Sunday 18 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 73 - 80

ತತಃ ಕದಾಚಿನ್ಮೃಗಯಾಂ ಗತಃ ಸ ದದರ್ಶ ಕನ್ಯಾಪ್ರವರಾಂ ತು ಶನ್ತನುಃ ।
ಯಾ ಪೂರ್ವಸರ್ಗ್ಗೇ ಪಿತೃಪುತ್ರಿಕಾ ಸತೀ ಚಚಾರ ವಿಷ್ಣೋಸ್ತಪ ಉತ್ತಮಂ 
ಚಿರಮ್  ॥೧೧.೭೩॥

ದೇವವ್ರತಗೆ ಯುವರಾಜ ಪದವಿಯ ಪಟ್ಟಾಭಿಷೇಕ ಆದಮೇಲೆ,
ಬೇಟೆಗೆ ಹೋದ ಶಂತನುವಿಗೆ ಕಂಡಳೊಬ್ಬ ಶ್ರೇಷ್ಠ (ಕನ್ಯೆ)ಬಾಲೆ.
ಪೂರ್ವಜನ್ಮದಲ್ಲಿ ಅವಳು ಪಿತೃಗಳ ಪುತ್ರಿಯಾಗಿ ಇದ್ದವಳು,
ವಿಷ್ಣು ಕುರಿತು ಬಹುಕಾಲ ಉತ್ತಮ ತಪಸ್ಸನ್ನು ಮಾಡಿದ್ದಳು.

ಯಸ್ಯೈ ವರಂ ವಿಷ್ಣುರದಾತ್ ಪುರಾsಹಂ ಸುತಸ್ತವ ಸ್ಯಾಮಿತಿ ಯಾ ವಸೋಃ ಸುತಾ ।
ಜಾತಾ ಪುನರ್ದ್ದಾಶಗೃಹೇ ವಿವರ್ದ್ಧಿತಾ ವ್ಯಾಸಾತ್ಮನಾ ವಿಷ್ಣುರಭೂಚ್ಚ 
ಯಸ್ಯಾಮ್ ॥೧೧.೭೪॥

ಯಾರಿಗಿತ್ತೋ ನಾರಾಯಣನಿಂದ ಮುಂದಿನ ಜನ್ಮದಲ್ಲಿ ನಿನ್ನ ಮಗನಾಗುತ್ತೇನೆಂದು ವರ,
ಅವಳೇ ವಸುಪುತ್ರಿಯಾಗಿ ಹುಟ್ಟಿ ಆ ನಂತರ ದಾಶರಾಜನ ಮನೆಯಲ್ಲಿ ಬೆಳೆದ ವ್ಯಾಪಾರ.
ಯಾರಲ್ಲಿ ನಾರಾಯಣ ವ್ಯಾಸರಾಗಿ ಹುಟ್ಟಿದ,
ಅದೇ ಸತ್ಯವತಿಯನ್ನು ಶಂತನು ತಾ ನೋಡಿದ.

ತದ್ದರ್ಶನಾನ್ನೃಪತಿರ್ಜ್ಜಾತಹೃಚ್ಛ್ರಯೋ ವವ್ರೇ ಪ್ರದಾನಾಯ ಚ ದಾಶರಾಜಮ್ ।
ಋತೇ ಸ ತಸ್ಯಾಸ್ತನಯಸ್ಯ ರಾಜ್ಯಂ ನೈಚ್ಛದ್ ದಾತುಂ ತಾಮಥಾsಯಾದ್ ಗೃಹಂ ಸ್ವಮ್ ॥೧೧.೭೫॥

ಅವಳ ನೋಡಿದೊಡನೆ ಮೇಲೆದ್ದ ಶಂತನುವಿನ ಸುಪ್ತಕಾಮ,
ಸತ್ಯವತಿಯ ತನಗೆ ಕೊಡುವಂತೆ ದಾಶರಾಜನ ಕೇಳಿದ ನೇಮ.
ಮುಂದೆ ಸತ್ಯವತಿಯ ಮಗನಿಗೆ ಸಾಮ್ರಾಜ್ಯ ಸಿಗುವುದಿಲ್ಲೆಂದು,
ದಾಶರಾಜ ಹೇಳಿದ ಮಗಳನ್ನು ಕೊಡಲು ಬಯಸುವುದಿಲ್ಲೆಂದು.
ದಾಶರಾಜನ ನಿರಾಕರಣೆಯ ನಂತರ ಶಂತನು ವಾಪಸಾದ ನೊಂದು.


ತಚ್ಚಿನ್ತಯಾ ಗ್ಲಾನಮುಖಂ ಜನಿತ್ರಂ ದೃಷ್ಟ್ವೈವ ದೇವವ್ರತ ಆಶ್ವಪೃಚ್ಛತ್ ।
ತತ್ಕಾರಣಂ ಸಾರಥಿಮಸ್ಯ ತಸ್ಮಾಚ್ಛ್ರುತ್ವಾsಖಿಲಂ ದಾಶಗೃಹಂ 
ಜಗಾಮ ॥೧೧.೭೬॥

ತಂದೆ ಕಳೆಗುಂದಿದ್ದನ್ನು ಗಮನಿಸಿದ ದೇವವ್ರತ,
ವಿಚಾರಿಸಲು ಏನೂ ಉತ್ತರ ಸಿಗದವನಾದನಾತ.
ಶಂತನುವಿನ ಸಾರಥಿಯಿಂದ ವಿಷಯ ತಿಳಿದ ದೇವವ್ರತ,
ಹೊರಟ ತಾನು ಅಂಬಿಗ ರಾಜ ದಾಶರಾಜನ ಮನೆಯತ್ತ.

ಸ ತಸ್ಯ ವಿಶ್ವಾಸಕೃತೇ ಪ್ರತಿಜ್ಞಾಂ ಚಕಾರ ನಾಹಂ ಕರವಾಣಿ ರಾಜ್ಯಮ್ ।
ತಥೈವ ಮೇ ಸನ್ತತಿತೋ ಭಯಂ ತೇ ವ್ಯೈತೂರ್ಧ್ವರೇತಾಃ ಸತತಂ 
ಭವಾನಿ ॥೧೧.೭೭॥

ಅಂಬಿಗನಿಗೆ ವಿಶ್ವಾಸ ಹುಟ್ಟಿಸಲು ಪ್ರತಿಜ್ಞೆ ಮಾಡುತ್ತಾನೆ ದೇವವ್ರತ,
ನಾ ರಾಜ್ಯ ಹೊಂದುವುದಿಲ್ಲ; ನನ್ನ ಸಂತತಿಯದೂ ನಿಂಗೆ ಭಯವಿಲ್ಲಾಂತ.
ನನ್ನದಾಗಿರುತ್ತದೆ ಊರ್ಧ್ವರೇತಸ್ಕ ಕಠಿಣ ವ್ರತ ನಿರಂತರ ಮತ್ತದು ಅನವರತ.

ಭೀಮವ್ರತತ್ವಾದ್ಧಿ ತದಾsಸ್ಯ ನಾಮ ಕೃತ್ವಾ ದೇವಾ ಭೀಷ್ಮ ಇತಿ 
ಹ್ಯಚೀಕ್ಲ್ಪನ್ ।
ಪ್ರಸೂನವೃಷ್ಟಿಂ ಸ ಚ ದಾಶದತ್ತಾಂ ಕಾಳೀಂ ಸಮಾದಾಯ ಪಿತುಃ 
ಸಮರ್ಪ್ಪಯತ್ ॥೧೧.೭೮॥

ಈ ಭಯಂಕರ ವ್ರತವುಳ್ಳವನಾದ ದೇವವ್ರತ ದೇವತೆಗಳಿಂದ ಭೀಷ್ಮನೆಂದು ಕರೆಯಲ್ಪಟ್ಟ,
ಹೂಮಳೆಗರೆಸಿಕೊಂಡ ದೇವವ್ರತ ಕಾಳೀ ವಸುಕನ್ಯೆಯ ಕೊಂಡೊಯ್ದು ತಂದೆಗೆ ಕೊಟ್ಟ.

ಜ್ಞಾತ್ವಾ ತು ತಾಂ ರಾಜಪುತ್ರೀಂ ಗುಣಾಢ್ಯಾಂ ಸತ್ಯಸ್ಯ ವಿಷ್ಣೋರ್ಮ್ಮಾತರಂ 
ನಾಮತಸ್ತತ್ ।
ಲೋಕೇ ಪ್ರಸಿದ್ಧಾಂ ಸತ್ಯವತೀತ್ಯುದಾರಾಂ ವಿವಾಹಯಾಮಾಸ ಪಿತುಃ ಸ 
ಭೀಷ್ಮಃ ॥೧೧.೭೯॥

ದಾಶರಾಜನಿಂದ ಕೊಡಲ್ಪಟ್ಟ ಕಾಳೀಯನ್ನು ರಾಜಪುತ್ರಿಯೆಂದೂ,
ಅಂಬಿಗನಲ್ಲಿ ಬೆಳೆದರೂ ಮೂಲತಃ ಅವಳು ವಸುರಾಜಪುತ್ರಿಯೆಂದೂ,
ಸತ್ಯನಾಮಕ ದೈವ ನಾರಾಯಣನ ತಾಯಿಯಾಗಿ ಬಂದವಳೆಂದೂ,
ಆಕೆಯೇ ಸತ್ಯವತೀ ಎಂದು ಲೋಕಪ್ರಸಿದ್ಧಳಾಗಿ ಇರುವವಳೆಂದೂ,
ಇವೆಲ್ಲವ ತಿಳಿದೇ ಭೀಷ್ಮ ಅವಳನ್ನು ತನ್ನ ತಂದೆಗೆ ಮದುವೆ ಮಾಡಿದನಂದು.

ಪ್ರಾಯಃ ಸತಾಂ ನ ಮನಃ ಪಾಪಮಾರ್ಗ್ಗೇ ಗಚ್ಛೇದಿತಿ ಹ್ಯಾತ್ಮಮನಶ್ಚ ಸಕ್ತಮ್ ।
ಜ್ಞಾತ್ವಾsಪಿ ತಾಂ ದಾಶಗೃಹೇ ವಿವರ್ದ್ಧಿತಾಂ ಜಗ್ರಾಹ ಸದ್ಧರ್ಮರತಶ್ಚ 
ಶನ್ತನುಃ ॥೧೧.೮೦॥

ಸಜ್ಜನರ ಮನಸ್ಸು ಪಾಪದ ಕಡೆಗೆ ಹೋಗುವುದಿಲ್ಲ,
ಅವಳಲ್ಲಿ ಅನುರಕ್ತನಾಗಿರುವುದಧರ್ಮವಿರಲಿಕ್ಕಿಲ್ಲ.
ಹೀಗೆ ಯೋಚಿಸಿದ ಶಂತನು ಮಹಾರಾಜ ತಾನು,
ಅಂಬಿಗಕನ್ಯೆಯಂದು ತಿಳಿದೇ ಅವಳ ಸ್ವೀಕರಿಸಿದನು.
ಇದು ಎತ್ತರದ ಜೀವಿಗಳ ಅಂತರಂಗದ ಅರಿವು,
ಏನಾದರೂ ದೈವೀಸಂಕಲ್ಪವೆಂಬ ದೃಢ ನಿಲುವು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula