Wednesday 7 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 136 - 141

ಪ್ರೀತೇಷು ಸರ್ವಯದುಷು ಪ್ರಪಲಾಯಿತೇಷು ದುರ್ಯೋಧನಾದಿನೃಪತಿಷ್ವಖಿಲೇಷು ಭೀಮಾತ್ ।

ಕರ್ಣ್ಣೋsಭ್ಯಯಾದ್ಧರಿಹಯಾತ್ಮಜಮಾಶು ಮದ್ರರಾಜೋ ಜಗಾಮ ಪವನಾತ್ಮಜಮೇವ ವೀರಃ ॥೧೯.೧೩೬॥

ಎಲ್ಲಾ ಯಾದವರಲ್ಲೂ ಕಂಡ ಸಂತಸದ ನೋಟ ,

ದುರ್ಯೋಧನಾದಿ ರಾಜರದು ಭೀಮಭಯದ ಓಟ .

ಇಂದ್ರಪುತ್ರ ಅರ್ಜುನನ ಎದುರಿಸಿದ ವೀರಕರ್ಣ ,

ಮದ್ರರಾಜ ಶಲ್ಯನಿಂದ ಭೀಮನ ಮೇಲೆ ಆಕ್ರಮಣ .

 

ವಿಪ್ರೇಷು ದಣ್ಡಪಟದರ್ಭಮಹಾಜಿನಾನಿ ಕೋಪಾತ್ ಕ್ಷಿಪತ್ಸು ನ ವಿನಾಶನಮತ್ರ ಭೂಯಾತ್ ।

ಕ್ಷತ್ರಸ್ಯ ವೈರತ ಇತಿ ದ್ರುಪದೇ ಚ ಕೃಷ್ಣಂ ವಿಪ್ರಾಂಶ್ಚ ಯಾಚತಿ ಸ ಮಾರುತಿರಾರ ಶಲ್ಯಮ್ ॥೧೯.೧೩೭॥

ನಡೆಯುತ್ತಿದ್ದಾಗ ಈ ತೆರನಾದ ಘಟನೆ ,

ನೆರೆದ ಬ್ರಾಹ್ಮಣರಿಂದ ಅದರ ಪ್ರತಿಭಟನೆ .

ದಂಡಬಟ್ಟೆ , ದರ್ಭೆಕೃಷ್ಣಾಜಿನಗಳ ಎಸೆತ

ದ್ರುಪದಗೆ ವಿಪ್ರಕೋಪದಿ ಕ್ಷತ್ರಿಯನಾಶದ ಧಾವಂತ .

ಕೃಷ್ಣನನ್ನು ಬ್ರಾಹ್ಮಣರನ್ನು ದ್ರುಪದ ಬೇಡಿಕೊಳ್ಳುತ್ತಿದ್ದ ,

ಆ ಸಮಯದಲ್ಲಿ ಭೀಮಸೇನ ಶಲ್ಯನಿಗೆ ಎದುರಾದ .

 

ವೃಕ್ಷಂ ತ್ವಸೌ ಪ್ರತಿನಿಧಾಯ ಚ ಮದ್ರರಾಜಂ ದೋರ್ಭ್ಯಾಂ ಪ್ರಗೃಹ್ಯ ಜವತೋ ಗಗನೇ ನಿಧಾಯ ।

ಬನ್ಧುತ್ವತೋ ಭುವಿ ಶನೈರದಧಾತ್ ಸ ತಸ್ಯ ವಿಜ್ಞಾಯ ವೀರ್ಯ್ಯಮಗಮನ್ನಿಜರಾಜಧಾನೀಮ್ ॥೧೯.೧೩೮॥

ಭೀಮಸೇನ ಹಿಡಿದಿದ್ದ ಮರವನ್ನು ಪಕ್ಕಕ್ಕಿಟ್ಟ ,

ಶಲ್ಯನ ತನ್ನ ಕೈಗಳಿಂದ ಆಕಾಶದೆಡೆ ಎತ್ತಿಬಿಟ್ಟ .

ಬಂಧುತ್ವ ನೆನೆದು ಅವನನ್ನು ಮೆಲ್ಲಗೆ ಕೆಳಗಿಳಿಸಿದ ,

ಭೀಮಬಲ ತಿಳಿದ ಶಲ್ಯ ತನ್ನ ರಾಜಧಾನಿಗೆ ನಡೆದ .

 

ಪಾರ್ತ್ಥೋsಪಿ ತೇನ ಧನುಷಾ ಯುಯುಧೇ ಸ್ಮ ಕರ್ಣ್ಣಂ ಸೋsಪ್ಯಸ್ತ್ರಬಾಹುಬಲಮಾವಿರಮುತ್ರ ಚಕ್ರೇ ।

ತೌ ಧನ್ವಿನಾಮನುಪಮೌ ಚಿರಮಸ್ಯತಾಂ ಚ ಸೂರ್ಯ್ಯಾತ್ಮಜೋsತ್ರ ವಚನಂ ವ್ಯಥಿತೋ ಬಭಾಷೇ ॥೧೯.೧೩೯॥

ಅರ್ಜುನನದು ಆ ಬಿಲ್ಲಿನಿಂದಲೇ ಕರ್ಣನ ಮೇಲೆ ಯುದ್ಧ ,

ಕರ್ಣ ಕೂಡಾ ಅಸ್ತ್ರ ಬಾಹುಬಲಗಳ ಯುದ್ಧದಲ್ಲಿ ತೋರಿದ .

ನಡೆಯಿತು ಅನುಪಮ ಬಿಲ್ಲುಗಾರರ ಕಾದಾಟ ,

ವ್ಯಥಿತನಾದ ಕರ್ಣ ನುಡಿದ ಕೆಳಗಿನ ಮಾತ .

 

ತ್ವಂ ಫಲ್ಗುನೋ ಹರಿಹಯೋ ದ್ವಿಜಸತ್ತಪೋ ವಾ ಮೂರ್ತ್ತಂ ನ ಮೇ ಪ್ರಮುಖತಃ ಸ್ಥಿತಿಮನ್ಯ ಈಷ್ಟೇ ।

ಯೋ ವಾsಸ್ಮಿ ಕೋsಪಿ ಯದಿ ತೇ ಕ್ಷಮಮದ್ಯ ಬಾಣಾನ್ ಮುಞ್ಚಾನ್ಯಥೇಹಿ ರಣತಸ್ತ್ವಿತಿ ಪಾರ್ತ್ಥ ಆಹ ॥೧೯.೧೪೦॥

ನೀನು ಅರ್ಜುನನೇ , ಇಂದ್ರನೇ, ಮೂರ್ತಿವೆತ್ತುಬಂದ ವಿಪ್ರತಪಸ್ಸೋ ಎಂದ ಕರ್ಣ ,

ನನ್ನೆದುರು ನಿಂತು ಹೋರಾಡಲು ಬೇರ್ಯಾವನಿಗೆ ಉಂಟು ಅಂಥಾ ತ್ರಾಣ .

ಅರ್ಜುನನೆಂದ -ನಾನ್ಯಾರಾದರೆ ಅದರಿಂದ ನಿನಗೇನು ,

ಬಲವಿದ್ದರೆ ಹೋರಾಡು-ಇಲ್ಲವಾದರೆ ತೊಲಗು ನೀನು .

 

ಕಾರ್ಯ್ಯಂ ನ ಮೇ ದ್ವಿಜವರೈಃ ಪ್ರತಿಯೋಧನೇನೇತ್ಯುಕ್ತ್ವಾ ಯಯೌ ರವಿಸುತಃ ಸ ಸುಯೋಧನಾದ್ಯೈಃ ।

ನಾಗಾಹ್ವಯಂ ಪುರಮಥ ದ್ರುಪದಾತ್ಮಜಾಂ ತಾಮಾದಾಯ ಚಾರ್ಜ್ಜುನಯುತಃ ಪ್ರಯಯೌ ಸ ಭೀಮಃ ॥೧೯.೧೪೧॥

ಕರ್ಣನೆಂದ -ವಿಪ್ರಶ್ರೇಷ್ಠರೊಂದಿಗೆ ಕಾದಾಡಿ ಪ್ರಯೋಜನವೇನು

ದುರ್ಯೋಧನಾದಿಗಳೊಂದಿಗೆ ಹಸ್ತಿನಾವತಿಗೆ ಹೊರಟನು ತಾನು.

ನಂತರ ಅರ್ಜುನ ದ್ರೌಪದಿಯಿಂದೊಡಗೂಡಿದ ಭೀಮಸೇನ,

ಪ್ರಾರಂಭಿಸಿದ ಅವರ ಬಿಡಾರದತ್ತ ಮುಖಮಾಡಿ ಪ್ರಯಾಣ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula