Tuesday 26 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 70 - 76

ತತಃ ಸ ಸಜ್ಜೀಕೃತಮಾತ್ತಧನ್ವಾ ರಥಂ ಸಮಾಸ್ಥಾಯ ನಿಶಾಚರೇಶ್ವರಃ ।
ವೃತಃ ಸಹಸ್ರಾಯುತಕೋಟ್ಯನೀಕಪೈರ್ನ್ನಿಶಾಚರೈರಾಶು ಯಯೌ ರಣಾಯ ॥೮.೭೦॥

ಆಗ ರಾತ್ರಿ ತಿರುಗುವವರ ಒಡೆಯ ಸಜ್ಜಾಗಿ ಬಿಲ್ಲ ಹಿಡಿದು ರಥವನೇರಿದ.
ಹತ್ತು ಸಹಸ್ರಕೋಟಿ ಸೇನಾಧಿಪತಿಗಳ ಬೃಹತ್ ಸೇನೆಯ ಕೂಡಿದ,
ರಾಕ್ಷಸರ  ಪಡೆಯ ಒಡಗೂಡಿ ಬೇಗನೆ ಯುದ್ಧ ಭೂಮಿಗೆ ನಡೆದ.

ಬಲೈಸ್ತು ತಸ್ಯಾಥ ಬಲಂ ಕಪೀನಾಂ ನೈಕಪ್ರಕಾರಾಯುಧಪೂಗಭಗ್ನಮ್ ।
ದಿಶಃ ಪ್ರದುದ್ರಾವ ಹರೀನ್ದ್ರಮುಖ್ಯಾಃ ಸಮಾರ್ದ್ದಯನ್ನಾಶು ನಿಶಾಚರಾಂಸ್ತದಾ ॥೮.೭೧॥

ರಾವಣನ ಸೈನ್ಯಗಳಿಂದ ಧಕ್ಕೆಗೊಳಗಾದ ಕಪಿಸೈನ್ಯದ ಹಿನ್ನಡೆ.
ರಾಕ್ಷಸರನ್ನು ಬಿಡದೆ ಮರ್ಧಿಸಿತು ವೀರ ಕಪಿಶ್ರೇಷ್ಠರ ಆ ಪಡೆ.

ಗಜೋ ಗವಾಕ್ಷೋ ಗವಯೋ ವೃಷಶ್ಚ ಸಗನ್ಧಮಾದಾ ಧನದೇನ ಜಾತಾಃ ।
ಪ್ರಾಣಾದಯಃ ಪಞ್ಚ ಮರುತ್ಪ್ರವೀರಾಃ ಸ ಕತ್ಥನೋ ವಿತ್ತಪತಿಶ್ಚ ಜಘ್ನುಃ ॥೮.೭೨॥

ಗಜ ,ಗವಾಕ್ಷ ,ಗವಯ ,ವೃಷ ಮತ್ತು ಗಂಧಮಾದ,
ಮುಖ್ಯಪ್ರಾಣನ ಮಕ್ಕಳಾದವರಿಗೆ ಕತ್ಥನ ತಂದೆಯಾದ.
ಕತ್ಥನನೆಂಬ ಕಪಿಯಾಗಿ ಅವತರಿಸಿದ್ದ ಕುಬೇರ,
ಇವೆರೆಲ್ಲರಿಂದಾಯಿತು ಯುದ್ಧವೆಂಬ ವ್ಯಾಪಾರ.

ಶರೈಸ್ತು ತಾನ್ ಷಡ್ಬಿರಮೋಘವೇಗೈರ್ನ್ನಿಪಾತಯಾಮಾಸ ದಶಾನನೋ ದ್ರಾಕ್ ।
ಅಥಾಶ್ವಿಪುತ್ರೌ ಚ ಸಜಾಮ್ಬವನ್ತೌ ಪ್ರಜಹ್ನತುಃ ಶೈಲವರೈಸ್ತ್ರಿಭಿಸ್ತಮ್ ॥೮.೭೩॥

ಅವರ ಮೇಲೆ ಎಣೆಯಿರದ ವೇಗದ ಆರು ಬಾಣಗಳಿಂದ,
ರಾವಣ ಮಾಡಿದ  ದಾಳಿಗೆ ಕೆಳಗೆ ಬಿದ್ದ ಕಪಿ ವೃಂದ.
ಆನಂತರ ಜಾಂಬವಂತನಕೂಡಿ ಅಶ್ವಿಪುತ್ರರಾದ ಮೈಂದ  ವಿವಿದ,
ಮೂರು ಪರ್ವತ ಹಿಡಿದು ರಾವಣನೆದುರಿಸಿದ ಯುದ್ಧಶೈಲಿಯ ವಿಧ.

ಗಿರೀನ್ ವಿದಾರ್ಯ್ಯಾsಶು ಶರೈರಥಾನ್ಯಾಞ್ಛರಾನ್ ದಶಾಸ್ಯೋsಮುಚದಾಶು ತೇಷು ।
ಏಕೈಕಮೇಭಿರ್ವಿನಿಪಾತಿತಾಸ್ತೇ ಸಸಾರ ತಂ ಶಕ್ರಸುತಾತ್ಮಜೋsಥ ॥೮.೭೪॥

ರಾವಣ ಅವರೆಸೆದ ಬೆಟ್ಟಗಳ ತನ್ನ ಬಾಣಗಳಿಂದ ಸೀಳಿದ,
ಬೇರೆ ಬಾಣಗಳ ಬಿಟ್ಟು ಒಬ್ಬೊಬ್ಬರನ್ನೂ ಕೆಳಗೆ ಕೆಡವಿದ.
ಆನಂತರ ರಾವಣನ ಎದುರಿಸಲು ಬಂದ ವಾಲಿಪುತ್ರ ಅಂಗದ.

ಶಿಲಾಂ ಸಮಾದಾಯ ತಮಾಪತನ್ತಂ ಬಿಭೇದ ರಕ್ಷೋ ಹೃದಯೇ ಶರೇಣ ।
ದೃಢಾಹತಃ ಸೋsಪ್ಯಗಮದ್ ಧರಾತಳಂ ರವೇಃ ಸುತೋsಥೈನಮಭಿಪ್ರಜಗ್ಮಿವಾನ್ ॥೮.೭೫॥

ದೊಡ್ಡ ಬೆಟ್ಟದೊಂದಿಗೆ ಬಂದ ಅಂಗದ,
ಅವನೆದೆಗೆ ರಾವಣ ಬಾಣದಿ ಹೊಡೆದ.
ಅಂಗದ ಕೆಳಗೆ ಬಿದ್ದು ಮೂರ್ಛಿತನಾದ,
ಆಗ ಸುಗ್ರೀವ ರಾವಣಗೆ ಎದುರಾದ.

ತದ್ದಸ್ತಗಂ ಭೂರುಹಮಾಶು ಬಾಣೈರ್ದ್ದಶಾನನಃ ಖಣ್ಡಶ ಏವ ಕೃತ್ವಾ ।
ಗ್ರೀವಾಪ್ರದೇಶೇsಸ್ಯ ಮುಮೋ ಚ ಬಾಣಂ ಭೃಶಾಹತಃ ಸೋsಪಿ ಪಪಾತ ಭೂಮೌ ॥೮.೭೬॥

ಸುಗ್ರೀವ ಹಿಡಿದು ಬಂದ ದೊಡ್ಡ ಮರ,
ಬಾಣದಿಂದ ಕತ್ತರಿಸಿದನದನ ದಶಶಿರ.
ಅವನ ಕೊರಳ ಭಾಗಕ್ಕೆ ಬಾಣ ಪ್ರಯೋಗಿಸಿದ,
ಬಲವಾದ ಹೊಡೆತಕ್ಕೆ ಸುಗ್ರೀವ ನೆಲಕೆ ಬಿದ್ದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula