Wednesday 26 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 50 57

 ಸುರಾಸುರಾನ್ ಸುಸಂರಬ್ಧಾನ್ ಕಾಲೇನ ದ್ರಕ್ಷ್ಯಥೇತಿ ಚ ।

ಬ್ರಹ್ಮಾ ನಿವಾರ್ಯ್ಯ ಸಸುರೋ ಯಯೌ ಸೇಶಃ ಸ್ವಮಾಲಯಮ್ ॥೧೮.೫೦॥

ಅತ್ತ ದೇವತೆಗಳು ದೈತ್ಯರ ಮಧ್ಯೆಯೂ ಆಗಿತ್ತು ಉದ್ವೇಗದ ವಾತಾವರಣ ,

ಬ್ರಹ್ಮದೇವ ಹೇಳುತ್ತಾರೆ-ತಾಳಿ ಕಾಲಾನುಕ್ರಮದಿ ಆಗುತ್ತದೆ ಅದರನಾವರಣ .

ಹಾಗೆಂದವರದಾಗಿತ್ತು ರುದ್ರಾದಿ ದೇವತೆಗಳ ಕೂಡಿ ಆಲಯದತ್ತ ಪಯಣ .

 

ಕರ್ಣ್ಣಂ ಹಸ್ತೇ ಪ್ರಗೃಹ್ಯೈವ ಧಾರ್ತ್ತರಾಷ್ಟ್ರೋ ಗೃಹಂ ಯಯೌ ।

ಪಾರ್ತ್ಥಂ ಹಸ್ತೇ ಪ್ರಗೃಹ್ಯೈವ ಭೀಮಃ ಪ್ರಾಯಾತ್ ಸ್ವಮಾಲಯಮ್ ॥೧೮.೫೧॥

ಕರ್ಣನ ಕೈಹಿಡಿದು ಮನೆಗೆ ಹೋದ ದುರ್ಯೋಧನ ,

ಪಾರ್ಥನ ಕೈಹಿಡಿದು ಮನೆಯತ್ತ ಹೊರಟ ಭೀಮಸೇನ.

 

ಪಾರ್ತ್ಥೇನ ಕರ್ಣ್ಣೋ ಹನ್ತವ್ಯ ಇತ್ಯಾಸೀದ್ ಭೀಮನಿಶ್ಚಯಃ ।

ವೈಪರೀತ್ಯೇನ ತಸ್ಯಾsಸೀದ್ ದುರ್ಯ್ಯೊಧನವಿನಿಶ್ಚಯಃ ॥೧೮.೫೨॥

ಭೀಮ ನಿಶ್ಚಯಿಸಿದ್ದ ಕರ್ಣನಾಗುತ್ತಾನೆ ಅರ್ಜುನನಿಂದ ಹತ ,

ಹಾಗೇ ಕರ್ಣನ ಕೈಯಲ್ಲಿ ಅರ್ಜುನನ ಸಾವೆಂದು ಕೌರವನ ಮತ.

 

ತದರ್ತ್ಥಂ ನೀತಿಮತುಲಾಂ ಚಕ್ರತುಸ್ತಾವುಭಾವಪಿ ।

ತಥೋತ್ಕರ್ಷೇ ಫಲ್ಗುನಸ್ಯ ಯಶಸೋ ವಿಜಯಸ್ಯ ಚ ॥೧೮.೫೩॥

ಉದ್ಯೋಗ ಆಸೀದ್ ಭೀಮಸ್ಯ ಧಾರ್ತ್ತರಾಷ್ಟ್ರಸ್ಯ ಚಾನ್ಯಥಾ ।

ಭೀಮಾರ್ತ್ಥಂ ಕೇಶವೋsನ್ಯೇ ಚ ದೇವಾಃ ಫಲ್ಗುನಪಕ್ಷಿಣಃ ॥೧೮.೫೪॥

ಆಸನ್ ಯಥೈವ ರಾಮಾದ್ಯಾಃ ಸಙ್ಗ್ರಹೇಣ ಹನೂಮತಃ ।

ಸುರಾಃ ಸುಗ್ರೀವಪಕ್ಷಸ್ಥಾಃ ಪೂರ್ವಮಾಸಂಸ್ತಥೈವ ಹಿ ॥೧೮.೫೫॥

ಭೀಮ ದುರ್ಯೋಧನರಿಬ್ಬರದೂ ಬೇರೆ ಬೇರೆ  ರೀತಿ-ವಿಧಾನ ,

ಅರ್ಜುನನ ಯಶಸ್ಸು ವಿಜಯಕ್ಕಾಗಿ ಭೀಮಸೇನನ ಪ್ರಯತ್ನ ,

ಕರ್ಣನ ಯಶಸ್ಸು ವಿಜಯಕ್ಕಾಗಿ ದುರ್ಯೋಧನನ ಯತ್ನ .

ಶ್ರೀಕೃಷ್ಣ ಇತರ ದೇವತೆಗಳು ಅರ್ಜುನನ ಪರ ನಿಂತಿದ್ದರ ಕಾರಣ ಅವನು ಭೀಮಾಭಿರಕ್ಷಿತ ,

ಹಿಂದೆ ರಾಮಾದಿ ದೇವತೆಗಳು ಸುಗ್ರೀವನ ಪರ ನಿಂತಿದ್ದರ ಕಾರಣವೂ ಅವನಾಗಿದ್ದ ಹನುಮದ್ರಕ್ಷಿತ .

 

ತದರ್ತ್ಥಮೇವ ಭೀಮಸ್ಯ ಹ್ಯನುಜತ್ವಂ ಸುರೇಶ್ವರಃ ।

ಆಪ ಪೂರ್ವಾನುತಾಪೇನ ತೇನ ಭೀಮಸ್ತಥಾsಕರೋತ್ ॥೧೮.೫೬॥

ಹಿಂದೆ ವಾಲಿಯಾಗಿದ್ದಾಗ ಮಾಡಿದ್ದ ತಪ್ಪಿನ ಪಶ್ಚಾತ್ತಾಪದಿಂದ ,

ಇಂದ್ರ ಈಗ ಭೀಮಸೇನನ ತಮ್ಮನಾಗಿಯೇ ಇಳಿದುಬಂದಿದ್ದ .

ಹಾಗಾಗೇ ಭೀಮಸೇನ ತಾನು ದೈವಕಾರ್ಯದ ಉದ್ದೇಶ ಈಡೇರಿಸಿದ .

 

ದುರ್ಯ್ಯೋಧನಾರ್ತ್ಥಂ ಕರ್ಣ್ಣಸ್ಯ ಪಕ್ಷಿಣೋ ದೈತ್ಯದಾನವಾಃ ।

ಆಸುಃ ಸರ್ವೇ ಗ್ಲಹಾವೇತಾವಾಸತುಃ ಕರ್ಣ್ಣಫಲ್ಗುನೌ ॥೧೮.೫೭॥

ದೈತ್ಯ ದಾನವರೆಲ್ಲಾ ಕರ್ಣನ ಪರ ನಿಂತರು ಗಳಿಸಲು ದುರ್ಯೋಧನನ ಪ್ರೀತಿ ,

ಹೀಗೆ ದೈತ್ಯ ದೇವತೆಗಳ ಆಟದಲ್ಲಿ ಕರ್ಣಾರ್ಜುನರಿಬ್ಬರೂ  ದಾಳವಾದ ರೀತಿ .

No comments:

Post a Comment

ಗೋ-ಕುಲ Go-Kula