುತಂ ಪ್ರಯಾನ್ತಂ ಸಮೀಕ್ಷ್ಯ ಭೀಮೋSಸ್ಯ ಜಘಾನ ವಾಜಿನಮ್ ॥೨೮.೪೧॥

 

ಅವನಿಂದ ಹೊಡೆಯಲ್ಪಟ್ಟ ಸಾತ್ಯಕಿಯು ಮೂರ್ಛೆ ಹೊಂದಿದನಾಗ,

ನಕುಲ ಸಹದೇವರೂ ರಥದಲ್ಲಿ ಪ್ರಾಸ ಹೊಡೆತದಿಂದ ಕುಸಿವರಾಗ.     

ಧರ್ಮರಾಜನನ್ನು ಕುರಿತು ತೆರಳುತ್ತಿರುವ ದುರ್ಯೋಧನನ,

ನೋಡಿ ಭೀಮಸೇನನು ಕೊಂದುಹಾಕಿದ ಅವನ ಕುದುರೆಯನ್ನ.

 

ಪ್ರಾಸೇ ನಿಕೃತ್ತೇ ಚ ವೃಕೋದರೇಣ ವಿವಾಹನಃ ಸೋSಪಯಯೌ ಸುಯೋಧನಃ ।

ಆದಾಯ ಗುರ್ವೀಂ ಚ ಗದಾಂ ಪ್ರಯಾತೋ ದ್ವೈಪಾಯನಸ್ಯೋರು ಸರೋ ವಿವೇಶ ॥೨೮.೪೨॥

 

ಭೀಮಸೇನನಿಂದ ಪ್ರಾಸವೂ ಕೂಡಾ ಕತ್ತರಿಸಲ್ಪಡಲು,

ವಾಹನವಿಲ್ಲದ ಸುಯೋಧನ ದೊಡ್ಡಗದೆ ಹಿಡಿದು ಓಡಲು,

ಹಾಗೆ ಓಡುತ್ತಾ, ಪ್ರವೇಶಿಸಿದ ದ್ವೈಪಾಯನ ಸರೋವರದ ಒಡಲು.

 

ಏವಮಕ್ಷೋಹಿಣೀಷಟ್-ಕಂ ಭೀಮೇನ ನಿಹತಂ ರಣೇ ।

ಪಞ್ಚ ಪಾರ್ತ್ಥೇನ ನಿಹತಾ ಅರ್ದ್ಧಂ ಕಾಲಿಙ್ಗಕಾನೃತೇ ॥೨೮.೪೩॥

 

ಏಕಾದಶಾಕ್ಷೋಹಿಣೀಭ್ಯಃ ಶಿಷ್ಟಮನ್ಯೈರ್ನ್ನಿಸೂದಿತಮ್ ।

ಅಕ್ಷೋಹಿಣೀಚತುಷ್ಕಂ ಚ ಪಾರ್ತ್ಥಾನಾಂ ದ್ರೌಣಿನಾ ಹತಮ್ ॥೨೮.೪೪॥

 

ಅನ್ಯೈರನ್ಯಾಃ ಸಮಸ್ತೈಶ್ಚ ದ್ರೋಣಕರ್ಣ್ಣಮಹಾಬ್ರತಾಃ ।

ದುರ್ಯ್ಯೋಧನೋ ಭೌಮಸೂನುಃ ಪ್ರಾಯಃ ಸೇನಾಹನಃ ಕ್ರಮಾತ್  ॥೨೮.೪೫॥

 

ಈ ಪ್ರಕಾರವಾಗಿ ಭೀಮಸೇನನಿಂದ ಯುದ್ಧದಲ್ಲಿ ಆರು ಅಕ್ಷೋಹಿಣಿ ಸಂಹರಿಸಲ್ಪಟ್ಟಿತು.

ಕಾಲಿಂಗ ದೇಶದವರನ್ನು ಬಿಟ್ಟು, ಅರ್ಜುನನಿಂದ ಕೌರವಸೈನ್ಯದ ಅರ್ಧಾಂಶ ಕೊಲ್ಲಲ್ಪಟ್ಟಿತು.

 

ಇನ್ನು ಕೌರವರ ಹನ್ನೊಂದು ಅಕ್ಷೋಹಿಣಿಯಲ್ಲಿ ಉಳಿದ ಭಾಗವನ್ನು ಉಳಿದ ಎಲ್ಲರೂ ಸೇರಿ ಕೊಲ್ಲುತ್ತಾರೆ,             

ಪಾಂಡವರ ನಾಲ್ಕು ಅಕ್ಷೋಹಿಣಿಯನ್ನು ಅಶ್ವತ್ಥಾಮ ಕೊಂದರೆ,ಉಳಿದ ಮೂರು ಅಕ್ಷೋಹಿಣಿಯನ್ನು ದ್ರೋಣ, ಕರ್ಣ, ದುರ್ಯೋಧನ, ಭಗದತ್ತರು ಕೊಲ್ಲುತ್ತಾರೆ . 

 

ಜಯಂ ಲಬ್ಧ್ವಾ ನದತ್ಸೂಚ್ಚೈಃ ಪಾಣ್ಡವೇಷು ಮಹಾತ್ಮಸು ।

ದುರ್ಯ್ಯೋಧನೋ ಜಲಸ್ತಮ್ಭಂ ಕೃತ್ವಾ ಮನ್ತ್ರಾನ್ ಜಜಾಪ ಹ ॥೨೮.೪೬॥

 

ಗೆಲುವು ಹೊಂದಿ,ಎಲ್ಲಾ ಪಾಂಡವರೂ, ಕೂಡಾ ಗಟ್ಟಿಯಾಗಿ ಘರ್ಜಿಸುತ್ತಿದ್ದರು.

ದುರ್ಯೋಧನ ಜಲಸ್ತಂಭನ ಮಾಡಿಕೊಂಡ, ಕುಳಿತು ಮಂತ್ರ ಜಪ ಮಾಡಲಾರಂಭಿಸಿದ.

 

ಮನ್ತ್ರಾ ದುರ್ವಾಸಸಾ ದತ್ತಾ ಮೃತಸಞ್ಜೀವನಪ್ರದಾಃ ।

ಜಲೇ ಸ್ಥಿತ್ವಾ ಜಪನ್ ಸಪ್ತದಿನೈಃ ಸರ್ವಾನ್ ಮೃತಾನಪಿ ॥೨೮.೪೭॥

 

ಉದ್ಧರೇದ್ ಧಾರ್ತ್ತರಾಷ್ಟ್ರೋSಯಂ ಸ್ಯುರವದ್ಧ್ಯಾಶ್ಚ ತೇ ಪುನಃ ।

ಇತಿ ವಿದ್ಯಾಬಲಂ ತಸ್ಯ ಜ್ಞಾತ್ವಾ ಪಾಣ್ಡುಸುತಾಸ್ತತಃ ॥೨೮.೪೮॥

 

ಅನ್ವೇಷನ್ತಃ ಶುಶ್ರುವುಶ್ಚ ವ್ಯಾಧೇಭ್ಯಸ್ತಂ ಜಲೇ ಸ್ಥಿತಮ್ ।

ಅಗಚ್ಛಂಶ್ಚ ತತಸ್ತತ್ರ ಪುರಸ್ಕೃತ್ಯ ಜನಾರ್ದ್ದನಮ್ ॥೨೮.೪೯॥

 

ಅವನಿಗೆ ದುರ್ವಾಸರಿಂದ ಮಂತ್ರಗಳು ಕೊಡಲ್ಪಟ್ಟಿದ್ದವು,

ಅವು ಸತ್ತವರನ್ನು ಬದುಕಿಸುವ ಶಕ್ತಿ ಉಳ್ಳವುಗಳಾಗಿದ್ದವು.

ನೀರಿನಲ್ಲಿ ಇದ್ದು, ಏಳುದಿವಸಗಳ ಕಾಲ ಜಪಮಾಡುತ್ತಿದ್ದು,

ಈತನಕ ಸತ್ತ ಎಲ್ಲರನ್ನೂ ಕೂಡಾ ಅವನು ಬದುಕಿಸಬಹುದಿತ್ತು,

ಮತ್ತು ಹಾಗೆ ಬದುಕಿ ಬಂದವರನ್ನು ಅವಧ್ಯರನ್ನಾಗಿ ಮಾಡಬಹುದಿತ್ತು.

ಈ ವಿಶೇಷ ವಿದ್ಯಾಬಲ ದುರ್ಯೋಧನನಲ್ಲಿ ಇರುವುದನ್ನು ,

ತಿಳಿದ ಪಾಂಡವರು ಹುಡುಕುತ್ತಾ ಹೊರಟರು ಅವನನ್ನು.

ಕೆಲಬೇಡರಿಂದ ‘ನೀರಿನಲ್ಲಿ ಅವನು ಇದ್ದಾನೆ’ ಎಂಬುದನ್ನು ತಿಳಿದ ಪಾಂಡವರು,

ತಮ್ಮ ನೆಚ್ಚಿನ ಕೃಷ್ಣನನ್ನು ಮುಂದೆ ಮಾಡಿಕೊಂಡು ಅವನಿದ್ದ ಸ್ಥಳಕ್ಕೆ ಬಂದರು.

 

ತದಾ ಜಲಾತ್ ಸಮುನ್ಮಜ್ಜ್ಯ ತ್ರಿಭಿರ್ದ್ದ್ರೌಣಿಪುರಸ್ಸರೈಃ ।

ಮನ್ತ್ರಯನ್ತಂ ಸ್ಮ ದದೃಶುಸ್ತಾನ್ ದೃಷ್ಟ್ವಾ ತೇ ಪ್ರದುದ್ರುವುಃ ॥೨೮.೫೦॥

 

ಆ ಸಮಯದಲ್ಲಿ ನೀರಿನಿಂದ ಮೇಲೆದ್ದು, ಆ ಮೂವರು ಜನರೊಂದಿಗೆ ತಾನಿದ್ದು,

ಅಶ್ವತ್ಥಾಮ,ಕೃಪ ಮತ್ತು ಕೃತವರ್ಮರೊಂದಿಗೆ ಕೌರವ ಮಾಡುತ್ತಿದ್ದ ಮಂತ್ರಾಲೋಚನ. 

ಇದನ್ನು ನೋಡಿದ ಪಾಂಡವರನ್ನು ಕಂಡ ಆ ಮೂವರು ಅಲ್ಲಿಂದ ಮಾಡಿದರು ಪಲಾಯನ.

 

ದುರ್ಯ್ಯೋಧನೋSವಿಶತ್ ತೋಯಂ ದೃಷ್ಟ್ವಾ ತಂ ಕೇಶವಾಜ್ಞಯಾ ।

ಯುಧಿಷ್ಠಿರಃ ಸುಪರುಷೈರ್ವಾಕ್ಯೈರೇನಮಥಾSಹ್ವಯತ್ ॥೨೮.೫೧॥

 

ಪಾಂಡವರನ್ನು ಕಂಡ ದುರ್ಯೋಧನನು ಮತ್ತೆ ನೀರನ್ನು ಪ್ರವೇಶಿಸಿದ.

ಅವನನ್ನು ನೋಡಿದ ಧರ್ಮರಾಜನು ಪರಮಾತ್ಮನ ಆಜ್ಞೆ ಪಾಲಿಸಿದ,

ಅತ್ಯಂತ ಕಠೋರ ಮಾತುಗಳಿಂದ ಅವನ ಆಹ್ವಾನಮಾಡಿದ.

 

ಅಮರ್ಷಿತೋSಸೌ ಧೃತರಾಷ್ಟ್ರಪುತ್ರಃ ಶ್ವಸಂಸ್ತದಾ ದಣ್ಡಹತೋ ಯಥಾSಹಿಃ ।

ಉವಾಚ ಶಾಠ್ಯಾತ್ ತಪಸೇ ವನಾಯ ಯಾಯಾಂ ಭವಾಞ್ಛಾಸತು ಸರ್ವಪೃಥ್ವೀಮ್ ॥೨೮.೫೨॥

 

ಆಗ ಸಿಟ್ಟುಗೊಂಡ ಧೃತರಾಷ್ಟ್ರಪುತ್ರ ದುರ್ಯೋಧನನು ಕೋಲಿನಿಂದ ಹೊಡೆಯಲ್ಪಟ್ಟ ಹಾವಿನಂತೆ ಬುಸುಗುಡುತ್ತಿದ್ದ,

ಮೊಂಡುತನ(ಕಪಟ)ದಿಂದ ‘ನಾನು ಕಾಡಿಗೆ ತಪಸ್ಸು ಮಾಡಲೆಂದು ಹೋಗುತ್ತಿದ್ದೇನೆ; ನೀನು ಎಲ್ಲಾ ಭೂಮಿಯನ್ನು ಆಳು’ ಎಂದ.

 

ತಮಾಹ ಧರ್ಮ್ಮಜೋ ರಾಜಾ ಯಸ್ತ್ವಂ ಕೃಷ್ಣೇ ಸಮಾಗತೇ ।

ಸೂಚ್ಯಗ್ರವೇದ್ಧ್ಯಾಂ ಪೃಥಿವೀಂ ದಾತುಂ ನೈಚ್ಛಃ ಕಥಂ ಪುನಃ ॥೨೮.೫೩॥

 

 

ಆಗ ಅವನನ್ನು ಕುರಿತು ಧರ್ಮರಾಜನು ಹೀಗೆ ಕೇಳುತ್ತಾನೆ,

‘ಶ್ರೀಕೃಷ್ಣನೇ ಸಂಧಾನಕ್ಕೆಂದು ನಿನ್ನಲ್ಲಿ ಬಂದಿದ್ದ ತಾನೇ?

ಆಗ ನೀನು ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡಲು ಬಯಸಲಿಲ್ಲ ,

ಹಾಗಿರುವಾಗ ಈಗ ಹೇಗೆ ಬಂದುಬಿಟ್ಟಿತು ಒಪ್ಪಿಕೊಳ್ಳುತ್ತಿರುವ ಮನೋವೈಶಾಲ್ಯ.

 

ಘಾತಯಿತ್ವಾ ಸರ್ವಪೃಥ್ವೀಂ ಭೀಷ್ಮದ್ರೋಣಮುಖಾನಪಿ ।

ದಾತುಮಿಚ್ಛಸಿ ಸರ್ವಾಂ ಚ ಪೃಥ್ವೀಂ ನಾದ್ಯ ವಯಂ ಪುನಃ ॥೨೮.೫೪॥

 

ಅಹತ್ವಾ ಪ್ರತಿಗೃಹ್ಣೀಮ ಏಹಿ ಯುದ್ಧೇ ಸ್ಥಿರೋ ಭವ ।

ನ ಕುರೂಣಾಂ ಕುಲೇ ಜಾತಸ್ತ್ವಂ ಯೋ ಭೀತೋ ಹ್ಯಪೋSವಿಶಃ ॥೨೮.೫೫॥

 

ಎಲ್ಲಾ ಭೂಮಿ ಭೀಷ್ಮ-ದ್ರೋಣ ಮುಂತಾದವರ ಸಂಹಾರಮಾಡಿಸಿದೆ ಆಗ,

ಕೊಡಬೇಕೆಂದು ಬಯಸಿದರೂ ನಿನ್ನಕೊಲ್ಲದೇ ಅದನ್ನು ತೆಗೆದುಕೊಳ್ಳುವುದಿಲ್ಲ ನಾವೀಗ.

ಬಾ, ಯುದ್ಧದಲ್ಲಿ ಗಟ್ಟಿಯಾಗಿ ನಿಲ್ಲು ನೀನು , ಭಯಗೊಂಡು ನೀರು ಪ್ರವೇಶಿಸಿರುವೆ ಏನು,

ಪ್ರಾಯಃ ಕುರುಗಳ ಕುಲದಲ್ಲಿ ನೀನು ಹುಟ್ಟಿದವನಲ್ಲ.

ಇಲ್ಲದಿದ್ದರೆ ನೀನ್ಹೀಗೆ ನಪುಂಸಕನಂತೆ ಅಡಗುತ್ತಿರಲಿಲ್ಲ.’

 

ಇತ್ಯಾದಿ ರೂಕ್ಷವಚನಂ ಶ್ರುತ್ವಾ ದುರ್ಯ್ಯೋಧನೋ ರುಷಾ ।

ಜಲಸ್ತಮ್ಭಾತ್ ಸಮುತ್ತಸ್ಥೌ ಶ್ವಸನ್ನಾಶೀವಿಷೋ ಯಥಾ ॥೨೮.೫೬॥

 

ಇಂಥಾ ಕಠಿಣವಾದ ಮಾತನ್ನು ಕೇಳಿಸಿಕೊಂಡ ಕೌರವ ಸಿಟ್ಟಿನಿಂದ,

ಬುಸುಗುಡುವ ಹಾವಿನಂತೆ  ಸರೋವರದಿಂದ ಮೇಲೆದ್ದು ಬಂದ.

 

ಉವಾಚ ಚೈಕ ಏವಾಹಮಕಿರೀಟೋ ವಿವರ್ಮ್ಮಕಃ ।

ಭವನ್ತೋ ಬಹವೋ ವರ್ಮ್ಮಶಿರಸ್ತ್ರಾಣಯುತಾ ಅಪಿ ॥೨೮.೫೭॥

 

ಯದ್ಯೇವಮಪಿ ಮೇ ಯುದ್ಧಂ ಭವದ್ಭಿರ್ಮ್ಮನ್ಯಸೇ ಸಮಮ್ ।

ಸರ್ವೈರೇಕೇನ ವಾ ಯುದ್ಧಂ ಕರಿಷ್ಯೇ ನಚ ಭೀರ್ಮ್ಮಮ ॥೨೮.೫೮॥

 

ನೀರಿನಿಂದ ಮೇಲೆ ಬಂದ ದುರ್ಯೋಧನನು ಹೇಳುತ್ತಾನೆ- ,

ನಿಮಗೆಲ್ಲವೂ ಇದೆ ;ಕಿರೀಟ ಕವಚವಿರದ ನಾನೊಬ್ಬನೇ ಇದ್ದೇನೆ.

ನೀವು ಬಹಳ ಜನರಿದ್ದೀರಿ; ನಿಮಗಿದೆ ಕವಚ, ಶಿರಸ್ತ್ರಾಣಗಳ ಆಸರೆ,

ಆದರೂ ಕೂಡಾ ನಿಮ್ಮ ಜೊತೆಗೆ ನನ್ನ ಯುದ್ಧ ಸಮವಾಗುವುದೆಂದಾದರೆ,

ನಿಮ್ಮೆಲ್ಲರ ಜೊತೆಗೆ ಅಥವಾ ನಿಮ್ಮಲ್ಲಿ ಒಬ್ಬನ ಜೊತೆಗೆ ನನ್ನ ಯುದ್ಧ,

ನನಗೆ ಸರ್ವಥಾ ಭಯವಿಲ್ಲವಾದ್ದರಿಂದ ಆ ಥರದ ಯುದ್ಧಕ್ಕೆ ನಾ ಸಿದ್ಧ.

 

ಇತ್ಯುಕ್ತ ಆಹ ಧರ್ಮ್ಮಾತ್ಮಾ ವರ್ಮ್ಮಾದ್ಯಂ ಚ ದದಾಮಿ ತೇ ।

ವೃಣೀಷ್ವ ಪ್ರತಿವೀರಂ ಚ ಪಞ್ಚಾನಾಂ ಯಂ ತ್ವಮಿಚ್ಛಸಿ ॥೨೮.೫೯॥

 

ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ಹೇಳುತ್ತಾನೆ- ,

‘ನಿನಗೆ ಕವಚ ಮೊದಲಾದವುಗಳನ್ನು ನಾನು ಕೊಡುತ್ತೇನೆ.

ನಮ್ಮ ಐದು ಜನರಲ್ಲಿ ಯಾರನ್ನಾದರೂ ಒಬ್ಬರನ್ನು ,

ಆರಿಸಿಕೋ ನೀ ಪ್ರತಿವೀರನೆಂದು ತಿಳಿವ ಅವನನ್ನು. 

 

ಹತ್ವೈಕಂ ತ್ವಂ ಭುಙ್ಕ್ಷ್ವ ರಾಜ್ಯಮನ್ಯೇ ಯಾಮ ವಯಂ ವನಮ್ ।

ಹತೇ ವಾ ತ್ವಯೀ ತೇನೈವ ಭುಞ್ಜೀಮಶ್ಚಾಖಿಲಾಂ ಭುವಮ್ ।

ಆದತ್ಸ್ವ ಚಾSಯುಧಂ ಯೇನ ಜೇತುಮಿಚ್ಛಸಿ ಶಾತ್ರವಾನ್ ॥೨೮.೬೦॥

 

ನಮ್ಮಲ್ಲಿ ನೀನು ಆರಿಸಿಕೊಂಡ ಒಬ್ಬನನ್ನು ಕೊಂದರೆ ರಾಜ್ಯ ನಿನ್ನದು,

ಉಳಿದ ನಾವೆಲ್ಲರೂ ಕಾಡಿಗೆ ಹೋಗುತ್ತೇವೆ  ಖಚಿತ ಮಾತು ನನ್ನದು.

ಆದರೆ ಆರಿಸಿಕೊಂಡವನಿಂದ ನೀನು ಸತ್ತರೆ,

ಆಗ ಇಡೀ ಭೂಮಿಯು ಅದು ನಮ್ಮ ಕೈಸೆರೆ.

ಯಾವ ಆಯುಧ ಬೇಕೋ ಆರಿಸಿಕೋ, ಶತ್ರುಜಯಿಸುವ ಆಯುಧವ ತೆಗೆದುಕೋ.

 

ಇತ್ಯುಕ್ತ ಊಚೇ ನಹಿ ದುರ್ಬಲೈರಹಂ ಯೋತ್ಸ್ಯೇ ಚತುರ್ಭಿರ್ಭವದರ್ಜ್ಜುನಾದಿಭಿಃ ।

ಭೀಮೇನ ಯೋತ್ಸ್ಯೇ ಗದಯಾ ಸದಾ ಹಿ ಮೇ ಪ್ರಿಯಾ ಗದಾ ನಾನ್ಯದಥಾSಯುಧಂ ಸ್ಪೃಶೇ ॥೨೮.೬೧॥

 

ಆಗ ದುರ್ಯೋಧನನು- ‘ನಾನು ದುರ್ಬಲರಾದ ನೀನು, ಅರ್ಜುನ, ಮೊದಲಾದ ಈ ನಾಲ್ಕು ಜನರ ಜೊತೆಗೆ ಯುದ್ಧ ಮಾಡುವುದಿಲ್ಲ.

ನನಗೆ ಗದೆ ಪ್ರಿಯವಾದ್ದರಿಂದ ಗದೆಯಿಂದ ಭೀಮಸೇನನೊಂದಿಗೆ ಯುದ್ಧಮಾಡುತ್ತೇನೆ. ಇನ್ನೊಂದು ಆಯುಧವ ನಾನು ಮುಟ್ಟುವುದಿಲ್ಲ’.

 

ಶ್ರುತ್ವಾSಸ್ಯ ವಾಕ್ಯಂ ರಭಸೋ ವೃಕೋದರೋ ಗದಾಂ ತದಾSದ್ಧ್ಯರ್ದ್ಧಭರಾಧಿಕಾಂ ಮುದಾ ।

ರಾಜ್ಞೋ ಗದಾಯಾಃ ಪರಿಗೃಹ್ಯ ವೀರಃ ಸಮುತ್ಥಿತೋ ಯುದ್ಧಮನಾಃ ಸಮುನ್ನದನ್ ॥೨೮.೬೨॥

 

ದುರ್ಯೋಧನನ ಮಾತನ್ನು ಕೇಳಿದ  ವೇಗಯುಕ್ತನಾದ ವೃಕೋದರ,

ಹಿಡಿದ ಗದೆಯು ಬೇರೆ ಗದೆಗಳಿಗಿಂತ ಒಂದೂವರೆಪಟ್ಟು ಹೆಚ್ಚು ಭಾರ.

ಅಂಥಾ ಗದೆಯನ್ನು ಹಿಡಿದುಕೊಂಡು ಸಂತೋಷದಿಂದ ,

ಎದ್ದು ಯುದ್ಧಕ್ಕೆ ಸನ್ನದ್ಧನಾಗಿ ಗರ್ಜಿಸುತ್ತಾ ತಾ ಬಂದ. 

 

ಅಥಾSಹ ನಾರಾಯಣ ಆದಿದೇವೋ ಯುಧಿಷ್ಠಿರಂ ಕಷ್ಟಮಿದಂ ಕೃತಂ ತ್ವಯಾ ।

ನಹ್ಯೇಷ ರಾಜಾ ಗದಯಾ ರಣೇ ಚರನ್ ಶಕ್ಯೋ ವಿಜೇತುಂ ನಿಖಿಲೈಃ ಸುರಾಸುರೈಃ ॥೨೮.೬೩॥

 

ತದನಂತರ ಆದಿದೇವನಾದ,  ಶ್ರೀಕೃಷ್ಣರೂಪಿ ನಾರಾಯಣನು ಧರ್ಮರಾಜನನ್ನು ಕುರಿತು ಹೇಳಿದನು-,

‘ನಿನ್ನಿಂದಾಗಿದೆ ಬಹಳ ಕಷ್ಟಕರ ನಿರ್ಧಾರ, ದೇವತಾಸುರರಿಗೂ ಕಷ್ಟವಾದ ಕೌರವನನ್ನು ಗೆಲ್ಲಬಹುದೇನು.

 

ಸ ನಿಶ್ಚಯಾದ್ ವಶ್ಚತುರೋ ನಿಹನ್ಯಾತ್ ಸಹಾರ್ಜ್ಜುನಾನ್ ಭೀಮಸೇನಃ ಕಥಞ್ಚಿತ್ ।

ಹನ್ತೈನಮಾಜೌ ನಹಿ ಭೀಮತುಲ್ಯೋ ಬಲೇ ಕ್ವಚಿದ್ ಧಾರ್ತ್ತರಾಷ್ಟ್ರಃ ಕೃತೀ ಚ ॥೨೮.೬೪॥

 

ದುರ್ಯೋಧನ ನಿಶ್ಚಯವಾಗಿ ಅರ್ಜುನ ಸಹಿತರಾದ ನಿಮ್ಮ ನಾಲ್ವರನ್ನೂ ಕೊಲ್ಲಬಲ್ಲ.

ಭೀಮಸೇನನಾದರೋ ಹೇಗೋ ಕಷ್ಟಪಟ್ಟು ಯುದ್ಧದಲ್ಲಿ ಅವನನ್ನು ಸಂಹರಿಸಬಲ್ಲ. ದುರ್ಯೋಧನನು ಬಲದಲ್ಲಿ ಭೀಮನಿಗೆ ಸಮಾನನಾದವನಲ್ಲ. ಗದಾಯುದ್ಧದಲ್ಲವನು ಜಾಣ; ಅವನಿಗಿದೆ ಹೆಚ್ಚು ಅಭ್ಯಾಸಬಲ .

 

ಊರೂ ಭೀಮೇನ ಭೇತ್ತವ್ಯೌ ಪ್ರತಿಜ್ಞಾಂ ರಕ್ಷತಾ ರಿಪೋಃ ।

ನಾಭೇರಧಸ್ತಾದ್ಧನನಂ ಜನಾ ಆಹುರ್ಗ್ಗದಾಮೃಧೇ ॥೨೮.೬೫॥

 

ಅಧರ್ಮ್ಮ ಇತಿ ತತ್ ಕೃಷ್ಣೋ ಲೋಕನಿನ್ದಾನಿವೃತ್ತಯೇ ।

ಆಪದ್ಧರ್ಮಂ ದರ್ಶಯಿತುಂ ಕಿಞ್ಚಿದ್ ವ್ಯಾಜೇನ ಸಂಯುತಃ ॥೨೮.೬೬॥

 

ಪ್ರತಿಜ್ಞೆ ರಕ್ಷಣೆ ಮಾಡುವ ಭೀಮನಿಂದ ಶತ್ರುವಿನೆರಡು ತೊಡೆ ಮುರಿಯಬೇಕಾಗಿದೆ,

ಗದಾಯುದ್ಧದಲ್ಲಿ ಹೊಕ್ಕುಳಿನಿಂದ ಕೆಳಗೆ ಹೊಡೆಯುವುದು ಅಧರ್ಮ ಎಂದು ಇದೆ .

ಈ ಅಭಿಪ್ರಾಯವನ್ನಿಟ್ಟುಕೊಂಡು ಭಗವಂತ, ಲೌಕಿಕರು ಭೀಮನಿಂದನೆ ಮಾಡಲಾಗದಂಥ,

ಮುಂದಿನ ಪೀಳಿಗೆಗೆ ಆಪದ್ಧರ್ಮ ತೋರಲು, ಕೃಷ್ಣನಾಡಿದ ಸ್ವಲ್ಪ ಅಡ್ಡವಾದ ಮಾತುಗಳು.

 

ಭೀಮೋ ಹನ್ಯಾದ್ ಧಾರ್ತ್ತರಾಷ್ಟ್ರಮಿತ್ಯೂಚೇ ಯದ್ಯಪಿ ಸ್ಫುಟಮ್ ।

ಅವ್ಯಾಜೇನಾಪಿ ಶಕ್ತೋSಸೌ ಬಲಂ ನಿಸ್ಸೀಮಮಾಹ ಚ ॥೨೮.೬೭॥

 

ಆಪದ್ಧರ್ಮ ತೋರಲು ‘ಭೀಮ ಹೇಗೋ ಯುದ್ಧದಿ ದುರ್ಯೋಧನನ ಕೊಲ್ಲಬಲ್ಲ’ ಎಂದು ಕೃಷ್ಣ ಹೇಳಿದ,

ಹಾಗೇ ಭೀಮನ ಬಲವನ್ನು ನಿಶ್ಚಯವಾಗಿ  ‘ಬಲದಲ್ಲಿ ಭೀಮನಿಗೆ ಸಮನಾದವನು ಇಲ್ಲಾ’ ಎಂದೂ ಹೇಳಿದ.

 

ಆಹ ಶಿಕ್ಷಾಮಪ್ಯನೂನಾಂ ಯತ್ನಂ ದುರ್ಯ್ಯೋಧನೇSಧಿಕಮ್ ।

ನಹಿ ಭೀಮೋSತಿಪ್ರಯತ್ನಂ ಕುರ್ಯ್ಯಾದಿತಿ ಗುಣೋ ಹ್ಯಯಮ್ ॥೨೮.೬೮॥

 

ದುರ್ಯೋಧನ ತುಂಬಾ ಪ್ರಯತ್ನಪಟ್ಟು ವಿಪರೀತ ಅಭ್ಯಾಸ ಮಾಡಿದ್ದಾನೆ.

ಆದರೆ ಎಂದೂ ಅತಿಪ್ರಯತ್ನ ಮಾಡದ ಭೀಮಸೇನನ ಬಲ ಸಹಜ ಗುಣಾನೇ.

(ದುರ್ಯೋಧನಗೆ ಬೇಕು ಪ್ರಯತ್ನದ ನೇಮ,  ಸಹಜ ಗುಣದಿಂದಲೇ ಅವನು ಬಲಭೀಮ.)

 

ಪ್ರತಿಜ್ಞಾಪಾಲನಂ ಧರ್ಮ್ಮೋ ದುಷ್ಟೇಷು ತು ವಿಶೇಷತಃ ।

ಇತಿ ಧರ್ಮ್ಮರಹಸ್ಯಂ ತು ವಿತ್ತಃ ಕೃಷ್ಣವೃಕೋದರೌ ॥೨೮.೬೯॥

 

ನಾನ್ಯಸ್ತತೋ ಲೋಕನಿನ್ದಾಂ ವ್ಯಪನೇತುಮುಭಾವಪಿ ।

ಅನಾಪದ್ಯಾಪದಿವ ಚ ದರ್ಶಯೇತಾಂ  ಜನಸ್ಯ ತು ॥೨೮.೭೦॥

 

‘ವಿಶೇಷವಾಗಿ ದುಷ್ಟರಲ್ಲಿ ಪ್ರತಿಜ್ಞೆಯನ್ನು ಪಾಲನೆ ಮಾಡಬೇಕಾಗಿರುವುದೇ ಧರ್ಮ’,

ಎನ್ನುವ ಈ ಅತ್ಯಂತ ಗುಹ್ಯಧರ್ಮವನ್ನು ಭೀಮ ಹಾಗೂ ಶ್ರೀಕೃಷ್ಣ ತೋರಿದ ಮರ್ಮ.

 

ಉಳಿದವರು ಈ ಧರ್ಮರಹಸ್ಯವನ್ನು ತಿಳಿದಿರದ ಕಾರಣದಿಂದ,

ಲೋಕದೃಷ್ಟಿಯಲ್ಲಿ ನಿಂದೆ ಬರಬಾರದು ಎಂದೂ ಇರುವುದರಿಂದ,

ಆಪತ್ತಿರದಿದ್ದರೂ ಆಪತ್ತೋ ಎಂಬಂತೆ ಜನರಿಗೆ ತೋರಿತು ಆ ವೃಂದ.

 

[ ಭೀಮನಿಗ್ಯಾವ ಆಪದ್ಧರ್ಮ? ಅವನಿಗದಿಲ್ಲ ಎಂಬುದೇ ಮರ್ಮ.ಅವನಿಗೆ ಮಾಡಲಾಗದ್ದು ಉಂಟೆ? ಅವನು ಜ್ಞಾನ ಬಲಗಳ ಮೂಟೆ . ಸಾಮಾಜಿಕವಾಗಿ ಧರ್ಮರಹಸ್ಯ ತಿಳಿಯದವರಿಗೆ ಹೋಗದಿರಲು ತಪ್ಪು ಸಂದೇಶ, ಶ್ರೀಕೃಷ್ಣ ಆಪದ್ಧರ್ಮದ ಕುರಿತೂ ಮಾತನಾಡಿ ಕೊಟ್ಟದ್ದು ಸೂಕ್ಷ್ಮ ವಿಶೇಷ].

 

ತತೋ ಭೀಮಃ ಸರ್ವಲೋಕಸ್ಯ ಧರ್ಮ್ಮಂ ಪ್ರಕಾಶಯನ್ ವಾಕ್ಯಮಿದಂ ಜಗಾದ ।

ಊರೂ ತವಾಹಂ ಹಿ ಯಥಾಪ್ರತಿಜ್ಞಂ ಭೇತ್ಸ್ಯಾಮಿ ನೈವಾತ್ರ ವಿಚಾರಣೀಯಮ್ ॥೨೮.೭೧॥

 

ಆನಂತರ ಭೀಮಸೇನ ಎಲ್ಲರೂ ನೋಡುತ್ತಿರುವಾಗಲೇ ಈ ಗುಹ್ಯ ಧರ್ಮ ಪ್ರಕಾಶಪಡಿಸುತ್ತಾ ಹೇಳುತ್ತಾನೆ, ‘ಸಂದೇಹವಿಲ್ಲವಿದರಲ್ಲಿ; ಪ್ರತಿಜ್ಞೆಗೆ ಅನುಗುಣವಾಗಿ ನಾನು ನಿನ್ನ ಎರಡೂ ತೊಡೆಗಳನ್ನು ಮುರಿಯುತ್ತೇನೆ.

 

ಇತ್ಯುಕ್ತವನ್ತಂ ಪ್ರಸಸಾರ ಚಾSಜೌ ದುರ್ಯ್ಯೋಧನಸ್ತತ್ರ ಬಭೂವ ಯುದ್ಧಮ್ ।

ಭೀಮಸ್ತದಾSಗ್ರ್ಯಪ್ರಕೃತಿಂ ವಿಧಿತ್ಸುರ್ಮ್ಮನ್ದಃ ಸ ಆಜೌ ವ್ಯಚರಜ್ಜನಾರ್ತ್ಥೇ ॥೨೮.೭೨॥

 

ಈರೀತಿಯಾಗಿ ಹೇಳುತ್ತಿರುವ ಭೀಮಸೇನನನ್ನು, ಯುದ್ಧದಲ್ಲಿ ಎದುರಿಸುತ್ತಾನೆ ದುರ್ಯೋಧನನು .

ಅಲ್ಲಿ ಅವರಿಬ್ಬರ ನಡುವೆ ಯುದ್ಧ ನಡೆಯಿತು. ಭೀಮ ಜನರಿಗಾಗಿ ತೋರಲಿಲ್ಲ ತನ್ನ ತಾಕತ್ತು.

ಅವನದಿತ್ತು ರಭಸವನ್ನು ಬಿಟ್ಟ ಶಿಕ್ಷಣ, ನಿಧಾನವಾಗಿ ಸಂಚರಿಸುವ ರಣಲಕ್ಷಣ. 

 

ದರ್ಶಯನ್ತೌ ಗದಾಮಾರ್ಗ್ಗಂ ಚಿತ್ರಂ ತೌ ಪ್ರವಿಚೇರತುಃ ।

ಲಭದ್ರೋSಪ್ಯಾಜಗಾಮ ತದಾ ತೌ ಪ್ರತಿವಾರಿತುಮ್ ॥೨೮.೭೩॥

 

ಚಿತ್ರ ವಿಚಿತ್ರವಾಗಿರುವ ಗದಾ ಸಂಚಾರ , ತೋರಿದರಿಬ್ಬರೂ ನಡಿಗೆಯ ಆಶ್ಚರ್ಯ. ಬಲರಾಮನೂ ಅಲ್ಲೇ ಸಮೀಪದಲ್ಲಿ ತೀರ್ಥಯಾತ್ರೆಯಲ್ಲಿದ್ದ, ಈ ವಿಷಯ ಕೇಳಿ, ಅವರಿಬ್ಬರನ್ನೂ ತಡೆಯಲೆಂದು ಬಂದ.

 

ವಾರಿತಾವಪಿ ತೇನೋಭೌ ನೈವ ಯುದ್ಧಂ ಪ್ರಮುಞ್ಚತಾಮ್ ।

ತತೋ ದದರ್ಶ ತದ್ ಯುದ್ಧಂ ಮಾನಿತಃ ಕೃಷ್ಣಪೂರ್ವಕೈಃ ॥೨೮.೭೪॥

 

ಬಲರಾಮನಿಂದ ತಡೆಯಲ್ಪಟ್ಟರೂ ಕೂಡಾ ಅವರಿಬ್ಬರೂ ಯುದ್ಧವನ್ನು ಬಿಡದಿದ್ದಾಗ,

ಆನಂತರ ಕೃಷ್ಣಾದಿಗಳಿಂದ ಸತ್ಕೃತನಾಗಿ ಬಲರಾಮ ಆ ಯುದ್ಧವನ್ನು ಕಂಡನಾಗ.

 

ತೌ ಶಿಕ್ಷಾಬಲಸಂಯುಕ್ತೌ ಮಣ್ಡಲಾನಿ ವಿಚೇರತುಃ ।

ತತೋ ಭೀಮಂ ವಞ್ಚಯಿತುಂ ಧಾರ್ತ್ತರಾಷ್ಟ್ರಃ ಶಿರಃ ಕ್ಷಿತೌ ॥೨೮.೭೫॥

 

ನ್ಯಧಾದುಚ್ಛ್ರಿತಸಕ್ಥೀಕಸ್ತದಾ ಕೃಷ್ಣಾಭ್ಯನುಜ್ಞಯಾ ।

ಪೃಷ್ಠಮೂಲೇSಹನದ್ ಭೀಮೋ ಭಿನ್ನಸಕ್ಥಿಶ್ಚ ಸೋSಪತತ್ ॥೨೮.೭೬॥

 

ಅವರಿಬ್ಬರಲ್ಲೂ ಇತ್ತು ಅಭ್ಯಾಸ ಮತ್ತು ಬಲ , ಅದರಿಂದಲೇ ಕೂಡಿ ತಿರುಗಿದರು ಮಂಡಲ.

ಆನಂತರ ದುರ್ಯೋಧನ ಭೀಮನನ್ನು ಮೋಸಗೊಳಿಸಲು,

ನೆಲದಲ್ಲಿ ತಲೆಯನ್ನು ಇಟ್ಟು, ಮೇಲೆತ್ತಿದ ತನ್ನೆರಡೂ ಕಾಲು.

ಕೃಷ್ಣನ ಅನುಜ್ಞೆಯಿಂದ ಭೀಮಸೇನನು ಅವನ ಪೃಷ್ಠಮೂಲೆಗೆ ಹೊಡೆಯುತ್ತಾನೆ.

ಬೆನ್ನುಮೂಳೆ ಸೊಂಟದ-ಸಂಧಿ ಮುರಿದ ಕೌರವನು ತೊಡೆಮುರಿದು ಬೀಳುತ್ತಾನೆ.

 

ಪ್ರತಿಜ್ಞಾಪಾಲನಾರ್ತ್ಥಾಯ ನಾಭೇರ್ನ್ನೋಪರ್ಯ್ಯಧಸ್ತದಾ ।

ಗದಾಯುದ್ಧಸ್ಯ ಮರ್ಯ್ಯಾದಾಂ ಯಶಶ್ಚಾಪ್ಯಭಿರಕ್ಷಿತುಮ್ ॥೨೮.೭೭॥

 

ನಾಧಸ್ತಾನ್ಮದ್ಧ್ಯ ಏವಾಸೌ ನಿಜಘ್ನೇ ತಂ ವೃಕೋದರಃ ।

ಏವಂ ಪ್ರತಿಜ್ಞಾಯುಗ್ಮಾರ್ತ್ಥಂ ಭಗ್ನಂ ಸಕ್ಥಿಯುಗಂ ರಣೇ ॥೨೮.೭೮॥

 

ಪ್ರತಿಜ್ಞೆಯನ್ನು ಪಾಲನೆ ಮಾಡಲೋಸುಗ ಹೊಕ್ಕುಳಿನ ಮೇಲೆ ಭೀಮ ಹೊಡೆಯಲಿಲ್ಲ.

ಗದಾಯುದ್ಧದ ನಿಯಮವನ್ನೂ, ಮತ್ತೆ ತನ್ನ ಕೀರ್ತಿಯನ್ನೂ ರಕ್ಷಿಸಿಕೊಳ್ಳುವ ರಣಕೌಶಲ.

ಹೊಕ್ಕುಳಿನಿಂದ ಕೆಳಗಡೆಯೂ ಹೊಡೆಯದೇ, ಬೆನ್ನಿನ ಬುಡದಲ್ಲಿ ಹೊಡೆದ.

ತನ್ನ ಪ್ರತಿಜ್ಞೆ ರಕ್ಷಿಸುತ್ತಾ ಭೀಮ ಕೌರವನ ತೊಡೆಮೂಳೆಗಳೆರಡನ್ನೂ ಮುರಿದ.

 

[ವೇಗದಿಂದ ಬರುತ್ತಿರುವ ಭೀಮಸೇನನನ್ನು ನೋಡಿ, ಅವನ ಹೊಡೆತವನ್ನು ವ್ಯರ್ಥವನ್ನಾಗಿಸಲು ಬಯಸಿದ ದುರ್ಯೋಧನ, ಮೋಸಮಾಡಬೇಕು ಎನ್ನುವ ಬುದ್ಧಿಯಿಂದ ನೆಗೆದ. ಸಿಂಹದಂತೆ ‘ತೊಡೆಗಳಿಗಾಗಿ ’ ಬೀಸಿ ಹೊಡೆದ ಇದನ್ನು ತಿಳಿದ ಭೀಮಸೇನ. (ಅಂದರೆ ಎಲ್ಲಿ ಹೊಡೆದರೆ ಅದು ತೊಡೆಯನ್ನು ನಿಷ್ಕ್ರೀಯಗೊಳಿಸುತ್ತದೋ ಅಲ್ಲಿಗೆ ಹೊಡೆದ - ಅದೇ ಮಧ್ವರಿತ್ತ ಮಹಾಭಾರತದ ಈ ಶ್ಲೋಕಸಮುದಾಯದ ತಾತ್ಪರ್ಯದ ಅನುವಾದ)]

No comments:

Post a Comment

ಗೋ-ಕುಲ Go-Kula