Sunday 4 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 32: 27-58

 

ಗೋಪಾಲಮನ್ತ್ರಂ ಭಜತಾಂ ಫಲಪ್ರದ ಏಕೇನ ರೂಪೇಣ ಸ ಭುವ್ಯದೃಶ್ಯಃ ।

ತಸ್ಥೌ ದ್ವಿತೀಯೇನ ಚ ಸೂರ್ಯ್ಯಮಣ್ಡಲೇ ತೃತೀಯಮಾಸೀಚ್ಛಿವಪೂಜಿತಂ ವಪುಃ ॥ ೩೨.೨೭ ॥

 

ಗೋಪಾಲಮಂತ್ರವನ್ನು ಭಜಿಸುವವರಿಗೆ ಫಲಪ್ರದವಾಗಿ,

ಒಂದು ರೂಪದಿ ಕೃಷ್ಣ ನಿಂತ ಫಲವೀಯುತ್ತ ಅದೃಶ್ಯನಾಗಿ. 

ಎರಡನೇ ರೂಪದಿಂದ ಭಗವಂತ ಸೂರ್ಯಮಂಡಲದಲ್ಲಿ ನಿಂತ.

ಮೂರನೇ ರೂಪದಿಂದ ಶಿವಲೋಕದಲ್ಲಿ ಆದ ಶಿವನಿಂದ ಪೂಜಿತ.

 

ಸಮ್ಪೂಜಿತಂ ಬ್ರಹ್ಮಲೋಕೇ ಚತುರ್ಥಂ ಕಞ್ಜೋದ್ಭವೇನಾಥ ಪರಂ ಸ್ವಧಾಮ ।

ಸಮಾಪ್ನುವಾನಂ ವಪುರಸ್ಯ ಪಞ್ಚಮಂ ಭಕ್ತ್ಯಾSನ್ವಯುರ್ದ್ದೇವವರಾಃ ಸ್ವಶಕ್ತ್ಯಾ ॥ ೩೨.೨೮ ॥

 

ಬ್ರಹ್ಮಲೋಕದಲ್ಲಿ ಬ್ರಹ್ಮನಿಂದ ಚೆನ್ನಾಗಿ ಪೂಜಿಸಲ್ಪಡುವುದು ಪರಮಾತ್ಮನ ನಾಲ್ಕನೇ ರೂಪ.

ಭಗವಂತ ತನ್ನ ಮನೆಯಾದ ವೈಕುಂಠಕ್ಕೆ ತೆರಳುತ್ತಿರುವ ರೂಪವೇ ಭಗವಂತನ ಐದನೇ ರೂಪ.

ಆ ರೂಪವನ್ನು ದೇವತೆಗಳು ತಮ್ಮ ಸ್ವರೂಪಯೋಗ್ಯತೆಯಂತೆ,

ಅದಕ್ಕನುಗುಣವಾಗಿ ಭಕ್ತಿಯಿಂದ ಅನುಸರಿಸಿದ ತಾರತಮ್ಯತೆ.

 

ತತ್ತೇಜಸಾ ತೇ ಪ್ರತಿಮುಷ್ಟದೃಷ್ಟಯಃ ಪುರುಷ್ಟುತಾದ್ಯಾ ಅಮಿತೋರುದೀಧಿತೇಃ ।

ಯಾವತ್ ಸ್ವಗಮ್ಯಂ ತ್ವನುಗಮ್ಯ ತಸ್ಥುರ್ನ್ನಿಮೀಲಿತಾಕ್ಷಾ ವಿಹತೋರ್ಧ್ವಚಾರಾಃ   ॥ ೩೨.೨೯ ॥

 

ಇಂದ್ರ ಮೊದಲಾದ ದೇವತೆಗಳು ಭಗವಂತನ ಜೊತೆಗೆ,

ತಾವು ಎಲ್ಲಿಯತನಕ ಹೋಗಬಹುದೋ ಅಲ್ಲಿಯವರೆಗೆ,

ಅನುಸರಿಸಿ ಹೋದರು ,ನಂತರ ಪರಮಾತ್ಮನ ತೇಜಸ್ಸಿಗೆ ಕಂಗಳ ಮುಚ್ಚಿದರು,

ಇನ್ನೂ ಮೇಲೆ ಅನುಸರಿಸಿ ಹೋಗಲಾರದೇ ಅಲ್ಲಲ್ಲಿಯೇ ನಿಂತವರಾದರು.

 

ವೀನ್ದ್ರೇಶಶೇಷಾನುಗತಃ ಸ್ವಯಮ್ಭೂರ್ದ್ಧಾಮ ಪ್ರವಿಷ್ಟಂ ತಮಜಂ ಪ್ರಣಮ್ಯ ।

ವೀನ್ದ್ರಾದಿಕೈರಪ್ಯಯುತಃ ಸ್ವಪಿತ್ರಾSSಶ್ಲಿಷ್ಟೋ ರಹಶ್ಚಾಕಥಯತ್ ತಥಾSಸ್ತೌತ್ ॥ ೩೨.೩೦ ॥

 

ಗರುಡ-ಶೇಷ-ರುದ್ರ ಇವರಿಂದ ಅನುಸರಿಸಲ್ಪಟ್ಟವನಾದರೂ ಕೂಡಾ,

ಬ್ರಹ್ಮ ಸ್ವಧಾಮಕ್ಕೆ ತೆರಳಿದ ಆ ಸರ್ವೋತ್ಕೃಷ್ಟ ನಾರಾಯಣಗೆ ನಮಸ್ಕರಿಸಿದ.

ರುದ್ರಾದಿಗಳಿಂದಲೂ ಬೇರ್ಪಟ್ಟು, ಅಲ್ಲಿಂದ ಮುಂದೆ  ತೆರಳಿದವನಾದ,

ತಂದೆಯಾದ ಭಗವಂತನಿಂದ ಆಲಿಂಗಿತನಾಗಿ ರಹಸ್ಯದಲ್ಲಿ ಮಾತನಾಡಿದ.

ಹಾಗೆಯೇ ಸ್ತೋತ್ರವನ್ನು ಕೂಡಾ ಮಾಡಿದ .  

 

ಸ ಪೂರ್ವರೂಪೇಣ ಸಮಾಪ್ಯ ಚೈಕ್ಯಂ ವಿಭಜ್ಯ ಚೇಚ್ಛಾನುಸೃತೋSಥ ರೇಮೇ ।

ಹರಿಃ ಶ್ರಿಯಾ ಬ್ರಹ್ಮಮುಖೈಶ್ಚ ಮುಕ್ತೈಃ ಸಮ್ಪೂಜ್ಯಮಾನೋSಮಿತಸದ್ಗುಣಾತ್ಮಾ ॥ ೩೨.೩೧ ॥

 

ಶ್ರೀಕೃಷ್ಣನು ಮೂಲಸ್ವರೂಪದಲ್ಲಿ ಐಕ್ಯ ಹೊಂದಿಯೂ ಮತ್ತೆ ಇಚ್ಛಾನುಸಾರ ಬೇರೆಯಾಗಿಯೂ ಆನಂದದಿಂದ ಇದ್ದನು. ಭಗವಂತನು ಲಕ್ಷ್ಮೀ, ಬ್ರಹ್ಮಾದಿಗಳಿಂದಲೂ ಮುಕ್ತರಿಂದಲೂ ಪೂಜಿಸಲ್ಪಡುವವನಾಗಿ, ಎಲ್ಲಾ ಗುಣಗಳೇ ಮೈವೆತ್ತು ಕ್ರೀಡಿಸಿದನು.  

 

ಬ್ರಹ್ಮಾSಪಿ ಶರ್ವಾದಿಯುತಃ ಸ್ವಲೋಕಂ ಪ್ರಾಪ್ತಃ ಪುನಸ್ತತ್ರ ಗತಂ ಚ ಕೃಷ್ಣಮ್ ।

ರೇಮೇSಭಿಪಶ್ಯನ್ ಪ್ರತಿಪೂಜಯಂಸ್ತಂ ಸುರಾಶ್ಚ ಸರ್ವೇ ರವಿಬಿಮ್ಬಸಂಸ್ಥಮ್ ॥ ೩೨.೩೨ ॥

 

ರುದ್ರಾದಿಗಳಿಂದ ಕೂಡಿದ ಬ್ರಹ್ಮನೂ ತನ್ನ ಲೋಕಕ್ಕೆ ತೆರಳಿದ,

ಅಲ್ಲಿರುವ ಕೃಷ್ಣನನ್ನು ನೋಡುತ್ತಾ, ಪೂಜಿಸುತ್ತಾ, ಆನಂದಿಸಿದ.

ಎಲ್ಲಾ ದೇವತೆಗಳೂ ಸೂರ್ಯಮಂಡಲದಲ್ಲಿದ್ದ ಭಗವಂತನನ್ನು ಕಾಣುತ್ತಾ,

ಅವರೆಲ್ಲಾ ಆನಂದ ಹೊಂದಿದರು ಆ ಸರ್ವಜ್ಞ ಭಗವಂತನ ಪೂಜಿಸುತ್ತಾ.

 

 

ಯತೋ ನ ದರ್ಶಿತಾ ಭ್ರಾನ್ತಿಃ ಪ್ರಾದುರ್ಭಾವೇಷ್ವಪಿ ಕ್ವಚಿತ್ 

ದೇಹತ್ಯಾಗಾನುಕಾರೇಣ ಹರಿಣಾ ತದಿಹಾಚ್ಯುತಃ ॥ ೩೨.೩೩ ॥

 

ಮೋಹಯಿತ್ವಾSಸುರಾನನ್ಧಂ ತಮಃ ಪ್ರಾಪಯಿತುಂ ಪ್ರಭುಃ ।

ಚಿದಾನನ್ದೈಕದೇಹೋSಪಿ ತ್ಯಕ್ತಂ ದೇಹಮಿವಾಪರಮ್ ॥ ೩೨.೩೪ ॥

 

ಸೃಷ್ಟ್ವಾ ಸ್ವದೇಹೋಪಮಿತಂ ಶಯಾನಂ ಭುವ್ಯಗಾದ್ ದಿವಮ್ ।

ದಾರುಕೋಕ್ತ್ಯಾ ಸಮಾಯಾತಃ ಪಾರ್ತ್ಥಸ್ತಮದಹತ್ ತದಾ ॥ ೩೨.೩೫ ॥

 

ರೌಹಿಣೇಯಾದಿಕಾನಾಂ ಚ ಶರೀರಾಣಿ ಪ್ರಧಾನತಃ ।

ದಾರುಕೋ ವಿಷ್ಣುಲೋಕಂ ತು ಪುನರಾಪ ಯಥಾಗತಮ್ ॥ ೩೨.೩೬ ॥

 

ಹಿಂದೆ ಯಾವ ಕಾರಣದಿಂದ ಶ್ರೀಕೃಷ್ಣನು ತಾನು ಅಭಿವ್ಯಕ್ತನಾಗುವಾಗ ದುರ್ಜನರಿಗೆ ಭ್ರಾಂತಿಯನ್ನು ಕೊಡಲಿಲ್ಲ,

ಆ ಕಾರಣದಿಂದ ದೈತ್ಯರನ್ನು ತಪ್ಪು ತಿಳಿಯುವಂತೆ ಮಾಡಿ, ಅವರನ್ನು ಅಂಧ ತಮಸ್ಸಿಗೆ ಹೊಂದಿಸುವ ಜಾಲ. ಸರ್ವಸಮರ್ಥನಾದ ಅಚ್ಯುತನು ದೇಹವನ್ನು ಬಿಡುತ್ತಿದ್ದೇನೆ ಎನ್ನುವ ಭ್ರಮೆಯ ಹುಟ್ಟಿಸಿದ.

ಜ್ಞಾನಾನಂದವೇ ಮೈವೆತ್ತು ಬಂದರೂ, ದೇಹವನ್ನು ಬಿಟ್ಟನೋ ಎಂಬಂತೆ ಮಾಡಿದ . ತನ್ನ ದೇಹದಂತೆಯೇ ಇರುವ ದೇಹವ ಸೃಷ್ಟಿಸಿ, ಮಲಗಿಸಿ ಸ್ವಧಾಮಕ್ಕೆ ತೆರಳಿದ.

ದಾರುಕನ ಮಾತಿನಂತೆ ಹಸ್ತಿನಾವತಿಯಿಂದ ಬಂದ ಅರ್ಜುನನು ತಾನು -,

ಬಲರಾಮ ಕೃಷ್ಣ ಮೊದಲಾದವರ ಶರೀರಗಳನ್ನು ಸಂಸ್ಕಾರ ಮಾಡಿಸಿದನು.

ದಾರುಕನು ಬಂದ ಹಾಗೆಯೇ ಪುನಃ  ನಾರಾಯಣನ ಲೋಕವನ್ನು ಹೊಂದಿದನು.

 

ತಥೈವ ಜನಮೋಹಾಯ ಪ್ರಾಪ್ಯ ವಹ್ನಾವದೃಶ್ಯತಾಮ್ ।

ರುಗ್ಮಿಣ್ಯಗಾದ್ಧರೇಃ ಪಾರ್ಶ್ವಂ ಸತ್ಯಾ ಕೃತ್ವಾ ತಪಸ್ತಥಾ ॥ ೩೨.೩೭ ॥

 

ಚಿದಾನನ್ದೈಕದೇಹೇ ಹಿ ದ್ವಿರೂಪೇ ಇವ ತೇ ಯತಃ ।

ಏಕೈವಾತಃ ಕೃಷ್ಣವತ್ ತೇ ದುಷ್ಟಾನ್ ಮೋಹಯತಸ್ತಥಾ ॥ ೩೨.೩೮ ॥

 

ಹಾಗೆಯೇ ರುಗ್ಮಿಣೀ ಜನಮೋಹಕ್ಕೆ ಬೆಂಕಿಯಲ್ಲಿ ಅದೃಶ್ಯಳಾಗಿ ಹರಿಯ ಬಳಿ ತೆರಳಿದಳು.

ಸತ್ಯಭಾಮೆಯು ಕೂಡಾ ತಪಸ್ಸನ್ನು ಮಾಡಿ, ಪರಮಾತ್ಮನ ಪಾರ್ಶ್ವವನ್ನು ಸೇರಿದಳು.

 

 

ಅನ್ಯಾ ಮಹಾಮಹಿಷ್ಯಸ್ತು ತ್ಯಕ್ತ್ವಾ ದೇಹಂ ಹುತಾಶನೇ ।

ಕಾಶ್ಚಿತ್ ಕಾಶ್ಚಿತ್ತು ತಪಸಾ ತ್ಯಕ್ತದೇಹಾ ಹರಿಂ ಯಯುಃ ॥ ೩೨.೩೯ ॥

 

ಷಣ್ಮಹಿಷಿಯರಲ್ಲಿ ಕೆಲವರು ಅಗ್ನಿಯಲ್ಲಿ ದೇಹವ ಬಿಟ್ಟರು,

ಉಳಿದವರು ಧ್ಯಾನಯೋಗದಿಂದ ದೇಹವನ್ನು ಬಿಟ್ಟರು,

ಒಟ್ಟಿನಲ್ಲಿ ಎಲ್ಲರೂ ನಾರಾಯಣನನ್ನು ಕುರಿತು ತೆರಳಿದರು.

 

ರೌಹಿಣೇಯಾದಿಕಾನಾಂ ಚ ಭಾರ್ಯ್ಯಾ ವಹ್ನಿಮುಖೇ ತನುಮ್ ।

ತ್ಯಕ್ತ್ವಾ ಸ್ವಭರ್ತ್ತೄನೇವಾSಪುಃ ಸರ್ವಾ ಏವ ಪತಿವ್ರತಾಃ ॥ ೩೨.೪೦ ॥

 

ಪತಿವ್ರತೆಯರಾದ ಬಲರಾಮ, ಪ್ರದ್ಯುಮ್ನ, ಮೊದಲಾದವರ ಪತ್ನಿಯರು ,

ಅಗ್ನಿಮುಖದಿ ದೇಹವ ಬಿಟ್ಟು, ತಮ್ಮ ಗಂಡಂದಿರನ್ನು ಆ ಲೋಕದಿ ಸೇರಿದರು.

 

ವಸುದೇವಃ ಪಾರ್ತ್ಥಮುಖಾಚ್ಛ್ರುತ್ವೈತದ್ ಯೋಗಮಾಸ್ಥಿತಃ ।

ತ್ಯಕ್ತ್ವಾ ದೇಹಂ ಕಶ್ಯಪತ್ವಂ ಪ್ರಾಪ ಕೃಷ್ಣಾನುರಾಗತಃ ॥ ೩೨.೪೧ ॥

 

ವಸುದೇವನು ಪ್ರಭಾಸದಿಂದ ದ್ವಾರಕೆಗೆ ಬಂದ ಅರ್ಜುನನ ಮುಖದಿಂದ ಯಾದವೀ-ಕಲಹದ ಸುದ್ದಿಯನ್ನು ಕೇಳಿದ,

ಧ್ಯಾನವನ್ನು ಹೊಂದಿ ತನ್ನ ಶರೀರವ ಬಿಟ್ಟು ಕೃಷ್ಣಭಕ್ತಿಯಿಂದ ತನ್ನ ಮೂಲರೂಪವಾದ ಕಶ್ಯಪತ್ವವನ್ನು ಹೊಂದಿದ.

 

ತಸ್ಯಾರ್ಜ್ಜುನೋSಶ್ವಮೇಧಾಗ್ನಾವನ್ತ್ಯಕರ್ಮ್ಮಾಕರೋತ್ ತದಾ ।

ತ್ಯಕ್ತದೇಹಾಸ್ತಸ್ಯ ಭಾರ್ಯ್ಯಾ ವಹ್ನೌ ಪ್ರಾಪ್ತುಸ್ತಮೇವ ಚ ॥ ೩೨.೪೨ ॥

 

ಅರ್ಜುನ ಅಶ್ವಮೇಧದಿ ಪೂಜಿಸಿದ ಅಗ್ನಿಯಿಂದ, ವಸುದೇವನ ಅಂತ್ಯಕ್ರಿಯೆಯನ್ನು ಮಾಡಿದ.

ವಸುದೇವನ ಹೆಂಡಂದಿರೆಲ್ಲರೂ ಬೆಂಕಿಯಲ್ಲಿಯೇ ದೇಹವ ಬಿಟ್ಟರು, ಪತಿ ಕಶ್ಯಪನನ್ನೇ ಹೊಂದಿದರು.

 

ಸ್ತ್ರಿಯೋ ಬಾಲಾಂಸ್ತಥಾSSದಾಯ ಧನಂ ಚೈವ ಧನಞ್ಜಯಃ ।

ವಿನಿರ್ಯ್ಯಯೌ ದ್ವಾರವತ್ಯಾಸ್ತಾಂ ಜಗ್ರಾಸ ಚ ಸಾಗರಃ ॥ ೩೨.೪೩ ॥

 

 

ಅರ್ಜುನನು ಹೆಣ್ಣುಮಕ್ಕಳನ್ನೂ, ಮಕ್ಕಳನ್ನೂ, ಹಾಗೆಯೇ ಧನವನ್ನೂ, ತೆಗೆದುಕೊಂಡು,

ದ್ವಾರಕೆಯಿಂದ ಹೊರನಡೆದ. ಸಮುದ್ರ ರಾಜ ದ್ವಾರಕೆಯನ್ನು ನುಂಗಿಹಾಕಿದ.

(ದ್ವಾರಕಾನಗರವು ಸಮುದ್ರದಲ್ಲಿ ಮುಳುಗಿಹೋಯಿತು)

 

ಸ್ತ್ರೀಬಾಲಸಹಿತೇ ಪಾರ್ತ್ಥ ಏಕಸ್ಮಿನ್ ಪಥಿ ಗಚ್ಛತಿ ।

ಶಾಪಾತ್ ಸುಪಾಪಾ ಆಭೀರಾಃ ಸ್ತ್ರೀಜನಾನ್ ಜಹ್ರುರುದ್ಧತಾಃ ॥ ೩೨.೪೪ ॥

 

ಸ್ತ್ರೀ ಹಾಗೂ ಬಾಲಕರಿಂದ ಕೂಡಿದ, ಅರ್ಜುನನೊಬ್ಬನೇ ನಡೆಯುತ್ತಿದ್ದ .

ಆಗ ಅತ್ಯಂತ ಪಾಪಿಷ್ಠರಾದ ಬೇಡರು,

ಬಲದಿಂದ ಉದ್ಧತರಾಗಿ ಶಾಪಗ್ರಸ್ತರಾದ ಸ್ತ್ರೀಯರನ್ನು ಅಪಹರಿಸಿದರು.

 

ಯಾಸ್ತಾಃ ಷೋಡಶಸಾಹಸ್ರವನಿತಾಃ ಶತಸಂಯುತಾಃ ।

ಕೃಷ್ಣಶಾಪಾನ್ಮ್ಲೇಚ್ಛವಶಂ ಯಯುರ್ದ್ದರ್ಪ್ಪನಿಮಿತ್ತತಃ ॥ ೩೨.೪೫ ॥

 

ಯಾವ ಹದಿನಾರುಸಾವಿರದ ನೂರು ಮಂದಿ ಶ್ರೀಕೃಷ್ಣನ ಸ್ತ್ರೀಯರಿದ್ದರು,

ಅವರೆಲ್ಲರೂ ಶ್ರೀಕೃಷ್ಣನ ಕುರಿತು ಹಿಂದೆ ವಿಪರೀತ ಅಹಂಕಾರ ತೋರಿದ್ದರು .

ಆ ನಿಮಿತ್ತ ಶ್ರೀಕೃಷ್ಣನ ಶಾಪಕ್ಕೆ ಒಳಗಾಗಿ, ಅವರೆಲ್ಲ ಮ್ಲೇಚ್ಛರ ವಶವಾದರು.

 

ಹ್ರೀಯಮಾಣೇ ಧನೇ ಚೈವ ವನಿತಾಸು ಚ ವಾಸವಿಃ ।

ಯುಯುತ್ಸುರ್ಗ್ಗಾಣ್ಡಿವಂ ಸಜ್ಯಂ ಕೃಚ್ಛ್ರೇಣೈವ ಚಕಾರ ಹ ॥ ೩೨.೪೬ ॥

 

ಹಣವಾಗಲು  ಅಪಹಾರ, ಸ್ತ್ರೀಯರಾಗಲು ಅಪಹಾರ,

ಅರ್ಜುನ ಮಾಡಿದ ಯುದ್ಧ ನಿರ್ಧಾರ. ಕಷ್ಟಪಟ್ಟು ಬಿಗಿದ ಗಾಂಡೀವದ ದಾರ.

 

ಕ್ಷೀಣಾಸ್ತಸ್ಯ ಶರಾ ದೈವಾನ್ನಾಸ್ತ್ರಾಣಿ ಸ್ಮೃತಿಮಾಯಯುಃ ।

ಸ ತದ್ ದೈವಕೃತಂ ಜ್ಞಾತ್ವಾ ಸಂಸ್ಮರನ್ ಪುರುಷೋತ್ತಮಮ್ ।

ನಿಘ್ನಞ್ಛತ್ರೂನ್ ಗಾಣ್ಡಿವೇನ ಶೇಷಂ ರಕ್ಷನ್ ಕುರೂನಗಾತ್ ॥ ೩೨.೪೭ ॥

 

ಅರ್ಜುನನ ಬತ್ತಳಿಕೆಯಲ್ಲಿರುವ ಬಾಣಗಳು ಕ್ಷಯಗೊಂಡವು.

ದೈವಸಂಕಲ್ಪದಿಂದಾಗಿ ಅವನಿಗೆ ಬರಲಿಲ್ಲ ಅಸ್ತ್ರಗಳ  ನೆನವು.

ಆಗ ಅರ್ಜುನನು ‘ಇದು ದೈವದ ಸಂಕಲ್ಪ’ ಎಂದು ತಿಳಿದ,

ಶ್ರೀಕೃಷ್ಣನನ್ನು ಮನಸ್ಸಿನಲ್ಲಿಯೇ ಸ್ಮರಣೆ ಮಾಡಿದ,

ಗಾಂಡೀವದ ದಂಡದಿಂದ ಶತ್ರುಗಳನ್ನು ಹೊಡೆಯುತ್ತಾ,

ಕುರುಕ್ಷೇತ್ರವನ್ನು ತಲುಪಿದ ಉಳಿದವರನ್ನು ರಕ್ಷಿಸುತ್ತಾ.

 

ತದಾ ಕುರುಕ್ಷೇತ್ರಗತಂ ಜಗದ್ಗುರುಂ ಸುಪೂರ್ಣ್ಣವಿಜ್ಞಾನಬಲರ್ದ್ಧಿಸತ್ಸುಖಮ್ ।

ತಮೇವ ವಾಸಿಷ್ಠಕುಲೋದ್ವಹಂ ಹರಿಂ ನಿರೀಕ್ಷ್ಯ ದುಃಖೇನ ಪಪಾತ ಪಾದಯೋಃ ॥ ೩೨.೪೮ ॥

 

ಅರ್ಜುನನು ಕುರುಕ್ಷೇತ್ರಕ್ಕೆ ಬಂದವನೇ ಅಲ್ಲಿದ್ದ, ಪೂರ್ಣವಿಜ್ಞಾನ ಹಾಗೂ ಬಲವೆಂಬ ಸಂಪತ್ತಿನಿಂದ,

ಕೂಡಿರುವ, ವಾಸಿಷ್ಠರ ಕುಲಸಂಜಾತ, ಎಲ್ಲರಿಗೂ ಉಪದೇಶಕರಾಗಿರುವಾತ,

ವೇದವ್ಯಾಸದೇವರನ್ನು ಕಂಡ, ಉಮ್ಮಳಿಸುವ ದುಃಖದಿಂದ ,ಅವರ ಪಾದಗಳಿಗೆ ಎರಗಿದ.

 

ಸ ತೇನ ಪುಂಸಾಂ ಪ್ರವರೇಣ ಹೇತುಭಿಃ ಸಮ್ಬೋಧಿತೋSಜ್ಞಾನತಮೋಂಶುಮಾಲಿನಾ ।

ಸಂಸ್ಥಾಪ್ಯ ಚೇತಃ ಪುನರೇವ ತಸ್ಮಿನ್ ಜಹೌ ಶುಚಃ ಪ್ರಾಯಶ ಏವ ಧೈರ್ಯ್ಯಾತ್ ॥ ೩೨.೪೯ ॥

 

ಅಜ್ಞಾನವೆಂಬ ಕತ್ತಲಿಗೆ ನೇಸರನಂತಿದ್ದ, ಪುರುಷೋತ್ತಮ ವೇದವ್ಯಾಸರಿಂದ ,

ಅನೇಕ ಯುಕ್ತಿಗಳ ಬೋಧನೆಗೆ ಒಳಗಾದ. ಅರ್ಜುನ, ತನ್ನ ಮನಸ್ಸನ್ನು ಶ್ರೀಕೃಷ್ಣನಲ್ಲಿಟ್ಟ, ಬಹಳ ಮಟ್ಟಿಗೆ ತನ್ನ ದುಃಖವನ್ನು ಬಿಟ್ಟ. 

 

ಸ್ತ್ರಿಯೋ ಮ್ಲೇಚ್ಛಹೃತಾಃ ಕೃಷ್ಣಪ್ರೇಷಿತಾದ್ ದಾಲ್ಬ್ಯತಃ ಪುನಃ ।

ಗೋವಿನ್ದೈಕಾದಶೀಂ ಶ್ರುತ್ವಾ ಕೃತ್ವಾ ಸಾರಸ್ವತೇ ಜಲೇ ॥ ೩೨.೫೦ ॥            

 

ನಿಮಜ್ಜ್ಯ ವಾಯೋರ್ವಚನಾತ್  ತ್ಯಕ್ತದೇಹಾ ದಿವಂ ಯಯುಃ ।

ಅರ್ಜ್ಜುನಸ್ತು ಕುರುಕ್ಷೇತ್ರೇ ಹಾರ್ದ್ದಿಕ್ಯಯುಯುಧಾನಯೋಃ ॥ ೩೨.೫೧ ॥

 

ಸುತೌ ಸಾರಸ್ವತೇ ಚೈವ ದೇಶೇ ರಾಜ್ಯೇSಭ್ಯಷೇಚಯತ್ ।

ಅನಿರುದ್ಧಸುತಂ ವಜ್ರಂ ಪ್ರಿಯಂ ಕೃಷ್ಣಸ್ಯ ಸದ್ಗುಣಮ್ ॥ ೩೨.೫೨ ॥

 

ಸಶೂರಸೇನೇನ್ದ್ರಪ್ರಸ್ಥರಾಜಾನಮಕರೋದ್ ವಶೀ ।

ಸ್ತ್ರೀಬಾಲಾಂಶ್ಚ ಧನಂ ಚೈವ ತಸ್ಮಿನ್ ಸಂಸ್ಥಾಪ್ಯ ಫಲ್ಗುನಃ ॥ ೩೨.೫೩ ॥

 

 

ಯಯೌ ಭ್ರಾತೄನಶೇಷಂ ಚ ವೃತ್ತಂ ತೇಷಾಮವರ್ಣ್ಣಯತ್ ।

ತೇ ಚಾವಿಯೋಗಸಮಯಂ ಸ್ಮರನ್ತೋ ಮುರವೈರಿಣಾ ॥ ೩೨.೫೪ ॥

 

ಅಭ್ಯಷಿಞ್ಚನ್ ಭಾಗವತಂ ಮಾಹಾರಾಜ್ಯೇ ಪರೀಕ್ಷಿತಮ್ ।

ಸ್ತ್ರೀಹಾರಿಣಾಂ ಚ ಮ್ಲೇಚ್ಛಾನಾಂ ವಧಾಯೈನಮಯೋಜಯನ್  ॥ ೩೨.೫೫ ॥

 

ಮ್ಲೇಚ್ಛರಿಂದ ಅಪಹರಿಸಲ್ಪಟ್ಟ ಸ್ತ್ರೀಯರೆಲ್ಲರೂ ಕೂಡಾ,

ಶ್ರೀಕೃಷ್ಣ ತಾನೇ ಕಳುಹಿಸಿದ ದಾಲ್ಭ್ಯಮುನಿಗಳಿಂದ,

ಗೋವಿಂದ ಏಕಾದಶಿಯನ್ನು ಕೇಳಿದರು, ಆ ಏಕಾದಶಿಯನ್ನು ಆಚರಿಸಿದರು,

ಸರಸ್ವತೀ ನದಿಯಲ್ಲಿ ಮುಳುಗಿದರು, ಮುಖ್ಯಪ್ರಾಣನ ಮಾತಿಗೆ ಒಳಗಾದರು,

ದೇಹವನ್ನು ಬಿಟ್ಟು, ಸ್ವರ್ಗವ ಹೊಂದಿದರು.

 

ಕುರುಕ್ಷೇತ್ರದಲ್ಲಿದ್ದುಕೊಂಡು ಅರ್ಜುನ,      ಕೃತವರ್ಮ- ಸಾತ್ಯಕಿಯರ ಮಕ್ಕಳನ್ನ ,  ಸರಸ್ವತೀ ದಡದ ಕುರುಕ್ಷೇತ್ರ ಹಾಗೂ ಸಾರಸ್ವತ ರಾಜ್ಯದ ಅಧಿಪತಿಗಳಾಗಿ ವಿಧಿಬದ್ಧವಾಗಿ ಅಭಿಷೇಕ ಮಾಡಿದ.

ಕೃಷ್ಣಪ್ರಿಯನಾದ, ಸದ್ಗುಣನಾದ ಅನಿರುದ್ಧನ ಮಗ ವಜ್ರನನ್ನು ಶೂರಸೇನ ರಾಜ್ಯಸಹಿತ ಇಂದ್ರಪ್ರಸ್ಥದ ರಾಜನಾಗಿ ಮಾಡಿದ. ಆ ವಜ್ರನ ಸುಪರ್ದಿಯಲ್ಲಿ ಸ್ತ್ರೀಯರು, ಮಕ್ಕಳು ಹಾಗೂ  ಹಣವನ್ನೂ ಕೂಡಾ ನೆಲೆಗೊಳಿಸಿದ, ಅರ್ಜುನನು ಹಸ್ತಿನಪುರಕ್ಕೆ ತೆರಳಿದ ಮತ್ತು ಅಣ್ಣಂದಿರನ್ನು ಕುರಿತು, ನಡೆದ ಎಲ್ಲಾ ಘಟನೆಗಳನ್ನು ವಿವರಿಸಿದ. ಅವರೂ ಕೂಡಾ ಕೃಷ್ಣನೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಸ್ಮರಣೆಮಾಡಿಕೊಂಡರು, ಭಗವದ್ಭಕ್ತನಾದ ಪರೀಕ್ಷಿತನನ್ನು ಮಹಾಸಾಮ್ರಾಜ್ಯದಲ್ಲಿ ಅಭಿಷೇಕ ಮಾಡಿದರು. 

ಸ್ತ್ರೀಯರನ್ನು ಅಪಹರಿಸಿದ ಮ್ಲೇಚ್ಛರ ನಾಶಕ್ಕೆಂದು ಪರೀಕ್ಷಿತನನ್ನು ಪಾಂಡವರು ನೇಮಿಸಿದರು.

 

ಕೃತಂ ಚ ತೇನ ತತ್ ಕರ್ಮ್ಮ ವೋಢ್ರಾ ಪೈತಾಮಹಂ ಧುರಮ್ ।

ಸಮಯಂ ಪರಿರಕ್ಷದ್ಭಿರ್ನ್ನ ಪಾರ್ತ್ಥೈರೇವ ಯತ್ ಕೃತಮ್ ॥ ೩೨.೫೬ ॥

 

ತಾತನ ರಾಜ್ಯವನ್ನು ಹೊತ್ತಿರುವ ಪರೀಕ್ಷಿತನಿಂದ, ತಾತ ಒಪ್ಪಿಸಿದ ಕೆಲಸವು ಮಾಡಲ್ಪಟ್ಟಿತು ಕೂಡಾ.

ಯಾವ ಕೆಲಸವು ಒಪ್ಪಂದವನ್ನು ಪಾಲಿಸುವಂತಹ ಅರ್ಜುನಾದಿಗಳಿಂದ, ಮಾಡಲಿಲ್ಲವೋ, ಅಂತಹಾ ಕರ್ಮವನ್ನು ಪರೀಕ್ಷಿತರಾಜ ಮಾಡಿ ಮುಗಿಸಿದ.

 

ವಾಸುದೇವಪದಾ ಸ್ಪೃಷ್ಟಭೂಕಣ್ಟಕಸಮುದ್ಧೃತಿಃ ।

ಸಮಯಃ ಪಾಣ್ಡವಾನಾಂ ಹಿ ತಸ್ಯೈವಾನುಗತಿಃ ಪರಮ್ ॥ ೩೨.೫೭ ॥

 

ಅನುವ್ರಜದ್ಭಿರ್ವಿಶ್ವೇಶಂ ನಾಸ್ಮಾಭಿರ್ಭೂಸ್ತದುಜ್ಝಿತಾ ।

ಭೋಜ್ಯಾ ರಕ್ಷ್ಯಾSಪಿ ವಾ ತೇಷಾಮಿತ್ಯೇವ ಸಮಯಃ ಪುರಾ ॥ ೩೨.೫೮ ॥

 

ಶ್ರೀಕೃಷ್ಣನ ಪಾದದಿಂದ ಮುಟ್ಟಲ್ಪಟ್ಟ ಭೂಮಿಯ ಮೇಲೆ ಮುಳ್ಳುಗಳ ಹಾವಳಿ

(ಅಂದರೆ ಕೃಷ್ಣಪಾದಗಳಿಂದ ಮುಟ್ಟಲ್ಪಟ್ಟ ಭೂಮಿಗೆ ಕಂಟಕರಾದ ಅಸುರರ ದಾಳಿ),

ಶ್ರೀಕೃಷ್ಣನು ಪರಂಧಾಮಕ್ಕೆ  ತೆರಳಿದಮೇಲೆ, ಅವನನ್ನೇ ಅನುಸರಿಸುವವರು ಆದಮೇಲೆ,

ತಾವು ಕೃಷ್ಣನಿಲ್ಲದ  ಭೂಮಿಯನ್ನು ಆಳಲು ಅಥವಾ ಪಾಲಿಸಲು ಅರ್ಹರಲ್ಲ,

ಆದ್ದರಿಂದ ಅವನ ಹಿಂದೆಯೇ ಹೋಗುವುದು ಎನ್ನುವುದೇ ಅವರ ಒಪ್ಪಂದವಾಗಿತ್ತಲ್ಲ.

(ಈ ಕಾರಣದಿಂದ ಪಾಂಡವರು ಮ್ಲೇಚ್ಛರ ನಾಶಕ್ಕೆಂದು ಪರೀಕ್ಷಿತರಾಜನನ್ನು ನೇಮಿಸಿದರೇ ಹೊರತು ತಾವು ಆ ಕಾರ್ಯವನ್ನು ಮಾಡಲಿಲ್ಲ ಮತ್ತು ಅಧಿಕಾರದಲ್ಲಿ ಮುಂದುವರಿಯಲಿಲ್ಲ) 

No comments:

Post a Comment

ಗೋ-ಕುಲ Go-Kula