Tuesday 22 March 2016

Sāra Saṅgama 02

ಸಾರ ಸಂಗಮ  by “ತ್ರಿವೇಣಿ ತನಯ


ಪ್ರಕೃತಿಯ ನಿತ್ಯ ಪೂಜೆ

ಪ್ರಕೃತಿಯ ಎಲ್ಲಾ ಚಟುವಟಿಕೆಗಳೂ ಭಗವದಾರಾಧನೆ,
ತಾಯಿ ಶ್ರದ್ಧೆಯಲಿ ನಡೆಸಿಹಳದನು ಪದ್ಮವದನೆ,
ಜಗದ ಉಸಿರು ಎಲ್ಲರ ಉಸಿರಾಡಿಸುವ ವಾಯುದೇವ,
ಪ್ರತಿ ಉಸಿರಾಟವನ್ನೂ ಜಪವೆಂದು ಮಾಡಿ ತಂದೆಗರ್ಪಿಸುವ.

ಸೂರ್ಯ ಚಂದ್ರರ ಶಾಖ ಬೆಳಕು ಅವನಿಗೆ ಆರತಿ,
ಇಂದ್ರ ಸುರಿಸುವ ಮಳೆಯದು ಅಭಿಷೇಕದ ರೀತಿ,
ಗಿಡ ಮರ ಪ್ರಾಣಿಪಕ್ಷಿಯ ಕಲರವವೂ ವೇದ ಮಂತ್ರ,
ಇದ ಮರೆತು ಜೀವಿಸುವ ಮನುಜ ಬಾಳದು ಅತಂತ್ರ.

ಮಾನವನ ವಿಕೃತಿ

ಬೆಳಕ ಕೊಡುವ ಸೂರ್ಯ ಚಂದ್ರ ಕೇಳುವರೇ ಕರ?
ಕೃತಜ್ಞತೆ ಇಲ್ಲದ ನಮ್ಮಲ್ಲಿ ಎಲ್ಲದಕ್ಕೂ ಬರ,
ಸರ್ವನಿಯಾಮಕನವನು ಕೇಳಿದನೇ ಸುಂಕ?
ಸ್ಮರಿಸಿ ವಂದಿಸಲೂ ನಮಗೇನೋ ಬಿಂಕ.

ಬೇಡದೇ ಏನೆಲ್ಲಾ ಕೊಡುವಳು ತಾಯಿ ಪ್ರಕೃತಿ,
ದುರಾಸೆಯ ಮಾನವನದು ಎಲ್ಲಾ ಬೇಕೆನ್ನುವ ವಿಕೃತಿ,
ಅರಳಿದ ಹೂವು ಬೇಕು ಆಡಿಸಲು ಕಾಡ ಹಾವೂ ಬೇಕು,
ಬೆಕ್ಕು ನಾಯಿ ಬೇಕು ಕಾಡಾನೆಯ ತಂದು ಆಡಿಸಬೇಕು.

ಹರಿವ ನೀರಿಗೆ ಕಟ್ಟೆ ಪ್ರತಿ ನೀನೇನದಕೆ ಕೊಟ್ಟೆ,
ಬೀಸುವ ಗಾಳಿಗೂ ಅಡ್ಡ ಬೃಹತ್ ಚಕ್ರಗಳನಿಟ್ಟೆ,
ಬಳಸಿಕೊ ಎಲ್ಲಾ -ವಿವೇಚನೆಯಿಲ್ಲದ ಆಟವದು ಸಲ್ಲ,
ಸಮತೋಲನ ತಪ್ಪಿದರೆ ಬುಡಮೇಲಾಗುವುದು ಎಲ್ಲ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula