Sunday 6 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 137 - 143

 ಕಿಮರ್ತ್ಥಂ ರೋದಿಷೀತ್ಯೇವ ಸಾsಬ್ರವೀದ್ ವಟುರೂಪಿಣಮ್ ।

ಶಙ್ಕರಂ ದರ್ಶಯಿತ್ವೈವ ಪಞ್ಚಭರ್ತ್ತೃತ್ವಮೇಷ ಮೇ ॥೧೮.೧೩೭॥

ವರಾರ್ತ್ಥಮರ್ತ್ಥಿತಃ ಪ್ರಾದಾದಿತಿ ತಂ ಶಿವ ಇತ್ಯಥ ।

ಅಜಾನನ್ ಶಕ್ರ ಆಹೋಚ್ಚೈಃ ಕಿಮೇತದ್ ಭುವನತ್ರಯೇ  ॥೧೮.೧೩೮॥

ಎಕೆ ಅಳುತ್ತಿರುವೆ ಎಂದು ದೇವೇಂದ್ರ ಅವಳನ್ನು ಕೇಳಲು ,

ಅಲ್ಲಿದ್ದ ವಟುರೂಪಿ ಶಿವನತ್ತ ತೋರಿಸುತ್ತವಳು ಹೇಳಿದಳು .

ಪತಿಪ್ರಾಪ್ತಿಗಾಗಿ ನಾನಿವನಲ್ಲಿ ಬೇಡಿದಾಗ ಐವರು ಪತಿಗಳಾಗಲೆಂದು ವರ ನೀಡಿದ ,

ವಟುರೂಪಿ ಶಂಕರನ ಗುರುತಿಸದ ದೇವೇಂದ್ರ ಹೀಗೆ ಗಟ್ಟಿಯಾಗಿ ಮಾತನಾಡಿದ .

 

ಮತ್ಪಾಲಿತೇ ಯೋಷಿತಂ ತ್ವಂ ವೃಥಾ ಶಪಸಿ ದುರ್ಮ್ಮತೇ ।

ಇತೀರಿತೇ ಶಿವಃ ಪ್ರಾಹ ಪತ ಮಾನುಷ್ಯಮಾಪ್ನುಹಿ ॥೧೮.೧೩೯॥

ಅಸ್ಯಾಶ್ಚ ಭರ್ತ್ತಾ ಭವಸಿ ತ್ವಾಮೇವೈಷಾ ವರಿಷ್ಯತಿ ।

ಪಶ್ಯಾತ್ರ ಮದವಜ್ಞಾನಾತ್ ಪತಿತಾಂಸ್ತ್ವಾದೃಶಾನ್ ಸುರಾನ್ ॥೧೮.೧೪೦॥

ಗಿರೇರಧಸ್ತಾದಸ್ಯೈವೇತ್ಯುಕ್ತೋsಸೌ ಪಾಕಶಾಸನಃ ।

ಉದ್ಬಬರ್ಹ ಗಿರಿಂ ತಂ ತು ದದರ್ಶಾತ್ರ ಚ ತಾನ್ ಸುರಾನ್ ॥೧೮.೧೪೧॥

ನನ್ನ ಆಳ್ವಿಕೆಯಲ್ಲಿದೆ ಮೂರುಲೋಕ , ನಾನು ಮೂರ್ಲೋಕದ ನೃಪ ,

ನೀನು ಹೇಗೆ ವ್ಯರ್ಥವಾಗಿ ದುರ್ಮತಿಯಿಂದ ಈ ಹೆಣ್ಣಿಗೆ ಇತ್ತೆ ಶಾಪ .

ಹೀಗೆ ಏರುಧ್ವನಿಯಲ್ಲಿನ ದೇವೇಂದ್ರ ವಟುವ ಕೇಳಿದಾಗ ,

ನೀನು ಕೂಡಾ ಮನುಷ್ಯನಾಗೆಂದು ರುದ್ರ ಶಪಿಸಿದನಾಗ .

ನೀನಿವಳ ಗಂಡನಾಗುತ್ತಿ , ಅದು ನನ್ನನ್ನು  ಅವಮಾನಿಸಿದ್ದರಿಂದ ,

ನಿನ್ನಂಥ ಇತರ ದೇವತೆಗಳು ಪರ್ವತತಳದಿ ಬಿದ್ದಿದ್ದಾರೆ ನೋಡೆಂದ .

ಇದೇ ಪರ್ವತದ ಕೆಳಗೆ ಅವರೆಲ್ಲಾ ಯೋಚನಾಮಗ್ನರಾಗಿ ಇದ್ದಾರೆಂದು ಹೇಳಲು ,

ಪಾಕನೆಂಬ ಅಸುರನ ಕೊಂದ ಇಂದ್ರ-ದೇವತೆಗಳ ಕಂಡ ಬೆಟ್ಟವನೆತ್ತಿ ನೋಡಲು .

 

ಪೂರ್ವೇನ್ದ್ರಾನ್ ಮಾರುತವೃಷನಾಸತ್ಯಾಂಶ್ಚತುರಃ ಸ್ಥಿತಾನ್ ।

ಮಾನುಷೇಷ್ವವತಾರಾಯ ಮನ್ತ್ರಂ ರಹಸಿ ಕುರ್ವತಃ ॥೧೮.೧೪೨॥

ತತೋ ವರೇಣ್ಯಂ ವರದಂ ವಿಷ್ಣುಂ ಪ್ರಾಪ್ಯ ಸ ವಾಸವಃ ।

ತತ್ಪ್ರಸಾದಾನ್ನರಾಂಶೇನ ಯುಕ್ತೋ ಭೂಮಾವಜಾಯತ ॥೧೮.೧೪೩॥

ಹಿಂದಿನ ಮನ್ವಂತರಗಳಲ್ಲಿ ಇಂದ್ರರಾದ ವಾಯು , ಯಮ ಮತ್ತು ಅಶ್ವಿನೀದೇವತೆಗಳಿಬ್ಬರ  ಸೇರಿದ ನಾಲ್ವರನ್ನು ,

ಇಂದ್ರದೇವ ನೋಡಿದನಲ್ಲಿ ಅವರೆಲ್ಲಾ ಮನುಷ್ಯರಾಗಿ

ಹುಟ್ಟುವ ಮಂತ್ರಾಲೋಚನೆಯಲ್ಲಿ ತೊಡಗಿದ್ದದ್ದನ್ನು .

ಈ ತೆರನಾಗಿ ರುದ್ರದೇವನಿಂದ ಶಾಪಗ್ರಸ್ತನಾದಂಥ  ಇಂದ್ರದೇವ,

ಪಡೆದುಕೊಂಡ ಉತ್ಕೃಷ್ಟ ವರಪ್ರದನಾದ ವಿಷ್ಣುವಿನ ಅನುಗ್ರಹ .

ಭಗವಂತನ ನರಾವೇಶದಿಂದ ಭೂಮಿಯಲ್ಲಿ ಹುಟ್ಟಿ ಬಂದನವ .

[^ಆ ನಾಲ್ವರು ದೇವತೆಗಳು ಮನುಷ್ಯರಲ್ಲಿ ಅವತಾರ ಮಾಡಲು ಪರ್ವತದ ಕೆಳಗೆ ಮಂತ್ರಾಲೋಚನೆ ಮಾಡುತ್ತಿದ್ದರೇ ವಿನಃ, ರುದ್ರದೇವರಿಗೆ ಅವಮಾನ ಮಾಡಿ ಕೆಳಗೆ ಬಿದ್ದಿರಲಿಲ್ಲ. ಹಾಗಾಗಿ ಶಿವನಿಂದ ನುಡಿಯಲ್ಪಟ್ಟ ಆ ಮಾತು ಮಿಥ್ಯವಾಗಿತ್ತು ಮತ್ತು ಅದು ಬ್ರಹ್ಮದೇವರ ಕೋಪಕ್ಕೆ ಕಾರಣವಾಗಿ ಅವರು ಶಿವನಿಗೆ ಶಾಪ ನೀಡಲು ಕಾರಣವಾಯಿತು].

No comments:

Post a Comment

ಗೋ-ಕುಲ Go-Kula