Saturday 26 August 2017

Bhava Spandana - 8

ಭಾವ ಸ್ಪಂದನ by “ತ್ರಿವೇಣಿ ತನಯ

ಮನ ನಿಲ್ಲದ ಹೋಮ-ಶಾರಣ್ಯವೇ ನೇಮ

ನಿಯಂತ್ರಣವಿಲ್ಲದ ಕ್ರೋಧ ಸ್ವಚ್ಛಂದ ಕಾಮ,
ಕೆಲಸಕ್ಕೆ ಬಾರವು ಎಷ್ಟು ಮಾಡಿದರೂ ಹೋಮ,
ಶರಣಾಗುತ ಮನವಾಗಲಿ ಹರಿಪಾದದಲಿ ಲಗ್ನ,
ತಕರಾರಿಲ್ಲದ ತಾಳ್ಮೆಯಿರಲಿ ಪಾಪಗಳೆಲ್ಲ ಭಗ್ನ.

ಕರ್ಮ ಸಿದ್ಧಾಂತ

ಎಲ್ಲ ಘಟನೆಗಳೂ ಪೂರ್ವನಿಯೋಜಿತ,
ತಕ್ಕಂತೆ ನಿಯೋಜಿಸುವನು ಅವ ಅಜಿತ,
ಅವರಿವರ ದೂಷಣೆ ಪೋಷಣೆ ಸಲ್ಲ,
ನಾವು ಮಾಡಿದ್ದೇ ಫಲ ಬೇವು ಇಲ್ಲ ಬೆಲ್ಲ.

ಚಕ್ರಭ್ರಮಣ

ಪಾಪ ಕರ್ಮದಿಂದ ಚಿತ್ತ ಭ್ರಮಣೆ,
ಚಿತ್ತ ಭ್ರಮಣೆಯಿಂದ ಪಾಪ ಸಂಗ್ರಹಣೆ,
ಇದೊಂದು ರೀತಿಯ ಚಕ್ರ ಭ್ರಮಣ,
ಪಾರುಮಾಡುವುದು ಹರಿಸ್ಮರಣ-ಕರುಣ.

ವಿವಿಧ ದಾರಿ -ಒಬ್ಬನೇ ಹರಿ

ಜ್ಞಾನಯೋಗ ಭಕ್ತಿಯೋಗ ಯಜ್ಞಯಾಗ,
ಅಧ್ಯಯನ -ತಪ -ನಿಗ್ರಹ -ಕರ್ಮತ್ಯಾಗ,
ನಿವೃತ್ತಿ ಪ್ರವೃತ್ತಿ ದೃಢವೈರಾಗ್ಯ ಅನೇಕಮಾರ್ಗ,
ಅನೇಕ ಪ್ರಕಾರಗಳಿಂದ ಭಗವದ್ ಜ್ಞಾನಯೋಗ.

ಗುಣಸ್ವಭಾವ-ತಕ್ಕ ಅನುಭಾವ

ಸಾತ್ವಿಕ ರಾಜಸ ತಾಮಸ ನಿರ್ಗುಣಭಕ್ತಿ ಯೋಗ,
ಅವರವರ ಯೋಗ್ಯತಾನುಸಾರ ಅನುಭಾವ ಭಾಗ್ಯ,
ಭಗವಂತನ ಪೂರ್ಣಾನುಭವವದು ಅಸಂಭವ,
ಕುರುಡರು ಆನೆಯ ಕಂಡಂತೆ ತೆರ ತೆರ ಅನುಭವ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula