Thursday 21 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 43 - 52

ಗನ್ಧರ್ವಕನ್ಯಕಾಸೂತೇ ನಿಹತೇ ರಾವಣಾತ್ಮಜೇ ।
ಆಜಗಾಮಾಗ್ರಜಸ್ತಸ್ಯ ಸೋದರ್ಯ್ಯೋ ದೇವತಾನ್ತಕಃ ॥೮.೪೩॥

ಹತನಾಗಲು ಗಂಧರ್ವಸ್ತ್ರೀ ರಾವಣ ಪುತ್ರ ನರಾಂತಕ,
ಅವನ ಒಡಹುಟ್ಟಿದ ಅಣ್ಣ ತಾ ಬಂದ ದೇವಾಂತಕ.

ತಸ್ಯಾsಪತತ ಏವಾsಶು ಶರವರ್ಷಪ್ರತಾಪಿತಾಃ ।
ಪ್ರದುದ್ರುವುರ್ಭಯಾತ್ ಸರ್ವೇ ಕಪಯೋ ಜಾಮ್ಬವನ್ಮುಖಾಃ ॥೮.೪೪॥

ಅವನು ನುಗ್ಗುತ್ತ ಬಂದು ಸುರಿಸುತಿರಲು ಬಾಣದ ಮಳೆ,
ಜಾಂಬವಂತ ಮುಂತಾದವರು ಕಂಗೆಟ್ಟು ಓಡಿದ ವೇಳೆ.

ಸ ಶರಂ ತರಸಾssದಾಯ ರವಿಪುತ್ರಾಯುಧೋಪಮಮ್ ।
ಅಙ್ಗದಂ ಪ್ರಜಹಾರೋರಸ್ಯಪತತ್ ಸ ಮುಮೋಹ ಚ ॥೮.೪೫॥

ದೇವಾಂತಕ ಮಾಡಿದ ಅಂಗದನ ಮೇಲೆ ಯಮದಂಡದಂಥ ಬಾಣ ಪ್ರಯೋಗ,
ಆ ಪ್ರಹಾರದ ತೀವ್ರತೆಗೆ ಕೆಳಗುರುಳಿ  ಮೂರ್ಛೆಹೋದ  ಅಂಗದನಾಗ.

ಅಥ ತಿಗ್ಮಾಂಶುತನಯಃ ಶೈಲಂ ಪ್ರಚಲಪಾದಪಮ್ ।
ಅಭಿದುದ್ರಾವ ಸಙ್ಗೃಹ್ಯ ಚಿಕ್ಷೇಪ ಚ ನಿಶಾಚರೇ ॥೮.೪೬॥

ಸೂರ್ಯಪುತ್ರ ಸುಗ್ರೀವ ಕಂಪಿಸುವ ಮರಗಳಿರುವ ಬೆಟ್ಟ ಹಿಡಿದು ಬಂದ,
ದೇವಾಂತಕನ ಬಳಿಸಾರಿ ಆ ಬೆಟ್ಟವನ್ನೇ  ಅವನ ಮೇಲೆ ಎಸೆದ.

ತಮಾಪತನ್ತಮಾಲಕ್ಷ್ಯದೂರಾಚ್ಛರವಿದಾರಿತಮ್ ।
ಸುರಾನ್ತಕಶ್ಚಕಾರಾsಶು ದಧಾರ ಚ ಪರಂ ಶರಮ್ ॥೮.೪೭॥

ಬೆಟ್ಟ ತನ್ನ ಮೇಲೆ ಬೀಳುತ್ತಿರುವುದ ದೇವಾಂತಕ ನೋಡಿದ,
ಬಾಣದಿಂದದನ ಚೂರು ಮಾಡಿ ಇನ್ನೊಂದು ಬಾಣ ಹೂಡಿದ.

ಸ ತಮಾಕರ್ಣ್ಣಮಾಕೃಷ್ಯ ಯಮದಣ್ಡೋಪಮಂ ಶರಮ್ ।
ಅವಿದ್ಧ್ಯದ್ಧೃದಯೇ ರಾಜ್ಞಃ ಕಪೀನಾಂ ಸ ಪಪಾತ ಹ ॥೮.೪೮॥

ದೇವಾಂತಕ ಎಳೆದು ಬಿಟ್ಟ ಯಮದಂಡದಂಥ ಬಾಣದ ರಭಸ,
ಸುಗ್ರೀವನೆದೆಗೆ ತಾಗಿದ ಅದು ಅವನ ಮಾಡಿತು ಮೂರ್ಛೆಯ ವಶ.

ಬಲಮಪ್ರತಿಮಂ ವೀಕ್ಷ್ಯಸುರಶತ್ರೋಸ್ತು ಮಾರುತಿಃ ।
ಆಹ್ವಯಾಮಾಸ ಯುದ್ಧಾಯ ಕೇಶವಃ ಕೈಟಭಂ ಯಥಾ ॥೮.೪೯॥

ದೇವಾಂತಕನ ಆ ಅಪರಿಮಿತ ಬಲ,
ಹನುಮ ನೋಡಿ ನಿಶ್ಚಯಿಸಿದ ಕಾಲ.
ಹೇಗೆ ಕೇಶವ ಕೈಟಭಗಿತ್ತಿದ್ದ ಯುದ್ಧಾವ್ಹಾನ,
ಹಾಗೇ ದೇವಾಂತಕಗಿತ್ತ ತಾ ಸಮರಾಹ್ವಾನ.

ತಮಾಪತನ್ತಮಾಲೋಕ್ಯ ರಥಂ ಸಹಯಸಾರಥಿಮ್ ।
ಚೂರ್ಣ್ಣಯಿತ್ವಾ ಧನುಶ್ಚಾಸ್ಯ ಸಮಾಚ್ಛಿದ್ಯ ಬಭಞ್ಜ ಹ ॥೮.೫೦॥

ಯುದ್ಧಕ್ಕೆ ವೇಗದಿ ಬರುತ್ತಿದ್ದ ದೇವಾಂತಕನ ಮಾರುತಿ ನೋಡಿದ,
ಅವನ ಕುದುರೆ ಸಾರಥಿ ಸಮೇತ ರಥವ ಪುಡಿ ಪುಡಿ ಮಾಡಿದ.
ಕಿತ್ತುಕೊಂಡ ಅವನ ಧನುಸ್ಸನ್ನು ಹನುಮ ಮುರಿದು ಹಾಕಿದ.

ಅಥ ಖಡ್ಗಂ ಸಮಾದಾಯ ಪುರ ಆಪತತೋ ರಿಪೋಃ ।
ಹರಿಃ ಪ್ರಗೃಹ್ಯ ಕೇಶೇಷು ಪಾತಯಿತ್ವೈನಮಾಹವೇ ॥೮.೫೧॥
ಶಿರೋ ಮಮರ್ದ್ದ ತರಸಾ ಪವಮಾನಾತ್ಮಜಃ ಪದಾ ।
ವರದಾನಾದವದ್ಧ್ಯಂ ತಂ ನಿಹತ್ಯ ಪವನಾತ್ಮಜಃ ।
ಸಮೀಡಿತಃ ಸುರವರೈಃ ಪ್ಲವಗೈರ್ವೀಕ್ಷಿತೋ ಮುದಾ ॥೮.೫೨॥

ಅವನ ಖಡ್ಗ ಕಿತ್ತುಕೊಂಡ ರಾಮಬಂಟ,
ತಲೆಕೂದಲ ಹಿಡಿದವನ ಕೆಳಗೆ ಬಿಸುಟ.
ಕಾಲಿನಿಂದ ಹೊಸಕಿ ಅವನ ತಲೆ ಪುಡಿ ಮಾಡಿದ,
ವರದಿಂದ ಅವಧ್ಯನಾದವನ ಹನುಮ ತಾ ಕೊಂದ.
ದೇವತೆಗಳು ಸ್ತುತಿಸಿದರು ಹನುಮನ ಗುಣಗಾನ,
ಕಪಿಗಳ ಸಂತಸದ ನೋಟದಲ್ಲಿತ್ತು ತುಂಬು ಅಭಿಮಾನ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula