Saturday 23 January 2016

ಕಾಲದ ಗಣನೆಗೆ ಯುಗ ಚಕ್ರ

ಕಾಲ ಅನಂತ, ಆದರೂ ಭಗವಂತನಿಂದ ಸೃಷ್ಟವಾದ ಈ ಜಗತ್ತಿಗೊಂದು ಕಾಲದ ಪರಿಧಿ ಇದೆ. ಅದರ ಗಣನೆಗೆಗಾಗಿ ರೂಪತಾಳಿದ್ದೇ ಚತುರ್ಯುಗ. ಇರುವುದು ನಾಲ್ಕೇ ಯುಗ. ಅದೇ ಕೃತ, ತ್ರೇತಾ, ದ್ವಾಪರ ಮತ್ತು ಕಲಿ.

ಭಗವಾನ್ ವೇದ ವ್ಯಾಸರು  ಈ ಯುಗಗಳ ಕಾಲಮಾನವನ್ನು ಕರಾರುವಾಕ್ಕಾಗಿ, ಗಣಿತಬದ್ಧವಾಗಿ ಭಾಗವತದ ಮೂಲಕ ನಮಗೆ ಕೊಟ್ಟಿದ್ದಾರೆ. ಅದರ ಲೆಕ್ಕಾಚಾರ ಹೀಗಿದೆ :

ನಾವು ವಾಸಿಸುತ್ತಿರುವ ಈ ಭೂಮಿಯ ಮೇಲಿನ ವರ್ಷದ ಗಣನೆಯಂತೆ, ಚತುರ್ಯುಗಗಳಲ್ಲಿ ಅತ್ಯಂತ ಕಿರಿದಾದ ಯುಗ, ಕಲಿಯುಗದ ಕಾಲಮಾನ 4,32,000 ವರ್ಷಗಳು. ನಂತರದ ಯುಗ ಅಂದರೆ ಕಲಿಯುಗದ ಎರಡು ಪಟ್ಟಿನದು ದ್ವಾಪರಯುಗ  8,64,000 ವರ್ಷಗಳು, ಕಲಿಯುಗದ ಮೂರು ಪಟ್ಟಿನದು ತ್ರೇತಾಯುಗ, 12,96,000 ವರ್ಷಗಳು. ಕಾಲಮಾನದಲ್ಲಿ ಅತ್ಯಂತ ದೊಡ್ಡದು, ಅಂದರೆ ಕಲಿಯುಗದ ನಾಲ್ಕು ಪಟ್ಟಿನದು ಸತ್ಯಯುಗ ಅಥವಾ ಕೃತಯುಗ, 17,28,000 ವರ್ಷಗಳು.

ಹೀಗೆ ಈ ನಾಲ್ಕು ಯುಗಗಳು ಕಲಿಯುಗದ 1:2:3:4 ಅನುಪಾತ (ರೇಶಿಯೋ)ದಲ್ಲಿವೆ.

ಒಂದು ಯುಗಚಕ್ರ ಉರುಳಿದಾಗ ಆಗುವ ಒಟ್ಟು ಕಾಲ ಅಂದರೆ, ಒಂದು ಚತುರ್ಯುಗದ ಕಾಲಮಾನ ಕಲಿಯುಗದ ಹತ್ತು ಪಟ್ಟು 
(1+2+3+4=10x432000) ಅಂದರೆ,

43,20,000 ವರ್ಷಗಳು. ಈ ರೀತಿಯಾಗಿ 71 ಬಾರಿ ಚತುರ್ಯುಗಗಳು ಸುತ್ತಿದಾಗ ಆಗುವ ಕಾಲವೇ, ಒಂದು ಮನ್ವಂತರಕಾಲ.
ಹಾಗಾದರೆ ಒಂದು ಮನ್ವಂತರ ಅಂದರೆ ಎಷ್ಟು ವರ್ಷಗಳಾದವು?

4320000 x 71 = 30,67,20,000 ವರ್ಷಗಳಾದವು... 

ಇದಕ್ಕೆ  ಯುಗಾಂತರಗಳ ಅವಧಿ 18,50,000 ವರ್ಷಗಳನ್ನು ಸೇರಿಸಿದರೆ (ಇದು ಕೇವಲ ಆಚಾರ್ಯ ಮಧ್ವರು ಮಾತ್ರ ಕೊಟ್ಟ ಲೆಕ್ಕಾಚಾರ ಅಂತ ನಮ್ಮ ಆಚಾರ್ಯರಾದ ಶ್ರೀ ಬನ್ನಂಜೆಯವರು ನಮಗೆಲ್ಲ ತಿಳಿಸಿಕೊಟ್ಟ ಲೆಕ್ಕಾಚಾರದಂತೆ) 30,85,70,000 ವರ್ಷಗಳಾದವು. ಇದು ಒಂದು ಮನ್ವಂತರದ ಕಾಲಮಾನ...

ಒಟ್ಟು  ಮನ್ವಂತರಗಳು ಹದಿನಾಕು... ಸ್ವಾಯಂಭುವ, ಸ್ವಾರೋಚಿಷ, ಉತ್ತಮ, ತಾಪಸ, ರೈವತ, ಚಾಕ್ಷುಷ, ವೈವಸ್ವತ -ಈಗ ನಡೆಯುತ್ತಿರುವ ಮನ್ವಂತರ, ಮುಂದೆ ಬರಲಿರುವ ಮನ್ವಂತರಗಳು ಸೂರ್ಯಸಾವರ್ಣಿ, ದಕ್ಷಸಾವರ್ಣಿ, ಬ್ರಹ್ಮಸಾವರ್ಣಿ, ಧರ್ಮಸಾವರ್ಣಿ, ರುದ್ರಸಾವರ್ಣಿ, ದೇವಸಾವರ್ಣಿ ಮತ್ತು ಇಂದ್ರಸಾವರ್ಣಿ...

ಹೀಗೆ ಈ ಹದಿನಾಕು ಮನ್ವಂತರಗಳು ಕಳೆದಾಗ ಆಗುವ ಒಟ್ಟು  ಕಾಲವೇ ಬ್ರಹ್ಮದೇವರ ಒಂದು ಹಗಲು (ದಿನಕಲ್ಪ) ಅಂದರೆ, ಬ್ರಹ್ಮದೇವರಿಗಿದು ಒಂದು ದಿನದ ಹಗಲಿನ 12 ಗಂಟೆ ಕಳೆದ ಸಮಯವಷ್ಟೆ...

ಅದರ ಗಣಿತ ಹೀಗಿದೆ :-

30,85,70,000 x 14 = 431,99,80,000 ವರ್ಷಗಳಾದವು. ಇದಕ್ಕೆ  ಪ್ರತಿ ಮನ್ವಂತರದ ಅಂತ್ಯದಲ್ಲಿ ಆಗುವ ಪ್ರಳಯಕಾಲದ ಅವಧಿಯನ್ನು ಸೇರಿಸಬೇಕು.  ಅಂದರೆ, ಹದಿನಾಕು ಮನ್ವಂತರಗಳ ನಡುವೆ ‌‌ಆಗುವ ಒಟ್ಟು ಪ್ರಳಯದ ಅವಧಿ 20,000 ವರ್ಷಗಳು. ಈ ಪ್ರಳಯಕಾಲವನ್ನು ಮೇಲಿನ ದಿನಕಲ್ಪದ ಅವಧಿಗೆ ಸೇರಿಸಿದಾಗ ಸರಿಯಾಗಿ 432 ಕೋಟಿ ವರ್ಷಗಳಾಗುತ್ತವೆ.

ಈ ಗಣಿತವನ್ನು , ಅಂದರೆ 20000 ವರ್ಷಗಳನ್ನು 14 ಮನ್ವಂತರಗಳಿಗೆ  ಸಮನ್ವಯ ಮಾಡುವ ರೀತಿಯನ್ನು ಅನ್ಯಾದೃಶವಾಗಿ  ತೋರಿಸಿಕೊಟ್ಟವರು ಪೂಜ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಮಾತ್ರ. ಅವರು ಹೇಳುವಂತೆ, 14 ಮನ್ವಂತರಗಳ ನಡುವೆ ಆಗುವುದು 13 ಪ್ರಳಯಗಳು ಮಾತ್ರ... ಮೊದಲನೆಯ ಸ್ವಾಯಂಭುವ ಮನ್ವಂತರ ಮುಗಿದಾಗ ಆಗುವ ಪ್ರಳಯಕಾಲ ಹೆಚ್ಚಿನದ್ದಾಗಿದ್ದು 2000 ವರ್ಷಗಳ ಅವಧಿಯದ್ದಾಗಿರುತ್ತದೆ. ಉಳಿದ 18000 ವರ್ಷಗಳನ್ನು  ಉಳಿದ 12 ಮನ್ವಂತರಗಳಿಗೆ ಸಮ ವಿಭಾಗ ಮಾಡಿದಾಗ ಸರಿಯಾಗಿ 1500 ವರ್ಷಗಳಾಗುತ್ತವೆ. ಈ ತನಕ ಅನೇಕ ವಿದ್ವಾಂಸರು ಈ ಮನ್ವಂತರ ಪ್ರಳಯದ ವಿಭಾಗ ಮಾಡುವಲ್ಲಿ ಲೆಕ್ಕ ತಪ್ಪಿದಾಗ ನಮ್ಮ ಆಚಾರ್ಯರು ನೀಡಿದ ಕೊಡುಗೆ ಅತ್ಯಂತ ಅಪೂರ್ವ ಸಂಗತಿಯಾಗಿದೆ...
ಹೀಗೆ 432 ಕೋಟಿ ವರ್ಷಗಳಿಗೊಮ್ಮೆ

ಭೂಮಿಯ ಸೃಷ್ಟಿ  ಮತ್ತೆ 432 ಕೋಟಿ ವರ್ಷಗಳಿಗೊಮ್ಮೆ  ಭೂಮಿಯ ನಾಶ (ದಿನಕಲ್ಪದ ಪ್ರಳಯಕಾಲ). ಇದು ಚತುರ್ಮುಖ ಬ್ರಹ್ಮನಿಗೆ ಕೇವಲ ಒಂದು ದಿನದ ಹಗಲು ಮತ್ತು ರಾತ್ರಿಯಷ್ಟೇ.

ಚತುರ್ಮುಖನಿಗೆ ಒಂದು ದಿವಸ ಕಳೆದರೆ (24 ಗಂಟೆಯಾದರೆ) ಭೂಮಿಯ ಮೇಲಿನ ಗಣಿತದಂತೆ 864 ಕೋಟಿ ವರ್ಷಗಳು ಸಂದಂತಾಗುತ್ತದೆ ಎನ್ನುತ್ತದೆ ಭಾಗವತ.

ಹಾಗಾದರೆ, ಚತುರ್ಮುಖ ಬ್ರಹ್ಮನ ಆಯುಷ್ಯ ಎಷ್ಟು? "ಶತಮಾನಂ ಭವತಿ ಶತಾಯುಃ ಪುರುಷೇಂದ್ರಿಯೇ ಪ್ರತಿತಿಷ್ಠತಿ" ಎಂಬಂತೆ ... ಬ್ರಹ್ಮನ ದೇಹಕ್ಕೂ ಆಯುಷ್ಯ ನೂರೇ ವರ್ಷ. ಅದು ಅವನ ನೂರು ವರ್ಷ.. ಅದನ್ನು ನಮ್ಮ ಗಣನೆಯಂತೆ ಲೆಕ್ಕಹಾಕಿದಾಗ ಎಷ್ಟಾಯಿತು?... ಅದರ ಲೆಕ್ಕ ಹೀಗಿದೆ:

ಬ್ರಹ್ಮನ ಒಂದು ದಿನ ಅಂದರೆ ನಮ್ಮ (ಭೂಮಿಯ ಮೇಲಿನ) ವರ್ಷದ ಕಾಲಮಾನದಲ್ಲಿ 864 ಕೋಟಿ ವರ್ಷಗಳು.
ಅವನ ಒಂದು  ವರ್ಷ ಅಂದರೆ 864x360=3,11,040 ಕೋಟಿ ವರ್ಷಗಳು....

ಅಂಥಹ ನೂರು ವರ್ಷಗಳು ಚತುರ್ಮುಖನಿಗೆ ತುಂಬುವುದೇ ಬ್ರಹ್ಮನ ನೂರು ವರ್ಷ... ಅದೇ ಇಡೀ ಬ್ರಹ್ಮಾಂಡದ ಆಯುಷ್ಯ ಕೂಡ.....
3,11,040 x 100 = 31,104,000 ಕೋಟಿ ವರ್ಷಗಳು (ಮೂವತ್ತೊಂದು ಸಾವಿರದ ನೂರ ನಾಕು ಸಾವಿರ ಕೋಟಿ ವರ್ಷಗಳು)
ಅಥವಾ 31,104,00,00,00,00,00
ವರ್ಷಗಳು. 

ಇದು ಭಗವಂತನ ಮೊದಲ ಮಗ, ಆದಿ ಜೀವ, ಚತುರ್ಮುಖ ಬ್ರಹ್ಮನ ಜೀವಿತಾವಧಿ.ಇದೇ ಮಹಾಕಲ್ಪ...

ಒಮ್ಮೆ ಇಷ್ಟು ಅವಧಿ ಮುಗಿದ ಮೇಲೆ ಮಹಾಪ್ರಳಯವಾಗುತ್ತದೆ. ತದನಂತರ ಮತ್ತೆ ಇಡೀ ಬ್ರಹ್ಮಾಂಡದ ಸೃಷ್ಟಿಕ್ರಿಯೆ ಪ್ರಾರಂಭಗೊಳ್ಳಲು ತೆಗೆದುಕೊಳ್ಳುವ ಸಮಯ ಮತ್ತೆ ಅಷ್ಟೇ ಕಾಲ (31,104 ಸಾವಿರ ಕೋಟಿ ವರ್ಷಗಳು)....

ಇದು ಭಗವಂತನಿಗೆ ಒಂದು ಕ್ಷಣದ ಅವಧಿಯೂ ಅಲ್ಲ. ಇದೆಲ್ಲಾ ಮನುಷ್ಯರು ಊಹಿಸಲೂ ಅಸಾಧ್ಯವಾದ ಸತ್ಯ ಸಂಗತಿಗಳನ್ನು  ವೇದವ್ಯಾಸರು ಭಾಗವತದ ಮೂಲಕ ನಮ್ಮ ಮುಂದೆ ತೆರೆದು ತೋರಿದ್ದಾರೆ ಎಂಬುದನ್ನು ಪೂಜ್ಯ ಗೋವಿಂದಾಚಾರ್ಯರಿಂದ ತಿಳಿದಾಗ ವಿಸ್ಮಯವೋ ವಿಸ್ಮಯ...
ನಮ್ಮ ನಿತ್ಯಾನುಷ್ಠಾನದ ಸಂಕಲ್ಪ ಮಂತ್ರ ಕೂಡ ಇದನ್ನೇ ಹೇಳುತ್ತದೆ... ನಾವು ಮಾಡುವ ಪ್ರತಿಯೊಂದು ಕಾರ್ಯದ ಹಿಂದೆ ಆದಿ ಜೀವನ ನೆನಪು ಇದ್ದಾಗ ಮಾತ್ರ ಆ ಕಾಲಕ್ಕೊಂದು ಸಮನ್ವಯ ದೊರಕುವುದು...

ಶುಭೇ ಶೋಭನೇ ಮಹೂರ್ತೇ, ಆದ್ಯಬ್ರಹ್ಮಣಃ, ದ್ವಿತೀಯಾ ಪರಾರ್ಧೇ ಹೀಗೆ ಮುಂದುವರೆಯುತ್ತದೆ ನಮ್ಮ ಸಂಕಲ್ಪ ಮಂತ್ರ... ನಾವಿಂದು ಮಾಡುತ್ತಿರುವ ಸಂಕಲ್ಪ ಬ್ರಹ್ಮನನ್ನು ಆದಿಯಲ್ಲಿ ಇಟ್ಟುಕೊಂಡು, ಅಂದರೆ ಈ ಬ್ರಹ್ಮಾಂಡ ಸೃಷ್ಟಿಯ ಆದಿಯಲ್ಲಿ ಚತುರ್ಮುಖ ಭಗವಂತನ ನಾಭಿಯಿಂದ ಹೊರಬಂದ ಕ್ಷಣದಿಂದಲೇ ಅನಂತವಾಗಿದ್ದ ಕಾಲಕ್ಕೊಂದು ಗಣನೆ ಶುರುವಾಯಿತು ಎಂಬುದೇ ಇಲ್ಲಿಯ ಪ್ರಮುಖ ವಿಷಯ.. ಶಾಸ್ತ್ರದ ಪ್ರಕಾರ ನಾವೀಗ ಚತುರ್ಮುಖ ಬ್ರಹ್ಮನ ಅಥವಾ ಪರಕಾಲದ ಎರಡನೇ ಅರ್ಧದಲ್ಲಿದ್ದೇವೆ.(ಪೂರ್ವಾರ್ಧ ಕಳೆದು ಉತ್ತರಾರ್ಧಕ್ಕೆ ಕಾಲಿಟ್ಟಾಗಿದೆ) ಅದರಲ್ಲಿ ದಿನಕಲ್ಪದ
ವೈವಸ್ವತ ಮನ್ವಂತರದ, 28ನೇ ಚತುರ್ಯುಗದ 28 ಕಲಿಯುಗದಲ್ಲಿದ್ದೇವೆ ಎಂಬುದು ಶಾಸ್ತ್ರಕಾರರ ಲೆಕ್ಕಾಚಾರ... ನಾವಿರುವ ಈ ವೈವಸ್ವತ ಮನ್ವಂತರದ 28ನೇ ಕಲಿಯುಗದಲ್ಲಿ ಕಳೆದಿರುವ ವರ್ಷಗಳು ಕೇವಲ 5117 ಇನ್ನೂ  ಬಾಕಿಯಿರುವ ವರ್ಷಗಳು, 432000-5117= 4,26,883 

ಇನ್ನೂ ಕಲಿಯುಗ ಸರಿಯಾಗಿ ಪ್ರಾರಂಭವೇ ಆಗಿಲ್ಲಾ...ಆಗಲೇ ತಲೆ ಕೆಟ್ಟ ಜನ ಪ್ರಳಯದ ಬಗೆಗೆ ಮಾತನಾಡುತ್ತಾರೆ, ಪುಸ್ತಕ ಬರೆಯುತ್ತಾರೆ ಕಲ್ಕಿಯ ಅವತಾರವಾಗಿದೆ ಅಂತೆಲ್ಲಾ ಸುದ್ದಿ ಹಬ್ಬಿಸುತ್ತಿದ್ದಾರೆ....

ಕೇವಲ 5100 ವರ್ಷಗಳ ಹಿಂದೆ ಇದೇ ಭೂಮಿಯ ಮೇಲೆ ಕೃಷ್ಣ , ದ್ರೌಪದಿ, ಪಾಂಡವರು ಮುಂತಾದ ದೇವಾಂಶ ಸಂಭೂತರೆಲ್ಲ ಓಡಾಡಿದ್ದಾರೆ. ಈ ಕಲಿಯುಗ ಪ್ರಾರಂಭವಾದ ಮೇಲೆ ಕೂಡ 36 ವರ್ಷಗಳ ಕಾಲ ಪಾಂಡವರು ಈ ನೆಲವನ್ನು ಆಳಿದ್ದಾರೆ. ನಂತರ ಪಾಂಡವರ ತಳಿ ಪರೀಕ್ಷಿತರಾಜನೇ ಪಟ್ಟಕ್ಕೆ ಬಂದ. ಮಹಾಭಾರತ ಯುದ್ಧದಲ್ಲಿ ದುರ್ಯೋಧನ ಭೀಮನ ಗದೆ ಪೆಟ್ಟಿಗೆ ತೊಡೆಮುರಿದು ಬಿದ್ದು ಕೊನೆಯುಸಿರುಳಿದ ಕ್ಷಣದಿಂದಲೇ ಕಲಿಯುಗ ಪ್ರಾರಂಭವಾಯಿತು ಎಂದು ಮಹಾಭಾರತ ಹೇಳುತ್ತದೆ.

ಆಶ್ಚರ್ಯವೆಂದರೆ ಕೇವಲ 5000 ವರ್ಷಗಳಲ್ಲೇ ಜನರಿಗೆ ಕೃಷ್ಣ ಹೇಳಿದ ಭಗವದ್ಗೀತೆ ಬೇಡವಾಗಿಬಿಟ್ಟಿದೆ ಅದನ್ನೇ ಸಡುವ ಕೀಳು ಮಟ್ಟಕ್ಕೆ ಜನ ಇಳಿದಿದ್ದಾರೆ. ಉಳಿದಿರುವ ಕಲಿಯುಗದ ಕಾಲಮಾನ ನೆನಪಿಸಿಕೊಂಡರೆ  ಗಾಬರಿಯಾಗುತ್ತದೆ, ಮುಂದಿನ ಪೀಳಿಗೆಯ ಪಾಡೇನು ಎಂದು?....

ಎಲ್ಲಕ್ಕೂ ಕಾಲವೇ ಉತ್ತರ ಕೊಡಬೇಕು...
(Contributed by Shri Harish)


No comments:

Post a Comment

ಗೋ-ಕುಲ Go-Kula