Saturday 28 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 21 - 25

ದಾನೇsರ್ದ್ಧರಾಜ್ಯಸ್ಯ ಹಿ ತತ್ಪ್ರತಿಜ್ಞಾಂ ಸಂಸ್ಮೃತ್ಯ ಪೂರ್ವಾಮುಪಯಾತಂ ಸಖಾಯಮ್ ।
ಸಖಾ ತವಾಸ್ಮೀತಿ ತದೋದಿತೋsಪಿ ಜಗಾದ ವಾಕ್ಯಂ  ದ್ರುಪದೋsತಿದರ್ಪ್ಪಾತ್ ॥೧೫.೨೧॥
ಹಿಂದೆ ಆಗಿತ್ತು ಇವರಿಬ್ಬರಲ್ಲಿ ಅರ್ಧರಾಜ್ಯ ಕೊಡುವ ಮಾತು,
ದ್ರೋಣರು ನೆನಪಿಸಿದರು ದ್ರುಪದನ ಪ್ರತಿಜ್ಞೆಯ ಕುರಿತು.
ದ್ರುಪದಗೆ ಹೇಳಿದರು -ನಾನು ನಿನ್ನ ಸ್ನೇಹಿತ,
ನೆನಪಿದ್ದರೂ ದ್ರುಪದ ಆಡಿದ-ದರ್ಪದ ಮಾತ.

ನ ನಿರ್ದ್ಧನೋ ರಾಜಸಖೋ ಭವೇತ ಯಥೇಷ್ಟತೋ ಗಚ್ಛ ವಿಪ್ರೇತಿ ದೈವಾತ್ ।
ಇತೀರಿತಸ್ಯಾsಶು ಬಭೂವ ಕೋಪೋ ಜಿತೇನ್ದ್ರಿಯಸ್ಯಾಪಿ ಮುನೇರ್ಹರೀಚ್ಛಯಾ ॥೧೫.೨೨॥
ಎಲೋ ಬ್ರಾಹ್ಮಣಾ, ಹಣವಿರದವ ರಾಜನ ಗೆಳೆಯನಾಗಲಾರ,
ನೀನೇ ನಿರ್ಧರಿಸು-ಇರುವುದು ಬಿಡುವುದು ನಿನ್ನ ಇಷ್ಟಾನುಸಾರ.
ಹೀಗಿತ್ತು ದೈವಪ್ರೇರಣೆಯಿಂದ ಬಂದ ದ್ರುಪದನ ನುಡಿ,
ಜಿತೇಂದ್ರಿಯರಾದ ದ್ರೋಣರಿಗೂ ಹಚ್ಚಿತ್ತು ಕೋಪದ ಕಿಡಿ.

ಪ್ರತಿಗ್ರಹಾತ್ ಸನ್ನಿವೃತ್ತೇನ ಸೋsಯಂ ಮಯಾ ಪ್ರಾಪ್ತೋ ಮತ್ಪಿತುಃ ಶಿಷ್ಯಕತ್ವಾತ್ ।
ಪಿತುಃ ಶಿಷ್ಯೋ ಹ್ಯಾತ್ಮಶಿಷ್ಯೋ ಭವೇತ ಶಿಷ್ಯಸ್ಯಾರ್ತ್ಥಃ ಸ್ವೀಯ ಏವೇತಿ ಮತ್ವಾ॥೧೫.೨೩॥
ಈ ದ್ರುಪದ ನನ್ನ ತಂದೆಯ ಶಿಷ್ಯ,
ತಂದೆಯ ಶಿಷ್ಯನಾದವ ನನಗೂ ಶಿಷ್ಯ.
ಶಿಷ್ಯನ ಸೊತ್ತು ನನ್ನದೇ ಎನ್ನುವ ಭಾವ,
ತಿಳಿದೇ ಬಂದದ್ದು ನಾ ತೊರೆದಿದ್ದರೂ ಪ್ರತಿಗ್ರಹ.

ಸೋsಯಂ ಪಾಪೋ ಮಾಮವಜ್ಞಾಯ ಮೂಢೋ ದುಷ್ಟಂ ವಚೋsಶ್ರಾವಯದಸ್ಯ ದರ್ಪ್ಪಮ್ ।
ಹನಿಷ್ಯ ಇತ್ಯೇವ ಮತಿಂ ನಿಧಾಯ ಯಯೌ ಕುರೂಞ್ಛಷ್ಯತಾಂ ನೇತುಮೇತಾನ್ ॥೧೫.೨೪॥
ಮೂಢ ಪಾಪಿ ದ್ರುಪದನಿಂದಾಗಿದೆ ಎನಗೆ ಅವಮಾನ,
ಇವನ ದರ್ಪ ಮುರಿಯುವೆನೆಂದು ದ್ರೋಣರು ಮಾಡುವರು ತೀರ್ಮಾನ.
ಕೌರವರ ಶಿಷ್ಯರಾಗಿ ಹೊಂದಲು ಹೊರಟರು ಕುರುದೇಶದತ್ತ ಪಯಣ.

ಪ್ರತಿಗ್ರಹಾದ್ ವಿನಿವೃತ್ತಸ್ಯ ಚಾರ್ತ್ಥಃ ಸ್ಯಾಚ್ಛಿಷ್ಯೇಭ್ಯಃ ಕೌರವೇಭ್ಯೋ ಮಮಾತ್ರ ।
ಏವಂ ಮನ್ವಾನಃ ಕ್ರೀಡತಃ ಪಾಣ್ಡವೇಯಾನ್ ಸಧಾರ್ತ್ತರಾಷ್ಟ್ರಾನ್ ಪುರಬಾಹ್ಯತೋsಖ್ಯತ್ ॥೧೫.೨೫॥
ಅಪರಿಗ್ರಹದ ವ್ರತನಿಷ್ಠನಾದ ನನಗಾದರೆ ಇವರು ಶಿಷ್ಯರು,
ನಾನು ಬಯಸಿದ ಕಾರ್ಯ ಮಾಡಿಯಾರಿವರು ಕೌರವರು.
ಯೋಚಿಸುತ್ತಾ ದ್ರೋಣರು ಬಂದದ್ದು ಪಟ್ಟಣದ ಹೊರಭಾಗ,
ಆಡುತ್ತಿದ್ದ ದುರ್ಯೋಧನಾದಿ ಪಾಂಡವರ ಕಂಡರು ಅಲ್ಲಿ ಆಗ.


No comments:

Post a Comment

ಗೋ-ಕುಲ Go-Kula