Thursday 18 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 104 - 110

(ಇದು ವೈಶಂಪಾಯನ ಮತ್ತು ಜನಮೇಜಯರ ಮಧ್ಯದ ಸಂಭಾಷಣೆ ,
ಅದನ್ನು ಉಲ್ಲೇಖಿಸಿ ಮಾಡಿದ್ದಾರೆ ಆಚಾರ್ಯರು ವಿಶ್ಲೇಷಣೆ .)
ಬಹವಃ ಪುರುಷಾ ಬ್ರಹ್ಮನ್ನುತಾಹೋ ಏಕ ಏವ ತು ।
ಕೋ ಹ್ಯತ್ರ ಪುರುಷಶ್ರೇಷ್ಠಸ್ತಂ ಭವಾನ್ ವಕ್ತುಮರ್ಹತಿ ॥೨.೧೦೪॥
ವೈಶಂಪಾಯನ ಉವಾಚ:
ನೈತದಿಚ್ಛಂತಿ  ಪುರುಷಮೇಕಂ ಕುರುಕುಲೋದ್ವಹ ।
ಬಹೂನಾಂ ಪುರುಷಾಣಾಂ ಹಿ ಯಥೈಕಾ ಯೋನಿರುಚ್ಯತೇ ।
ತಥಾ ತಂ ಪುರುಷಂ ವಿಶ್ವಮಾಖ್ಯಾಸ್ಯಾಮಿ ಗುಣಾಧಿಕಮ್ ॥೨.೧೦೫॥

ಚೇತನರು ಅನೇಕರೋ -ಒಬ್ಬನೆಯೋ ಮುನಿಪುಂಗವ?
ಅವರಲ್ಲಿ ಪುರುಷೋತ್ತಮ ಯಾರವನು ಮಹಾನುಭಾವ?

ಕೆಲವರು ಚೇತನನೊಬ್ಬನೇ ಎನ್ನುತ್ತಾರೆ ಜನಮೇಜಯ,
ಇದು ವಿಚಾರವಂತರಾದ  ಜ್ಞಾನಿಗಳಿಗಲ್ಲ ಸ್ವೀಕಾರಾರ್ಹ,
ಬಹುಚೇತನರಿಗೆ ಒಬ್ಬನೇ ಉತ್ಪತ್ತಿಕಾರಣವೆನ್ನುತ್ತವೆ ಶ್ರುತಿ ಸೂತ್ರ,
ಸರ್ವಾಂತರ್ಯಾಮಿಯಾದ ವಿಷ್ಣುವೇ ಸರ್ವೋತ್ತಮ ಅವ ಸರ್ವತ್ರ,
ಇರುವಂತೆ ವಿವಿಧ ಜೀವರಿಗೆ ಒಬ್ಬನೇ ಜನಕ,
ಉಂಟೊಬ್ಬ ಪರಮಪುರುಷನವ ಗುಣಾಧಿಕ.

ಆಹ ಬ್ರಹ್ಮೈತಮೇವಾರ್ಥಂ ಮಹಾದೇವಾಯ ಪೃಚ್ಛತೇ ।
ತಸ್ಯೈಕಸ್ಯ ಮಮತ್ವಂ ಹಿ ಸ ಚೈಕಃ ಪುರುಷೋ ವಿರಾಟ್ ॥೨.೧೦೬॥

ಅಹಂ ಬ್ರಹ್ಮಾ ಚಾsದ್ಯ ಈಶಃ ಪ್ರಜಾನಾಂ ತಸ್ಮಾಜ್ಜಾತಸ್ತ್ವಂ ಚ ಮತ್ತಃ ಪ್ರಸೂತಃ।
ಮತ್ತೋ ಜಗತ್ ಸ್ಥಾವರಂ ಜಂಗಮಂ ಚ ಸರ್ವೇ ವೇದಾಃ ಸರಹಸ್ಯಾಶ್ಚ ಪುತ್ರ ॥೨.೧೦೭॥

ಉಲ್ಲೇಖಿಸುತ್ತಾರೆ ಬ್ರಹ್ಮದೇವ -ರುದ್ರದೇವರ ಸಂವಾದ,
ವಿಷ್ಣು ಒಬ್ಬನೇ ಸರ್ವೋತ್ತಮ ಎಂದು ಬ್ರಹ್ಮನ ವಾದ,
ಎಲ್ಲರಿಗೂ ಆದಿಯಾದ ನನ್ನ ಹುಟ್ಟು ಅವನಿಂದ,
ನಂತರ ನೀನು ಸಮಸ್ತ ಜಗದ ಹುಟ್ಟಾದದ್ದು ಎಂದ,
ನಾನು ನನ್ನದು ಎಂದ್ಹೇಳಿಕೊಳ್ಳುವನೊಬ್ಬನೇ ಒಬ್ಬ ನಾರಾಯಣ,
ನಾನು ನೀನು ಸ್ಥಾವರ ಜಂಗಮ ವೇದ ಶಾಸ್ತ್ರಗಳ ಹುಟ್ಟಿಗವನೇ ಕಾರಣ.
 
ತಥೈವ ಭೀಮವಚನಂ ಧರ್ಮಜಂ ಪ್ರತ್ಯುದೀರಿತಮ್ ।
ಬ್ರಹ್ಮೇಶಾನಾದಿಭಿಃ ಸರ್ವೈಃ ಸಮೇತೈರ್ಯದ್ಗುಣಾಂಶಕಃ ।
ನಾವಸಾಯಯಿತುಂ ಶಕ್ಯೋ ವ್ಯಾಚಕ್ಷಾಣೈಶ್ಚ ಸರ್ವದಾ ॥೨.೧೦೮॥

ಸ ಏಷ ಭಗವಾನ್ ಕೃಷ್ಣೋ ನೈವ ಕೇವಲಮಾನುಷಃ ।
ಯಸ್ಯ ಪ್ರಸಾದಜೋ ಬ್ರಹ್ಮಾ ರುದ್ರಶ್ಚ ಕ್ರೋಧಸಂಭವಃ ॥೨.೧೦೯॥

ಧರ್ಮರಾಜನ ಕುರಿತು ಹೇಳುತ್ತಾನವನು ಭೀಮಸೇನ,
ಬ್ರಹ್ಮಾದಿಗಳಿಂದಲೂ ಅಸಾಧ್ಯ ಹರಿಯ ಒಂದಂಶದ ಗುಣಗಾನ,
ಅವನ ಪ್ರಸನ್ನತೆಯಿಂದ ಹುಟ್ಟಿದ ಬ್ರಹ್ಮದೇವ,
ಅವನ ಕ್ರೋಧದಿಂದ ಹುಟ್ಟಿದವ ರುದ್ರದೇವ,
ಪ್ರಸನ್ನತೆ -ಕೋಪ ಇತ್ಯಾದಿ ಹರಿಗಿಂತ ಬೇರೆಯಲ್ಲ,
ಎಲ್ಲವೂ ಅವನ ಗುಣ ರೂಪಗಳೇ ಆಗಿವೆಯಲ್ಲ!


ವಚನಂ ಚೈವ ಕೃಷ್ಣಸ್ಯ ಜ್ಯೇಷ್ಠಂ ಕುಂತೀಸುತಂ ಪ್ರತಿ ।
ರುದ್ರಂ ಸಮಾಶ್ರಿತಾ ದೇವಾ ರುದ್ರೋ ಬ್ರಹ್ಮಾಣಮಾಶ್ರಿತಃ ।
ಬ್ರಹ್ಮಾ ಮಾಮಾಶ್ರಿತೋ ನಿತ್ಯಂ ನಾಹಂ ಕಿಂಚಿದುಪಾಶ್ರಿತಃ ॥೨.೧೧೦॥

ಶ್ರೀಕೃಷ್ಣ ಧರ್ಮರಾಜನಿಗೆ ಹೇಳುವ ವಾಕ್ಯ,
ದೇವತೆಗಳು ರುದ್ರನಾಶ್ರಯಿಸದಿರುವುದು ಅಶಕ್ಯ,
ರುದ್ರದೇವನು ಆಶ್ರಯಿಸಿದ್ದಾನೆ ಚತುರ್ಮುಖನ,
ಬ್ರಹ್ಮ ಆಶ್ರಯಿಸಿದ್ದಾನೆ ಲಕ್ಷ್ಮೀಸಮೇತ ನನ್ನನ್ನ,
ಬ್ರಹ್ಮಾದಿ ದೇವತೆಗಳೆಲ್ಲರೂ ಕ್ಷರ ಪುರುಷರ ಕಕ್ಷ,
ಲಕ್ಷ್ಮೀ ಅಕ್ಷರಳಾದರೂ ಅವಳ ಮನೆ ನನ್ನ ವಕ್ಷ,
ಬೇರೆಲ್ಲರಿಗೂ ನಾವಿಬ್ಬರೂ ಎಂದೂ  ಒಂದೇ,
ನನ್ನೊಳಗಿದ್ದರೂ ಲಕ್ಷ್ಮಿ ನನಗೆ ಸಮನಲ್ಲ ಎಂದೆ,
ನನಗೆ ಆಸರೆ -ಆಶ್ರಯ ಎಂಬುದೊಂದು ಇಲ್ಲ,

ಸಮಸ್ತ ಬ್ರಹ್ಮಾಂಡಕೆ ಆಸರೆ ನಾನೇ ಆಗಿರುವೆನಲ್ಲ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula