Friday 6 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 125 - 131

ತೇ ಭಕ್ಷಿತಾಸ್ತೇನ ಕಪಿಪ್ರವೀರಾಃ ಸರ್ವೇ ವಿನಿರ್ಜ್ಜಗ್ಮುರಮುಷ್ಯ ದೇಹಾತ್ ।
ಸ್ರೋತೋಭಿರೇವಾಥ ಚ ರೋಮಕೂಪೈಃ ಕೇಚಿತ್ ತಮೇವಾsರುರುಹುರ್ಯ್ಯಥಾ \
ಗಿರಿಮ್ ॥೮.೧೨೫॥

ಕುಂಭಕರ್ಣ ಬಾಯೊಳಗೆ ಹಾಕಿಕೊಂಡ ಕಪಿಗಳೆಲ್ಲಾ,
ಇಂದ್ರಿಯದ್ವಾರ ರೋಮಕೂಪಗಳಿಂದಾಚೆ ಬಂದರೆಲ್ಲ.
ಕೆಲ ಕಪಿಗಳು ಕುಂಭಕರ್ಣನ ಮೈಯ ಬೆಟ್ಟದಂತೆ ಹತ್ತಿದವೆಲ್ಲ.

ಸ ತಾನ್ ವಿಧೂಯಾsಶು ಯಥಾ ಮಹಾಗಜೋ ಜಗಾಮ ರಾಮಂ ಸಮರಾರ್ತ್ಥಮೇಕಃ।
ಪ್ರಭಕ್ಷಯನ್ ಸ್ವಾನಪರಾಂಶ್ಚ ಸರ್ವಶೋ ಮತ್ತಃ ಸಮಾಘ್ರಾಯ ಚ ಶೋಣಿತಂ ಪಿಬನ್ ॥೮.೧೨೬॥

ಮದೋನ್ಮತ್ತವಾದ ಆನೆಯಂತಾದ ರಾಕ್ಷಸನವನು,
ಮೈಮೇಲಿನ ಕಪಿಗಳನ್ನೆಲ್ಲಾ ಕೊಡವಿಕೊಂಡನವನು.
ಮತ್ತ ಕುಂಭಕರ್ಣ ಸಾಗಿದ ಸ್ವಕೀಯರನ್ನು ಕಪಿಗಳನ್ನು ತಿನ್ನುತ್ತಾ,
ಆಘ್ರಾಣಿಸುತ್ತಾ ರಕ್ತ ಹೀರುತ್ತಾ ಯುದ್ಧಕೆ ನಡೆದ ಶ್ರೀರಾಮನತ್ತ.

ನ್ಯವಾರಯತ್ ತಂ ಶರವರ್ಷಧಾರಯಾ ಸ ಲಕ್ಷ್ಮಣೋ ನೈನಮಚಿನ್ತಯತ್ ಸಃ ।
ಜಗಾಮ ರಾಮಂ ಗಿರಿಶೃಙ್ಗಧಾರೀ ಸಮಾಹ್ವಯತ್ ತಂ ಸಮರಾಯ ಚಾsಶು ॥೮.೧೨೭॥

ಲಕ್ಷ್ಮಣನ ಬಾಣಗಳಿಂದ ಕುಂಭಕರ್ಣನ ತಡೆ,
ಆದರೆ ಕುಂಭಕರ್ಣನದು ಅದನ್ನು ಲೆಕ್ಕಿಸದ ನಡೆ.
ದೊಡ್ಡ ಬೆಟ್ಟ ಹಿಡಿದು ರಾಮನೆಡೆಗೆ ನಡೆದ,
ಶ್ರೀರಾಮಚಂದ್ರನನ್ನು ಯುದ್ಧಕೆಂದು ಕರೆದ.

ಅಥೋ ಸಮಾದಾಯ ಧನುಃ ಸುಘೋರಂ ಶರಾಂಶ್ಚ ವಜ್ರಾಶನಿತುಲ್ಯವೇಗಾನ್ ।
ಪ್ರವೇಶಯಾಮಾಸ ನಿಶಾಚರೇ ಪ್ರಭುಃ ಸ ರಾಘವಃ ಪೂರ್ವಹತೇಷು ಯದ್ವತ್  ॥೮.೧೨೮॥

ಆನಂತರ ಸರ್ವಸಮರ್ಥನಾದ ಶ್ರೀರಾಮಚಂದ್ರ,
ಎತ್ತಿಕೊಂಡ ಧನುಸ್ಸಾಗಿತ್ತದು ಘನ  ಘೋರ.
ವಜ್ರಾಯುಧ ಸಮ ಬಾಣಗಳ ಬಿಟ್ಟ ಜಗದೇಕವೀರ.

ಯಾವದ್ಬಲೇನ ನ್ಯಹನತ್ ಖರಾದಿಕಾನ್ ನ ತಾವತೈವ ನ್ಯಪತತ್ ಸ ರಾಕ್ಷಸಃ ।
ಅತ ಪ್ರಹಸ್ಯಾsತ್ಮಬಲೈಕದೇಶಂ ಪ್ರದರ್ಶಯನ್ ಬಾಣವರಾನ್ ಮುಮೋಚ ॥೮.೧೨೯॥

ಯಾವ ಶ್ರೀರಾಮನ ಬಲದಿಂದ ಖರಾದಿ ದೈತ್ಯರದಾಗಿತ್ತೋ ಸಾವು,
ಅದೇ ಬಲದಿಂದ ಕುಂಭಕರ್ಣ ಕೆಳಗೆ ಬೀಳಲಿಲ್ಲ ಆಗಿ ನೋವು.
ನಕ್ಕ ಶ್ರೀರಾಮ ತನ್ನ ಬಲದ ಒಂದಂಶ ತೋರುತ್ತಾ ಬಾಣಗಳ ಬಿಟ್ಟ,
ಶ್ರಿರಾಮನೇ ತೋರಿದ ಕುಂಭಕರ್ಣ ಖರಾದಿ ರಕ್ಕಸರಿಗಿಂತ ಬಲಿಷ್ಠ.




ದ್ವಾಭ್ಯಾಂ ಸ ಬಾಹೂ ನಿಚಕರ್ತ್ತ ತಸ್ಯ ಪದದ್ವಯಂ ಚೈವ ತಥಾ ಶರಾಭ್ಯಾಮ್ ।
ಅಥಾಪರೇಣಾಸ್ಯ ಶಿರೋ ನಿಕೃತ್ಯ ಸಮ್ಪ್ರಾಕ್ಷಿಪತ್ ಸಾಗರತೋಯ ಆಶು ॥೮.೧೩೦॥

ರಾಮ ತನ್ನೆರಡು ಬಾಣಗಳಿಂದ ಅವನೆರಡು ತೋಳುಗಳ ಕತ್ತರಿಸಿದ,
ಮತ್ತೆರಡು ಬಾಣಗಳಿಂದ ಮಾಡಿದ ಅವನೆರಡು ಕಾಲುಗಳ ಛೇದ.
ಮತ್ತೊಂದು ಬಾಣದಿಂದ ಮಾಡಿದನವನ ಶಿರಚ್ಛೇದ,
ರಾಮ ಅವೆಲ್ಲವನ್ನೂ ಸಮುದ್ರತೀರದೆಡೆಗೆ ಎಸೆದ.

ಅವರ್ದ್ದತಾಬ್ಧಿಃ ಪತಿತೇsಸ್ಯ ಕಾಯೇ ಮಹಾಚಲಾಭೇ ಕ್ಷಣದಾಚರಸ್ಯ ।
ಸುರಾಶ್ಚ ಸರ್ವೇ ವವೃಷುಃ ಪ್ರಸೂನೈರ್ಮ್ಮುದಾ ಸ್ತುವನ್ತೋ 
ರಘುವರ್ಯ್ಯಮೂರ್ಧ್ನಿ ॥೮.೧೩೧॥

ಕುಂಭಕರ್ಣನ ದೈತ್ಯದೇಹ ಸಮುದ್ರಕ್ಕೆ ಬಿದ್ದಾಗ,
ಕಲಕಿದ ಸಮುದ್ರದ ನೀರು ಭರದಿ ಉಕ್ಕಿತಾಗ.
ದೇವತೆಗಳೆಲ್ಲರಿಂದ ಸ್ತೋತ್ರ ಮೂಲಕ ರಾಮನ ಕೊಂಡಾಟ,
ಸಂತಸದಿ ರಾಮನ ತಲೆಮೇಲೆ ಹೂಮಳೆ ಸುರಿಸಿದ ಆಟ.


No comments:

Post a Comment

ಗೋ-ಕುಲ Go-Kula