Friday 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 149 - 153

 ತಂ ದ್ವ್ಯಷ್ಟಸಾಹಸ್ರಗೃಹೇಷು ದೃಷ್ಟ್ವಾ ತಾವತ್ಸ್ವರೂಪೈರ್ವಿಹರನ್ತಮೇಕಮ್ ।

ಸುವಿಸ್ಮಿತಃ ಪ್ರಯಯೌ ತಂ ಪ್ರಣಮ್ಯ ಶಕ್ರಪ್ರಸ್ಥಂ ಪೂಜಿತಶ್ಚಾತ್ರ ಪಾರ್ತ್ಥೈಃ  ॥೨೦.೧೪೯॥

೧೬,೧೦೮ ಮನೆಗಳಲ್ಲಿ ಅಷ್ಟೂ ರೂಪಗಳಿಂದ ಆ ಒಬ್ಬ ಶ್ರೀಕೃಷ್ಣನೇ ಮಾಡುತ್ತಿದ್ದ ವಿಹಾರ,

ಅದನ್ನು ನೋಡಿ ಅಚ್ಚರಿಗೊಳಗಾದ ನಾರದಮುನಿ ಶ್ರೀಕೃಷ್ಣದೇವಗೆ ಮಾಡಿದರು ನಮಸ್ಕಾರ.

ಅಲ್ಲಿಂದ ನಾರದರು ಇಂದ್ರಪ್ರಸ್ತಕ್ಕೆ ತೆರಳಿದರು,

ಅಲ್ಲಿ ಪಾಂಡವರಿಂದ ಪೂಜಿಸಲ್ಪಟ್ಟವರಾದರು.

 

[೧೬,೧೦೮ ಮನೆಗಳಲ್ಲಿ ಅಷ್ಟು ರೂಪಗಳಿಂದ ಭಗವಂತ ವಿಹಾರ ಮಾಡುತ್ತಿದ್ದುದನ್ನು ನೋಡಿ ನಾರದರು  ಅಚ್ಚರಿಗೊಳಗಾದರು ಎನ್ನುವುದನ್ನು ಭಾಗವತ ವಿವರಿಸಿದರೆ, ಅವರು  ಪಾಂಡವರ ಬಳಿ ಬಂದ ವಿವರವನ್ನು ಮಹಾಭಾರತದ ಆದಿಪರ್ವದಲ್ಲಿ ವಿವರಿಸಿದ್ದಾರೆ. ಇಲ್ಲಿ ಆಚಾರ್ಯರು ಎಲ್ಲವನ್ನೂ ಕಾಲಕ್ರಮದಲ್ಲಿ ನಮಗೆ ನೀಡಿದ್ದಾರೆ].

ಸ ಆಜ್ಞಯಾ ಬ್ರಹ್ಮಣ ಆಹ ಕೃಷ್ಣಾಂ ಕ್ರಮಾತ್ ಕರ್ತ್ತುಂ ಭೀಮ ಏವೈಕಸಂಸ್ಥಾಮ್ ।

ಅನ್ಯಾ ದೇವೀಃ ಸ್ವಾಪಯಿತ್ವಾ ಶರೀರೇ  ತಸ್ಯಾ ಭಾರತ್ಯಾಃ ಪೂರ್ಣ್ಣಭೋಗಾರ್ತ್ಥಮೇವ ॥೨೦.೧೫೦

ಬ್ರಹ್ಮನ ಆಜ್ಞೆಯಂತೆ ಭಾರತೀದೇವಿಯ ಪೂರ್ಣಭೋಗಕ್ಕಾಗಿ,

ದ್ರೌಪದಿದೇವಿ ಭೀಮನಿಗೆ ಮಾತ್ರ ಸೀಮಿತವಾಗಿರುವುದಕ್ಕಾಗಿ,

ಉಳಿದ ದೇವಿಯರು ಆಕೆಯ ಶರೀರದಲ್ಲಿ ಸುಪ್ತವಾಗಿರಲಿಕ್ಕಾಗಿ,

ನಾರದರು ಪಾಂಡವರಿಗೆ ಹೇಳುತ್ತಾರೆ ಅದರ ನಿಯಮನಕ್ಕಾಗಿ.

 

[ಲೋಕದಲ್ಲಿ ಹೆಣ್ಣಿನ ವಿಷಯದಲ್ಲಿ ಜಗಳ ಬರುವುದು ಸಾಮಾನ್ಯ. ಅದಕ್ಕೆ ಸಂಬಂಧಿಸಿದ   ಕಥೆಯೊಂದನ್ನು ನಾರದರು ಪಾಂಡವರಿಗೆ ಹೇಳುತ್ತಾರೆ:]

ಸುನ್ದೋಪಸುನ್ದೌ ಭ್ರಾತರೌ ಬ್ರಹ್ಮವಾಕ್ಯಾತ್ ಪರಸ್ಪರಾದನ್ಯತೋ ನೈವ ವದ್ಧ್ಯೌ ।

ತಿಲೋತ್ತಮಾರ್ತ್ಥೇ ನಿಹತೌ ಪರಸ್ಪರಂ ತಯೋರ್ವದಾರ್ತ್ಥೇ ಸೃಷ್ಟಯಾ ತೇನ ದೈತ್ಯೌ॥೨೦.೧೫೧॥

ಸುಂದ ಉಪಸುಂದರು ಇಬ್ಬರೂ ಅಣ್ಣತಮ್ಮಂದಿರು,

ಬ್ರಹ್ಮವರದಿಂದ ಇಬ್ಬರೂ ಇನ್ನೊಬ್ಬರಿಂದ ಅವಧ್ಯರು.

ಅವರು ಒಬ್ಬರನ್ನೊಬ್ಬರು ಕೊಲ್ಲಬಹುದಾಗಿತ್ತು,

ಆ ವಿಧಿ ತಿಲೋತ್ತಮೆಯಿಂದ ಆಟ ಆಡಿಸಿತ್ತು.

ಅವಳನ್ನೇ ಇಬ್ಬರೂ ಅತೀವವಾಗಿ ಇಷ್ಟಪಟ್ಟರು,

ಅವಳಿಗಾಗಿ ಪರಸ್ಪರ ಹೊಡೆದಾಡಿಕೊಂಡು ಸತ್ತರು.

 

 

[ಹೆಂಡತಿಯ ವಿಷಯದಲ್ಲಿ ನಿಮ್ಮಲ್ಲಿ ಜಗಳವಾಗಬಾರದು, ಅದಕ್ಕೆ ಒಂದು ವ್ಯವಸ್ಥೆ ಆಗಬೇಕು. ಇದಕ್ಕಾಗಿ ನೀವು ಒಂದು ಕ್ರಮವನ್ನು ಆಶ್ರಯಿಸಬೇಕು ಎಂದ ನಾರದರು ಉಪಾಯವೊಂದನ್ನು ಹೇಳುತ್ತಾರೆ:]. 

 ಅತಃ ಪೃಥಗ್  ವತ್ಸರತೋ ಭವತ್ಸು ಕ್ರಮಾತ್ ಕೃಷ್ಣಾ ತಿಷ್ಠತಾಂ ಯೋsನ್ಯಯುಕ್ತಾಮ್ ।

ಪಶ್ಯೇದ್ ವೋsಸೌ ವತ್ಸರಂ ತೀರ್ತ್ಥಯಾತ್ರಾಂ ಕುರ್ಯ್ಯಾದಿತಿ ಸ್ಮಾಥ ಚಕ್ರುಸ್ತಥಾ ತೇ ॥೨೦.೧೫೨॥

ನಾರದರೊಂದು ಸಿದ್ಧ ಸೂತ್ರವ ಇಡುತ್ತಾರೆ ಪಂಚ ಪಾಂಡವರಲ್ಲಿ,

ಅದರಂತೆ ದ್ರೌಪದಿ ಇರಬೇಕು ಒಂದೊಂದು ವರ್ಷ ಒಬ್ಬರ ಬಳಿಯಲ್ಲಿ.

ಹಾಗೆ ಇನ್ನೊಬ್ಬರೊಂದಿಗಿರುವ ದ್ರೌಪದಿಯ ಯಾರಾದರೂ ಕಂಡಾಗ,

ಅವರು ಇಡೀ ಒಂದು ವರ್ಷ ತೀರ್ಥಯಾತ್ರೆ ಮಾಡಿಕೊಂಡು ಬರಬೇಕಾಗ.

ಇದು ನಾರದರು ಮಂಡಿಸಿದ ಒಪ್ಪಂದ,

ಒಪ್ಪಿಕೊಳ್ಳಲ್ಪಟ್ಟಿತು ಪಂಚ ಪಾಂಡವರಿಂದ.

 

ತತಃ ಕದಾಚಿತ್ ಧರ್ಮ್ಮರಾಜೇನ ಯುಕ್ತಾಂ ಶಸ್ತ್ರಾಗಾರೇ ವಿಪ್ರಗೋರಕ್ಷಣಾರ್ತ್ಥಮ್ ।

ಶಸ್ತ್ರಾದಿತ್ಸುಃ ಫಲ್ಗುನೋsದ್ರಾಕ್ ಸ ಶಸ್ತ್ರೈರ್ದ್ದಸ್ಯೂನ್ ಹತ್ವಾ ತೀರ್ತ್ಥಯಾತ್ರೋನ್ಮುಖೋsಭೂತ್ ॥೨೦.೧೫೩॥

ಆನಂತರದಲ್ಲಿ ಯಾವುದೋ ಒಂದು ದಿನ,

ಹಸುರಕ್ಷಣೆಯಾಗಬೇಕಿತ್ತು ವಿಪ್ರನೊಬ್ಬನ,      ಶಸ್ತ್ರಕ್ಕಾಗಿ ಆಯುಧಶಾಲೆಗೆ ಬಂದ ಅರ್ಜುನ,

ಆಯಿತು ಧರ್ಮಜನೊಡನಿದ್ದ ದ್ರೌಪದಿ ದರ್ಶನ.

ಸ್ವೀಕರಿಸಿದ ಅಸ್ತ್ರಗಳಿಂದ ಹಸುಗಳ್ಳರ ಕೊಂದ,

ಮಾತಿನಂತೆ ಅರ್ಜುನ ತೀರ್ಥಯಾತ್ರೆಗೆ ಸಿದ್ಧನಾದ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula