Monday 19 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 188 * 195

 ವಾಸಿಷ್ಠಯಾದವವೃಷಾವಪಿ ಕೇಶವೌ ತೌ ತತ್ರೋಷತುಃ ಪರಮಸೌಹೃದತೋ ಹಿ ತೇಷು ।

ತಾಭ್ಯಾಮನನ್ತಗುಣಪೂರ್ಣ್ಣಸುಖಾತ್ಮಕಾಭ್ಯಾಂ ಪಾರ್ತ್ಥಾಶ್ಚ ತೇ ಮುಮುದಿರೇ ಯುತಸತ್ಕಥಾಭಿಃ ॥೧೯.೧೮೮॥

ವಾಸಿಷ್ಠಕೃಷ್ಣ ಮತ್ತು ಯಾದವಕೃಷ್ಣ ಎರಡು ರೂಪದಿಂದ ಪಾಂಡವರೊಂದಿಗೆ ಭಗವಂತನ ಹಸ್ತಿನಾಪುರವಾಸ,

ಗುಣಸಾಗರ ಸುಖದ ಕಡಲಾದವನಿಂದ(ರಿಂದ) ಶಾಸ್ತ್ರ ಉಪದೇಶ ಕೇಳುತ್ತಿದ್ದ ಪಾಂಡವರಿಗೆ ಅತೀವವಾದ ಸಂತಸ.

 

ಪೂರ್ವಂ ಹಿ ತೇಷು ವನಗೇಷು ಬಭೂವ ಕಾಶಿರಾಜ್ಞಃ ಸುತಾಕೃತ ಉರುಕ್ಷಿತಿಪಾಲಯೋಗಃ ।

ತತ್ರ ಸ್ವಯಮ್ಬರಗತಾಂ ಧೃತರಾಷ್ಟ್ರಪುತ್ರಃ ಕನ್ಯಾಂ ಬಲಾಜ್ಜಗೃಹ ಆತ್ಮಬಲಾತಿದೃಪ್ತಃ ॥೧೯.೧೮೯॥

ಹಿಂದೊಮ್ಮೆ ಪಾಂಡವರು ಕಾಡಿನಲ್ಲಿ ವಾಸ ಮಾಡುತ್ತಿದ್ದಾಗ,

ಕಾಶೀರಾಜನ ಮಗಳ ಸ್ವಯಂವರಕ್ಕೆ ರಾಜರು ಸೇರಿದರಾಗ.

ದುರ್ಯೋಧನಗೆ ತಾನೇ ಮಹಾಬಲಿಷ್ಠನೆಂಬ ಅಹಂಕಾರ,

ಮಂಟಪದಲ್ಲಿದ್ದ ಕನ್ಯೆಯನ್ನು ಮಾಡಿದನವ ಅಪಹಾರ.

 

ಪೂರ್ವಂ ಹಿ ರಾಜಗಣನೇ ಮಗಧಾಧಿರಾಜಃ ಸಙ್ಖ್ಯಾತ ಇತ್ಯತಿರುಷಾ ಪ್ರಗೃಹೀತಕನ್ಯೇ ।

ದುರ್ಯ್ಯೋಧನೇ ನೃಪತಯೋ ಯುಯುಧುಃ ಸ್ಮ ತೇನ ಭಗ್ನಾಶ್ಚ ಕರ್ಣ್ಣಸಹಿತೇನ ಸಹಾನುಜೇನ॥೧೯.೧೯೦॥

ಸ್ವಯಂವರಕ್ಕೂ ಮೊದಲು ನಡೆಯಿತು ರಾಜರ ತುಲನೆ- ಗಣನೆ,

ಅವರಲ್ಲಿ ಜರಾಸಂಧನೇ ಮೊದಲನೆಯವನೆಂದು ಬಂದ ಮನ್ನಣೆ.

ಉದ್ರಿಕ್ತ ದುರ್ಯೋಧನನಿಂದ ಕನ್ಯೆಯದಾಯಿತು  ಅಪಹರಣ,

ಉಳಿದ ರಾಜರೆಲ್ಲರೂ ಕೂಡಿಕೊಂಡು ಮಾಡಿದರು ಆಕ್ರಮಣ,

ಅವರೆಲ್ಲರ ಸೋಲಿಸಿದ-ಕರ್ಣ,ತಮ್ಮಂದಿರೊಡನೆ ದುರ್ಯೋಧನ.

 

ಭಗ್ನೇಷು ತೇಷು ಪುನರಾತ್ತಶರಾಸನೇಷು ಕರ್ಣ್ಣೋ ಜಗಾದ ಧೃತರಾಷ್ಟ್ರಸುತಂ ಪ್ರಯಾಹಿ ।

ಯುಕ್ತಃ ಸಹೋದರಜನೈರ್ಗ್ಗರುಭೀಷ್ಮಮುಖ್ಯಯುಕ್ತಸ್ಯ ತೇ ನ ಪುರಮೇತ್ಯ ಹಿ ಧರ್ಷಣೇಶಾಃ॥೧೯.೧೯೧॥

ಸೋತವರೆಲ್ಲಾ ಮತ್ತೆ ಬಿಲ್ಲೆತ್ತಿಕೊಳ್ಳುತ್ತಿದ್ದಾಗ,

ದುರ್ಯೋಧನನ ಕುರಿತು ಕರ್ಣ ಹೇಳುವನಾಗ,

ಮೊದಲು ನಿನ್ನ ತಮ್ಮಂದಿರೊಡಗೂಡಿ ನೀನು ಮಾಡು ಪಲಾಯನ,

ದ್ರೋಣ ಭೀಷ್ಮರ ರಕ್ಷಣೆಯಿದ್ದಾಗ ಇವರಿಂದ  ಆಗದು ಆಕ್ರಮಣ.

 

ಏಕಾನ್ತತೋ ಜಯಮವೀಕ್ಷ್ಯ ಚ ನಾನುಯಾತಿ ಬಾರ್ಹದ್ರಥಃ ಪುರಗತಸ್ಯ ಜಯೇ ನ ನಿಷ್ಠಾ ।

ದ್ರೌಣಿಂ ಚ ರುದ್ರತನುಮೇಷ ಸದಾ ವಿಜಾನನ್ ನೋ ತೇನ ಯುದ್ಧಮಭಿವಾಞ್ಛತಿ ರುದ್ರಭಕ್ತಃ॥೧೯.೧೯೨॥

ಬೃಹದ್ರಥನ ಮಗ ಜರಾಸಂಧಗೆ ಇರುವುದಿಲ್ಲ ಗೆಲುವಿನ ಖಾತರಿ,

ಮಾಡಲಾರ -ಪಟ್ಟಣ ಸೇರಿದ ನಿನ್ನ ಹಿಂಬಾಲಿಸುವ ಉಸಾಬರಿ.

ನಿಶ್ಚಯವಿರದ ಜಯ-ರುದ್ರಾವತಾರಿ ಅಶ್ವತ್ಥಾಮನ ಭಯ,

ಅಶ್ವತ್ಥಾಮರೊಡನೆ ಕಾದಲಾರ ಸ್ವಯಂ ರುದ್ರಭಕ್ತನವ.

 

ಏಕೋsಹಮೇವ ನೃಪತೀನ್ ಪ್ರತಿಯೋಧಯಿಷ್ಯ ಏತೈರ್ಮ್ಮಯಿ ಪ್ರತಿಜಿತೇsಪಿ ನ ತೇsಸ್ತ್ಯಕೀರ್ತ್ತಿಃ  ।

ಏಕಂ ಚ ತೇsನುಜಮಿಮೇ ಯದಿ ಪೌರುಷೇಣ ಗೃಹ್ಣೀಯುರತ್ರ ತವ ಕೀರ್ತ್ತಿರುಪೈತಿ ನಾಶಮ್॥೧೯.೧೯೩॥

ನಾನೊಬ್ಬನೇ ಮಾಡುತ್ತೇನೆ ಈ ಎಲ್ಲಾ ರಾಜರ ಮೇಲೆ ಆಕ್ರಮಣ,

ನಾನೊಮ್ಮೆ ಸೋತರೂ ನಿನಗಾಗುವುದಿಲ್ಲ ಅದರಿಂದ ಅವಮಾನ.

ಒಂದುವೇಳೆ ನೀನಿಲ್ಲಿದ್ದು ಹೋರಾಡುತ್ತಿರುವಾಗ,

ನಿನ್ನೊಬ್ಬ ತಮ್ಮ ಸೆರೆಯಾದರೂ ಕೀರ್ತಿನಾಶವಾಗ.

 

ಭೀಷ್ಮಾದಯೋsಪಿ ನಹಿ ಯೋಧಯಿತುಂ ಸಮರ್ತ್ಥಾ ರಾಜ್ಞಾ ಹ್ಯನೇನ ತತ ಏವ ಹಿ ಬಾಹ್ಲಿಕೋsಸ್ಯ ।

ಭೃತ್ಯೋ ಬಭೂವ ನತು ಭೀಷ್ಮಮಯಂ ಯುಧೇsಗಾದ್ ರಾಜಾ ನಹೀತಿ ನಚ ತೇನ ವಿರೋಧ ಆಸೀತ್ ॥೧೯.೧೯೪॥

ಭೀಷ್ಮಾದಿಗಳು ಕೂಡಾ ಜರಾಸಂಧನೊಡನೆ ಕಾದಾಡಲು ಅಲ್ಲ ಸಮರ್ಥ,

ಹಾಗಾಗಿಯೇ ಯುದ್ಧದಿ ಬಾಹ್ಲೀಕ ಜರಾಸಂಧಗೆ ಸಹಾಯಕನಾಗಿ ನಿಂತನಾತ.

ಭೀಷ್ಮಾಚಾರ್ಯರು ಸ್ವಯಂ ಒಬ್ಬ ರಾಜರಲ್ಲ,

ಜರಾಸಂಧ ಅವರೊಂದಿಗೆ ಯುದ್ಧಕೆ ಹೋಗಲ್ಲ,

ಹೀಗೆ ಜರಾಸಂಧಗೆ ಭೀಷ್ಮರಲ್ಲಿ ವಿರೋಧವಿಲ್ಲ.

 

ಇತ್ಯುಕ್ತ ಆಶು ಸ ವಿಮೃಶ್ಯ ಯಯೌ ಪುರಂ ಸ್ವಂ ಕರ್ಣ್ಣೋsಪಿ ತೈಃ ಪ್ರತಿಯುಯೋಧ ಜಿಗಾಯ ಚೈನಾನ್ ।

ಕರ್ಣ್ಣಸ್ಯ ವೀರ್ಯ್ಯಮಗಣಯ್ಯ ಜರಾಸುತೋsಪಿ ಹ್ಯೇಕೈಕಮೇವ ನೃಪ ತಿಂ ಸ ದಿದೇಶ ಯೋದ್ಧುಮ್ ॥೧೯.೧೯೫॥

ಕರ್ಣನ ಮಾತು ಸರಿಯೆನಿಸಿ ದುರ್ಯೋಧನ ಪಟ್ಟಣಕ್ಕೆ ಹೊರಟ,

ಕರ್ಣ ರಾಜರೆಲ್ಲರನ್ನೂ ಎದುರಿಸಿ ಗೆದ್ದ ಮಾಡಿ ದಿಟ್ಟ ಹೋರಾಟ.

ಕರ್ಣಸಾಮರ್ಥ್ಯದರಿವಿರದ ಜರಾಸಂಧ ಒಬ್ಬೊಬ್ಬರನ್ನೇ ಕಳಿಸಿ ಕೆಟ್ಟ.

No comments:

Post a Comment

ಗೋ-ಕುಲ Go-Kula