Sunday 19 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 24: 01-12

 

ಅಧ್ಯಾಯ ಇಪ್ಪತ್ನಾಲ್ಕು[ಯುದ್ಧೋದ್ಯೋಗಃ ]

̐

ತತಃ ಸಮ್ಮನ್ತ್ರ್ಯಾನುಮತೇ ಕೃಷ್ಣಸ್ಯ ಸ್ವಪುರೋಹಿತಮ್ ।

ದ್ರುಪದಃ ಪ್ರೇಷಯಾಮಾಸ ಧೃತರಾಷ್ಟ್ರಾಯ ಶಾನ್ತಯೇ ॥೨೪.೦೧॥

 

ಆನಂತರ ಶ್ರೀಕೃಷ್ಣ ಸಾನ್ನಿಧ್ಯದಲ್ಲಿ ದ್ರುಪದ ಚೆನ್ನಾಗಿ ಆಲೋಚನೆ ಮಾಡಿದ,

ಶಾಂತಿಸಂಧಾನಕ್ಕಾಗಿ ಧೃತರಾಷ್ಟ್ರನ ಬಳಿಗೆ ಪುರೋಹಿತನನ್ನು ಕಳುಹಿಸಿದ.

 

ಸ ಗತ್ವಾ ಧೃತರಾಷ್ಟ್ರಂ ತಂ ಭೀಷ್ಮದ್ರೋಣಾದಿಭಿರ್ಯ್ಯುತಮ್ ।

ಉವಾಚ ನ ವಿರೋಧಸ್ತ ಉತ್ಪಾದ್ಯೋ ಧರ್ಮ್ಮಸೂನುನಾ ॥೨೪.೦೨॥

 

ದ್ರುಪದ ಕಳಿಸಿದ ಆ ಪುರೋಹಿತ ಭೀಷ್ಮ ದ್ರೋಣರೊಡನಿದ್ದ ಧೃತರಾಷ್ಟ್ರನಲ್ಲಿಗೆ ಬರುತ್ತಾನೆ,

ರಾಜಾ, ನೀನು ಧರ್ಮರಾಜ ಮೊದಲಾದವರಿಗೆ ವಿರೋಧ ಮಾಡಬಾರದು ಎಂದು ಹೇಳುತ್ತಾನೆ.

 

ಯಸ್ಯ ಭೀಮಾರ್ಜ್ಜುನೌ ಯೌಧೌ ನೇತಾ ಯಸ್ಯ ಜನಾರ್ದ್ದನಃ ।

ಶ್ರುತಾಸ್ತೇ ಭೀಮನಿಹತಾ ಜರಾಸನ್ಧಾದಯೋSಖಿಲಾಃ ॥೨೪.೦೩॥

 

ಭೀಮಾರ್ಜುನರು ಧರ್ಮರಾಜನ ಯೋಧರು,

ಶ್ರೀಕೃಷ್ಣಪರಮಾತ್ಮ ಪ್ರೇರಕನಾಗಿರುವ ದೇವರು.

ಅಂಥಾ ಧರ್ಮರಾಜನೊಡನೆ ವಿರೋಧ ಕಟ್ಟಿಕೊಳ್ಳುವುದು ವಿಹಿತವಲ್ಲ,

ಜರಾಸಂಧಾದಿಗಳು ಭೀಮನಿಂದ ಸತ್ತಿರುವುದು ನಿನಗೆ ತಿಳಿದೇ ಇದೆಯಲ್ಲ.

 

ಯಥಾ ಚ ರುದ್ರವಚನಾದವದ್ಧ್ಯಾ ರಾಕ್ಷಸಾಧಿಪಾಃ ।

ತೀರ್ತ್ಥವಿಘ್ನಕರಾಃ ಸರ್ವತೀರ್ತ್ಥಾನ್ಯಾಚ್ಛಾದ್ಯ ಸಂಸ್ಥಿತಾಃ ॥೨೪.೦೪॥

 

ತಿಸ್ರಃ ಕೋಟ್ಯೋ ಮಹಾವೀರ್ಯ್ಯಾ ಭೀಮೇನೈವ ನಿಸೂದಿತಾಃ ।

ಭ್ರಾತೄಣಾಂ ಬ್ರಾಹ್ಮಣಾನಾಂ ಚ ಲೋಕಾನಾಂ ಚ ಹಿತೈಷಿಣಾ ॥೨೪.೦೫॥

 

ತತೋ ಹಿ ಸರ್ವತೀರ್ತ್ಥಾನಿ ಗಮ್ಯಾನ್ಯಾಸನ್ ನೃಣಾಂ ಕ್ಷಿತೌ ।

ಯಥಾ ಜಟಾಸುರಃ ಪಾಪಃ ಶರ್ವಾಣೀವರಸಂಶ್ರಯಾತ್ ॥೨೪.೦೬॥

 

ಅವದ್ಧ್ಯೋ ವಿಪ್ರರೂಪೇಣ ವಞ್ಚಯನ್ನೇವ ಪಾಣ್ಡವಾನ್ ।

ಜ್ಞಾತ್ವಾSಪಿ ಭೀಮಸೇನೇನ ವಿಪ್ರರೂಪಸ್ಯ ನೋ ವಧಃ ॥೨೪.೦೭॥

 

ಯೋಗ್ಯ ಇತ್ಯಹತೋ ಭೀಮೇ ಮೃಗಯಾರ್ತ್ಥಂ ಗತೇ ಕ್ವಚಿತ್ ।

ಯಮೌ ಯುಧಿಷ್ಠಿರಂ ಕೃಷ್ಣಾಂ ಚಾSದಾಯೈವ ಪರಾದ್ರವತ್  ॥೨೪.೦೮॥

 

ರುದ್ರವರದಿಂದ ಅವಧ್ಯರಾಗಿ ತೀರ್ಥಕ್ಷೇತ್ರಗಳಲ್ಲಿದ್ದ ರಾಕ್ಷಸರು,

ಉನ್ಮತ್ತರಾಗಿ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ವಿಘ್ನ ಮಾಡುತ್ತಿದ್ದರು.

ನಿನಗೆ ತಿಳಿದಿದೆ-ಅವರೆಲ್ಲಾ ಭೀಮಸೇನನಿಂದಲೇ ಕೊಲ್ಲಲ್ಪಟ್ಟರು.

 

ಸೋದರರು, ಬ್ರಾಹ್ಮಣರು, ತೀರ್ಥಯಾತ್ರೆ ಮಾಡುವ ಎಲ್ಲರಿಗೋಸ್ಕರ,

ಭೀಮಸೇನ ಮಾಡಿದ್ದಾನೆ ಮೂರು ಕೋಟಿ ರಾಕ್ಷಸಪಡೆಯ ಸಂಹಾರ.

ಆ ತೀರ್ಥಕ್ಷೇತ್ರಗಳೆಲ್ಲಾ ಮನುಷ್ಯರಿಗೆ ಸುಲಭ ಗಮ್ಯವಾಗಿವೆ ಆನಂತರ.

 

ಪಾರ್ವತೀವರದಿಂದ ಅವಧ್ಯನಾಗಿದ್ದ ಜಟಾಸುರ,

ಪಾಂಡವರಿಗೆ ವಂಚಿಸುತ್ತಿದ್ದ ವಿಪ್ರವೇಷದ ಸುರ.

ಭೀಮಸೇನನಿಗಿತ್ತು ಇದೆಲ್ಲದರ ಜ್ಞಾನ,

ಬ್ರಾಹ್ಮಣವೇಷದಲ್ಲಿದ್ದರಿಂದ ಬಿಟ್ಟಿದ್ದನವನ.

 

ಒಂದುಸಲ ಭೀಮಸೇನ ಬೇಟೆಯಾಡಲೆಂದು ಹೊರಗೆ ಹೋಗಿದ್ದಾಗ,

ಜಟಾಸುರ ನಕುಲಸಹದೇವ ಧರ್ಮಜ ದ್ರೌಪದಿಯರ ಹಿಡಿದು ಓಡಿದನಾಗ.

 

ದೃಷ್ಟೋ ಭೀಮೇನ ತಾಂಸ್ತ್ಯಕ್ತ್ವಾ ಸಂಸಕ್ತಸ್ತೇನ ಸಙ್ಗರೇ ।

ನಿಪಾತ್ಯ ಭೂಮೌ ಪಾದೇನ ಸಞ್ಚೂರ್ಣ್ಣಿತಶಿರಾಸ್ತಮಃ ॥೨೪.೦೯॥

 

ಭೀಮಸೇನ ನೋಡಿದಾಕ್ಷಣ ಅವರೆಲ್ಲರನ್ನು ಬಿಟ್ಟು ಬಿಟ್ಟ,

ಭೀಮಸೇನನೊಡನೆ ಯುದ್ಧ ಮಾಡುವುದಕ್ಕೆ ಶುರುವಿಟ್ಟ.

ಆ ಜಟಾಸುರನನ್ನು ಭೀಮ ನೆಲಕ್ಕೆ ಕೆಡವಿದ,

ಪಾದದಿ ತುಳಿದು ಪುಡಿಮಾಡಿ ತಮಸ್ಸಿಗಟ್ಟಿದ.

  

ಜಗಾಮ ಕಿಮು ತೇ ಪುತ್ರಾಃ ಶಕ್ಯಾ ಹನ್ತುಮಿತಿ ಸ್ಮ ಹ ।

ನಿವಾತಕವಚಾಶ್ಚೈವ ಹತಾಃ ಪಾರ್ತ್ಥೇನ ತೇ ಶ್ರುತಾಃ ॥೨೪.೧೦॥

 

ನಿನ್ನ ಮಕ್ಕಳಾದ ದುರ್ಯೋಧನಾದಿಗಳನ್ನು ಕೊಲ್ಲುವುದು ಭೀಮಗೆ ಸುಲಭದ ಕೆಲಸ,

ನಿವಾತಕವಚರೆಂಬ ರಾಕ್ಷಸರು ಕೂಡಾ ಅರ್ಜುನನಿಂದ ಆಗಿದ್ದಾರೆ ಮೃತ್ಯುವಶ.

 

ಜಾನಾಸಿ ಚ ಹರೇರ್ವೀರ್ಯ್ಯಂ ಯಸ್ಯೇದಮಖಿಲಂ ವಶೇ ।

ಸಬ್ರಹ್ಮರುದ್ರಶಕ್ರಾದ್ಯಂ ಚೇತನಾಚೇತನಾತ್ಮಕಮ್ ॥೨೪.೧೧॥

 

ನೀನು ತಿಳಿದಿರುವೆ ಭಗವಂತನ ಪರಾಕ್ರಮ,

ಬ್ರಹ್ಮ ರುದ್ರ ಇಂದ್ರಾದಿಗಳ ದೇವೋತ್ತಮ,

ಚೇತನ ಅಚೇತನಗಳನ್ನಾಳುವ ಸಾರ್ವಭೌಮ.

 

ತಸ್ಮಾದೇತೈಃ ಪಾಲಿತಸ್ಯ ಧರ್ಮ್ಮಜಸ್ಯ ಸ್ವಕಂ ವಸು ।

ದೀಯತಾಮಿತಿ ತೇನೋಕ್ತೋ ಧೃತರಾಷ್ಟ್ರೋ ನಚಾಕರೋತ್ ॥೨೪.೧೨॥

 

ಧರ್ಮರಾಜ ; ಭೀಮಸೇನ ಅರ್ಜುನ ಶ್ರೀಕೃಷ್ಣರಿಂದ ರಕ್ಷಿತ,

ಅಂಥಾ ಧರ್ಮಜನಿಗೆ ಅವನ ಸಂಪತ್ತು ಕೊಡುವುದೇ ವಿಹಿತ,

ಧೃತರಾಷ್ಟ ಹಾಗೆ ಮಾಡಲಿಲ್ಲ;ಹೇಳಿದರೂ ದ್ರುಪದಪುರೋಹಿತ.

No comments:

Post a Comment

ಗೋ-ಕುಲ Go-Kula