Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 132 - 137

 ಅಪಾಹಸತ್ ತಂ ಜಗದೇಕಸುನ್ದರೀ ಹರಿಪ್ರಿಯಾsಥೋ ಜಗದೇಕಮಾತರಮ್ ।

ಉವಾಚ ಶಕ್ರೋ ಜಗತಾಂ ಜನಿತ್ರೇ ಪ್ರದರ್ಶಯಾಮೋ ವಯಮಾತ್ಮಶೈಶವಮ್ ॥ ೨೦.೧೩೨ ॥

ಇಂದ್ರ ಓಡುತ್ತಿರಲು ಜಗದೇಕಸುಂದರಿ ಭಾಮೆ ಅವನನ್ನು ಕಾದಾಡು ಬಾ ಎಂದು ಮಾಡಿದಳು ಅಪಹಾಸ್ಯ,

ಇಂದ್ರನೆನ್ನುತ್ತಾನೆ ಜಗದ್ಪಿತನೆದುರಿಗೆ ನಾವು ಬಾಲಚಾಪಲ್ಯ ತೋರಿಸುತ್ತಿರುವುದು ಕೇವಲ ಬಾಲಿಷ.

 

ಜಗಾಮ ಚಾಥೋ ಶರಣಂ ಜನಾರ್ದ್ದನಂ ಸುರೈರ್ವೃತೋ ದೇವಪತಿಃ ಕ್ಷಮಾಪಯನ್ ।

ಶೃಙ್ಗಂ ಚ ದತ್ವಾ ಮಣಿಪರ್ವತಸ್ಯ ಪ್ರಣಮ್ಯ ದೇವ್ಯಾ ಸಹಿತಂ ಜಗದ್ಗುರುಮ್ ॥೨೦.೧೩೩ ॥

ಸಮಸ್ತ ದೇವತೆಗಳ ತಾತ್ಕಾಲಿಕ ಅಸುರಾವೇಶ ಕೊನೆಗೊಂಡ ನಂತರ,

ದೇವತೆಗಳೊಡಗೂಡಿ ಕ್ಷಮೆ ಬೇಡುತ್ತಾ ಕೃಷ್ಣನಲ್ಲಿ ಶರಣು ಬಂದ ಇಂದ್ರ,

ಭಾಮೆಯೊಡಗೂಡಿದ ಕೃಷ್ಣಗೆ ಮಣಿಶಿಖರವ ಕೊಟ್ಟು ಮಾಡಿದ ನಮಸ್ಕಾರ.

 

ಯಯಾಚ ಏನಂ ಪರಿರಕ್ಷಣಾಯ ಶಚೀಪತಿಃ ಕೇಶವಮರ್ಜ್ಜುನಸ್ಯ ।

ಜಗಾದ ಕೃಷ್ಣೋsಪಿ ಧರಾತಳಸ್ಥಿತೇ ನ ಮಯ್ಯಮುಂ ಕಶ್ಚನ ಜೇಷ್ಯತೀತಿ ॥ ೨೦.೧೩೪ ॥

 ಶಚೀಪತಿಯಾದ ಇಂದ್ರ ಅರ್ಜುನನ ರಕ್ಷಣೆಗಾಗಿ ಕೃಷ್ಣನಲ್ಲಿ ಬೇಡಿಕೊಳ್ಳುತ್ತಾನೆ,

ಕೃಷ್ಣ ತಾನು ಭುವಿಯಲ್ಲಿರುವವರೆಗೂ ಯಾರೂ ಅರ್ಜುನನ ಗೆಲ್ಲಲಾರರು ಎನ್ನುತ್ತಾನೆ.

 

ತಮರ್ಜ್ಜುನಾರ್ತ್ಥಂ ವರಮಾಪ್ಯ ವಾಸವಃ ಪುನಃಪುನಶ್ಚಕ್ರಧರಂ ಪ್ರಣಮ್ಯ ।

ಪ್ರಸನ್ನದೃಷ್ಟ್ಯಾಹರಿಣಾsಭಿವೀಕ್ಷಿತೋ ಯಯೌ ಮಹಾಭಾಗವತಃ ಸ್ವಮಾಲಯಮ್ ॥ ೨೦.೧೩೫ ॥

ಅರ್ಜುನನಿಗಾಗಿ ಆ ವರವ ಪಡೆದ ಮಹಾಭಾಗವತ ಇಂದ್ರ,

ಮಾಡುತ್ತಾನೆ ಕೃಷ್ಣಪರಮಾತ್ಮನಿಗೆ ಮತ್ತೆ ಮತ್ತೆ ನಮಸ್ಕಾರ.

ಪ್ರಸನ್ನದೃಷ್ಟಿಯಿಂದ ಕೃಷ್ಣ ಅವನ ನೋಡಿದ,

ಧನ್ಯನಾದ ಇಂದ್ರ ತನ್ನ ಮನೆಯತ್ತ ತೆರಳಿದ.

 

ಕೃಷ್ಣೋsಪ್ಯನುಜ್ಞಾಪ್ಯ ಪುರನ್ದರಂ ಪುರೀಂ ನಿಜಾಂ ವ್ರಜನ್ನಭ್ಯಧಿಕಂ ವ್ಯರೋಚತ ।

ಕಿರೀಟಧಾರೀ ವರಕುಣ್ಡಲೋಲ್ಲಸನ್ಮುಖಾಮ್ಬುಜಃ ಪೀತಪಟಃ ಸಕೌಸ್ತುಭಃ ॥೨೦.೧೩೬ ॥

ಉತ್ಕೃಷ್ಟವಾದ ಕಿರೀಟವ ಧರಿಸಿದಾತ,

ಕುಂಡಲಶೋಭಿತ ಮುಖಕಮಲವುಳ್ಳಾತ,

ಅಪೂರ್ವ ಹಳದಿಬಣ್ಣದ ವಸ್ತ್ರಧಾರಿ,

ಕೌಸ್ತುಭಾಭರಣದಿ ಶೋಭಿಸುವ ಶೌರಿ,

ಇಂದ್ರಗೆ ಅನುಜ್ಞೆ ಕೊಟ್ಟು ಕಳುಹಿಸಿದ,

ತಾನೂ ತನ್ನ ಪಟ್ಟಣದ ಕಡೆ ತೆರಳಿದ.

 

ವಿರೋಚಮಾನಸ್ಯ ಸದಾ ಜಗದ್ಪ್ರಭೋರ್ನ್ನವೈ ವಿಶೇಷಃ ಕ್ವಚಿದಚ್ಯುತಸ್ಯ ।

ತಥಾsಪಿ ತತ್ ಸ್ಮಾರಯಿತುಂ ವಚೋ ಭವೇದಪೇಕ್ಷ್ಯ ಚಾಲ್ಪಜ್ಞಮತಿಂ ಪುರಾಣಗಮ್ ॥೨೦.೧೩೭ ॥

ಭಗವಂತನದು ಯಾವಾಗಲೂ ಅಮಿತವಾದ ಸೌಂದರ್ಯ,

ಹೊಳೆವ ಜಗದೊಡೆಯಗೆ ವಿಶೇಷವೆಂಬುದಲ್ಲ ಆಶ್ಚರ್ಯ.

ಅವನು ಎಲ್ಲೆಲ್ಲೂ ಸದಾಕಾಲ ಪರಮಶೋಭಿತ,

ಅಲ್ಪಜ್ಞರಿಗೆ ಪುರಾಣಗಳು ಹೇಳಿವೆ ಅಂತಹ ಮಾತ.

ಅವನು ಯಾವಾಗಲೋ ಒಮ್ಮೆ ಶೋಭಿಸುವುದಲ್ಲ,

ಸದಾಕಾಲ ಶೋಭಿಸುವ ಜಗದೇಕೈಕ ಮಲ್ಲ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula