Thursday 21 January 2016

Bhava Guccha 03


ಭಾವ ಗುಚ್ಛ  By  "ತ್ರಿವೇಣಿ ತನಯ"

ಅನುಭವದ ಕೆತ್ತನೆ

ಉಳಿಪೆಟ್ಟು ತಿಂದ ಕಲ್ಲದು ಮೂರ್ತಿಯಾಯ್ತು ,
ಒಲ್ಲೆನೆನುತ ದೂರ ಉಳಿದುದದು ಬರೀ ಮೆಟ್ಟಿಲಾಯ್ತು ,
ಕಷ್ಟ ಕಾರ್ಪಣ್ಯ ಟೀಕೆಗಳಿಗೆ ಒಡ್ಡಿಕೋ ನಿನ್ನ ,
ಕೊಳೆಕಳೆದ ಚಲುಮನದ ಗೊಂಬೆಯಾಗುವೆ ಚೆನ್ನ .

ಎಡಬಿಡಂಗಿ

ಈ ನೆಲ ಜಲ ಸಂಸ್ಕೃತಿ ಭಾಷಾಭಿಮಾನ,
ನಶಿಸಿ ನಡೆದಿದೆ ಬರೀ ಅಂಧ ಆಂಗ್ಲಾನುಕರಣ,
ಒಂದು ಕಲಿಯಲೇ ಇಲ್ಲ ಇನ್ನೊಂದು ಬರಲಿಲ್ಲ ,
ಆಗುತಿದೆ ಎಡಬಿಡಂಗಿಗಳ ಬೀಡು ನಾಡೆಲ್ಲ .

ನವಯುಗ

ಸ್ಪಂದನ ಸ್ಫುರಣ ಆತ್ಮಾವಲೋಕನ ,
ಅಂತ:ಕರಣ ಚಿಂತನ ಮಂಥನ ,
ಪದಗಳ ಸುಳಿವೇ ಇಲ್ಲ ನವಪೀಳಿಗೆಯಲ್ಲಿ,
ಯಾಂತ್ರಿಕ ಓಟದಲ್ಲಿ ಹೊರಟಿರುವುದಾದರೂ ಎಲ್ಲಿ?


ಭಾಷೆ ಭಾವ

ಭಾಷೆ ಯಾವುದೇ ಇರಲದು ಗೌಣ ,
ಭಾವವೊಂದೇ ಮುಖ್ಯ ಹೂರಣ ,
ಚಿಂತಕರು ಹರಿಸುತ್ತಿರಿ ಅನುಸಂಧಾನದ ದಾರಿ ,
ಮುಂದೊಮ್ಮೆ ಒಪ್ಯಾನು ಹರಿ ಕಾರುಣ್ಯ ತೋರಿ .

ಹರಿದಿನ

ಇಂದು ಪದ್ಮನಾಭನ(ಹರಿ) ದಿನದ ಉಪವಾಸ ,
ಕೊಟ್ಟರು ಚಿಂತಕರು ಅನುಸಂಧಾನದ "ಉಪರಿ"ವಾಸ ,
ಸಾಗಿರಲಿ ಬಳಗ ಸತ್ಚಿಂತನೆಯ ಜಾಡಿನಲ್ಲಿ ,
ಅದಿರದ ಏನೇ ಕರ್ಮಗಳೂ ನಿರರ್ಥಕ ಬಾಳಿನಲ್ಲಿ
(Contributed by Shri Govind Magal)

No comments:

Post a Comment

ಗೋ-ಕುಲ Go-Kula