Monday 16 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 16 - 20


ಸರ್ವಾಂ ಪುರೀಂ ಪ್ರತಿನಿರುದ್ಧ್ಯ ದಿದೇಶ ವಿನ್ದವಿನ್ದಾನುಜೌ ಭಗವತಃ ಕುಮತಿಃ ಸ ದೂತೌ ।
ತಾವೂಚತುರ್ಭಗವತೇsಸ್ಯ ವಚೋsತಿದರ್ಪ್ಪಪೂರ್ಣ್ಣಂ ತಥಾ ಭಗವತೋsಪ್ಯಪಹಾಸಯುಕ್ತಮ್ ॥೧೪.೧೬॥
ಮಧುರಾಪಟ್ಟಣವನ್ನು ಎಲ್ಲೆಡೆಯಿಂದ ಮುತ್ತಿಗೆ ಹಾಕಿದ ಜರಾಸಂಧ,
ತನ್ನ ದೂತರನ್ನಾಗಿ ಕೃಷ್ಣನಲ್ಲಿಗೆ ಕಳಿಸಿದ್ದು ವಿಂದ ಮತ್ತು ಅನುವಿಂದ.
ಅವರಾಡಿದ ಮಾತು ತುಂಬಿಕೊಂಡಿತ್ತು ಅಪಹಾಸ್ಯ ಮತ್ತು ದರ್ಪದಿಂದ.

ಲೋಕೇ(s)ಪ್ರತೀತಬಲಪೌರುಷಸಾರರೂಪಸ್ತ್ವಂ ಹ್ಯೇಕ ಏಷ್ಯಭವತೋ ಬಲವೀರ್ಯ್ಯಸಾರಮ್ ।
ಜ್ಞಾತ್ವಾ ಸುತೇ ನತು ಮಯಾ ಪ್ರತಿಪಾದಿತೇ ಹಿ ಕಂಸಸ್ಯ ವೀರ್ಯ್ಯರಹಿತೇನ ಹತಸ್ತ್ವಯಾ ಸಃ ॥೧೪.೧೭॥
ಸೋsಹಂ ಹಿ ದುರ್ಬಲತಮೋ ಬಲಿನಾಂ ವರಿಷ್ಠಂ ಕೃತ್ವೈವ ದೃಷ್ಟಿವಿಷಯಂ ವಿಗತಪ್ರತಾಪಃ ।
ಯಾಸ್ಯೇ ತಪೋವನಮಥೋ ಸಹಿತಃ ಸುತಾಭ್ಯಾಂ ಕ್ಷಿಪ್ರಂ ಮಮಾದ್ಯ ವಿಷಯೇ ಭವ ಚಕ್ಷುಷೋsತಃ ॥೧೪.೧೮॥
ನಾನು ಮಕ್ಕಳನ್ನು ಕೊಟ್ಟ ಕಂಸ ಏನೂ ಕೈಲಾಗದವನು,
ಅರಿಯದಾದೆ-ನೀನು ಪರಾಕ್ರಮಿ ಬಲವೀರ್ಯ ಉಳ್ಳವನು.
ನಿನ್ನಿಂದಾಗಿದೆ ಕಂಸನ ಸಂಹಾರ,
ನಾನು ದುರ್ಬಲ ಅತ್ಯಂತ ನಿಸ್ಸಾರ.
ನಿನ್ನನ್ನೊಮ್ಮೆ ನೋಡಬೇಕಿದೆ ಕಂಸವೈರಿ,
ಹಿಡಿವೆ ನಂತರ ಮಕ್ಕಳೊಂದಿಗೆ ಕಾಡದಾರಿ.
ಮಾತವನದು ಬಾರಿಸಿತ್ತು ದರ್ಪ ವ್ಯಂಗದ ನಗಾರಿ.

ಸಾಕ್ಷೇಪಮೀರಿತಮಿದಂ ಬಲದರ್ಪ್ಪಪೂರ್ಣ್ಣಮಾತ್ಮಾಪಹಾಸಸಹಿತಂ ಭಗವಾನ್ ನಿಶಮ್ಯ ।
ಸತ್ಯಂ ತದಿತ್ಯುರು ವಚೋsರ್ತ್ಥವದಭ್ಯುದೀರ್ಯ್ಯ ಮನ್ದಂ ಪ್ರಹಸ್ಯ ನಿರಗಾತ್ ಸಹಿತೋ ಬಲೇನ॥೧೪.೧೯॥
ಜರಾಸಂಧನ ಮಾತಾಗಿತ್ತು ಆಕ್ಷೇಪಗರ್ಭಿತ,
ಬಲ ದರ್ಪಪೂರ್ಣವೆಂದರಿತ ಭಗವಂತ.
ಕೃಷ್ಣ ಹೌದೆಂದುಕೊಳ್ಳುತ್ತಾ ಶುರುಮಾಡಿದ ಆಟ,
ನಗುತ್ತಾ ಬಲರಾಮನ ಕೂಡಿ ಯುದ್ಧಕೆ ಹೊರಟ.

ದ್ವಾರೇಷು ಸಾತ್ಯಕಿಪುರಸ್ಸರಮಾತ್ಮಸೈನ್ಯಂ ತ್ರಿಷ್ವಭ್ಯುದೀರ್ಯ್ಯ ಭಗವಾನ್ ಸ್ವಯಮುತ್ತರೇಣ ।
ರಾಮದ್ವಿತೀಯ ಉದಗಾನ್ಮಗಧಾಧಿರಾಜಂ ಯೋದ್ಧುಂ ನೃಪೇನ್ದ್ರಕಟಕೇನ ಯುತಂ ಪರೇಶಃ ॥೧೪.೨೦॥
ಮೂರು ದಿಕ್ಕುಗಳಿಗೆ ಸಾತ್ಯಕಿಯನ್ನು ಮಾಡಿದ ಸೈನ್ಯದ ಮುಂದಾಳು,
ಉತ್ತರದಿಂದ ಬಲರಾಮನೊಂದಿಗೆ ಹೊರಟ ಕೃಷ್ಣ ಜರಾಸಂಧನೆದುರಿಸಲು.
ಜರಾಸಂಧನ ಸೈನ್ಯದೊಂದಿಗಿದ್ದರು ದೇಶದ ದೊಡ್ಡ ದೊಡ್ಡ ರಾಜರುಗಳು.

No comments:

Post a Comment

ಗೋ-ಕುಲ Go-Kula