Sunday 24 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 58 - 62

ವವರ್ಷತುಸ್ತಾವತಿಮಾತ್ರವೀರ್ಯ್ಯೌ ಶರಾನ್ ಸುರೇಶಾಶನಿತುಲ್ಯವೇಗಾನ್ ।
ತಮೋಮಯಂ ಚಕ್ರತುರನ್ತರಿಕ್ಷಂ ಸ್ವಶಿಕ್ಷಯಾ ಕ್ಷಿಪ್ರತಮಾಸ್ತಬಾಣೈಃ ॥೮.೫೮॥

ಲಕ್ಷ್ಮಣ ಅತಿಕಾಯರಿಬ್ಬರೂ ಅತ್ಯಂತ ಪರಾಕ್ರಮಿಗಳಾಗಿದ್ದರು,
ಇಂದ್ರನ ವಜ್ರಾಯುಧದಷ್ಟು ವೇಗದ   ಬಾಣಗಳ ಸುರಿಸಿಕೊಂಡರು.
ಅಭ್ಯಾಸ ಕೌಶಲಗಳಿಂದ ಬಾಣಗಳ ಮಳೆಗರೆದರು ಸತತ,
ಬಾಣಮೋಡಗಳಿಂದಾಯಿತು ಅಂತರಿಕ್ಷ ಕತ್ತಲಿಂದಾವೃತ.


ಶರೈಃ ಶರಾನಸ್ಯ ನಿವಾರ್ಯ್ಯ ವೀರಃ ಸೌಮಿತ್ರಿರಸ್ತ್ರಾಣಿ ಮಹಾಸ್ತ್ರಜಾಲೈಃ ।
ಚಿಚ್ಛೇದ ಬಾಹೂ ಶಿರಸಾ ಸಹೈವ ಚತುರ್ಭುಜೋsಭೂತ್ ಸ ಪುನದ್ದ್ವಿಷೀರ್ಷಃ ॥೮.೫೯॥

ವೀರಲಕ್ಷ್ಮಣ ತನ್ನ ಬಾಣಗಳಿಂದ ಅವನ ಬಾಣಗಳ ತಡೆದ ,
ತನ್ನಸ್ತ್ರಗಳಿಂದ ಅವನಸ್ತ್ರಗಳ ತಡೆದು ನಿಲ್ಲಿಸುತ ಕತ್ತರಿಸಿದ.
ಲಕ್ಷ್ಮಣ ಅವನ ಬಾಹು ಶಿರಸ್ಸನ್ನು ಕತ್ತರಿಸಲಾಗ,
ನಾಕು ಬಾಹು ಎರಡು ತಲೆಗಳಿರುವವನಾದನಾಗ.

ಛಿನ್ನೇಷು ತೇಷು ದ್ವಿಗುಣಾಸ್ಯಬಾಹುಃ ಪುನಃ ಪುನಃ ಸೋsಥ ಬಭೂವ ವೀರಃ ।
ಉವಾಚ ಸೌಮಿತ್ರಿಮಥಾನ್ತರಾತ್ಮಾ ಸಮಸ್ತಲೋಕಸ್ಯ ಮರುದ್ ವಿಷಣ್ಣಮ್ ॥೮.೬೦॥

ಲಕ್ಷ್ಮಣ ಅವನ ಆ ಬಾಹು ಶಿರಸ್ಸುಗಳ ಛೇದಿಸಿದ,
ಆತ ಮತ್ತೆರಡರಷ್ಟು ಬಾಹು ಶಿರಸ್ಸುಗಳುಳ್ಳವನಾದ.
ಹೀಗೇ ಇದೇ  ರೀತಿ ಪುನರಾವರ್ತಿಸುತ್ತಿರುವಾಗ,
ವಿಷಣ್ಣ ಲಕ್ಷ್ಮಣಗೆ ಸರ್ವಾಂತರ್ಯಾಮಿ ಪ್ರಾಣ ನುಡಿದನಾಗ.

ಬ್ರಹ್ಮಾಸ್ತ್ರತೋsನ್ಯೇನ ನ ವಧ್ಯ ಏಷ ವರಾದ್ ವಿಧಾತುಃ ಸುಮುಖೇತ್ಯದೃಶ್ಯಃ ।
ರಕ್ಷಃಸುತಸ್ಯಾಶ್ರವಣೀಯಮಿತ್ಥಮುಕ್ತ್ವಾ ಸಮೀರೋsರುಹದನ್ತರಿಕ್ಷಮ್ ॥೮.೬೧॥

ಸುಂದರಮೊಗದವನೇ ಅವನಿಗಿದೆ ಬ್ರಹ್ಮವರ,
ಬ್ರಹ್ಮಾಸ್ತ್ರದಿಂದಲ್ಲದೇ ಆಗದವನ ಸಂಹಾರ.
ಅತಿಕಾಯಗೆ ಕಾಣದಂತೆ ಕೇಳದಂತೆ ಲಕ್ಷ್ಮಣಗೆ ಹೇಳಿದ,
ಅಷ್ಟು ಹೇಳಿದ ವಾಯುಪುತ್ರ ಹನುಮ ಅಂತರಿಕ್ಷಕ್ಕೆ ಹಾರಿದ.

ಅಥಾನುಜೋ ದೇವತಮಸ್ಯ ಸೋsಸ್ತ್ರಂ ಬ್ರಾಹ್ಮಂ ತನೂಜೇ ದಶಕನ್ಧರಸ್ಯ ।
ಮುಮೋಚ ದಗ್ಧಃ ಸರಥಾಶ್ವಸೂತಸ್ತೇನಾತಿಕಾಯಃ ಪ್ರವರೋsಸ್ತ್ರವಿತ್ಸು ॥೮.೬೨॥

ಆಗ ರಾಮನನುಜ ಲಕ್ಷ್ಮಣ ಮಾಡಿದ ಅತಿಕಾಯನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ,
ಉತ್ತಮ ಅಸ್ತ್ರಜ್ಞನಾದ ಅತಿಕಾಯ ರಥ ಕುದುರೆ ಸಾರಥಿಗಳೊಂದಿಗೆ ಭಸ್ಮವಾದನಾಗ.


No comments:

Post a Comment

ಗೋ-ಕುಲ Go-Kula