Saturday 26 March 2016

Sāra Saṅgama 06

 ಸಾರ ಸಂಗಮ  by “ತ್ರಿವೇಣಿ ತನಯ


ಛಾಯೆ -ಮಾಯೆ

ಎಲ್ಲೆಲ್ಲೂ ನೋಡಿದರೂ ನಿನ್ನದೇ ಛಾಯೆ,
ಜಗವೆಲ್ಲ ಸುತ್ತಿಹುದು ನಿನ್ನವಳ ಮಾಯೆ,
ನಿಮ್ಮೀರ್ವರ ಮಗನಾಟ-ಅದುವೇ ಉಸಿರಾಟ,
ದೃಢಮಾಡುತೀ ಜ್ಞಾನ ಮುಗಿಸುವೆಂದಿಗೆ "ಚಕ್ರ"ದಾಟ?

ಬೇಡುವ ಬವಣೆ

ಬ್ರಹ್ಮಾಂಡವೇ ಕಾಯವಾದರೂ ಬೇಡುವಾಗಾದ ವಾಮನ,
ಎಂದೂ ವಿಷಯ ಸುಖಗಳ ಬೇಡದಂತಿರಿಸು ಮನ,
ಶರಣಾಗತನಾದ ಬಲಿಯನುದ್ಧರಿಸಿದ ತ್ರಿವಿಕ್ರಮ,
"ನಾನು ನನ್ನದೆಂಬುದ"ಮೆಟ್ಟಿ ಸಲಹು ವೈಕುಂಠ ಧಾಮ.

ತಪ

ದೇಹೇಂದ್ರಿಯ ಮನೋಬುಧ್ಯಾತ್ಮಗಳು ಭಗವದ್ ಅಧೀನ,
ಇದಬಿಟ್ಟು ಅಸ್ವತಂತ್ರ ಜೀವ ತಾ ಮಾಡುವುದ ಏನ,
ಈ ಜ್ಞಾನ ದೃಢವಾಗೆ ಕರ್ಮ ನಿರ್ಲೇಪ,
ಮಥಿಸುತಲೇ ಶರಣಾಗು ಅದೇ ದೊಡ್ಡ ತಪ.

ಇರವು -ಅರಿವು

ಕೋಪವೇನೋ ಎಂಬಂತೆ ಧಗ ಧಗ ಬಿಸಿಲು ಸುರಿವೆ,
ಪಾಪ ಎಂದು ಕರುಣೆತೋರಿ ತಂಪಾದ ಮಳೆ ಹರಿಸುವೆ,
ಬೇಗೆಯಲಿ ಬೇಯಿಸಿ ದಹಿಸುವ ಸೆಖೆಯ ಕೊಡುವೆ,
ಮತ್ತೆ ಕಾರುಣ್ಯದಲಿ ತಂಗಾಳಿಯಾಗಿ ಬರುವೆ.

ಅದ್ಭುತ ಕಲಾಕಾರ

ಏನು ಹೇಳಲಿ ನಿನ್ನ ಅವರ್ಣನೀಯ ವ್ಯಾಪಾರ,
ತಾಳ ತಪ್ಪದಂತೆ ತೂಗುವ ಅದ್ಭುತ ಕಲಾಕಾರ,
ನಾನು ನನ್ನದು ಎಂಬುವವರಿಗೆ ಬದುಕು ದುರ್ಭರ,
ನಿನ್ನರಿವು ಸಿಕ್ಕವರಿಗೆ ಎಲ್ಲವೂ ಹಾಲೋಗರ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula