Sunday 24 January 2016

Bhava Guccha 06

ಭಾವ ಗುಚ್ಛ by "ತ್ರಿವೇಣಿ ತನಯ"

ತಂದೆ -ಮಗ -ಮೊಮ್ಮಗ

ಹುಟ್ಟದವನ ನಾಭಿಯಿಂದ ಬಂದದ್ದು ಬ್ರಹ್ಮ,
ನಾಭಿಕಮಲದೊಳಿಹ ರಮೆಯೇ ಅವನಮ್ಮ,
ನಾಲ್ಮೊಗನ ಮಗ ಶಿವನು-ಹರಿಯ ಮೊಮ್ಮಗ,
ಮನೋನಿಯಾಮಕನೇ ಕಳೆಯೆಮ್ಮ ಅಘ.

ಸ್ವಗತ

ಹೇಳಿ ಕೇಳಿ ಹಳ್ಳಿ ರೈತನ ಮಗ ನಾನು,
ನನಗೆಂತು ಒಲಿದೀತು ಶಾಸ್ತ್ರಾರ್ಥ ತಾನು,
ಗೊತ್ತಿಲ್ಲವೆಂದು ಗೊತ್ತಾಗುತಿದೆ ಈ ಜನ್ಮಕ್ಕಿಷ್ಟು ಸಾಕು,
ಕೊಡುವಾಗ ಕೊಟ್ಟಾನು ಮತ್ತಿನ್ನೇನು ಬೇಕು.

ತರ್ಕಕೆಟುಕದ ಸತ್ಯ

ತರ್ಕ ಕುತರ್ಕಗಳಿಗೆ ನಿಲುಕದೆಂದಿಗೂ ಸತ್ಯ,
ನಿನ್ನ ನೀನರಿವ ಪ್ರಯತ್ನವಿರಲದು ನಿತ್ಯ,
ಅಹಂ ಮಮಕಾರಗಳ ಪರದೆ ಕಳಚಲದು ಜಾರಿ,
ಸ್ಫುಟವಾಗಿ ಕಂಡೀತು ಬಿಡುಗಡೆಯ ಹೆದ್ದಾರಿ.

ಮಂಥನ

ಜರಿಯುತಲಿ ಅನ್ಯರ ಹರಿದಾಡಬೇಡ,
ಮರ್ಕಟ ಮನವ ಸಿಕ್ಕಂತೆ ಹರಿಯ ಬಿಡಬೇಡ,
ನಿಂತ ಮನವೊಮ್ಮೆ ಮಂಥನಕ್ಕೆ ಹಚ್ಚು,
ತೇಲಿಬರುವ ಕೊಳೆಗಳ ಅಲ್ಲಲ್ಲೇ ಕೊಚ್ಚು.

ತಾರತಮ್ಯ

ಎಂತು ನೋಡಿದರೂ ಭಿನ್ನಜೀವ ಭಿನ್ನ ಸ್ವಭಾವ,
ಗ್ರಹಿಸಬೇಕಾದುದೊಂದೇ ಆಂತರಿಕ ಭಾವ,
ಆಗಾಗ ಆಗುವುದೇ ಅಹಮಿಕೆಯ ಮೇಲಾಟ,
ತಿಳಿಯುತ ನಮ್ರತೆಯಲಿ ಕೂಡು ಸಜ್ಜನರ ಕೂಟ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula