Sunday 1 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 99 - 104

ಸಶೈಲಶೃಙ್ಗಾಸಿಪರಶ್ವಧಾಯುದೈರ್ನ್ನಿಶಾಚರಾಣಾಮಯುತೈರನೇಕೈಃ ।
ತಚ್ಛ್ವಾಸವೇಗಾಭಿಹತೈಃ ಕಥಞ್ಚಿದ್ ಗತೈಃ ಸಮೀಪಂ 
ಕಥಮಪ್ಯಬೋಧಯತ್ ॥೮.೯೯॥

ಲಂಕಾಧೀಶ ರಾವಣನ ಆಜ್ಞಾನುಸಾರ,
ರಕ್ಕಸರು ಗುಂಪಾದರು ಹತ್ತು ಸಾವಿರ.
ಗಿರಿಶಿಖರ ಖಡ್ಗ ಕೊಡಲಿ ಆಯುಧಗಳ ಸಮೇತ,
ಕುಂಭಕರ್ಣನ ಎಚ್ಚರಿಸುವಲ್ಲಿ ಆದರೆಲ್ಲ ನಿರತ.
ಭಾರೀ ರಭಸವಾಗಿತ್ತಂತೆ ಕುಂಭಕರ್ಣನ ಉಸಿರಾಟದ ಆ ವೇಗ,
ಸಿಲುಕಿದ ರಕ್ಕಸರು ಹೋಗಿ ಬೀಳುತ್ತಿದ್ದರಂತೆ ಬಲು ದೂರದೂರದ ಜಾಗ.
ಇಷ್ಟೆಲ್ಲಾ ಆದಮೇಲೆ ಅವನೆಬ್ಬಿಸುವ ಯುದ್ಧ,
ಕೊನೆಗೂ ಕುಂಭಕರ್ಣ ಕಷ್ಟಪಟ್ಟು ಮೇಲೆದ್ದ.

ಶೈಲೋಪಮಾನಸ್ಯ ಚ ಮಾಂಸರಾಶೀನ್ ವಿಧಾಯ ಭಕ್ಷಾನಪಿ ಶೋಣಿತಹ್ರದಾನ್ ।
ಸುತೃಪ್ತಮೇನಂ ಪರಮಾದರೇಣ ಸಮಾಹ್ವಯಾಮಾಸ ಸಭಾತಳಾಯ ॥೮.೧೦೦॥

ಹಸಿದು ಎದ್ದ ರಾಕ್ಷಸಗೆ ಮಾಂಸರಾಶಿ ರಕ್ತ ಮಡುವಿನ ಭಾರೀ ಊಟ,
ಬಗೆಬಗೆಯಾಗಿ ತೃಪ್ತಿಗೊಳಿಸಿ ಅವನ ರಾವಣ ಸಭೆಗೆ ಕರೆಸಿದ ಆಟ.

ಉವಾಚ ಚೈನಂ ರಜನೀಚರೇನ್ದ್ರಃ ಪರಾಜಿತೋsಸ್ಮ್ಯದ್ಯ ಹಿ ಜೀವತಿ ತ್ವಯಿ ।
ರಣೇ ನರೇಣೈವ ಚ ರಾಮನಾಮ್ನಾ ಕುರುಷ್ವ ಮೇ ಪ್ರೀತಿಮಮುಂ ನಿಹತ್ಯ ॥೮.೧೦೧॥

ಸಭೆಗೆ ಬಂದ ಕುಂಭಕರ್ಣಗೆ ಲಂಕಾಧೀಶ ರಾವಣ  ಹೀಗೆ  ಹೇಳುತ್ತಾನೆ,
ನೀನಿರುವಾಗಲೇ ರಾಮನೆಂಬ ಮಾನವನಿಂದ ಯುದ್ಧದಿ ನಾ ಸೋತಿದ್ದೇನೆ.
ಅಂತಹಾ ರಾಮನನ್ನು ನೀನು ಕೊಂದುಬಿಡು,
ಆ ಕಾರ್ಯ ಮಾಡಿ ನನಗೆ ಸಂತೋಷ ನೀಡು.

ಇತೀರಿತಃ ಕಾರಣಮಪ್ಯಶೇಷಂ ಶ್ರುತ್ವಾ ಜಗರ್ಹಾಗ್ರಜಮೇವ ವೀರಃ ।
ಅಮೋಘವೀರ್ಯ್ಯೇಣ ಹಿ ರಾಘವೇಣ ತ್ವಯಾ ವಿರೋಧಶ್ಚರಿತೋ 
ಬತಾದ್ಯ ॥೮.೧೦೨॥

ಬಲಶಾಲಿ ಕುಂಭಕರ್ಣ ಎಲ್ಲವನ್ನೂ ಕೇಳಿದ,
ಹಿನ್ನೆಲೆಯನ್ನೆಲ್ಲಾ ಕೇಳಿ ತಿಳಿದುಕೊಂಡವನಾದ.
ಅಣ್ಣನನ್ನೇ ನಿಂದಿಸುತ್ತಾ ನುಡಿಯುತ್ತಾನೆ ತಮ್ಮ,
ವ್ಯರ್ಥವೇ ಆಗದ ಬಲದ ನಿಧಿಯವನು ರಾಮ.
ಅವನೊಂದಿಗೆ ಕಟ್ಟಿಕೊಂಡ ವೈರವಲ್ಲವದು ಕ್ಷೇಮ.

ಪ್ರಶಸ್ಯತೇ ನೋ ಬಲಿಭಿರ್ವಿರೋಧಃ ಕಥಞ್ಚಿದೇಷೋsತಿಬಲೋ ಮತೋ ಮಮ ।
ಇತೀರಿತೋ ರಾವಣ ಆಹ ದುರ್ನ್ನಯೋsಪ್ಯಹಂ ತ್ವಯಾsವ್ಯೋ ಹಿ 
ಕಿಮನ್ಯಥಾ ತ್ವಯಾ ॥೮.೧೦೩॥

ಅತ್ಯಂತ ಬಲಿಷ್ಠರೊಂದಿಗೆ ಎಂದೂ ವಿರೋಧ ಸಲ್ಲದು,
ನಿನ್ನ ಮಾತಿಂದ ವೇದ್ಯ ರಾಮ ಅತ್ಯಂತ ಬಲಶಾಲಿ ಎಂಬುದು.
ತಮ್ಮಗೆ ರಾವಣ ಹೇಳುತ್ತಾನೆ ಹೌದು ತಪ್ಪಾಗಿದೆ ನನ್ನಿಂದ,
ಈಗ ರಕ್ಷಣೆ ಮಾಡದಿದ್ದರೆ ಪ್ರಯೋಜನವೇನು ನಿನ್ನಿಂದ.

ಚರನ್ತಿ ರಾಜಾನ ಉತಾಕ್ರಮಂ ಕ್ವಚಿತ್ ತ್ವಯೋಪಮಾನ್ ಬನ್ಧುಜನಾನ್ ಬಲಾಧಿಕಾನ್ ।
ಸಮೀಕ್ಷ್ಯ ಹೀತ್ಥಂ ಗದಿತೋsಗ್ರಜೇನ ಸ ಕುಮ್ಭಕರ್ಣ್ಣಃ ಪ್ರಯಯೌ 
ರಣಾಯ ॥೮.೧೦೪॥

ರಾಜರಿಗಿದ್ದಾಗ ನಿನ್ನಂಥಾ ಬಲಶ್ರೇಷ್ಠರ ಭಾರೀ ಬೆಂಬಲ,
ರಾಜರೂ ಮಾಡುತ್ತಾರೆ ಮಾಡಬಾರದ್ದನ್ನು ಕೆಲವು ಸಲ.
ಕುಂಭಕರ್ಣಗೆ ರಾವಣ ಹೀಗೆ ಹೇಳಿದ,
ಕುಂಭಕರ್ಣ ಯುದ್ಧಕೆಂದು ತಾ ತೆರಳಿದ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula