Thursday 31 March 2016

Sāra Saṅgama 09

ಸಾರ ಸಂಗಮ  by “ತ್ರಿವೇಣಿ ತನಯ

ಪರೀಕ್ಷೆ

ಕಷ್ಟ ನೋವುಗಳು ಬಂದಾಗ ಕುಗ್ಗಬೇಡ,
ನಿಜ ಅವೇ ನಿನ್ನ ಶುದ್ಧ ಮಾಡುತಿವೆ ನೋಡ,
ಅಶಾಶ್ವತ ಅಸ್ಥಿರ ಬಾಳಿನಿಂದಲೇ ಅನಂತನ ಅರಿವು,
ಇದನರಿತು ಶರಣಾದಾಗಲೇ ಬಿಡುಗಡೆಯ ಸುಳಿವು.

ಮನ -ಕನ್ನಡಿ

ಅಹಂಕಾರ ಒಣಪ್ರತಿಷ್ಠೆಗಳಿಂದ ಹಾಳಾದರೆ ಬಾಳು,
ಯಾರನ್ನ ಅದಕೆ ನೀ ಹೊಣೆ ಮಾಡುತೀ  ಹೇಳು,
ತಾಳ್ಮೆ ವಿವೇಚನೆಯಿಲ್ಲದ ಸೊಕ್ಕಿನ ಮಾತು,
ಮನದ ಕನ್ನಡಿ ಒಡೆದರೆ ಜೋಡಿಸುವ ಬಗೆ ಎಂತು?

ಅನುಗಾಲದ ಚಿಂತೆ

ಬಿಸಿಲು ಮಳೆ ಛಳಿ ಯಾವುದಕ್ಕೂ ತಡೆಯದ ದೇಹ,
ಎಲ್ಲದಕೂ ಗೊಣಗುತಲೇ ತಾಳಿಕೊಳ್ಳುವ ವ್ಯಾಮೋಹ,
ಎಂದಿದ್ದರೂ ಬಿದ್ದುಹೋಗುವ ದೇಹದ ಕಾಳಜಿ ಸಾಕು,
ನೀನಾರು ಎಂದು ಹುಡುಕುತ್ತ ಒಳಗೊಮ್ಮೆ ಕಣ್ಹಾಕು.

ಕರುಣೆ -ಸ್ಮರಣೆ

ಸಾಸಿರ ನಾಮದವನ ಭಕ್ತಿಯಿಂದಲಿ ಭಜಿಸು,
ಲೋಕವ್ಯಾಪಾರಗಳ ಅಂಟದಂತಿದ್ದು ಭರಿಸು,
ಎಲ್ಲ ಕೊಟ್ಟ ತಂದೆಗೆ ನಾವೇನು ಕೊಡಬಲ್ಲೆವು ಹೇಳು?
ಶರಣಾಗಿ ಸ್ಮರಿಸುವುದೊಂದೇ ನಿಜ ತಪವದು ಕೇಳು.

ಪದ ಬಂಧ

ಈ ಬಾಳೊಂದು ಪದಬಂಧ,
ನುಡಿ ಸವಿಯಿದ್ರೆ ಸಂಬಂಧ,
ಸತತವಿರಬೇಕಾದ್ರೆ ಆನಂದ,
ವಿಸ್ಮರಣೆಯಾಗದಿರಲಿ ಗೋವಿಂದ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula