Sunday 6 March 2016

Bhava Guccha 40

ಭಾವ ಗುಚ್ಛ  by “ತ್ರಿವೇಣಿ ತನಯ

ಅರಮನೆ --ಗುರುಮನೆ

ರಾಜ ರಾಜ್ಯದ ದೋಷಗಳ ನಿವಾರಿಸಿದ್ದು ಯತಿಗಳ ತಪ,
ಮತಿ ನೈತಿಕತೆಯೇ ಇಲ್ಲದ ಮಠ ಸ್ವಾಮಿಗಳು ಇಂದು ಶಾಪ,
ಇದು ಮನುಕುಲ ನಡೆಸುವ ಮಠ ಸ್ವಾಮಿಗಳ ಪಾಡು,
ಇನ್ನೂ ಏನೇನು ಕಾದು ನೋಡಬೇಕಿದೆಯೋ ನಾಡು.

ನಿರ್ಲಿಪ್ತತೆ

ಬೇಕಿರಲಿ ಬೇಡದಿರಲಿ ಸುಖ ದುಃಖ ಉಂಟು,
ತಾಳುತಾ ಸಹಿಸಿಕೋ ಹಚ್ಚಿಕೊಳ್ಳದೇ ಅಂಟು,
ಮಾಡಿದುದು ನಾನಲ್ಲ ಹರಿ ಎಂದು ಅರ್ಪಿಸು,
ಈ ಅನುಸಂಧಾನವಿರೇ ಬದುಕೆಲ್ಲ ಸೊಗಸು.

ಅನಾದಿ

ಅವನಂತೆಯೇ ಜನ್ಮ ಮೃತಿಯಿಲ್ಲದ ಅನಾದಿಗಳು ನಾವೆಲ್ಲಾ,
ಆದರೆ ನಮಗೆಲ್ಲಾ ಸ್ವಂತ ಪ್ರಜ್ಞೆ ಎಂಬುದಿಲ್ಲ,
ಒಳಗಿರುವ ಬಿಂಬನಾಮಕ ಹರಿ ಸಲಹುತಿಹನೆಲ್ಲಾ,
ಪಾಳಿ ಬರಲು ಕೊಡುವ ಸ್ವಭಾವದ ಬೇವು ಬೆಲ್ಲ.

ಸಂವೇದನೆ

ಮನುಷ್ಯಗಿರಬೇಕಾದ್ದು ಭಾವನೆ ಸಂವೇದನೆ ಸ್ಪಂದನೆ,
ಇವ್ಯಾವೂ ಇರದವರೊಂದಿಗೆ ಜೀವನವೆಂಥ ವೇದನೆ,
ಹೊರಗೇ ಲೀನವಾದ ಕಣ್ಮುಚ್ಚಿ ಒಳನೋಡುವ ಇಷ್ಟ ಯಾರಿಗುಂಟು,
ಅದಕೆಂದೇ ಆಗುತಿದೆ ಸಮಾಜ ಸಂಸಾರ ನಿತ್ಯ ಕಗ್ಗಂಟು.

ಪರಾಧೀನತೆ

ಕ್ಷಣ ಕ್ಷಣಕೂ ಜೀವಪರಾಧೀನತೆಯ ಅನುಭವ,
ಆದರೂ ಬರಲೊಲ್ಲದು ತಾನು ಶಾರಣ್ಯ ಭಾವ,
ನಾನು ನನ್ನದು ಎಂಬ ಭ್ರಮೆಯದು ಅಪಾರ,
ಕಳಚುತದನು ತಿಳಿಸಬೇಕವನೇ ತನ್ನ ವ್ಯಾಪಾರ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula